ಪ್ರೇಕ್ಷಕರಿಗೆ ಗುಡ್​ನ್ಯೂಸ್; ಸಿನಿಮಾ ಟಿಕೆಟ್ ದರದ ವಿಚಾರದಲ್ಲಿ ಹೈಕೋರ್ಟ್​ನಿಂದ ಮಹತ್ವದ ಸೂಚನೆ

ಕರ್ನಾಟಕ ಹೈಕೋರ್ಟ್ ಸಿನಿಮಾ ಟಿಕೆಟ್ ದರ ನಿಗದಿ ಕುರಿತ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿತ್ತು. ಪಿವಿಆರ್-ಐನಾಕ್ಸ್ ಹಾಗೂ ಹೊಂಬಾಳೆ ಫಿಲ್ಮ್ಸ್ ಪರವಾಗಿ ತೀರ್ಪು ಬಂದಿತ್ತು. ಈ ತೀರ್ಪಿನ ವಿರುದ್ಧ ಚಲನಚಿತ್ರ ಮಂಡಳಿ ಮೇಲ್ಮನವಿ ಸಲ್ಲಿಸಿದೆ. ಸರ್ಕಾರದ ಪರ ಆದೇಶ ಬಂದರೆ ಹೆಚ್ಚುವರಿ ಹಣ ಮರುಪಾವತಿಸಬೇಕು ಎಂದು ಕೋರ್ಟ್ ಸೂಚಿಸಿದೆ.

ಪ್ರೇಕ್ಷಕರಿಗೆ ಗುಡ್​ನ್ಯೂಸ್; ಸಿನಿಮಾ ಟಿಕೆಟ್ ದರದ ವಿಚಾರದಲ್ಲಿ ಹೈಕೋರ್ಟ್​ನಿಂದ ಮಹತ್ವದ ಸೂಚನೆ
Ticket Price

Updated on: Sep 30, 2025 | 2:45 PM

ಸಿನಿಮಾ ಮಂದಿರದಲ್ಲಿ ಏಕರೂಪ ಟಿಕೆಟ್ ದರ ನಿಗದಿ ಆದೇಶವನ್ನು ಸರ್ಕಾರ ಹೊರಡಿಸಿತ್ತು. ಈ ಆದೇಶವನ್ನು ಪಿವಿಆರ್-ಐನಾಕ್ಸ್ ಮಲ್ಟಿಪ್ಲೆಕ್ಸ್ ಹಾಗೂ ಹೊಂಬಾಳೆ ಫಿಲ್ಮ್ಸ್ ಕೋರ್ಟ್​ನಲ್ಲಿ ಪ್ರಶ್ನೆ ಮಾಡಿತ್ತು. ಸದ್ಯ ರಾಜ್ಯ ಸರ್ಕಾರದ ಈ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ. ಹೀಗಾಗಿ, ‘ಕಾಂತಾರ: ಚಾಪ್ಟರ್ 1’ ಸೇರಿದಂತೆ ಅನೇಕ ಸಿನಿಮಾಗಳಿಗೆ ದುಬಾರಿ ಟಿಕೆಟ್ ದರ ನಿಗದಿ ಮಾಡಲಾಯಿತು. ಈಗ ಈ ವಿಚಾರದಲ್ಲಿ ಕೋರ್ಟ್ ಮಹತ್ವದ ಸೂಚನೆ ನೀಡಿದೆ.

ಟಿಕೆಟ್ ದರ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ನೀಡಿರುವ ಮಧ್ಯಂತರ ಆದೇಶವನ್ನು ಪ್ರಶ್ನಿಸಿ ಚಲನಚಿತ್ರ ವಾಣಿಜ್ಯ ಮಂಡಳಿ, ನಿರ್ಮಾಪಕರ ಸಂಘ ಮೇಲ್ಮವಿ ಸಲ್ಲಿಕೆ ಮಾಡಿದೆ. ಈ ವಿಚಾರವಾಗಿ ಹೊಂಬಾಳೆ ಫಿಲ್ಮ್ಸ್ ಹಾಗೂ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್​ಗೆ ಹೈಕೋರ್ಟ್ ನೋಟಿಸ್ ನೀಡಿದೆ.

200 ರೂಪಾಯಿಗಿಂತ (ಶೇ.18 ಜಿಎಸ್​ಟಿ ಸೇರಿದರೆ 236 ರೂಪಾಯಿ) ಹೆಚ್ಚಿನ ಹಣ ಸಂಗ್ರಹ ಹೈಕೋರ್ಟ್ ತೀರ್ಪಿಗೆ ಒಳಪಡುತ್ತದೆ ಎಂದು ಕೋರ್ಟ್ ಹೇಳಿದೆ. ಒಂದೊಮ್ಮೆ ಅರ್ಜಿ ವಿಚಾರಣೆಯ ಬಳಿಕ ಸರ್ಕಾರದ ಪರ ಅಂತಿಮ ತೀರ್ಪು ಬಂದರೆ ಪ್ರೇಕ್ಷಕನಿಂದ ಪಡೆದ ಹೆಚ್ಚುವರಿ ಹಣ ಮರಳಿಸಬೇಕು ಎಂದು ಸೂಚನೆ ನೀಡಲಾಗಿದೆ.  ಈ ಬಗ್ಗೆ ಚಿತ್ರಮಂದಿರದಲ್ಲಿ ಪ್ರಕಟಿಸಲು ಕೋರ್ಟ್ ಸೂಚನೆ ನೀಡಿದೆ.

ಇದನ್ನೂ ಓದಿ: ‘ಕಾಂತಾರ’ ಬರೋ ಹೊತ್ತಿಗೆ ಪ್ರೇಕ್ಷಕರಿಗೆ ಬಿಗ್ ಶಾಕ್; 200 ರೂ. ಸಿನಿಮಾ ಟಿಕೆಟ್ ದರಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

ಸರ್ಕಾರದ ವಾದ ಏನು?

ಸರ್ಕಾರದ ಪರ ಎಎಜಿ ಇಸ್ಮಾಯಿಲ್ ಜಬೀವುಲ್ಲಾ ವಾದ ಮಂಡಿಸಿದ್ದಾರೆ. ‘ಸರ್ಕಾರದ ನಿಯಮ ಕಾನೂನುಬದ್ಧ ಆಗಿದೆ’ ಎಂದು ಕೋರ್ಟ್​ಗೆ ಮನವರಿಕೆ ಮಾಡಿದ್ದಾರೆ. ವಾಣಿಜ್ಯ ಮಂಡಳಿ ಪರ ಹಿರಿಯ ವಕೀಲ ವಿ.‌ಲಕ್ಷ್ಮೀನಾರಾಯಣ ವಾದ ಮಾಡಿದ್ದಾರೆ. ‘ವಾಣಿಜ್ಯ ಮಂಡಳಿ ಮನವಿ ಮೇರೆಗೆ ಸರ್ಕಾರ ದರ ನಿಗದಿ ಮಾಡಿದೆ. ಹೀಗಾಗಿ ದರ ನಿಗದಿ ಆದೇಶಕ್ಕೆ ನೀಡಿದ ತಡೆಯಾಜ್ಞೆ ತೆರವು ಮಾಡಬೇಕು’ ಎಂದು ಅವರು ಕೋರಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.