ಸೆಟ್ಟೇರಿತು ಧರ್ಮ ಕೀರ್ತಿರಾಜ್ ನಟನೆಯ ಹೊಸ ಸಿನಿಮಾ; ಇದರಲ್ಲಿದೆ ಆ್ಯಕ್ಷನ್ ಡ್ರಾಮಾ

|

Updated on: Jul 02, 2024 | 9:42 PM

ಧರ್ಮ ಕೀರ್ತಿರಾಜ್ ನಟನೆಯ ‘ಪ್ರೊಡಕ್ಷನ್ ನಂ 1’ ಸಿನಿಮಾಗೆ ಮುಹೂರ್ತ ಮಾಡಲಾಗಿದೆ. ರಮೇಶ್ ರಾಜ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡುತ್ತಿದ್ದಾರೆ. ಕಥೆ ಮತ್ತು ಚಿತ್ರಕಥೆ ಕೂಡ ಅವರದ್ದೇ. ಪ್ರಿಯಾ ಹೆಗ್ಡೆ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ಈ ಚಿತ್ರಕ್ಕೆ ಮುಹೂರ್ತ ಸಮಾರಂಭ ಮಾಡಲಾಗಿದೆ. ಚಿತ್ರತಂಡದ ಬಗ್ಗೆ ಇಲ್ಲಿದೆ ಮಾಹಿತಿ..

ಸೆಟ್ಟೇರಿತು ಧರ್ಮ ಕೀರ್ತಿರಾಜ್ ನಟನೆಯ ಹೊಸ ಸಿನಿಮಾ; ಇದರಲ್ಲಿದೆ ಆ್ಯಕ್ಷನ್ ಡ್ರಾಮಾ
ಪ್ರಿಯಾ ಹೆಗ್ಡೆ, ಧರ್ಮ ಕೀರ್ತಿರಾಜ್​
Follow us on

ನಟ ಧರ್ಮ ಕೀರ್ತಿರಾಜ್​ ಅವರು ತಮ್ಮದೇ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ಚಾಕೊಲೇಟ್​ ಹೀರೋ ರೀತಿಯ ಪಾತ್ರಗಳಲ್ಲಿ ಅವರು ಜನರನ್ನು ರಂಜಿಸಿದ್ದಾರೆ. ಅದರ ನಡುವೆ ಅವರು ಮಾಸ್​ ಪ್ರಯತ್ನಗಳನ್ನೂ ಮಾಡಿದ್ದಾರೆ. ಈ ಅವರ ಹೊಸ ಸಿನಿಮಾ ಸೆಟ್ಟೇರಿದೆ. ಈ ಸಿನಿಮಾ ಕೂಡ ಮಾಸ್​ ಶೈಲಿಯಲ್ಲಿ ಮೂಡಿಬರಲಿದೆ. ‘ಲಿತನ್ಯ ಗೋಲ್ಡ್ ಲೀಫ್ ಮೀಡಿಯಾ ವೆಂಚರ್ಸ್ ಪ್ರೈವೇಟ್​ ಲಿಮಿಟೆಡ್​’ ಮತ್ತು ‘ಸಾರ್ಥಕ್ ಕ್ರಿಯೇಟರ್ಸ್’ ಸಂಸ್ಥೆಗಳ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಜಿ.ಹೆಚ್. ಜನಾರ್ದನ್ ಮತ್ತು ಸಿ.ಎಲ್. ಹರ್ಷವರ್ಧನ್ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ರಮೇಶ್ ರಾಜ್ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಈ ಸಿನಿಮಾದ ಶೀರ್ಷಿಕೆ ಏನು ಎಂಬುದು ಇನ್ನೂ ಬಹಿರಂಗ ಆಗಿಲ್ಲ. ಸದ್ಯಕ್ಕೆ ಇದನ್ನು ‘ಪ್ರೊಡಕ್ಷನ್ ನಂ 1’ ಎಂದು ಕರೆಯಲಾಗುತ್ತಿದೆ. ಧರ್ಮ ಕೀರ್ತಿರಾಜ್ ಹೀರೋ ಆಗಿ ನಟಿಸುತ್ತಿರುವ ಈ ಸಿನಿಮಾದ ಮುಹೂರ್ತ ಸಮಾರಂಭ ನಡೆದಿದೆ. ಚಿಕ್ಕಬಳ್ಳಾಪುರದ ಗೋಪಿನಾಥ ಬೆಟ್ಟದಲ್ಲಿರುವ ಶ್ರೀಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯಲ್ಲಿ ಮುಹೂರ್ತ ಮಾಡಲಾಗಿದೆ.

