ಜಯರಾಜ್​ ಮಗನ ಕಹಾನಿ ಇರುವ ಸಿನಿಮಾ ‘ಜಾಂಟಿ ಸನ್ ಆಫ್ ಜಯರಾಜ್’

ಬೆಂಗಳೂರಿನ ಆ ಕಾಲದ ರೌಡಿಸಂ ಬಗ್ಗೆ ಈಗಾಗಲೇ ಅನೇಕ ಸಿನಿಮಾಗಳು ಬಂದಿವೆ. ಈಗ ಇನ್ನೊಂದು ಸಿನಿಮಾ ಅವುಗಳ ಸಾಲಿಗೆ ಸೇರ್ಪಡೆ ಆಗುತ್ತಿದೆ. ‘ಜಾಂಟಿ ಸನ್ ಆಫ್ ಜಯರಾಜ್’ ಎಂಬುದು ಈ ಚಿತ್ರದ ಶೀರ್ಷಿಕೆ. ಇತ್ತೀಚೆಗೆ ಈ ಸಿನಿಮಾದ ಟೀಸರ್​ ಬಿಡುಗಡೆ ಮಾಡಲಾಯಿತು. ಈ ಕಾರ್ಯಕ್ರಮಕ್ಕೆ ವಿನೋದ್​ ಪ್ರಭಾಕರ್​, ಶ್ರೀನಗರ ಕಿಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

ಜಯರಾಜ್​ ಮಗನ ಕಹಾನಿ ಇರುವ ಸಿನಿಮಾ ‘ಜಾಂಟಿ ಸನ್ ಆಫ್ ಜಯರಾಜ್’
ಅಜಿತ್​ ಜಯರಾಜ್​, ವಿನೋದ್​ ಪ್ರಭಾಕರ್​, ಶ್ರೀನಗರ ಕಿಟ್ಟಿ

Updated on: Sep 20, 2024 | 10:12 PM

ಭೂಗತ ಲೋಕದಲ್ಲಿ ಜಯರಾಜ್​ ಹೆಸರು ಕೇಳದವರೇ ಇಲ್ಲ. ಅವರ ಪುತ್ರ ಅಜಿತ್​ ಜಯರಾಜ್​ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಅಜಿತ್​ ಅವರ ಹೊಸ ಸಿನಿಮಾ ‘ಜಾಂಟಿ ಸನ್ ಆಫ್ ಜಯರಾಜ್’ ಸಿದ್ಧವಾಗುತ್ತಿದೆ. ಈ ಚಿತ್ರದ ಟೀಸರ್​ ರಿಲೀಸ್​ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗಿ ಆಗಿತ್ತು. ಈ ಟೀಸರ್​ ಮೂಲಕ ಪಾತ್ರಗಳ ಪರಿಚಯ ಮಾಡಿಕೊಡಲಾಗಿದೆ. ವಿನೋದ್ ಪ್ರಭಾಕರ್ ಮತ್ತು ಶ್ರೀನಗರ ಕಿಟ್ಟಿ ಅವರು ಬಂದು ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರರಂಗದಲ್ಲಿ 2 ದಶಕಗಳ ಕಾಲ ಪ್ರಚಾರ ಕಾರ್ಯದ ಅನುಭವ ಇರುವ ಸುಗೂರು ಕುಮಾರ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ‘ಸೂಗೂರು ಸಿನಿ ಪ್ರೊಡಕ್ಷನ್ಸ್​’ ಮೂಲಕ ಚಿತ್ರ ನಿರ್ಮಾಣ ಆಗುತ್ತಿದೆ.

ಆನಂದರಾಜ್ ಅವರು ‘ಜಾಂಟಿ ಸನ್ ಆಫ್ ಜಯರಾಜ್’ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಕೆಲವು ವಿಚಾರಗಳನ್ನು ಹಂಚಿಕೊಂಡರು. ‘ಜಯರಾಜ್ ನಂತರದ ದಿನಗಳ ಸಂದರ್ಭದಲ್ಲಿ ಹಣಕಾಸು ವ್ಯವಹಾರ ಮತ್ತು ಮಾರ್ಕೆಟ್ ದಂಧೆ ರಾರಾಜಿಸುತ್ತಿತ್ತು. ಈ ರೀತಿಯ ವಿಷಯಗಳನ್ನು ಕೇಳಿದ್ದು, ನೋಡಿದ್ದು, ಓದಿದ್ದು ಎಲ್ಲವನ್ನೂ ಬಳಸಿಕೊಂಡು ಚಿತ್ರಕಥೆ ಬರೆಯಲಾಗಿದೆ’ ಎಂದು ನಿರ್ದೇಶಕರು ಹೇಳಿದರು.

