ಸುದೀಪ್​ಗೆ ಬೆದರಿಕೆ ಪತ್ರ ಪ್ರಕರಣ: ಡೈರೆಕ್ಟರ್ ರಮೇಶ್ ಕಿಟ್ಟಿ ಬಂಧನ

|

Updated on: May 05, 2023 | 8:50 PM

Kichcha Sudeep: ನಟ ಕಿಚ್ಚ ಸುದೀಪ್​ಗೆ ಬೆದರಿಕೆ ಪತ್ರ ಪ್ರಕರಣವನ್ನು ತನಿಖೆ ನಡೆಸಿದ ಸಿಸಿಬಿ ಪೊಲೀಸರು ಸುದೀಪ್​ಗೆ ಆಪ್ತವಾಗಿದ್ದ ನಿರ್ದೇಶಕ ರಮೇಶ್ ಕಿಟ್ಟಿ ಎಂಬುವರನ್ನು ಬಂಧಿಸಿದ್ದಾರೆ.

ಸುದೀಪ್​ಗೆ ಬೆದರಿಕೆ ಪತ್ರ ಪ್ರಕರಣ: ಡೈರೆಕ್ಟರ್ ರಮೇಶ್ ಕಿಟ್ಟಿ ಬಂಧನ
ರಮೇಶ್ ಕಿಟ್ಟಿ
Follow us on

ಕಿಚ್ಚ ಸುದೀಪ್ (Sudeep)​ ಅವರಿಗೆ ಅನಾಮಧೇಯ ಬೆದರಿಕೆ ಪತ್ರ (Threat Letter) ಬರೆದಿದ್ದ ಪ್ರಕರಣವನ್ನು ಸಿಸಿಬಿ ಪೊಲೀಸರು ಭೇದಿಸಿದ್ದು, ಆರೋಪಿ ಡೈರೆಕ್ಟರ್ ರಮೇಶ್ ಕಿಟ್ಟಿಯನ್ನು ಬಂಧಿಸಲಾಗಿದೆ. ಆರೋಪಿ ರಮೇಶ್ ಕಿಟ್ಟಿ, ಸುದೀಪ್​ಗೆ ಆಪ್ತನೇ ಆಗಿದ್ದ, ಕಿಚ್ಚ ಸುದೀಪ ಚಾರಿಟೇಬಲ್​ ಟ್ರಸ್ಟ್​ನ ಅಧ್ಯಕ್ಷನಾಗಿದ್ದ ಆದರೆ ಸುದೀಪ್ ಅವರೊಟ್ಟಿಗೆ ಹಣಕಾಸು ವಿಷಯವಕ್ಕೆ ಭಿನ್ನಾಭಿಪ್ರಾಯ ಉಂಟಾದ ಕಾರಣ ಅನಾಮಧೇಯ ಬೆದರಿಕೆ ಪತ್ರ ಬರೆದಿದ್ದಾನೆ.

ಈ ಹಿಂದೆ ಹಲವು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ರಮೇಶ್ ಕಿಟ್ಟಿ, 2004 ರಲ್ಲಿ ಒಂದು ಕನ್ನಡ ಸಿನಿಮಾ ನಿರ್ದೇಶನವನ್ನೂ ಮಾಡಿದ್ದಾರೆ. ಆ ಬಳಿಕ ಕಿಚ್ಚ ಸುದೀಪ ಚಾರಿಟೇಬಲ್ ಟ್ರಸ್ಟ್​ ಅಧ್ಯಕ್ಷರಾಗಿ ಕೆಲಸ ಮಾಡಲು ಆರಂಭಿಸಿದ್ದಾರೆ.

ಚಾರಿಟೇಬಲ್ ಟ್ರಸ್ಟ್​ಗೆ ರಮೇಶ್ ಎರಡು ಕೋಟಿ ಹಣ ಹೂಡಿಕೆ ಮಾಡಿದ್ದರಂತೆ. ಆ ಹಣವನ್ನು ವಾಪಸ್ ಕೇಳಿದಾಗ ಸುದೀಪ್ ಕೊಡಲಿಲ್ಲ ಎಂಬ ಕಾರಣಕ್ಕೆ ಸುದೀಫ್ ಅವರೊಟ್ಟಿಗೆ ವೈಮನಸ್ಯ ಮೂಡಿಸಿಕೊಂಡು ಸುದೀಪ್​ಗೆ ಅನಾಮಧೇಯ ಬೆದರಿಕೆ ಪತ್ರ ಬರೆದಿದ್ದಾರೆ. ತಾವೇ ಬೆದರಿಕೆ ಪತ್ರ ಬರೆದಿರುವುದಾಗಿ ಸಿಸಿಬಿ ಪೊಲೀಸರ ಬಳಿ ರಮೇಶ್ ಕಿಟ್ಟಿ ಒಪ್ಪಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲವರ ಕೈವಾಡ ಇರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ತನಿಖೆ ಮುಂದುವರೆಸಿದ್ದಾರೆ.

