‘ಕಾಟೇರ’ ಗೆಲುವು: ಚಿತ್ರತಂಡದವರಿಗೆ ಕಾರು ಗಿಫ್ಟ್​ ನೀಡಿದ ರಾಕ್​ಲೈನ್​ ವೆಂಕಟೇಶ್​

|

Updated on: May 02, 2024 | 9:23 PM

ಕನ್ನಡ ಚಿತ್ರರಂಗದಲ್ಲಿ ಬರಹಗಾರರಿಗೆ ಸೂಕ್ತ ಮನ್ನಣೆ ಸಿಗುತ್ತಿಲ್ಲ ಎಂಬ ಆರೋಪ ಮೊದಲಿನಿಂದಲೂ ಕೇಳಿಬರುತ್ತಿತ್ತು. ಆದರೆ ಆ ಮಾತನ್ನು ಸುಳ್ಳು ಮಾಡುವ ರೀತಿಯಲ್ಲಿ ‘ಕಾಟೇರ’ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್ ಅವರು ಒಂದು ಕೆಲಸ ಮಾಡಿದ್ದಾರೆ. ಈ ಸಿನಿಮಾದ ಬರಹಗಾರರಾದ ಜಡೇಶ್​, ಮಾಸ್ತಿ ಹಾಗೂ ನಟ ಸೂರಜ್​ ಅವರಿಗೆ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

‘ಕಾಟೇರ’ ಗೆಲುವು: ಚಿತ್ರತಂಡದವರಿಗೆ ಕಾರು ಗಿಫ್ಟ್​ ನೀಡಿದ ರಾಕ್​ಲೈನ್​ ವೆಂಕಟೇಶ್​
ಚಿತ್ರತಂಡದವರಿಗೆ ಕಾರು ಗಿಫ್ಟ್​ ನೀಡಿದ ರಾಕ್​ಲೈನ್​ ವೆಂಕಟೇಶ್​
Follow us on

‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ನಟನೆಯ ‘ಕಾಟೇರ’ (Kaatera) ಸಿನಿಮಾ ಕಳೆದ ವರ್ಷ ಡಿಸೆಂಬರ್​ 29ರಂದು ಬಿಡುಗಡೆಯಾಗಿ ಧೂಳೆಬ್ಬಿಸಿತು. ನೂರು ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕೆ ಇಡೀ ತಂಡಕ್ಕೆ ಖುಷಿ ಇದೆ. ಈ ಸಂಭ್ರಮದಲ್ಲಿ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ (Rockline Venkatesh) ಹಾಗೂ ನಟ ದರ್ಶನ್​ ಅವರು ಒಂದು ಮಹತ್ವದ ಕೆಲಸ ಮಾಡಿದ್ದಾರೆ. ‘ಕಾಟೇರ’ ಸಿನಿಮಾ ತಂಡದ ಮೂವರಿಗೆ ಕಾರು ಗಿಫ್ಟ್​ ನೀಡಲಾಗಿದೆ. ಇಂದು (ಮೇ 2) ಬೆಂಗಳೂರಿನಲ್ಲಿ ದಿಢೀರ್​ ಸುದ್ದಿಗೋಷ್ಠಿ ನಡೆಸಿದ ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್​ ಹಾಗೂ ದರ್ಶನ್ (Darshan)​ ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡರು.

‘ಕಾಟೇರ’ ಸಿನಿಮಾಗೆ ಕಥೆ ಬರೆದ ಜಡೇಶ್​ ಕುಮಾರ್​ ಹಂಪಿ, ಸಂಭಾಷಣೆ ಬರೆದ ಮಾಸ್ತಿ ಹಾಗೂ ಒಂದು ಪಾತ್ರದಲ್ಲಿ ನಟಿಸಿದ ಸೂರಜ್​ ಅವರಿಗೆ ಕಾರು ನೀಡಲಾಗಿದೆ. ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಕ್​ಲೈನ್​ ವೆಂಕಟೇಶ್​ ಅವರು ತಮ್ಮ ನಿರ್ಧಾರದ ಬಗ್ಗೆ ಮಾಹಿತಿ ತಿಳಿಸಿದರು. ‘ಎಲ್ಲರೂ ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದರು. ಅದೇ ರೀತಿ ಸೂರಜ್​ ಕೂಡ ಒಳ್ಳೆಯ ಪಾತ್ರ ಮಾಡಿದರು. ಆದರೆ ಚಿತ್ರೀಕರಣ ಮುಗಿದ ಬಳಿಕ ಅವರಿಗೆ ಅಪಘಾತ ಆಯಿತು. ಜಡೇಶ್​, ಮಾಸ್ತಿ ಮತ್ತು ಸೂರಜ್​ ಅವರನ್ನು ಗಮನದಲ್ಲಿ ಇಟ್ಟುಕೊಂಡು ನಾನು, ದರ್ಶನ್​ ಮತ್ತು ತರುಣ್​ ಈ ನಿರ್ಧಾರಕ್ಕೆ ಬಂದೆವು. ಈ ಮೂವರಿಗೂ ಕಾರು ಕೊಡಬೇಕು ಎನಿಸಿತು’ ಎಂದು ಅವರು ಹೇಳಿದರು.

