ಸಮಾಗಮ: ‘ಯುವ’ ಸಿನಿಮಾ ಸೆಟ್​ಗೆ ದರ್ಶನ್ ಭೇಟಿ, ‘ಅಪ್ಪು’ಗೆಯಲ್ಲಿ ಕರಗಿದ ವೈಮನಸ್ಸು

Darshan-Yuva: ಹೊಸಪೇಟೆಯಲ್ಲಿ ನಡೆದ ಘಟನೆ ಬಳಿಕ ದರ್ಶನ್ ಹಾಗೂ ದೊಡ್ಮನೆ ಸದಸ್ಯರ ನಡುವೆ ಕಂದಕವೊಂದು ನಿರ್ಮಾಣವಾಗಿತ್ತು. ಆದರೆ ಹಳೆಯದ್ದನ್ನೆಲ್ಲ ಮರೆತು ದರ್ಶನ್, ಇಂದು ಯುವರಾಜ್ ಕುಮಾರ್ ಅವರ ಸಿನಿಮಾ ಸೆಟ್​ಗೆ ಭೇಟಿ ನೀಡಿದ್ದು, ಇಬ್ಬರು ನಟರು ಆಲಿಂಗಿಸಿಕೊಂಡು, ಮುನಿಸು ದೂರ ತಳ್ಳಿದ್ದಾರೆ.

ಸಮಾಗಮ: ಯುವ ಸಿನಿಮಾ ಸೆಟ್​ಗೆ ದರ್ಶನ್ ಭೇಟಿ, ಅಪ್ಪುಗೆಯಲ್ಲಿ ಕರಗಿದ ವೈಮನಸ್ಸು
ದರ್ಶನ್-ಯುವ ರಾಜ್​ಕುಮಾರ್
Edited By:

Updated on: Sep 01, 2023 | 8:02 PM

ಪ್ರೀತಿಯೇ ಶಾಶ್ವತ ಎಂದು ನಟ ದರ್ಶನ್ (Darshan) ಹಳೆಯ ವೈಮನಸ್ಸು, ಮುನಿಸುಗಳಿಗೆಲ್ಲ ತಿಲಾಂಜಲಿ ಇಟ್ಟು, ಹೊಸ ಸ್ನೇಹ ಚಿಗುರಿಸುವ ಉತ್ಸಾಹ ತೋರಿದ್ದಾರೆ. ಮಾಧ್ಯಮಗಳೊಟ್ಟಿಗೆ ಇದ್ದ ಮುನಿಸಿಗೆ ಅಂತ್ಯ ಹಾಡಿರುವ ನಟ ದರ್ಶನ್ ಇದೀಗ ಇನ್ನೊಂದು ಹೆಜ್ಜೆ ಮುಂದಿಟ್ಟು, ದೊಡ್ಮನೆ ಕುಡಿ ಯುವರಾಜ್ ಕುಮಾರ್ (Yuva Rajkumar) ಅವರ ಸಿನಿಮಾ ಸೆಟ್​ಗೆ ಭೇಟಿ ನೀಡಿ ಯುವರಾಜ್ ಕುಮಾರ್​ಗೆ ಶುಭ ಹಾರೈಸಿದ್ದಾರೆ. ಆ ಮೂಲಕ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಉಂಟಾಗಿದ್ದ ವೈಮಸ್ಯಕ್ಕೆ ಅಂತ್ಯ ಹಾಡಿದ್ದಾರೆ. ಯುವರಾಜ್ ಕುಮಾರ್ ಸಹ ತನ್ನ ಹಿರಿಯ ನಟನ ಆಲಂಗಿನವನ್ನು ಸ್ವೀಕರಿಸಿ ಹೊಸ ಸ್ನೇಹ ಸಂಬಂಧಕ್ಕೆ ನಾಂದಿ ಹಾಡಿದ್ದಾರೆ.

