ಕಿರೀಟಿ ರಿಯಲ್​ ಆ್ಯಕ್ಷನ್​; ವಾವ್​ ಎನ್ನುವಂತಿದೆ ಜನಾರ್ದನ ರೆಡ್ಡಿ ಪುತ್ರನ ಫೈಟಿಂಗ್​ ಪರಿಶ್ರಮ

| Updated By: ಮದನ್​ ಕುಮಾರ್​

Updated on: Apr 20, 2022 | 3:12 PM

ನಟ ಕಿರೀಟಿ ಅವರು ತಮ್ಮ ಚೊಚ್ಚಲ ಚಿತ್ರಕ್ಕಾಗಿ ಇನ್ನಿಲ್ಲದಷ್ಟು ಕಷ್ಟಪಡುತ್ತಿದ್ದಾರೆ. ಇಂಟ್ರಡಕ್ಷನ್​ ಟೀಸರ್​ ಸಲುವಾಗಿ ಅವರು ಏನೆಲ್ಲ ಕಸರತ್ತು ಮಾಡಿದ್ದಾರೆ ಎಂಬುದಕ್ಕೆ ಸಾಕ್ಷಿ ಈ ಮೇಕಿಂಗ್​ ವಿಡಿಯೋ.

ಕಿರೀಟಿ ರಿಯಲ್​ ಆ್ಯಕ್ಷನ್​; ವಾವ್​ ಎನ್ನುವಂತಿದೆ ಜನಾರ್ದನ ರೆಡ್ಡಿ ಪುತ್ರನ ಫೈಟಿಂಗ್​ ಪರಿಶ್ರಮ
ನಟ ಕಿರೀಟಿ
Follow us on

ಜನಾರ್ದನ ರೆಡ್ಡಿ (Janardhan Reddy) ಪುತ್ರ ಕಿರೀಟಿ ಅವರು ಚಿತ್ರರಂಗಕ್ಕೆ ಕಾಲಿಡುತ್ತಿರುವುದು ಗೊತ್ತೇ ಇದೆ. ಮೊದಲ ಸಿನಿಮಾಗಾಗಿ ಅವರು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ರಾಯಲ್​ ಕಿಡ್​ ಎಂಬ ಕಾರಣಕ್ಕೆ ಅವರು ಸಿನಿಮಾದ ಅವಕಾಶವನ್ನು ಹಗುರವಾಗಿ ಪರಿಗಣಿಸಿಲ್ಲ. ಹೀರೋ ಆಗಲು ಬೇಕಾಗಿರುವ ಎಲ್ಲ ಬಗೆಯ ಶ್ರಮವನ್ನೂ ಅವರು ಹಾಕುತ್ತಿದ್ದಾರೆ. ಅದಕ್ಕೆ ಸಾಕ್ಷಿ ಎಂಬಂತೆ ಈಗ ಹೊಸದೊಂದು ವಿಡಿಯೋ ವೈರಲ್​ ಆಗಿದೆ. ಸಿನಿಮಾದ ಆ್ಯಕ್ಷನ್​ ದೃಶ್ಯಗಳಿಗಾಗಿ ಕಿರೀಟಿ (Kireeti) ಅವರು ಯಾವ ರೀತಿ ಕಷ್ಟಪಡುತ್ತಿದ್ದಾರೆ ಎಂಬುದಕ್ಕೆ ಈ ಮೇಕಿಂಗ್​ ವಿಡಿಯೋ ಸಾಕ್ಷಿ ಒದಗಿಸುತ್ತಿದೆ. ಸಾಮಾನ್ಯವಾಗಿ ಸಿನಿಮಾದಲ್ಲಿ ಸಾಹಸ ಸನ್ನಿವೇಶದ ಚಿತ್ರೀಕರಣ ಮಾಡುವಾಗ ಡ್ಯೂಪ್​ ಬಳಸುತ್ತಾರೆ. ಹೀರೋ ಬದಲಿಗೆ ಬೇರೆ ಸಾಹಸ ಕಲಾವಿದರು ರಿಸ್ಕಿ ಸ್ಟಂಟ್ಸ್​ ಮಾಡುತ್ತಾರೆ. ಆದರೆ ಕಿರೀಟಿ ಆ ರೀತಿ ಅಲ್ಲ. ಸ್ವತಃ ಅವರೇ ಅಪಾಯಕಾರಿ ಸಾಹಸಗಳನ್ನು ಮಾಡುತ್ತಿದ್ದಾರೆ. ಇಡೀ ಸಿನಿಮಾದಲ್ಲಿ ಆ್ಯಕ್ಷನ್​ ದೃಶ್ಯಗಳು ಹೇಗಿರಬಹುದು ಎಂಬುದರ ಝಲಕ್​ ಈ ಮೇಕಿಂಗ್​ ವಿಡಿಯೋದಲ್ಲಿ ಇದೆ. ಒಟ್ಟಾರೆಯಾಗಿ ಕಿರೀಟಿ ಅವರು ಮೊದಲ ಸಿನಿಮಾದಲ್ಲೇ (Kireeti Movie) ಪ್ರೇಕ್ಷಕರ ಮನ ಗೆಲ್ಲುವ ಸಕಲ ಪ್ರಯತ್ನವನ್ನೂ ಮಾಡುತ್ತಿದ್ದಾರೆ.