ಕೈ ನೋವಿನ ನಡುವೆಯೂ ಸ್ಟಾರ್​ ಚಂದ್ರು ಪರ ನಟ ದರ್ಶನ್​ ಭರ್ಜರಿ ಪ್ರಚಾರ

‘ನೂರು ದಿನದ ಸಂಭ್ರಮವನ್ನು ಎಲ್ಲೋ ಆಡಿಟೋರಿಯಂನಲ್ಲಿ ಮಾಡುವ ಬದಲು ಈ ಮೂವರಿಗೆ ಕಾರು ನೀಡಿ ಸಂಭ್ರಮಿಸೋಣ ಅಂತ ನಮಗೆ ಅನಿಸಿತು. ಮಾಸ್ತಿ, ಜಡೇಶ್​ ಹಾಗೂ ಸೂರಜ್​ ಅವರಿಗೆ ಶುಭವಾಗಲಿ. ಅವರು ಶ್ರದ್ಧೆಯಿಂದ ಮಾಡಿದ ಕೆಲಸ ಜನತೆಗೆ ಖುಷಿ ಆಗಿದೆ. ಅದಕ್ಕಾಗಿ ಅವರಿಗೆ ಚಿಕ್ಕ ಕಾಣಿಕೆ’ ಎಂದು ರಾಕ್​ಲೈನ್​ ವೆಂಕಟೇಶ್​ ಹೇಳಿದರು.

‘ಕನ್ನಡ ಚಿತ್ರರಂಗದಲ್ಲಿ ಬರಹಗಾರರ ಕೊರತೆ ಇದೆ. ಮಲಯಾಳಂ ಸಿನಿಮಾಗಳನ್ನು ಚೆನ್ನಾಗಿ ಓಡುತ್ತವೆ. ಅದಕ್ಕೆ ಕಥೆಯೇ ಕಾರಣ. ನಮ್ಮ ಚಿತ್ರರಂಗದಲ್ಲಿ ಕಥೆಗಾರರನ್ನು ಹುರಿದುಂಬಿಸಬೇಕು. ಆ ಉದ್ದೇಶದಿಂದ ನಾವು ಕಾರು ನೀಡುವ ನಿರ್ಧಾರಕ್ಕೆ ಬಂದೆವು. ದರ್ಶನ್​ ಮತ್ತು ತರುಣ್​ ಅವರು ಈ ಚಿತ್ರಕ್ಕೆ ಕುಟುಂಬದ ಸದಸ್ಯರ ರೀತಿ ಕೆಲಸ ಮಾಡಿದ್ದಾರೆ’ ಎಂದಿದ್ದಾರೆ ರಾಕ್​ಲೈನ್​ ವೆಂಕಟೇಶ್​. ‘ಉಡುಗೊರೆಗೆ ಬೆಲೆ ಕಟ್ಟಬಾರದು. 10 ರೂಪಾಯಿದು ಆಗಿರುಬಹುದು, ಸಾವಿರ ರೂಪಾಯಿದು ಆಗಿರಬಹುದು. ಗಿಫ್ಟ್​ ಅಂದ್ರೆ ಗಿಫ್ಟ್​ ಅಷ್ಟೇ. ಬೆಲೆಯಿಂದ ಅಳೆಯಬಾರದು’ ಎಂದಿದ್ದಾರೆ ದರ್ಶನ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.