ತಮ್ಮದೇ ಸಿನಿಮಾ ಶೂಟ್ ಮಾಡಿದ ಜೈಲಿಗೆ ದರ್ಶನ್; ಮುಗಿಯಬೇಕಿದೆ ಪ್ರಮುಖ ಪ್ರಕ್ರಿಯೆ

|

Updated on: Aug 28, 2024 | 7:21 AM

ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿ ದರ್ಶನ್​ಗೆ ರಾಜಾತಿಥ್ಯ ನೀಡಿರುವುದು ಸಾಬೀತಾಗಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ಮುಜುಗರ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದರು. ಅದರಂತೆ ಈಗ ದರ್ಶನ್​ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ.

ತಮ್ಮದೇ ಸಿನಿಮಾ ಶೂಟ್ ಮಾಡಿದ ಜೈಲಿಗೆ ದರ್ಶನ್; ಮುಗಿಯಬೇಕಿದೆ ಪ್ರಮುಖ ಪ್ರಕ್ರಿಯೆ
ದರ್ಶನ್
Follow us on

ನಟ ದರ್ಶನ್ ಅವರಿಗೆ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ಸಿಗುತ್ತಿರುವ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಬಳ್ಳಾರಿಯ ಕೇಂದ್ರ ಕಾರಾಗೃಹಕ್ಕೆ ವರ್ಗಾವಣೆ ಮಾಡಲಾಗುತ್ತಿದೆ. ಇಂದು (ಆಗಸ್ಟ್ 28) ಅವರನ್ನು ಬಳ್ಳಾರಿಗೆ ಶಿಫ್ಟ್ ಮಾಡಲಾಗುತ್ತಿದೆ. ಮಧ್ಯಾಹ್ನ 1 ಗಂಟೆ ಬಳಿಕ ಈ ಪ್ರಕ್ರಿಯೆ ಆರಂಭ ಆಗುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಒಂದು ಪ್ರಮುಖ ವಿಚಾರ ನಡೆಯಬೇಕಿದೆ.

ದರ್ಶನ್ ಅವರು ಈ ಮೊದಲು ‘ಚೌಕ’ ಚಿತ್ರದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ದರ್ಶನ್ ಅವರು ಅತಿಥಿ ಪಾತ್ರ ಮಾಡಿದ್ದರು. ಈ ಸಿನಿಮಾದಲ್ಲಿ ಜೈಲಿನ ದೃಶ್ಯವೊಂದು ಬರುತ್ತದೆ. ಅದನ್ನು ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲೇ ಶೂಟ್ ಮಾಡಲಾಗಿತ್ತು. ದರ್ಶನ್ ಕೂಡ ಈ ದೃಶ್ಯದಲ್ಲಿ ಇದ್ದರು. ಈಗ ಅವರು ಇದೇ ಜೈಲಿಗೆ ಸ್ಥಳಾಂತರ ಆಗುತ್ತಿದ್ದಾರೆ ಅನ್ನೋದು ವಿಚಿತ್ರ.

ಪೊಲೀಸ್​ ಭದ್ರತೆಯಲ್ಲಿ ದರ್ಶನ್ ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಅದಕ್ಕೂ ಮೊದಲು ಒಂದು ಪ್ರಮುಖ ಪ್ರಕ್ರಿಯೆ ಮುಗಿಯಬೇಕಿದೆ. ಇಂದು (ಆಗಸ್ಟ್​ 28) ದರ್ಶನ್ ಅವರ ನ್ಯಾಯಾಂಗ ಬಂಧನದ ಅವಧಿ ಪೂರ್ಣಗೊಳ್ಳಲಿದೆ. ವಿಡಿಯೋ ಕಾನ್ಫರೆನ್ಸ್​ ಮೂಲಕ ಅವರನ್ನು ಜಡ್ಜ್​ ಮುಂದೆ ಹಾಜರು ಮಾಡಲಾಗುತ್ತದೆ. ದರ್ಶನ್​ಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ ಮಾಡುವ ಸಾಧ್ಯತೆ ಇದೆ. ಕೋರ್ಟ್​ ಪ್ರಕ್ರಿಯೆ ಬಳಿಕ ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗುತ್ತದೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರದಿಂದ ದರ್ಶನ್‌ ಸ್ಥಳಾಂತರಕ್ಕೆ ಕೋರ್ಟ್​ ಒಪ್ಪಿಗೆ: ದಾಸ ಈಗ ಹೋಗುವುದು ಯಾವ ಜೈಲಿಗೆ?

ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಅರೆಸ್ಟ್ ಆಗಿದ್ದಾರೆ. ಅವರ ಬಂಧನಕ್ಕೆ ಈಗಾಗಲೇ ಮೂರು ತಿಂಗಳು ಪೂರ್ಣಗೊಳ್ಳುತ್ತಾ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಪೊಲೀಸರು ಕೋರ್ಟ್ ಎದುರು ಚಾರ್ಜ್​ಶೀಟ್ ಸಲ್ಲಿಕೆ ಮಾಡಲಿದ್ದಾರೆ. ಆ ಬಳಿಕ ದರ್ಶನ್ ಅವರು ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:55 am, Wed, 28 August 24