
ಹೇಮಂತ್ ರಾವ್ (Hemanth Rao), ‘ಸಪ್ತ ಸಾಗರದಾಚೆ ಎಲ್ಲೊ’ ಸೈಡ್ ಎ ಮತ್ತು ಬಿಗಳ ಮೂಲಕ ದೇಶದ ಸಿನಿಮಾ ಪ್ರೇಮಿಗಳ ಗಮನ ಸೆಳೆದಿದ್ದಾರೆ. ಬೇರೆ ಬೇರೆ ಚಿತ್ರರಂಗದ ಪ್ರತಿಭಾವಂತ ನಿರ್ದೇಶಕ, ನಟರುಗಳು ಸಹ ಹೇಮಂತ್ ರಾವ್ ಅವರ ಪ್ರತಿಭೆಯನ್ನು ಕೊಂಡಾಡಿದ್ದಾರೆ. ಇದೀಗ ಹೇಮಂತ್ ರಾವ್ ಅವರು ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಆದರೆ ‘ಸಪ್ತ ಸಾಗರದಾಚೆ ಎಲ್ಲೊ’ ಸೈಡ್ ಬಿ ಸಿನಿಮಾ ಬಿಡುಗಡೆ ಆದ ಬಳಿಕ ಹೇಮಂತ್ ರಾವ್ ಅವರು ಶಿವರಾಜ್ ಕುಮಾರ್ ಜೊತೆಗೆ ‘ಭೈರವನ ಕೊನೆ ಪಾಠ’ ಸಿನಿಮಾ ಘೋಷಿಸಿದ್ದರು. ಸಿನಿಮಾದ ಪೋಸ್ಟರ್ ಸಹ ಬಿಡುಗಡೆ ಆಗಿತ್ತು. ಆದರೆ ಆ ಸಿನಿಮಾ ಅಚಾನಕ್ಕಾಗಿ ನಿಂತು ಹೋಯ್ತು. ಅದಕ್ಕೆ ಕಾರಣವನ್ನು ಖುದ್ದು ಹೇಮಂತ್ ರಾವ್ ನೀಡಿದ್ದಾರೆ.
ತೆಲುಗಿನ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಹೇಮಂತ್ ರಾವ್, ‘ಭೈರವನ ಕೊನೆ ಪಾಠ’ ಸಿನಿಮಾ 12ನೇ ಶತಮಾನದಲ್ಲಿ ನಡೆಯುವ ಕತೆಯನ್ನು ಒಳಗೊಂಡಿದೆ. ಅದು ಒಂದು ರೀತಿ ಶೇಕ್ಸ್ಪಿಯರ್ ಮಾದರಿಯ ಕತೆಯುಳ್ಳ ಸಿನಿಮಾ. ಆಗಿನ ಕಾಲದ ಅಂದ-ಚಂದವನ್ನಲ್ಲದೆ, ಆಗ ನಿಜವಾಗಿಯೂ ಮನುಷ್ಯರು ಎದುರಿಸುತ್ತಿದ್ದ ಸಮಸ್ಯೆಗಳು, ಜೀವನದ ಕಷ್ಟಗಳ ಕುರಿತಾದ ಕತೆಯನ್ನು ಆ ಸಿನಿಮಾ ಒಳಗೊಂಡಿದೆ. ಸಿನಿಮಾವು 12ನೇ ಶತಮಾನದ ಜನ ನೀವನದ ಮೇಲೆ ಬೆಳಕು ಚೆಲ್ಲುವ ಸಿನಿಮಾ ಆಗಿತ್ತು ಎಂದು ಹೇಮಂತ್ ರಾವ್ ಹೇಳಿದ್ದಾರೆ.