ಮಾಜಿ ಶಾಸಕರಾದ ಕೆ.ಪಿ. ಬಚ್ಚೇಗೌಡ ಈ ಸಿನಿಮಾದ ಮುಹೂರ್ತ ಸಮಾರಂಭಕ್ಕೆ ಮುಖ್ಯ ಅಥಿತಿಯಾಗಿ ಆಗಮಿಸಿದ್ದರು. ಸಿನಿಮಾದ ಮೊದಲ ದೃಶ್ಯಕ್ಕೆ ಅವರು ಆರಂಭ ಫಲಕ ತೋರಿದರು. ಬಳಿಕ ಚಿತ್ರತಂಡಕ್ಕೆ ಅವರು ಶುಭ ಹಾರೈಸಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ.ಎಂ. ಮುನೇಗೌಡ ಅವರು ಕ್ಯಾಮೆರಾ ಚಾಲನೆ ಮಾಡುವ ಮೂಲಕ ಶುಭ ಕೋರಿದರು. ಈ ಸಿನಿಮಾದಲ್ಲಿ ಧರ್ಮ ಕೀರ್ತಿರಾಜ್ ಅವರಿಗೆ ಜೋಡಿಯಾಗಿ ಪ್ರಿಯಾ ಹೆಗ್ಡೆ ಅವರು ಅಭಿನಯಿಸುತ್ತಿದ್ದಾರೆ. ಇನ್ನುಳಿದ ಪಾತ್ರವರ್ಗದ ಆಯ್ಕೆ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಶೀಘ್ರದಲ್ಲೇ ಈ ಸಿನಿಮಾದ ಶೂಟಿಂಗ್​ ಆರಂಭ ಆಗಲಿದೆ. ಬೆಂಗಳೂರು, ಚಿಕ್ಕಬಳ್ಳಾಪುರ, ಮಡಿಕೇರಿ, ಚಿಕ್ಕಮಗಳೂರು ಮುಂತಾದ ಕಡೆಗಳಲ್ಲಿ ಶೂಟಿಂಗ್​ ನಡೆಯಲಿದೆ. ಸಿನಿಮಾ ಬಗ್ಗೆ ಮುಂದಿನ ಹಂತದಲ್ಲಿ ಹೆಚ್ಚಿನ ಮಾಹಿತಿ ಸಿಗಲಿದೆ.

ಇದನ್ನೂ ಓದಿ: ರಿಯಲ್​ ಲೈಫ್​ನಲ್ಲಿ ಕೀರ್ತಿರಾಜ್​ ನೋಡಿ ಹೆದರಿದ್ದ ಮಹಿಳೆಯರು; ಹೇಗಿರತ್ತೆ ಖಳನಟರ ಬದುಕು?

ಡೈರೆಕ್ಟರ್​ ರಮೇಶ್ ರಾಜ್ ಅವರೇ ಈ ಸಿನಿಮಾಗೆ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಇದು ಆ್ಯಕ್ಷನ್ ಡ್ರಾಮಾ ಶೈಲಿಯ ಸಿನಿಮಾ ಆಗಿರಲಿದೆ. ಈ ಮೊದಲು ‘ಗ್ಯಾಂಗ್ ಲೀಡರ್’, ‘ತವರಿನ ಋಣ’ ಸಿನಿಮಾಗಳನ್ನು ನಿರ್ದೇಶಿಸಿರುವ ರಮೇಶ್ ರಾಜ್ ಅವರಿಗೆ ಇದು 3ನೇ ಸಿನಿಮಾ. ಈಶ್ವರಿ ಸುರೇಶ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಶಶಿ ಅವರು ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಬಿ.ವಿ. ರೆಡ್ಡಿ ಅವರು ಸಹ ನಿರ್ದೇಶನ ಮಾಡುತ್ತಿದ್ದಾರೆ. ಮಂಜುನಾಥ್ ಅವರ ನಿರ್ಮಾಣ ನಿರ್ವಹಣೆ ಈ ಸಿನಿಮಾಗಿದೆ. ನಿರ್ದೇಶನ ವಿಭಾಗದಲ್ಲಿ ವಂಟೂರು ಶ್ರೀನಿವಾಸ್ ಅವರು ಕೆಲಸ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.