ದರ್ಶನ್​ಗೆ ಸಿಗಲ್ಲ ಮನೆಯೂಟ? ಎದುರಾಗಿದೆ ಮತ್ತೊಂದು ಕಂಟಕ

‘ದರ್ಶನ್ ವಿಐಪಿ ಸ್ಟೇಟಸ್ ಹೊಂದಿರುವ ಯಾವುದೇ ರಾಜಕಾರಣಿಯೂ ಅಲ್ಲ. ಅವರು ಕಾನೂನಿನ ಕಣ್ಣಿನಲ್ಲಿ ಓರ್ವ ಸಾಮಾನ್ಯ ವ್ಯಕ್ತಿ. ಹೀಗಾಗಿ ಕಾನೂನಿನ ಅಡಿಯಲ್ಲೇ ಅವರನ್ನು ಪರಿಗಣಿಸಬೇಕು’ ಎಂದು ಹೈಕೋರ್ಟ್​ ವಕೀಲ ಅಮೃತೇಶ್ ಪತ್ರ ಬರೆದು ಮನವಿ ಮಾಡಿದ್ದಾರೆ.

ದರ್ಶನ್​ಗೆ ಸಿಗಲ್ಲ ಮನೆಯೂಟ? ಎದುರಾಗಿದೆ ಮತ್ತೊಂದು ಕಂಟಕ
ದರ್ಶನ್

Updated on: Aug 01, 2024 | 8:37 AM

ಜೈಲಿನಲ್ಲಿ ಇರುವ ನಟ ದರ್ಶನ್ ಅವರಿಗೆ ಮನೆಯೂಟ ಬೇಕಿದೆ. ಜೈಲಿನ ಊಟದ ಬಗ್ಗೆ ಅವರು ತಕಾರರು ತೆಗೆದಿದ್ದು, ತಮಗೆ ಮನೆಯೂಟವೇ ಬೇಕು ಎಂದು ಕೇಳಿದ್ದಾರೆ. ಈಗಾಗಲೇ ಮ್ಯಾಜಿಸ್ಟ್ರೇಟ್ ಕೋರ್ಟ್ ಇದಕ್ಕೆ ಅವಕಾಶ ನಿರಾಕರಿಸಿದೆ. ಈ ಆದೇಶವನ್ನು ದರ್ಶನ್ ಅವರು ಹೈಕೋರ್ಟ್​ನಲ್ಲಿ ಪ್ರಶ್ನೆ ಮಾಡಿದ್ದಾರೆ. ಹೀಗಿರುವಾಗಲೇ ಅವರಿಗೆ ಜೈಲೂಟ ಸಿಗದೇ ಇರಲು ಮತ್ತೊಂದು ತಡೆ ಎದುರಾಗುವ ಸೂಚನೆ ಸಿಕ್ಕಿದೆ. ದರ್ಶನ್​ಗೆ ಯಾವುದೇ ವಿಶೇಷ ಸೌಕರ್ಯ ನೀಡದಂತೆ ಕಾರಾಗೃಹ ಇಲಾಖೆ ಐಜಿಗೆ ಹೈಕೋರ್ಟ್​ನ ಹಿರಿಯ ವಕೀಲ ಅಮೃತೇಶ್ ಪತ್ರ ಬರೆದಿದ್ದಾರೆ.

‘ಕರ್ನಾಟಕದಲ್ಲಿ ದರ್ಶನ್ ದೊಡ್ಡ ಅಭಿಮಾನಿ ಬಳಗ ಹೊಂದಿರುವ ಮತ್ತು ಪ್ರಭಾವಿ ನಟ. ಆದರೆ ಯಾವುದೇ ಎಂಎಲ್​ಎ, ಎಂಎಲ್​ಸಿ ಅಥವಾ ಎಂಪಿ ಅಲ್ಲ. ಜೊತೆಗೆ ಯಾವುದೇ ಶಾಸನಬದ್ಧ ಹುದ್ದೆಯಲ್ಲಿ ಅವರಿಲ್ಲ. ವಿಐಪಿ ಸ್ಟೇಟಸ್ ಹೊಂದಿರುವ ಯಾವುದೇ ರಾಜಕಾರಣಿಯೂ ಅಲ್ಲ. ಅವರು ಕಾನೂನಿನ ಕಣ್ಣಿನಲ್ಲಿ ಓರ್ವ ಸಾಮಾನ್ಯ ವ್ಯಕ್ತಿ. ಹೀಗಾಗಿ ಕಾನೂನಿನ ಅಡಿಯಲ್ಲೇ ಅವರನ್ನು ಪರಿಗಣಿಸಬೇಕು’ ಎಂದು ವಕೀಲ ಅಮೃತೇಶ್ ಮನವಿ ಮಾಡಿದ್ದಾರೆ.

