Hombale Films: ಮುಂದಿನ 5 ವರ್ಷಗಳಲ್ಲಿ ಚಿತ್ರರಂಗಕ್ಕೆ 3 ಸಾವಿರ ಕೋಟಿ ರೂ. ಹೂಡಿಕೆ; ವಿಜಯ್ ಕಿರಗಂದೂರು ಮಹತ್ವದ ಘೋಷಣೆ

| Updated By: ರಾಜೇಶ್ ದುಗ್ಗುಮನೆ

Updated on: Jan 02, 2023 | 5:44 PM

ಸಿನಿಮಾ ರಂಗಕ್ಕೆ ಮುಂದಿನ ಐದು ವರ್ಷಗಳಲ್ಲಿ 3 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಹಲವು ಬಿಗ್ ಬಜೆಟ್ ಚಿತ್ರಗಳು ಈ ನಿರ್ಮಾಣ ಸಂಸ್ಥೆಯಿಂದ ಮೂಡಿ ಬರುವ ಸೂಚನೆ ಸಿಕ್ಕಿದೆ.

Hombale Films: ಮುಂದಿನ 5 ವರ್ಷಗಳಲ್ಲಿ ಚಿತ್ರರಂಗಕ್ಕೆ 3 ಸಾವಿರ ಕೋಟಿ ರೂ. ಹೂಡಿಕೆ; ವಿಜಯ್ ಕಿರಗಂದೂರು ಮಹತ್ವದ ಘೋಷಣೆ
ಹೊಂಬಾಳೆ ಫಿಲ್ಮ್ಸ್​-ವಿಜಯ್ ಕಿರಗಂದೂರು
Follow us on

ವಿಜಯ್ ಕಿರಗಂದೂರು (Vijay Kirgandur ) ಅವರ ‘ಹೊಂಬಾಳೆ ಫಿಲ್ಮ್ಸ್​​’ ಕಡೆಯಿಂದ ಹೊಸ ಹೊಸ ಸಿನಿಮಾಗಳು ಘೋಷಣೆ ಆಗುತ್ತಲೇ ಇವೆ. ‘ಕೆಜಿಎಫ್​’ (KGF Movie) ಸರಣಿ ಹಿಟ್ ಆದ ನಂತರದಲ್ಲಿ ಪರಭಾಷೆಯಲ್ಲೂ ವಿಜಯ್ ಕಿರಗಂದೂರು ಅವರು ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಹೊಸ ವರ್ಷಕ್ಕೆ ಅವರ ಕಡೆಯಿಂದ ಮಹತ್ವದ ಘೋಷಣೆ ಆಗಿದೆ. ಸಿನಿಮಾ ರಂಗಕ್ಕೆ ಮುಂದಿನ ಐದು ವರ್ಷಗಳಲ್ಲಿ 3 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುವ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಮೂಲಕ ಹಲವು ಬಿಗ್ ಬಜೆಟ್ ಚಿತ್ರಗಳು ಈ ನಿರ್ಮಾಣ ಸಂಸ್ಥೆಯಿಂದ ಮೂಡಿ ಬರುವ ಸೂಚನೆ ಸಿಕ್ಕಿದೆ.

