ಇಷ್ಟೊಂದು ಸಾವು-ನೋವಿನಲ್ಲಿ ಸಂಭ್ರಮಿಸುವುದು ಸರಿಯಲ್ಲ; ಅಭಿಮಾನಿಗಳಿಗೆ ಗಣೇಶ್​ ವಿಶೇಷ ಮನವಿ

Ganesh Birthday: ಜು.2ರಂದು ಗೋಲ್ಡನ್​ ಸ್ಟಾರ್​ ಗಣೇಶ್​ ಜನ್ಮದಿನ. ಹಾಗಾಗಿ, ಹುಟ್ಟುಹಬ್ಬ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಅವರು ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ಇಷ್ಟೊಂದು ಸಾವು-ನೋವಿನಲ್ಲಿ ಸಂಭ್ರಮಿಸುವುದು ಸರಿಯಲ್ಲ; ಅಭಿಮಾನಿಗಳಿಗೆ ಗಣೇಶ್​ ವಿಶೇಷ ಮನವಿ
ಗಣೇಶ್​

Updated on: Jun 29, 2021 | 10:07 AM

ಕೊರೊನಾ ವೈರಸ್​ನಿಂದಾಗಿ ಎಲ್ಲ ಕ್ಷೇತ್ರಗಳ ರೀತಿ ಚಿತ್ರರಂಗ ಕೂಡ ತತ್ತರಿಸಿದೆ. ಆರ್ಥಿಕ ನಷ್ಟದ ಹೊಡೆತ ಒಂದುಕಡೆಯಾದರೆ, ಜನರು ಪ್ರಾಣಗಳನ್ನು ಕಳೆದುಕೊಂಡಿರುವ ನೋವು ಇನ್ನೊಂದು ಕಡೆ. ಈ ಸಂದರ್ಭದಲ್ಲಿ ಯಾವುದೇ ಸಂಭ್ರಮಾಚರಣೆ ಬೇಡ ಎಂದು ನಟ ಗೋಲ್ಡನ್​ ಸ್ಟಾರ್​ ಗಣೇಶ್​ ಹೇಳಿದ್ದಾರೆ. ಜು.2ರಂದು ಅವರ ಜನ್ಮದಿನ. ಹಾಗಾಗಿ, ಹುಟ್ಟುಹಬ್ಬ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಅವರು ಅಭಿಮಾನಿಗಳಿಗೆ ವಿಶೇಷ ಮನವಿ ಮಾಡಿಕೊಂಡಿದ್ದಾರೆ. ಎಲ್ಲರಿಗಾಗಿ ಪತ್ರ ಬರೆದಿದ್ದಾರೆ.

‘ಪ್ರೀತಿಯ ಅಭಿಮಾನಿ ಗೆಳೆಯರಿಗೆ… ಎಲ್ಲರಿಗೂ ನಿಮ್ಮ ಗಣೇಶ್​ ಮಾಡುವ ನಮಸ್ಕಾರಗಳು. ಮೊದಲಿಗೆ ನನಗೆ ಅರಿವಿದ್ದು ಅರಿವಿಲ್ಲದೆಯೋ ಈ ಕೊವಿಡ್​ ಸಮಯದಲ್ಲಿ ನನ್ನ ಹೆಸರಿನಲ್ಲಿ ಮಾಡಿರುವ ಕೆಲಸಗಳಿಗೆ ನಿಮಗೆ ಪ್ರಣಾಮಗಳು. ಈ ಮೂಲಕ ನಿಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ, ಪ್ರತಿ ವರ್ಷ ನನ್ನ ಜನ್ಮದಿನವನ್ನು ಹಬ್ಬದಂತೆ ಆಚರಿಸಿ ಆಶೀರ್ವದಿಸುತ್ತಾ ಬಂದಿದ್ದೀರಿ. ಆದರೆ ಈ ವರ್ಷ ಕೊರೊನಾ ಮಹಾಮಾರಿಯ ಆರ್ಭಟಕ್ಕೆ ಸಿಕ್ಕು ನನ್ನ ಹಲವು ಸಿನಿಮಾ ಸಹೋದ್ಯೋಗಿಗಳು, ಆತ್ಮೀಯರು ಗೆಳೆಯರು ಬಲಿಯಾಗಿದ್ದು ನೋವು ತರಿಸಿದೆ. ಅದೆಷ್ಟೋ ಜನರ ಜೀವನ ನಲುಗಿ ಹೋಗಿದೆ’ ಎಂದು ಗಣೇಶ್​ ಹೇಳಿದ್ದಾರೆ.