ಇದನ್ನೂ ಓದಿ: ನಾನು ಕೊತ್ವಾಲ್ ರಾಮಚಂದ್ರ​​, ಜಯರಾಜ್​ನ ಶಿಷ್ಯನಲ್ಲ; ಕಾಂಗ್ರೆಸ್​​ ಟ್ವೀಟ್​ಗೆ ಸಿ.ಟಿ.ರವಿ ತಿರುಗೇಟು

‘ಜಯರಾಜ್ ಮಗನೇ ಈ ಸಿನಿಮಾದಲ್ಲಿ ಪಾತ್ರವಾಗಿ ಬರುತ್ತಾರೆ. ಆಗಿನ ಕಾಲಘಟ್ಟದಲ್ಲಿ ಇದ್ದಂತಹ ಪಾತ್ರಗಳನ್ನು ಕಾಲ್ಪನಿಕವಾಗಿ ತೋರಿಸಲಾಗಿದೆ. ಜತೆಗೆ ತಾಯಿ ಸೆಂಟಿಮೆಂಟ್ ಕೂಡ ಇದೆ. ಪ್ರೀತಿಯ ಸನ್ನಿವೇಶಗಳ ಜೊತೆ ಗೆಳತನ ಸಹ ಈ ಕಥೆಯಲ್ಲಿ ಇದೆ. ಆ ಕಾಲದ ಬೆಂಗಳೂರು ಹೇಗಿತ್ತು ಎಂಬುದು ತಿಳಿಯಬೇಕಾದರೆ ನಮ್ಮ ಸಿನಿಮಾ ನೋಡಿ. 1989ರ ಅವಧಿಯು ಮಾತ್ರವಲ್ಲದೇ ಈಗಿನ ಕಾಲದಲ್ಲಿ ಏನೆಲ್ಲ ನಡೆಯುತ್ತಿದೆ ಎಂಬುದು ಕೂಡ ಇರಲಿದೆ’ ಎಂದಿದ್ದಾರೆ ನಿರ್ದೇಶಕರು.

JHONTY SON OF JAYRAJ Official Teaser | Ajith jayraj | Anandraj | Sugur Kumar | Vijeth Manjaiah

ನಿವಿಷ್ಕ ಪಾಟೀಲ್, ಪಟ್ರೋಲ್‌ ಪ್ರಸನ್ನ, ರಾಜವರ್ಧನ್, ಶರತ್‌ ಲೋಹಿತಾಶ್ವ, ಕಿಶನ್, ಸೋನು ಪಾಟೀಲ್, ಮೈಕೋ ನಾಗರಾಜ್, ಸಚ್ಚಿನ್‌ ಪುರೋಹಿತ್ ಮುಂತಾದವರು ಕೂಡ ‘ಜಾಂಟಿ ಸನ್ ಆಫ್ ಜಯರಾಜ್’ ಸಿನಿಮಾದಲ್ಲಿ ನಟಿಸಿದ್ದಾರೆ. ‘ಅಪ್ಪನ ಪಾತ್ರ ಮಾಡುವಾಗ ನರ್ವಸ್ ಆಗಿದ್ದೆ. ಡೈರೆಕ್ಟರ್​ ಹೇಳಿದಾಗ ಮೊದಲು ಓಕೆ ಅಂದಿದ್ದೆ. ಆದರೆ ಕ್ಯಾಮೆರಾ ಮುಂದೆ ನಿಂತಾಗ ನಡುಕ ಬಂತು’ ಎಂದರು ಅಜಿತ್‌ ಜಯರಾಜ್. ವಿಜೇತ್ ಮಂಜಯ್ಯ ಅವರ ಸಂಗೀತ ನಿರ್ದೇಶನ, ಅರ್ಜುನ್ ಆಕೋಟ್ ಅವರ ಛಾಯಾಗ್ರಹಣ, ಅಲೆಕ್ಸ್ ಅವರ ಹಿನ್ನೆಲೆ ಸಂಗೀತ ಈ ಸಿನಿಮಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us