‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ನಟನೆಯ ‘ಕಾಟೇರ’ (Kaatera) ಸಿನಿಮಾ ಕಳೆದ ವರ್ಷ ಡಿಸೆಂಬರ್ 29ರಂದು ಬಿಡುಗಡೆಯಾಗಿ ಧೂಳೆಬ್ಬಿಸಿತು. ನೂರು ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದಕ್ಕೆ ಇಡೀ ತಂಡಕ್ಕೆ ಖುಷಿ ಇದೆ. ಈ ಸಂಭ್ರಮದಲ್ಲಿ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ (Rockline Venkatesh) ಹಾಗೂ ನಟ ದರ್ಶನ್ ಅವರು ಒಂದು ಮಹತ್ವದ ಕೆಲಸ ಮಾಡಿದ್ದಾರೆ. ‘ಕಾಟೇರ’ ಸಿನಿಮಾ ತಂಡದ ಮೂವರಿಗೆ ಕಾರು ಗಿಫ್ಟ್ ನೀಡಲಾಗಿದೆ. ಇಂದು (ಮೇ 2) ಬೆಂಗಳೂರಿನಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಹಾಗೂ ದರ್ಶನ್ (Darshan) ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡರು.
‘ಕಾಟೇರ’ ಸಿನಿಮಾಗೆ ಕಥೆ ಬರೆದ ಜಡೇಶ್ ಕುಮಾರ್ ಹಂಪಿ, ಸಂಭಾಷಣೆ ಬರೆದ ಮಾಸ್ತಿ ಹಾಗೂ ಒಂದು ಪಾತ್ರದಲ್ಲಿ ನಟಿಸಿದ ಸೂರಜ್ ಅವರಿಗೆ ಕಾರು ನೀಡಲಾಗಿದೆ. ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಕ್ಲೈನ್ ವೆಂಕಟೇಶ್ ಅವರು ತಮ್ಮ ನಿರ್ಧಾರದ ಬಗ್ಗೆ ಮಾಹಿತಿ ತಿಳಿಸಿದರು. ‘ಎಲ್ಲರೂ ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದರು. ಅದೇ ರೀತಿ ಸೂರಜ್ ಕೂಡ ಒಳ್ಳೆಯ ಪಾತ್ರ ಮಾಡಿದರು. ಆದರೆ ಚಿತ್ರೀಕರಣ ಮುಗಿದ ಬಳಿಕ ಅವರಿಗೆ ಅಪಘಾತ ಆಯಿತು. ಜಡೇಶ್, ಮಾಸ್ತಿ ಮತ್ತು ಸೂರಜ್ ಅವರನ್ನು ಗಮನದಲ್ಲಿ ಇಟ್ಟುಕೊಂಡು ನಾನು, ದರ್ಶನ್ ಮತ್ತು ತರುಣ್ ಈ ನಿರ್ಧಾರಕ್ಕೆ ಬಂದೆವು. ಈ ಮೂವರಿಗೂ ಕಾರು ಕೊಡಬೇಕು ಎನಿಸಿತು’ ಎಂದು ಅವರು ಹೇಳಿದರು.
ಕೈ ನೋವಿನ ನಡುವೆಯೂ ಸ್ಟಾರ್ ಚಂದ್ರು ಪರ ನಟ ದರ್ಶನ್ ಭರ್ಜರಿ ಪ್ರಚಾರ
‘ನೂರು ದಿನದ ಸಂಭ್ರಮವನ್ನು ಎಲ್ಲೋ ಆಡಿಟೋರಿಯಂನಲ್ಲಿ ಮಾಡುವ ಬದಲು ಈ ಮೂವರಿಗೆ ಕಾರು ನೀಡಿ ಸಂಭ್ರಮಿಸೋಣ ಅಂತ ನಮಗೆ ಅನಿಸಿತು. ಮಾಸ್ತಿ, ಜಡೇಶ್ ಹಾಗೂ ಸೂರಜ್ ಅವರಿಗೆ ಶುಭವಾಗಲಿ. ಅವರು ಶ್ರದ್ಧೆಯಿಂದ ಮಾಡಿದ ಕೆಲಸ ಜನತೆಗೆ ಖುಷಿ ಆಗಿದೆ. ಅದಕ್ಕಾಗಿ ಅವರಿಗೆ ಚಿಕ್ಕ ಕಾಣಿಕೆ’ ಎಂದು ರಾಕ್ಲೈನ್ ವೆಂಕಟೇಶ್ ಹೇಳಿದರು.
‘ಕನ್ನಡ ಚಿತ್ರರಂಗದಲ್ಲಿ ಬರಹಗಾರರ ಕೊರತೆ ಇದೆ. ಮಲಯಾಳಂ ಸಿನಿಮಾಗಳನ್ನು ಚೆನ್ನಾಗಿ ಓಡುತ್ತವೆ. ಅದಕ್ಕೆ ಕಥೆಯೇ ಕಾರಣ. ನಮ್ಮ ಚಿತ್ರರಂಗದಲ್ಲಿ ಕಥೆಗಾರರನ್ನು ಹುರಿದುಂಬಿಸಬೇಕು. ಆ ಉದ್ದೇಶದಿಂದ ನಾವು ಕಾರು ನೀಡುವ ನಿರ್ಧಾರಕ್ಕೆ ಬಂದೆವು. ದರ್ಶನ್ ಮತ್ತು ತರುಣ್ ಅವರು ಈ ಚಿತ್ರಕ್ಕೆ ಕುಟುಂಬದ ಸದಸ್ಯರ ರೀತಿ ಕೆಲಸ ಮಾಡಿದ್ದಾರೆ’ ಎಂದಿದ್ದಾರೆ ರಾಕ್ಲೈನ್ ವೆಂಕಟೇಶ್. ‘ಉಡುಗೊರೆಗೆ ಬೆಲೆ ಕಟ್ಟಬಾರದು. 10 ರೂಪಾಯಿದು ಆಗಿರುಬಹುದು, ಸಾವಿರ ರೂಪಾಯಿದು ಆಗಿರಬಹುದು. ಗಿಫ್ಟ್ ಅಂದ್ರೆ ಗಿಫ್ಟ್ ಅಷ್ಟೇ. ಬೆಲೆಯಿಂದ ಅಳೆಯಬಾರದು’ ಎಂದಿದ್ದಾರೆ ದರ್ಶನ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.