‘ಇಷ್ಟೆಲ್ಲ ನೋವುಗಳ ನಡುವೆ ಸಂಭ್ರಮಕ್ಕಿದು ಸರಿಹೊಂದುವ ಸಮಯವಲ್ಲ ಎಂದೆನಿಸಿ, ಈ ವರ್ಷ ಜನ್ಮದಿನವನ್ನು ಆಚರಿಸಿಕೊಳ್ಳದಿರಲು ಇಚ್ಛಿಸಿರುತ್ತೇನೆ. ಅಲ್ಲದೇ ನಾನು ಜನ್ಮದಿನದಂದು ಹೊರಾಂಗಣ ಚಿತ್ರೀಕರಣದಲ್ಲಿ ತೊಡಗಿರುತ್ತೇನೆ. ಪ್ರತಿ ವರ್ಷವೂ ಹುಟ್ಟುಹಬ್ಬ ಆಚರಣೆಗೆ ಪ್ರೀತಿಯಿಂದ ನೀವು ತರುವ ಕೇಕ್​, ಹಾರ, ಉಡುಗೊರೆ ಮುಂತಾದವುಗಳಿಗಾಗಿ ಈ ವರ್ಷ ಹಣ ವ್ಯಯಿಸದೇ ಅದೇ ಖರ್ಚಿನ ಮೊತ್ತವನ್ನು ಕೊರೊನಾ ಸಂಕಷ್ಟದಲ್ಲಿ ಇರುವ ಮತ್ತಷ್ಟು ಜೀವಗಳಿಗೆ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತೇನೆ. ಅದೇ ನನಗೆ ಶ್ರೀರಕ್ಷೆ. ಇಂತಿ ನಿಮ್ಮವ ಗಣೇಶ್​’ ಎಂದು ಪತ್ರದಲ್ಲಿ ಗೋಲ್ಡನ್​ ಸ್ಟಾರ್​ ಮನವಿ ಮಾಡಿಕೊಂಡಿದ್ದಾರೆ.

ಹಲವು ಸಿನಿಮಾ ಕೆಲಗಳಲ್ಲಿ ಗಣೇಶ್ ಬ್ಯುಸಿ ಆಗಿದ್ದಾರೆ. ಯೋಗರಾಜ್​ ಭಟ್​ ನಿರ್ದೇಶನ ಮಾಡುತ್ತಿರುವ ‘ಗಾಳಿಪಟ 2’ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ. ನಿರ್ದೇಶಕ ಸಿಂಪಲ್​ ಸುನಿ ಜೊತೆ ಅವರು ‘ಸಖತ್​’ ಚಿತ್ರ ಮಾಡುತ್ತಿದ್ದಾರೆ. ಆ ಸಿನಿಮಾದಲ್ಲಿ ಗಣೇಶ್​ಗೆ ಡಿಫರೆಂಟ್​ ಗೆಟಪ್​ ಇದೆ. ಈ ಸಿನಿಮಾ ತಂಡಗಳಿಂದ ಅವರ ಜನ್ಮದಿನ ಪ್ರಯುಕ್ತ ಹೊಸ ಪೋಸ್ಟರ್​ ಅಥವಾ ಟೀಸರ್​ಗಳ ಗಿಫ್ಟ್​ ಸಿಗುವ ನಿರೀಕ್ಷೆ ಇದೆ.

ಇದನ್ನೂ ಓದಿ:

ಕಣ್ಣಿಲ್ಲದ ವ್ಯಕ್ತಿ ಪಾತ್ರದಲ್ಲಿ ಗೋಲ್ಡನ್​ ಸ್ಟಾರ್​ ಗಣೇಶ್​! ಯಾವ ಸಿನಿಮಾ? ಯಾರದ್ದು ನಿರ್ದೇಶನ?

Published On - 9:54 am, Tue, 29 June 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us