ಮೊದಲ ಸಿನಿಮಾದ ಶೂಟ್​ನಲ್ಲೇ ದ್ವಾರಕೀಶ್​ಗೆ ಸಿಕ್ಕಿತ್ತು ಜೀವನದಲ್ಲಾಗುವ ಅನಾಹುತದ ಸೂಚನೆ

ದ್ವಾರಕೀಶ್ ಇನ್ನಿಲ್ಲ ಅನ್ನೋದು ನೋವಿನ ವಿಚಾರ. ಅವರು ನಮ್ಮನ್ನು ಅಗಲಿದ್ದು ಸಾಕಷ್ಟು ನೋವು ತಂದಿದೆ. ಅವರು ಚಿತ್ರರಂಗಕ್ಕೆ ಕಾಲಿಟ್ಟು ಸಾಕಷ್ಟು ಗಮನ ಸೆಳೆದರು. ನಿರ್ಮಾಪಕ, ನಿರ್ದೇಶಕನಾಗಿಯೂ ಅವರು ಗಮನ ಸೆಳೆದರು. ಹಲವು ಗೆಲುವ ಕಂಡಿದ್ದರು ದ್ವಾರಕೀಶ್. ನಂತರ ಅವರು ನಿರಂತರ ಸೋಲು ಕಂಡಿದ್ದೂ ಇದೆ. ಈ ಸೂಚನೆ ಅವರಿಗೆ ಮೊದಲೇ ಸಿಕ್ಕಿತಂತೆ.

ಮೊದಲ ಸಿನಿಮಾದ ಶೂಟ್​ನಲ್ಲೇ ದ್ವಾರಕೀಶ್​ಗೆ ಸಿಕ್ಕಿತ್ತು ಜೀವನದಲ್ಲಾಗುವ ಅನಾಹುತದ ಸೂಚನೆ
ದ್ವಾರಕೀಶ್
Edited By:

Updated on: Apr 17, 2024 | 8:52 AM

ದ್ವಾರಕೀಶ್ (Dwarakish) ಅವರು ಕನ್ನಡ ಚಿತ್ರರಂಗದ ಬೇಡಿಕೆಯ ಹೀರೋ ಆಗಿದ್ದರು. ಕಾಮಿಡಿಯನ್ ಆಗಿ ಅವರು ಎಲ್ಲರ ಮೆಚ್ಚುಗೆ ಪಡೆದರು. ಉದ್ಯಮಿ ಆಗಬೇಕಿದ್ದ ಅವರು ಹೀರೋ ಆದರು. ಆ ಬಳಿಕ ನಿರ್ಮಾಪಕ, ನಿರ್ದೇಶಕನೂ ಆದರು. ಅವರು ರಾಜ್​ಕುಮಾರ್ ನಟನೆಯ ‘ಮೇಯರ್ ಮುತ್ತಣ್ಣ’ ಸಿನಿಮಾ ನಿರ್ಮಾಣ ಮಾಡಿ ದೊಡ್ಡ ಗೆಲುವು ಕಂಡರು. ನಂತರದ ವರ್ಷಗಳಲ್ಲಿ ಅವರು ಹಲವು ಗೆಲುವ ಕಂಡಿದ್ದರು. ನಂತರ ಅವರು ನಿರಂತರ ಸೋಲು ಕಂಡಿದ್ದೂ ಇದೆ. ಈ ಸೂಚನೆ ಅವರಿಗೆ ಮೊದಲೇ ಸಿಕ್ಕಿತಂತೆ. ಈ ಬಗ್ಗೆ ದ್ವಾರಕೀಶ್ ಅವರು ಬಿ ಗಣಪತಿ ಅವರು ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ದ್ವಾರಕೀಶ್​ಗೆ ಶಿಕ್ಷಣ ಕೊಡಿಸಬೇಕು ಎಂಬುದು ಅವರ ಅಣ್ಣನ ಉದ್ದೇಶ ಆಗಿತ್ತು. ಅವರ ಅಣ್ಣ ಆಟೋಮೊಬೈಲ್ ಶಾಪ್ ನಡೆಸುತ್ತಿದ್ದರು. ಇದೇ ಉದ್ಯಮದಲ್ಲಿ ದ್ವಾರಕೀಶ್ ಮುಂದುವರಿಯಬೇಕು ಎಂಬುದು ಅವರ ಅಣ್ಣನ ಆಸೆ ಆಗಿತ್ತು. ಆದರೆ, ದ್ವಾರಕೀಶ್​ಗೆ ನಟನೆಯ ಬಗ್ಗೆ ಒಲವು. ಈ ಮಧ್ಯೆ ಒಂದು ಆಟೋಮೊಬೈಲ್​ ಶಾಪ್​ನ ದ್ವಾರಕೀಶ್​ಗಾಗಿ ಅವರ ಸಹೋದರ ಮಾಡಿಕೊಟ್ಟರು. ಇದರಲ್ಲಿ ದ್ವಾರಕೀಶ್ ಕೆಲಸ ಮಾಡುತ್ತಿದ್ದರು.