‘ಕಾನೂನಿನಂತೆ ದರ್ಶನ್ ಯಾವುದೇ ವಿಶೇಷ ಸೌಲಭ್ಯಗಳನ್ನು ಪಡೆದುಕೊಳ್ಳುವಂತಿಲ್ಲ. ಮನೆಯ ಆಹಾರ, ಬಟ್ಟೆ, ಹಾಸಿಗೆ, ಬರೆಯುವ ಪರಿಕರ, ಎಸಿ, ಟೇಬಲ್, ಚೇರ್ ಮುಂತಾದವುಗಳನ್ನು ಪಡೆಯುವಂತಿಲ್ಲ’ ಎಂದಿರುವ ವಕೀಲರು, ಕರ್ನಾಟಕ ಪ್ರಿಸನ್ಸ್ ಹಾಗೂ ಕರೆಕ್ಷನಲ್‌ ಮ್ಯಾನ್ಯುವಲ್ 2021,  ಆ್ಯಕ್ಟ್ 1963, ಪ್ರಿಸನ್ಸ್ ರೂಲ್ಸ್ 1974 ಉಲ್ಲೇಖಿಸಿದ್ದಾರೆ.

‘ಇನ್ನೂ ಶಿಕ್ಷೆಗೆ ಒಳಪಡದ ಕೈದಿಗೆ ಮನೆಯ ಆಹಾರದ ಅವಶ್ಯಕತೆಯಿದ್ದಲ್ಲಿ ಪ್ರಿಸನ್ಸ್ ಆ್ಯಕ್ಟ್ 1963 ಪ್ರಕಾರ ಪರೀಕ್ಷೆಗೆ ಒಳಪಡಿಸಿ ಐಜಿ ಅನುಮೋದನೆ ನೀಡಬಹುದು. ಆದರೆ, ಈಗಾಗಲೇ ಜೈಲು ನಿಯಮದಲ್ಲಿ ಕೈದಿಗಳಿಗೆ ನೀಡುವ ಆಹಾರದ ಬಗ್ಗೆ ಸ್ಪಷ್ಟವಾಗಿ ಹೇಳಲಾಗಿದೆ. ಆಹಾರದ‌ ತೂಕ ಮತ್ತು ಮಾಂಸಹಾರದ ಪೂರೈಕೆಗೆ ಸಂಬಂಧಿಸಿದಂತೆ ನಮೂದಿಸಲಾಗಿದೆ. ದರ್ಶನ್ ಮನೆ ಊಟ ಕೇಳುತ್ತಿದ್ದು, ಇದರಿಂದ ಜೈಲಿನ ಆಹಾರದ ಗುಣಮಟ್ಟದ ಬಗ್ಗೆ ಹಾಗೂ ಜೈಲು ಅಧಿಕಾರಿಗಳ ಬಗ್ಗೆ ವ್ಯತಿರಿಕ್ತ ಭಾವನೆ ಮೂಡಿಸುತ್ತದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ದರ್ಶನ್​ಗೂ ಇತರೆ ವಿಚಾರಣಾಧೀನ ಖೈದಿಗಳಿಗೂ ವ್ಯತ್ಯಾಸವಿಲ್ಲ’; ಮನೆ ಊಟ ಕೇಳಿದ ನಟನಿಗೆ ಕೋರ್ಟ್ ಚಾಟಿ

ದರ್ಶನ್​ಗೆ ಮನೆ ಊಟ ನೀಡಿದರೆ ಆ ಬಳಿಕ ಅಲ್ಲಿರುವ ಎಲ್ಲಾ ಕೈದಿಗಳು ಈ ಬಗ್ಗೆ ಪ್ರಶ್ನೆ ಮಾಡುತ್ತಾರೆ. ಇದೇ ವಿಚಾರವನ್ನು ಅಮೃತೇಶ್ ಕೂಡ ಉಲ್ಲೇಖ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us