ಸುಳ್ಳು ದೂರು ಪ್ರಕರಣ; ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ವಿರುದ್ಧ ಎಫ್​ಐಆರ್​ ದಾಖಲು

ಉದ್ಯಮಿ ದೇವನಾತ್ ವೈಕ್ಯೆ ಅವರು ಪ್ರಶಾಂತ್ ಸಂಬರ್ಗಿ ವಿರುದ್ಧ ದೂರು ನೀಡಿದವರು. ಈ ದೂರನ್ನು ಆಧರಿಸಿ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ.

ಸುಳ್ಳು ದೂರು ಪ್ರಕರಣ; ಬಿಗ್ ಬಾಸ್ ಮಾಜಿ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ವಿರುದ್ಧ ಎಫ್​ಐಆರ್​ ದಾಖಲು
ಪ್ರಶಾಂತ್ ಸಂಬರ್ಗಿ

Updated on: Jun 15, 2023 | 7:01 AM

‘ಬಿಗ್ ಬಾಸ್ ಕನ್ನಡ’ (Bigg Boss Kannada) ಎಂಟನೇ ಹಾಗೂ ಒಂಭತ್ತನೇ ಸೀಸನ್​ಗೆ ಕಾಲಿಡುವ ಮೂಲಕ ಪ್ರಶಾಂತ್ ಸಂಬರ್ಗಿ ಹೆಚ್ಚು ಗುರುತಿಸಿಕೊಂಡರು. ಅವರು ವಿವಾದಗಳ ಮೂಲಕವೂ ಹೆಚ್ಚು ಸುದ್ದಿ ಆಗುತ್ತಾರೆ. ಇತ್ತೀಚೆಗೆ ಅವರು ಶಿವರಾಜ್​ಕುಮಾರ್ (Shivarajkumar) ವಿರುದ್ಧ ಹೇಳಿಕೆ ನೀಡಿ ಟೀಕೆಗೆ ಒಳಗಾಗಿದ್ದರು. ಈಗ ಪ್ರಶಾಂತ್ ಸಂಬರ್ಗಿ ಮತ್ತೆ ಸುದ್ದಿಯಲ್ಲಿದ್ದಾರೆ. ಪ್ರಶಾಂತ್ ವಿರುದ್ಧ ಹಲಸೂರು ಗೇಟ್ ಪೊಲೀಸ್​ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸುಳ್ಳು ದೂರು ಸಲ್ಲಿಸಿ ವಂಚನೆ ಎಸಗಿದ ಆರೋಪದ ಮೇಲೆ ಕೇಸ್ ದಾಖಲಾಗಿದೆ.

ಉದ್ಯಮಿ ದೇವನಾತ್ ವೈಕ್ಯೆ ಅವರು ಪ್ರಶಾಂತ್ ಸಂಬರ್ಗಿ ವಿರುದ್ಧ ದೂರು ನೀಡಿದವರು. ಈ ದೂರನ್ನು ಆಧರಿಸಿ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ. 2017ರ ಜುಲೈನಲ್ಲಿ ದೇವನಾತ್ ಅವರು ಸಂಬರಗಿಯಿಂದ ಸಾಲ ಪಡೆದಿದ್ದರು. ಮನೆಯ ಅಸಲಿ ದಾಖಲೆ, ಖಾಲಿ ಚೆಕ್ ಕೊಟ್ಟು ಶ್ಯೂರಿಟಿ ನೀಡಿದ್ದರು. ಬಳಿಕ 2017ರ ಡಿಸೆಂಬರ್‌ನಲ್ಲಿ ಪ್ರಶಾಂತ್​​ಗೆ ದೇವನಾಥ್​ ಹಣ ವಾಪಸ್ ನೀಡಿದ್ದರು. ಇಲ್ಲಿಗೆ ಎಲ್ಲವೂ ಮುಗಿಯಿತು ಎಂದು ದೇವನಾಥ್ ಭಾವಿಸಿದರು. ಆದರೆ, ಹಾಗಾಗಲಿಲ್ಲ.

ಇದನ್ನೂ ಓದಿ: Prashanth Sambargi: ಹೆಚ್ಚಾದ ಆಕ್ರೋಶ; ಶಿವರಾಜ್​ಕುಮಾರ್ ಬಗ್ಗೆ ಹೇಳಿದ ಮಾತು ಹಿಂಪಡೆದ ಪ್ರಶಾಂತ್ ಸಂಬರ್ಗಿ

ದೇವನಾಥ್ ಬಳಿ ಹೆಚ್ಚಿನ ಬಡ್ಡಿ, ಹಣ ನೀಡಬೇಕೆಂದು ಮನೆ ದಾಖಲೆ‌ ನೀಡದೆ ಪ್ರಶಾಂತ್ ಸಂಬರ್ಗಿ ಸತಾಯಿಸಿದ್ದರು. ಅಷ್ಟೇ ಅಲ್ಲ ವಿವಿಧ ಠಾಣೆಯಲ್ಲಿ ದೇವನಾತ್ ವಿರುದ್ಧ ಸುಳ್ಳು ದೂರು ನೀಡಿದ್ದರು. ಸುಳ್ಳು ದೂರು ಹಿನ್ನೆಲೆಯಲ್ಲಿ ಪ್ರಶಾಂತ್ ಸಂಬರಗಿ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ.

ಇದನ್ನೂ ಓದಿ: ‘ಪ್ರಶಾಂತ್ ನೀವೊಬ್ರೇ ರಿಯಲ್​, ಉಳಿದವರೆಲ್ಲರೂ ಫೇಕ್​’ ಎಂದ ಸುದೀಪ್​; ‘ನಾಯಿಬಾಲ ಡೊಂಕು’ ಎಂದ ಸಂಬರ್ಗಿ

ವಿಧಾನಸಭೆ ಚುನಾವಣೆಯಲ್ಲಿ ಶಿವರಾಜ್​ಕುಮಾರ್ ಕಾಂಗ್ರೆಸ್ ಪರ ಪ್ರಚಾರ ಮಾಡಿದ್ದಕ್ಕೆ ಪ್ರಶಾಂತ್ ಸಂಬರ್ಗಿ ಹಲವು ರೀತಿಯಲ್ಲಿ ಟೀಕೆ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಹಲವು ಬಗೆಯ ಪೋಸ್ಟ್​ಗಳನ್ನು ಹಾಕಿ, ನಾಲಿಗೆ ಹರಿಬಿಟ್ಟಿದ್ದರು. ಈ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾದ ಬೆನ್ನಲ್ಲೇ ಪ್ರಶಾಂತ್ ಸಂಬರ್ಗಿ ತಾವು ಆಡಿದ ಮಾತನ್ನು ಹಿಂದಕ್ಕೆ ಪಡೆದಿದ್ದರು. ‘ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು’ ಎನ್ನುವ ಮಾತನ್ನು ಪ್ರಶಾಂತ್ ಸಂಬರ್ಗಿಗೆ ಫ್ಯಾನ್ಸ್ ನೆನಪಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
Follow Us