ಹುಣಸೂರು ಕೃಷ್ಣಮೂರ್ತಿ ಅವರು ನಿರ್ದೇಶಕರಾಗಿದ್ದರು. ದ್ವಾರಕೀಶ್​ಗೆ ಕೃಷ್ಣಮೂರ್ತಿ ಸೋದರ ಮಾವ ಆಗಿದ್ದ. ಅವರ ಬಳಿ ಚಾನ್ಸ್ ಕೊಡುವಂತೆ ದ್ವಾರಕೀಶ್ ಕೋರಿದ್ದರು. ಇದಕ್ಕೆ ಒಪ್ಪಿದ್ದ ಹುಣಸೂರು ಕೃಷ್ಣಮೂರ್ತಿ ಅವರು ‘ವೀರ ಸಂಕಲ್ಪ’ ಸಿನಿಮಾದಲ್ಲಿ ನಟಿಸೋಕೆ ಚಾನ್ಸ್ ಕೊಟ್ಟರು. 1962ರಲ್ಲಿ ಸೆಟ್ಟೇರಿದ ಈ ಸಿನಿಮಾ 1964ರ ಫೆಬ್ರವರಿ 22ರಂದು ರಿಲೀಸ್ ಆಯಿತು. ಈ ಸಿನಿಮಾದ ಮೊದಲ ಶಾಟ್​ನಲ್ಲೇ ದ್ವಾರಕೀಶ್ ಅವರಿಗೆ ದೊಡ್ಡ ಸೂಚನೆ ಸಿಕ್ಕಿತ್ತು.

ಇದನ್ನೂ ಓದಿ: ನೇತ್ರದಾನ ಮಾಡಿ ಸಾರ್ಥಕತೆ ಮೆರೆದ ಕನ್ನಡದ ಕುಳ್ಳ ದ್ವಾರಕೀಶ್​

‘ನನ್ನ ಮೊದಲ ಸಿನಿಮಾದ ಮೊದಲ ಶೂಟ್ ಸಿಂಹಾಸನ ಏರೋದಿತ್ತು. ನನ್ನ ಸೋದರ ಅಳಿಯ ದೊಡ್ಡ ಗೆಲುವು ಕಾಣಬೇಕು, ಹೀಗಾಗಿ ಸಿಂಹಾಸನ ಏರೋ ಶಾಟ್​ನ ತೆಗೆಯುತ್ತಿದ್ದೇನೆ ಎಂದು ನನ್ನ ಮಾವ ಹೇಳಿದ್ದರು. ಸಿಂಹಾಸನದ ಮೇಲೆ ಐದು ನಿಮಿಷ ಕೂತಿದ್ದೆ. ಲೈಟ್ ಚೆನ್ನಾಗಿದೆ, ಸಿಂಹಾಸನದಿಂದ ಇಳಿಯೋ ದೃಶ್ಯವನ್ನೂ ಶೂಟ್ ಮಾಡೋಣ ಎಂದು ಛಾಯಾಗ್ರಾಹಕರು ಹೇಳಿದರು. ನಂತರ ಸಿಂಹಾಸನದಿಂದ ಇಳಿಯೋ ದೃಶ್ಯವನ್ನೂ ಶೂಟ್ ಮಾಡಲಾಯಿತು. ಇದು ನನ್ನ ಜೀವನಕ್ಕೆ ಎಷ್ಟು ಕನೆಕ್ಟ್ ಆಗಿದೆ ನೋಡಿ. ಚಿತ್ರರಂಗದಲ್ಲಿ ದೊಡ್ಡ ಗೆಲುವು ಕಂಡೆ. ನಂತರ ಸೋಲು ಕಾಣಬೇಕಾಯಿತು. ಮೊದಲ ದೃಶ್ಯದಲ್ಲೇ ಆ ಬಗ್ಗೆ ಸೂಚನೆ ಸಿಕ್ಕಿತ್ತು’ ಎಂದಿದ್ದರು ದ್ವಾರಕೀಶ್. ಅವರ ಈ ಹೇಳಿಕೆ ಈಗ ವೈರಲ್ ಆಗುತ್ತಿದೆ.

ದ್ವಾರಕೀಶ್ ಅವರು ಹೃದಯಾಘಾತದಿಂದ ಮಂಗಳವಾರ (ಏಪ್ರಿಲ್ 16) ನಿಧನ ಹೊಂದಿದರು. ಇಂದು (ಏಪ್ರಿಲ್ 17) ಅವರ ಅಂತ್ಯಕ್ರಿಯೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us