‘ಹೊಂಬಾಳೆ ಫಿಲ್ಮ್ಸ್​​’ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ತುಂಬಾನೇ ದೊಡ್ಡದು. ಹಲವು ಸೂಪರ್ ಹಿಟ್ ಚಿತ್ರಗಳನ್ನು ಈ ನಿರ್ಮಾಣ ಸಂಸ್ಥೆ ನೀಡಿದೆ. ‘ಕೆಜಿಎಫ್​’ ಹಾಗೂ ‘ಕೆಜಿಎಫ್​ 2’ ಚಿತ್ರಗಳಿಂದ ಈ ಸಂಸ್ಥೆಗೆ ದೊಡ್ಡ ಮಟ್ಟದ ಲಾಭ ಆಗಿದೆ. ‘ಕೆಜಿಎಫ್ 2’ ವಿಶ್ವ ಮಟ್ಟದಲ್ಲಿ 1300+ ಕೋಟಿ ರೂಪಾಯಿ ಕಮಾಯಿ ಮಾಡಿದೆ. ಇದರಿಂದ ವಿಜಯ್ ಅವರ ಜೇಬು ತುಂಬಿದೆ. ಇತ್ತೀಚೆಗೆ ತೆರೆಗೆ ಬಂದ ‘ಕಾಂತಾರ’ ಸಿನಿಮಾ ಕೂಡ ಸೂಪರ್ ಹಿಟ್ ಆಯಿತು. ಈ ಸಿನಿಮಾ ಕೂಡ ದೊಡ್ಡ ಮಟ್ಟದ ಲಾಭ ನೀಡಿದೆ. 15 ಕೋಟಿ ಬಜೆಟ್​ನಲ್ಲಿ ರೆಡಿ ಆದ ಈ ಚಿತ್ರದ ಒಟ್ಟಾರೆ ಕಲೆಕ್ಷನ್​ 400 ಕೋಟಿ ರೂಪಾಯಿ ದಾಟಿದೆ. ಈ ಎಲ್ಲಾ ಸಿನಿಮಾಗಳಿಂದ ಆದ ಲಾಭವನ್ನು ಚಿತ್ರರಂಗಕ್ಕೆ ಮರಳಿ ಹೂಡಿಕೆ ಮಾಡಲು ವಿಜಯ್ ನಿರ್ಧರಿಸಿದಂತಿದೆ.

ಹೊಂಬಾಳೆ ಫಿಲ್ಮ್ಸ್​​ ನಿರ್ಮಾಣದ ಮೊದಲ ಸಿನಿಮಾ ‘ನಿನ್ನಿಂದಲೇ’ (2014) ಹೆಚ್ಚು ಸದ್ದು ಮಾಡಲಿಲ್ಲ. 2015ರಲ್ಲಿ ಬಂದ ‘ಮಾಸ್ಟರ್​ಪೀಸ್​’ ಚಿತ್ರ ಸೂಪರ್ ಹಿಟ್ ಆಯಿತು. ‘ರಾಜಕುಮಾರ’ ಸೇರಿ ಹಲವು ಸೂಪರ್ ಹಿಟ್ ಚಿತ್ರಗಳು ನಿರ್ಮಾಣ ಸಂಸ್ಥೆಯಿಂದ ಮೂಡಿ ಬಂದಿವೆ.

ಇದನ್ನೂ ಓದಿ: KGF Chapter 1: ‘ಕೆಜಿಎಫ್’ ಚಿತ್ರಕ್ಕೆ 4 ವರ್ಷ; ಇತಿಹಾಸ ಸೃಷ್ಟಿಸಿದ ದಿನ ನೆನೆದ ಹೊಂಬಾಳೆ ಫಿಲ್ಮ್ಸ್​

ಹೊಂಬಾಳೆ ತೆಲುಗಿನಲ್ಲಿ ‘ಸಲಾರ್​’ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಈ ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಇದೆ. ಪ್ರಭಾಸ್ ಈ ಚಿತ್ರದ ಹೀರೋ. ಪೃಥ್ವಿರಾಜ್​ ನಿರ್ದೇಶಿಸಿ ನಟಿಸುತ್ತಿರುವ ಮಲಯಾಳಂನ ‘ಟೈಸನ್​’ ಕೂಡ ನಿರೀಕ್ಷೆ ಮೂಡಿಸಿದೆ. ಕನ್ನಡದ ‘ಬಘೀರ’ ಚಿತ್ರದ ಬಗ್ಗೆ ಕುತೂಹಲ ಮೂಡಿದೆ. ಮಲಯಾಳಂನ ‘ಧೂಮಂ’, ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡಲಿರುವ ‘ರಿಚರ್ಡ್​ ಆಂಟನಿ’ ಸಿನಿಮಾಗಳು ಘೋಷಣೆ ಆಗಿವೆ. ತಮಿಳಿನಲ್ಲಿ ಕೀರ್ತಿ ಸುರೇಶ್ ನಟನೆಯ ಸಿನಿಮಾಗೆ ಹೊಂಬಾಳೆ ಹಣ ಹೂಡಿಕೆ ಮಾಡುತ್ತಿದೆ. ಇದರ ಜತೆಗೆ ಬಾಲಿವುಡ್​ನತ್ತ ವಿಜಯ್ ಅವರು ಗಮನಹರಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸಿನಿಮಾ ಘೋಷಣೆ ಆಗುವ ನಿರೀಕ್ಷೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 5:27 pm, Mon, 2 January 23