‘ಸಿನಿಮಾದ ಪ್ರೀ ಪ್ರೊಡಕ್ಷನ್ ಎಲ್ಲ ಮುಗಿದು, ನಾವು ಚಿತ್ರೀಕರಣ ಪ್ರಾರಂಭಿಸುವ ಹಂತದಲ್ಲಿದ್ದೆವು. ಸಿನಿಮಾದ ಫೋಟೊಶೂಟ್, ರಿಹರ್ಸಲ್ ಎಲ್ಲವೂ ಮುಗಿದಿತ್ತು. ಆಗ ನಮಗೆ ಶಿವಣ್ಣನ ಆರೋಗ್ಯ ಸ್ಥಿತಿಯ ಬಗ್ಗೆ ಗೊತ್ತಾಯ್ತು. ಅವರು ಕ್ಯಾನ್ಸರ್ ಜೊತೆ ಹೋರಾಡುತ್ತಿದ್ದರು. ನಾನು ಶಿವಣ್ಣನ ಬಹಳ ಪ್ರೀತಿಸುತ್ತೆನೆ, ಗೌರವಿಸುತ್ತೇನೆ. ಹಾಗಾಗಿ ಇಂಥಹಾ ಸಮಯದಲ್ಲಿ ಇಂಥಹಾ ಕಷ್ಟದ ಸಿನಿಮಾ ಅನ್ನು ಅವರಿಂದ ಮಾಡಿಸುವುದು ಬೇಡ ಎನಿಸಿ, ನಾನೇ ಹಿಂದೆ ಸರಿದೆ’ ಎಂದಿದ್ದಾರೆ ಹೇಮಂತ್ ರಾವ್.
ಇದನ್ನೂ ಓದಿ:ಅಪ್ಪುಗೆ ‘ಸಿಐಡಿ 999’ ಕತೆ ಹೇಳಿದ್ದ ನಿರ್ದೇಶಕ ಹೇಮಂತ್ ರಾವ್
‘ಭೈರವನ ಕೊನೆ ಪಾಠ’ ಸಿನಿಮಾಕ್ಕೆ ಸಾಕಷ್ಟು ದೈಹಿಕ ಶ್ರಮ ಹಾಕಬೇಕಿತ್ತು, ಸಾಕಷ್ಟು ಹೊರಾಂಗಣ ಚಿತ್ರೀಕರಣ, ಆಕ್ಷನ್ ದೃಶ್ಯಗಳು, ಕುದುರೆ ಸವಾರಿ ಇನ್ನೂ ಏನೇನೋ ಇತ್ತು. ಅನಾರೋಗ್ಯದಿಂದ ಬಳಲಿದ್ದ ಶಿವಣ್ಣನ ಕೈಯಲ್ಲಿ ಅದನ್ನೆಲ್ಲ ಮಾಡಿಸಲು ನನ್ನ ಮನಸ್ಸು ಒಪ್ಪಲಿಲ್ಲ. ಶಿವಣ್ಣನನ್ನು ನೋವಿನಲ್ಲಿ ನೋಡುವುದು ನನಗೆ ಆಗುತ್ತಿರಲಿಲ್ಲ. ಹಾಗಾಗಿ ಆ ಸಿನಿಮಾದಿಂದ ಹಿಂದೆ ಸರಿದೆ. ಆದರೆ ಶಿವಣ್ಣನೊಟ್ಟಿಗೆ ಸಿನಿಮಾ ಮಾಡಲೇ ಬೇಕು ಎಂಬುದು ನನ್ನ ಆಸೆಯಾಗಿತ್ತು. ಹಾಗಾಗಿ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದ ಕತೆ ಬರೆದೆ, ಈಗ ಚಿತ್ರೀಕರಣ ಮಾಡುತ್ತಿದ್ದೇವೆ’ ಎಂದಿದ್ದಾರೆ ಹೇಮಂತ್.
ಅಂದಹಾಗೆ ‘ಭೈರವನ ಕೊನೆ ಪಾಠ’ ಸಿನಿಮಾದ ಕತೆ ಶಿವಣ್ಣನಿಗೂ ಬಹಳ ಇಷ್ಟವಾಗಿದೆಯಂತೆ. ನಾವು ಖಂಡಿತ ಆ ಸಿನಿಮಾ ಮಾಡಲೇ ಬೇಕು ಎಂದು ಶಿವಣ್ಣ ಸಹ ಹೇಳಿದ್ದಾರಂತೆ. ಈಗ ಈ ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ಖಂಡಿತ ಆ ಸಿನಿಮಾವನ್ನು ಸಹ ನಿರ್ದೇಶಿಸುತ್ತೀನಿ’ ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