ಯುವರಾಜ್ ಕುಮಾರ್, ಸಂತೋಶ್ ಆನಂದ್​ರಾಮ್ ನಿರ್ದೇಶನದ ‘ಯುವ’ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾದ ಚಿತ್ರೀಕರಣ ಎಚ್​ಎಂಟಿ ಕಾರ್ಖಾನೆಯಲ್ಲಿ ನಡೆಯುತ್ತಿದೆ. ಇಂದು (ಸೆಪ್ಟೆಂಬರ್ 1) ಅಚಾನಕ್ಕಾಗಿ ದರ್ಶನ್, ನಿರ್ದೇಶಕ ತರುಣ್ ಸುಧೀರ್ ಹಾಗೂ ಇನ್ನೂ ಕೆಲವರು ‘ಯುವ’ ಸಿನಿಮಾದ ಸೆಟ್​ಗೆ ಭೇಟಿ ನೀಡಿದ್ದಾರೆ. ದರ್ಶನ್, ಯುವರಾಜ್ ಕುಮಾರ್ ಅವರನ್ನು ಆಲಂಗಿಸಿ ಮಾತನಾಡಿದ್ದಾರೆ. ಸಂತೋಶ್ ಆನಂದ್ ರಾಮ್, ನಟಿ ಸಪ್ತಮಿ ಗೌಡ ಹಾಗೂ ಸೆಟ್​ನಲ್ಲಿದ್ದ ಇನ್ನೂ ಕೆಲವು ಪ್ರಮುಖ ನಟ, ತಂತ್ರಜ್ಞರೊಟ್ಟಿಗೆ ಕೆಲ ಸಮಯ ಕಳೆದು ವಾಪಸ್ಸಾಗಿದ್ದಾರೆ.

ದರ್ಶನ್ ಹಾಗೂ ಯುವರಾಜ್ ಕುಮಾರ್ ಭೇಟಿಯ ವಿಡಿಯೋ ಹಾಗೂ ಚಿತ್ರಗಳು ಇದೀಗ ಸಖತ್ ವೈರಲ್ ಆಗಿದ್ದು, ದರ್ಶನ್ ಹಾಗೂ ದೊಡ್ಮನೆ ಅಭಿಮಾನಿಗಳು ಚಿತ್ರ ಹಾಗೂ ವಿಡಿಯೋಗಳನ್ನು ಹಂಚಿಕೊಂಡು ಖುಷಿ ಪಡುತ್ತಿದ್ದಾರೆ. ಇಬ್ಬರು ನಟರ ಸ್ನೇಹ ಹೀಗೆಯೇ ಮುಂದುವರೆಯಲಿ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ:Sapthami Gowda: ಯುವ ರಾಜ್​ಕುಮಾರ್ ಬಗ್ಗೆ ನಟಿ ಸಪ್ತಮಿ ಗೌಡ ಮಾತು

ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಹೊಸಪೇಟೆಯಲ್ಲಿ ನಟ ದರ್ಶನ್ ವಿರುದ್ಧ ಚಪ್ಪಲಿ ಎಸೆದ ಘಟನೆ ನಡೆದ ಬಳಿಕ ದರ್ಶನ್ ಹಾಗೂ ದೊಡ್ಮನೆ ಅಭಿಮಾನಿಗಳು ಅದರಲ್ಲಿಯೂ ಅಪ್ಪು ಅಭಿಮಾನಿಗಳ ನಡುವೆ ದೊಡ್ಡ ಮಟ್ಟದ ವೈಮನ್ಯ ಉಂಟಾಗಿತ್ತು. ಅಪ್ಪು ಅಭಿಮಾನಿಗಳೇ ಚಪ್ಪಲಿ ಎಸೆದಿದ್ದಾರೆ ಎಂದು ದೊಡ್ಡ ಮಟ್ಟದ ಆರೋಪ ಕೇಳಿ ಬಂದಿತ್ತು. ಆ ಸಮಯದಲ್ಲಿ ಅಪ್ಪು ಅಭಿಮಾನಿಗಳ ಪರವಾಗಿ ಟ್ವೀಟ್ ಮಾಡಿದ್ದ ಯುವ ರಾಜ್ ಕುಮಾರ್, ದರ್ಶನ್ ವಿರುದ್ಧ ನಡೆದ ಘಟನೆಯನ್ನು ಖಂಡಿಸುವ ಜೊತೆಗೆ, ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂದಿದ್ದರು. ಇದು ವಿವಾದಕ್ಕೆ ಇನ್ನಷ್ಟು ಇಂಬು ನೀಡಿತ್ತು. ಆದರೆ ಈಗ ಎಲ್ಲವನ್ನು ಮರೆತು ಇಬ್ಬರೂ ಮತ್ತೆ ಒಂದಾಗಿದ್ದಾರೆ.

ದರ್ಶನ್ ಪ್ರಸ್ತುತ ‘ಕಾಟೇರ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ಇನ್ನು ಯುವರಾಜ್ ಕುಮಾರ್, ‘ಯುವ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ‘ಯುವ’ ಸಿನಿಮಾವನ್ನು ಹೊಂಬಾಳೆ ಫಿಲಮ್ಸ್ ನಿರ್ಮಾಣ ಮಾಡುತ್ತಿದೆ. ಸಿನಿಮಾದಲ್ಲಿ ಸಪ್ತಮಿ ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:01 pm, Fri, 1 September 23

Web contact

TV9 Kannada

Read More
Follow Us