ಕಲಾವಿದ ರಚಿಸಿದ ಡಾ. ರಾಜ್​ ಅವರ ಈ ಅದ್ಭುತ ಚಿತ್ರದಲ್ಲಿದೆ ಬೆರಗಾಗುವಂತಹ ವಿಶೇಷ; ಗುರುತಿಸಬಲ್ಲಿರಾ?

ಕಲಾವಿದರೊಬ್ಬರ ಕೈಚಳಕದಲ್ಲಿ ಅರಳಿರುವ ಈ ಕಲಾಕೃತಿ ಕಂಡರೆ ಎಲ್ಲರಿಗೂ ಒಮ್ಮೆ ಅಚ್ಚರಿ ಆಗುತ್ತದೆ. ಮೇಲ್ನೋಟಕ್ಕೆ ಸಿಂಪಲ್​ ಆಗಿದೆ ಎನಿಸಿದರೂ, ಕಣ್ಣಿಟ್ಟು ಗಮನಿಸಿದರೆ ಅದರಲ್ಲೊಂದು ಅದ್ಭುತವೇ ಅಡಗಿದೆ.

ಕಲಾವಿದ ರಚಿಸಿದ ಡಾ. ರಾಜ್​ ಅವರ ಈ ಅದ್ಭುತ ಚಿತ್ರದಲ್ಲಿದೆ ಬೆರಗಾಗುವಂತಹ ವಿಶೇಷ; ಗುರುತಿಸಬಲ್ಲಿರಾ?
ಡಾ. ರಾಜ್​ಕುಮಾರ್​

Updated on: Jun 11, 2021 | 8:54 AM

ಕನ್ನಡ ಸಿನಿಪ್ರೇಮಿಗಳು ಎಂದೂ ಮರೆಯದ ಹೆಸರು ಡಾ. ರಾಜ್​ಕುಮಾರ್​. ಭಾರತೀಯ ಚಿತ್ರರಂಗದಲ್ಲಿ ಮೇರು ನಟನಾಗಿ ಮಿಂಚಿದ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಅಣ್ಣಾವ್ರಿಗೆ ಸರಿಸಾಟಿ ಆಗುವಂತಹ ಮತ್ತೊಬ್ಬ ನಟ ಜನಿಸಿಲ್ಲ ಎಂದರೆ ಅತಿಶಯೋಕ್ತಿ ಏನಿಲ್ಲ. ರಾಜ್​ಕುಮಾರ್​ ಅವರು ಇಹಲೋಕ ತ್ಯಜಿಸಿ ಹಲವು ವರ್ಷಗಳೇ ಕಳೆದಿದ್ದರೂ ಕೂಡ ಇಂದಿಗೂ ಅವರ ಮೇಲಿನ ಅಭಿಮಾನ ಕಡಿಮೆ ಆಗಿಲ್ಲ. ಜನರು ಇಂದಿಗೂ ಹಲವು ರೀತಿಯಲ್ಲಿ ಅವರ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ.

ಸದ್ಯ ಸೋಶಿಯಲ್​ ಮೀಡಿಯಾದಲ್ಲಿ ಡಾ. ರಾಜ್​ಕುಮಾರ್​ ಅವರ ಒಂದು ಚಿತ್ರ ವೈರಲ್​ ಆಗುತ್ತಿದೆ. ಕಲಾವಿದರೊಬ್ಬರ ಕೈಚಳಕದಲ್ಲಿ ಅರಳಿರುವ ಈ ಕಲಾಕೃತಿ ಕಂಡರೆ ಎಲ್ಲರಿಗೂ ಒಮ್ಮೆ ಅಚ್ಚರಿ ಆಗುತ್ತಿದೆ. ಮೇಲ್ನೋಟಕ್ಕೆ ನೋಡಿದರೆ ಇದೇನು ಇಷ್ಟೊಂದು ಸಿಂಪಲ್​ ಆಗಿದೆ ಎನಿಸುತ್ತದೆ. ಪೆನ್ಸಿಲ್​ನಿಂದ ರಚಿಸಿದ ಸರಳ ಕಲಾಕೃತಿ ರೀತಿ ಕಾಣಿಸುತ್ತದೆ. ಆದರೆ ಕಣ್ಣಿಟ್ಟು ಗಮನಿಸಿದರೆ ಅದರಲ್ಲೊಂದು ಅದ್ಭುತವೇ ಅಡಗಿದೆ.