ಕೆಲವು ದಿನಗಳ ಹಿಂದೆ ಕಿರೀಟಿ ಅವರ ಇಂಟ್ರಡಕ್ಷನ್​ ಟೀಸರ್​ ಬಿಡುಗಡೆ ಆಗಿತ್ತು. ಅದನ್ನು ಕಂಡು ಎಲ್ಲರೂ ಫಿದಾ ಆಗಿದ್ದರು. ಟೀಸರ್​ನಲ್ಲಿ ಕಿರೀಟಿ ಮಾಡಿದ ಡ್ಯಾನ್ಸ್​, ಆ್ಯಕ್ಷನ್​ ನೋಡಿ ರಾಜಮೌಳಿ ಕೂಡ ಭೇಷ್​ ಎಂದಿದ್ದರು. ಆದರೆ ಆ ಟೀಸರ್​ ಹಿಂದೆ ಕಿರೀಟಿ ಎಷ್ಟೆಲ್ಲ ಕಷ್ಟಪಟ್ಟಿದ್ದಾರೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಈಗ ಚಿತ್ರತಂಡದಿಂದ ಮೇಕಿಂಗ್​ ವಿಡಿಯೋ ಬಿಡುಗಡೆ ಆಗಿದ್ದು, ಕಿರೀಟಿ ಅವರ ಪರಿಶ್ರಮಕ್ಕೆ ಹೆಚ್ಚಿನ ಚಪ್ಪಾಳೆ ಸಿಗುತ್ತಿದೆ.

ಖ್ಯಾತ ಸಾಹಸ ನಿರ್ದೇಶಕ ಪೀಟರ್​ ಹೇನ್ಸ್​ ಅವರ ಮಾರ್ಗದರ್ಶನದಲ್ಲಿ ಕಿರೀಟಿ ಅವರು ಭರ್ಜರಿ ಆ್ಯಕ್ಷನ್​ ಮಾಡಿ ತೋರಿಸಿದ್ದಾರೆ. ರಿಹರ್ಸಲ್​ ಮತ್ತು ಶೂಟಿಂಗ್​ ಸಂದರ್ಭದಲ್ಲಿ ಪೆಟ್ಟುಗಳಾದರೂ ಕೂಡ ಕಿರೀಟಿ ಕುಗ್ಗಲಿಲ್ಲ. ಆಗ ಅವರ ಉತ್ಸಾಹ ಯಾವ ರೀತಿ ಇತ್ತು ಎಂಬುದು ಕೂಡ ಈ ಮೇಕಿಂಗ್​ ವಿಡಿಯೋದಲ್ಲಿ ಸೆರೆಯಾಗಿದೆ.

ತೆಲುಗಿನ ಖ್ಯಾತ ನಿರ್ಮಾಣ ಸಂಸ್ಥೆ ‘ವಾರಾಹಿ ಚಲನ ಚಿತ್ರಂ’ ಮೂಲಕ ಅದ್ದೂರಿ ಬಜೆಟ್​ನಲ್ಲಿ ಮೂಡಿಬರುತ್ತಿರುವ ಸಿನಿಮಾ ಇದು. ‘ಮಯಾಬಜಾರ್’ ಖ್ಯಾತಿಯ ರಾಧಾಕೃಷ್ಣ ರೆಡ್ಡಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಅವರ ಜೊತೆಗೆ ಘಟಾನುಘಟಿ ತಂತ್ರಜ್ಞರು ಈ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ. ‘ಪುಷ್ಪ’ ಸಿನಿಮಾ ಮೂಲಕ ಸೆನ್ಸೇಷನ್​ ಕ್ರಿಯೇಟ್​ ಮಾಡಿರುವ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್​ ಅವರು ಕಿರೀಟಿಯ ಈ ಚೊಚ್ಚಲ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಕೆ.ಕೆ. ಸೇಂಥಿಲ್​ ಕುಮಾರ್​ ಐಎಸ್​ಸಿ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ.

ಈ ಮೊದಲು ರಿಲೀಸ್​ ಆದ ಹೀರೋ ಇಂಟ್ರಡಕ್ಷನ್​ ಟೀಸರ್ ಯೂಟ್ಯೂಬ್​ನಲ್ಲಿ 49 ಲಕ್ಷಕ್ಕೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಈಗ ಮೇಕಿಂಗ್​ ವಿಡಿಯೋ ಕೂಡ ಹೆಚ್ಚು ವೀವ್ಸ್​ ಪಡೆದುಕೊಳ್ಳುತ್ತಿದೆ. ಮೇಕಿಂಗ್​ ವಿಡಿಯೋ ನೋಡಿದ ನೆಟ್ಟಿಗರು ಪಾಸಿಟಿವ್​ ಆಗಿ ಕಮೆಂಟ್​ ಮಾಡುತ್ತಿದ್ದಾರೆ. ‘ಕಿರೀಟಿ ಅವರ ಹಾರ್ಡ್​ ವರ್ಕ್​ ಮತ್ತು ಬದ್ಧತೆಗೆ ಹ್ಯಾಟ್ಸಾಫ್​’ ಎಂದು ಪ್ರೇಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ. ‘ನಿಜವಾದ ಸಿನಿಮಾ ಹೀರೋಗೆ ಬೇಕಿರುವ ಗುಣ ಇದು’ ಎಂದು ಅನೇಕರು ಬೆನ್ನು ತಟ್ಟಿದ್ದಾರೆ.

ಇದನ್ನೂ ಓದಿ:

‘ಅಪ್ಪು ಸರ್​ ನೋಡಿ ನಾನು ನಟನಾದೆ’; ಹೆಮ್ಮೆಯಿಂದ ಹೇಳಿಕೊಂಡ ಕಿರೀಟಿ

‘ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲವೇ ಇಲ್ಲ’: ನೇರವಾಗಿ ಹೇಳಿದ ಜನಾರ್ದನ ರೆಡ್ಡಿ ಪುತ್ರ ಕಿರೀಟಿ