Puneeth Rajkumar: ರಜನಿಕಾಂತ್​ ಮೊದಲ ಸಲ ಪುನೀತ್​ ಅವರನ್ನು ನೋಡಿದ್ದು ಎಲ್ಲಿ? ದೇವರ ಸನ್ನಿಧಿಯ ಆ ಘಟನೆಯೇ ರೋಮಾಂಚಕ

| Updated By: ಮದನ್​ ಕುಮಾರ್​

Updated on: Nov 01, 2022 | 7:52 PM

Rajinikanth | Puneeth Rajkumar: ‘ಆ ಮಗುವಿನ ಧ್ವನಿ ಒಂದು ಜೇಂಕಾರದ ಸದ್ದಿನಂತೆ ಕೇಳಿಸಿತು. ಅದನ್ನು ಕೇಳಿ ಎಲ್ಲರಿಗೂ ರೋಮಾಂಚನ ಆಗಿಬಿಡ್ತು’ ಎಂದು ಆ ಘಟನೆಯನ್ನು ರಜನಿಕಾಂತ್​ ನೆನಪಿಸಿಕೊಂಡಿದ್ದಾರೆ.

Puneeth Rajkumar: ರಜನಿಕಾಂತ್​ ಮೊದಲ ಸಲ ಪುನೀತ್​ ಅವರನ್ನು ನೋಡಿದ್ದು ಎಲ್ಲಿ? ದೇವರ ಸನ್ನಿಧಿಯ ಆ ಘಟನೆಯೇ ರೋಮಾಂಚಕ
ಡಾ. ರಾಜ್​ಕುಮಾರ್, ಪುನೀತ್​ ರಾಜ್​ಕುಮಾರ್, ರಜನಿಕಾಂತ್​
Follow us on

ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರ ಬಗ್ಗೆ ಎಷ್ಟು ಹೇಳಿದರೂ ಸಾಲದು. ಜನ ಸಾಮಾನ್ಯರಿಂದ ಸೆಲೆಬ್ರಿಟಿಗಳವರೆಗೆ ಎಲ್ಲರಿಗೂ ಪುನೀತ್ ಅಚ್ಚುಮೆಚ್ಚು ಆಗಿದ್ದರು. ಆದರೆ ಇಂದು ಅವರು ಇಲ್ಲ ಎಂಬುದು ನೋವಿನ ಸಂಗತಿ. ಮರಣೋತ್ತರವಾಗಿ ಪುನೀತ್​ ರಾಜ್​ಕುಮಾರ್​ ಅವರಿಗೆ ‘ಕರ್ನಾಟಕ ರತ್ನ’ (Karnataka Ratna) ಪ್ರಶಸ್ತಿ ನೀಡಲಾಗಿದೆ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ನಡೆದ ಈ ಸಮಾರಂಭದಲ್ಲಿ ‘ಸೂಪರ್​ ಸ್ಟಾರ್​’ ರಜನಿಕಾಂತ್​ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಆರಂಭದಲ್ಲಿ ಜೋರಾಗಿ ಮಳೆ ಸುರಿಯುತ್ತಿದ್ದ ಕಾರಣ ಅವರು ಚುಟುಕಾಗಿ ಮಾತು ಪೂರ್ಣಗೊಳಿಸಿದ್ದರು. ಪುನೀತ್​ ಪರವಾಗಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ ಮಾಡಿದ ಬಳಿಕ ಮಳೆ ಕಡಿಮೆ ಆಯಿತು. ಆಗ ಮತ್ತೆ ರಜನಿಕಾಂತ್ (Rajinikanth) ಅವರು ತಮ್ಮ ಮನದ ಮಾತುಗಳನ್ನು ಹೇಳಲು ಮೈಕ್​ ಕೈಗೆತ್ತಿಕೊಂಡರು.

ಡಾ. ರಾಜ್​ಕುಮಾರ್​ ಮತ್ತು ರಜನಿಕಾಂತ್​ ಅವರ ಕುಟುಂಬದ ನಡುವೆ ಹಲವು ವರ್ಷಗಳಿಂದ ಒಡನಾಟ ಇದೆ. ಪುನೀತ್​ ರಾಜ್​ಕುಮಾರ್​ ಚಿಕ್ಕ ಬಾಲಕ ಆಗಿದ್ದಾಗ ಮೊದಲ ಬಾರಿ ಅವರನ್ನು ನೋಡಿದ ಘಟನೆಯನ್ನು ಇಂದು ರಜನಿಕಾಂತ್​ ನೆನಪು ಮಾಡಿಕೊಂಡಿದ್ದಾರೆ. ಅಯ್ಯಪ್ಪ ಸ್ವಾಮಿಯ ಸನ್ನಿಧಿಯಲ್ಲಿ ಅವರು ಮೊದಲ ಬಾರಿಗೆ ಅಪ್ಪು ಮುಖವನ್ನು ನೋಡಿದ್ದು. ಆ ಸನ್ನಿವೇಶವನ್ನು ಅವರು ತುಂಬ ಚೆನ್ನಾಗಿ ವಿವರಿಸಿದ್ದಾರೆ.