ಹೌದು, ಈ ವಿಶೇಷ ಕಲಾಕೃತಿ ರಚನೆ ಆಗಿರುವುದು ರಾಜ್​ಕುಮಾರ್​ ಅವರ ಹೆಸರಿನ ಮೂಲಕ. ಅಂದರೆ ರಾಜ್​ಕುಮಾರ್​ ಹೆಸರನ್ನು ಬಳಸಿಕೊಂಡೇ ಇದನ್ನು ರಚಿಸಲಾಗಿದೆ. ಆ ಹೆಸರಿನ ಹೊರತಾಗಿ ಬೇರೆ ಯಾವುದೇ ಚುಕ್ಕಿ ಅಥವಾ ಗೆರೆಗಳನ್ನು ಬಳಸಿಲ್ಲ. ಅಂದಹಾಗೆ, ಈ ಚಿತ್ರ ರಚಿಸಿರುವುದು ಮಂಡ್ಯದ ಕಲಾವಿದ ನರಸಿಂಹಾಚಾರ್​. ಅವರ ಈ ಪ್ರತಿಭೆ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಸೋಶಿಯಲ್​ ಮೀಡಿಯಾದಲ್ಲಿ ಡಾ. ರಾಜ್​ ಕುಟುಂಬದ ಅಭಿಮಾನಿಗಳ ಪೇಜ್​ಗಳಲ್ಲಿ ಈ ಚಿತ್ರ ವೈರಲ್​ ಆಗಿದೆ. ‘ರಾಜ್​ಕುಮಾರ್​ ಎಂಬ ಹೆಸರಿನಲ್ಲಿಯೇ ಅಣ್ಣಾವ್ರ ಭಾವ ಚಿತ್ರ ಬಿಡಿಸಿದ ಈ ಕಲಾವಿದನಿಗೆ ನಮ್ಮ ನಮನಗಳು’ ಎಂದು ಫ್ಯಾನ್ಸ್​ ಧನ್ಯವಾದ ತಿಳಿಸಿದ್ದಾರೆ. ಹಲವಾರು ಅಭಿಮಾನಿಗಳು ಕಮೆಂಟ್​ಗಳ ಮೂಲಕ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಎಲ್ಲ ಬಗೆಯ ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡವರು ಡಾ. ರಾಜ್​. ಇತರೆ ಕ್ಷೇತ್ರಗಳಿಂದ ಎಷ್ಟೇ ಅವಕಾಶ ಬಂದರೂ ಅವರು ಸಿನಿಮಾ ಹೊರತಾಗಿ ಬೇರೆ ಏನನ್ನೂ ಸ್ವೀಕರಿಸಲಿಲ್ಲ. ತೆರೆಮೇಲೆ ಮಾತ್ರವಲ್ಲದೆ ನಿಜಜೀವನದಲ್ಲಿಯೂ ಅವರು ಆದರ್ಶ ವ್ಯಕ್ತಿಯಾಗಿ ಬದುಕಿದರು. ಆ ಕಾರಣದಿಂದಲೇ ಅವರನ್ನು ಅಭಿಮಾನಿಗಳು ಆರಾಧ್ಯ ದೈವದಂತೆ ಕಾಣುತ್ತಾರೆ. ಎಷ್ಟೇ ವರ್ಷಗಳು ಉರುಳಿದರು ಅಣ್ಣಾವ್ರ ಮೇಲಿನ ಅಭಿಮಾನ ಕಡಿಮೆ ಆಗುವುದಿಲ್ಲ.

ಇದನ್ನೂ ಓದಿ:

ರಾಜ್​ಕುಮಾರ್​ ಕಿಡ್ನ್ಯಾಪ್​​ ಆದಾಗ ಆತ್ಮಹತ್ಯೆಗೆ ಯತ್ನಿಸಿದ್ದ ಅಭಿಮಾನಿಯ ಎಕ್ಸ್​ಕ್ಲ್ಯೂಸಿವ್ ಸಂದರ್ಶನ

ಡಾ. ರಾಜ್​ಕುಮಾರ್​ ಸಹಾಯವನ್ನು ನಾನು ಯಾವತ್ತೂ ಮರೆಯುವುದಿಲ್ಲ: ಹಿರಿಯ ಹಾಸ್ಯ ನಟ ಎಂ ಎಸ್ ಉಮೇಶ್

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us