ಸುದೀಪ್​ ಬಿಜೆಪಿ ಸೇರಲಿದ್ದಾರೆ ಎಂಬ ಗಾಳಿ ಸುಬ್ಬಿದ ಸಂದರ್ಭದಲ್ಲಿಯೇ ಸುದೀಪ್​ಗೆ ಎರಡು ಬೆದರಿಕೆ ಪತ್ರಗಳು ಬಂದಿದ್ದವು. ಖಾಸಗಿ ವಿಡಿಯೋ ಲೀಕ್ ಮಾಡುವುದಾಗಿ ಪತ್ರದಲ್ಲಿ ಬೆದರಿಕೆ ಹಾಕಲಾಗಿತ್ತು ಅಲ್ಲದೆ ಅವಾಚ್ಯ ಶಬ್ದಗಳನ್ನು ಸಹ ಬಳಸಲಾಗಿತ್ತು. ಈ ಬಗ್ಗೆ ಸುದೀಪ್​ರ ಆಪ್ತ, ನಿರ್ಮಾಪಕ ಜಾಕ್ ಮಂಜು ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸುದೀಪ್​ ಸಹ ಈ ಬಗ್ಗೆ ಪ್ರತಿಕ್ರಿಯೆ ನಡೆಸಿ, ಇದು ರಾಜಕೀಯದವರ ಕೃತ್ಯ ಅಲ್ಲ, ಇದನ್ನು ನಮ್ಮವರೇ ಮಾಡಿದ್ದಾರೆ ಅದು ಯಾರೆಂದು ಗೊತ್ತಿದೆ ಅವರಿಗೆ ಕಾನೂನಾತ್ಮಕವಾಗಿ ತಕ್ಕ ಉತ್ತರವನ್ನೇ ನೀಡಲಿದ್ದೇನೆ ಎಂದಿದ್ದರು.

ಇದನ್ನೂ ಓದಿ:ನಕಲಿ ನಂಬರ್​ ಪ್ಲೇಟ್​ ಇರುವ ಕಾರಿನಲ್ಲಿ ಬಂದು ಸುದೀಪ್​ಗೆ ಬೆದರಿಕೆ ಪತ್ರ ಪೋಸ್ಟ್​ ಮಾಡಿರುವ ಕಿಡಿಗೇಡಿಗಳು

ಪ್ರಕರಣದ ತನಿಖೆಯ ಪ್ರಾರಂಭಿಕ ಹಂತದಲ್ಲಿ ಸ್ವಿಫ್ಟ್ ಕಾರಿನಲ್ಲಿ ಬಂದ ಅಗಂತುಕರು ದೊಡ್ಡಮಲೂರಿನಲ್ಲಿ ಪೋಸ್ಟ್​ ಬಾಕ್ಸ್​ಗೆ ಪತ್ರ ಹಾಕಿರುವುದು ಬೆಳಕಿಗೆ ಬಂದಿತ್ತು. ಆದರೆ ಕಾರಿನ ನಂಬರ್ ಪ್ಲೇಟ್ ಪರಿಶೀಲನೆ ಮಾಡಿದಾಗ ನಕಲಿ ನಂಬರ್ ಪ್ಲೇಟ್ ಬಳಸಿರುವುದು ತಿಳಿದು ಬಂದಿತ್ತು. ತನಿಖೆ ಮುಂದುವರೆಸಿದ ಸಿಸಿಬಿ ಪೊಲೀಸರು, ಆಪ್ತರೇ ಈ ಕೃತ್ಯ ಎಸಗಿರುವುದಾಗಿ ಸುದೀಪ್ ಅನುಮಾನ ವ್ಯಕ್ತಪಡಿಸಿದ್ದ ಕಾರಣ ಅವರ ಆಪ್ತವಲಯದವರ ವಿಚಾರಣೆ ನಡೆಸಲಾಗಿ ರಮೇಶ್ ಕಿಟ್ಟಿ ವಿಷಯ ತಿಳಿದು ವಿಚಾರಣೆ ನಡೆಸಿ ಇದೀಗ ಬಂಧಿಸಿದ್ದಾರೆ.

ಕಿಚ್ಚ ಸುದೀಪ ಚಾರಿಟೇಬಲ್ ಟ್ರಸ್ಟ್ ಕೋವಿಡ್ ಸಮಯದಲ್ಲಿ ಬಹಳ ಸಕ್ರಿಯಾಗಿ ಕೆಲಸ ಮಾಡಿತ್ತು. ಆಮ್ಲಜನಕ ಸಿಲಿಂಡರ್​ಗಳ ವಿತರಣೆ, ಶಾಲೆಗಳ ದತ್ತು ಸ್ವೀಕಾರ ಸೇರಿದಂತೆ ಒಬ್ಬರಿಗೆ ಚಿಕ್ಕ ಮನೆಯನ್ನು ಕಟ್ಟಿಕೊಡುವ ಕಾರ್ಯವನ್ನೂ ಮಾಡಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