‘1979ರಲ್ಲಿ ನಾನು ಮೊದಲ ಬಾರಿಗೆ ಚೆನ್ನೈನಲ್ಲಿ ಪುನೀತ್​ ರಾಜ್​ಕುಮಾರ್​ ಅವರನ್ನು ನೋಡಿದೆ. ಅಲ್ಲಿ ನಂಬಿಯಾರ್​ ಸ್ವಾಮಿ ಅಂತ ಇದ್ದಾರೆ. ಅವರು ಪ್ರತಿ ವರ್ಷ ಶಬರಿಮಲೆಗೆ ಬಂದು 48 ಕಿಲೋಮೀಟರ್​ ನಡೆದುಹೋಗ್ತಾರೆ. ಅವರ ಜೊತೆ 250 ಜನ ಸ್ವಾಮಿಗಳು ಹೋಗ್ತಾರೆ. ಅವರೊಂದಿಗೆ ಜೊತೆ ಡಾ. ರಾಜ್​ಕುಮಾರ್​ ಕೂಡ ಬರುತ್ತಿದ್ದರು. ಇರುಮುಡಿ ಕಟ್ಟಿದಾಗ ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನಬೇಕು. ಪ್ರತಿ ವರ್ಷ ವೀರಮಣಿ ಎಂಬ ದೊಡ್ಡ ಗಾಯಕ ಅದನ್ನು ಹೇಳುತ್ತಿದ್ದರು. ಆದರೆ 1979ರಲ್ಲಿ ಚಿಕ್ಕ ಮಗುವೊಂದು ಸ್ವಾಮಿಯೇ ಶರಣಂ ಅಯ್ಯಪ್ಪ ಅಂತ ಕೂಗಿದ್ದು ಕೇಳಿಸಿತು’ ಎಂದು ಆ ದಿನಗಳ ನೆನಪಿನ ಪುಟ ತೆರೆದಿದ್ದಾರೆ ರಜನಿಕಾಂತ್​.

ಇದನ್ನೂ ಓದಿ
Karnataka Ratna: ಪುನೀತ್​ ರಾಜ್​ಕುಮಾರ್​ಗೆ ‘ಕರ್ನಾಟಕ ರತ್ನ’: ಅಪ್ಪು ಬಗ್ಗೆ ಸಿದ್ದರಾಮಯ್ಯ ಹೇಳಿದ್ದೇನು?
ಅಪ್ಪುಗೆ ಕರ್ನಾಟಕ ರತ್ನ: ಬೆಂಗಳೂರಿಗೆ ಆಗಮಿಸಿದ ರಜನಿಕಾಂತ್; ಇಲ್ಲಿದೆ ವಿಡಿಯೋ
Karnataka Rajyotsava 2022 Highlights : ಮುಂದಿನ ವರ್ಷದಿಂದ ರಾಜ್ಯೋತ್ಸವ ಪ್ರಶಸ್ತಿಯಲ್ಲಿ ಬದಲಾವಣೆ: ಬೊಮ್ಮಾಯಿ ಘೋಷಣೆ
Puneeth Rajkumar Samadhi: ಪುನೀತ್​​ ಸಮಾಧಿ ಎದುರು ಕಣ್ಣೀರು ಹಾಕುತ್ತಿರುವ ಫ್ಯಾನ್ಸ್​; ಮಾಸುವಂಥದ್ದಲ್ಲ ಈ ನೋವು

‘ಆ ಮಗುವಿನ ಧ್ವನಿ ಒಂದು ಜೇಂಕಾರದ ಸದ್ದಿನಂತೆ ಇತ್ತು. ಅದನ್ನು ಕೇಳಿ ಎಲ್ಲರಿಗೂ ರೋಮಾಂಚನ ಆಗಿಬಿಡ್ತು. ಯಾರ ಧ್ವನಿ ಎಂದು ಹೋಗಿ ನೋಡಿದರೆ ಡಾ. ರಾಜ್​ಕುಮಾರ್​ ಅವರ ಮಡಿಲಿನಲ್ಲಿ ನಾಲ್ಕು ವರ್ಷದ ಚಿಕ್ಕ ಮಗು ಕುಳಿತಿತ್ತು. ಕಪ್ಪು ಬಣ್ಣದ ಮಗುವಿನ ಮುಖದಲ್ಲಿ ಚಂದ್ರನಂತಹ ಕಳೆ. ಎಲ್ಲರಿಗೂ ಆ ಮಗುವನ್ನು ಕಂಡರೆ ಇಷ್ಟ. ಆ ಮಗುವನ್ನು ಅಣ್ಣಾವ್ರು ಹೆಗಲ ಮೇಲೆ ಕೂರಿಸಿಕೊಂಡು 48 ಕಿಲೋಮೀಟರ್​ ನಡೆಯುತ್ತಿದ್ದರು. ಆ ಮಗುವೇ ನಮ್ಮ ಅಪ್ಪು’ ಎಂದಿದ್ದಾರೆ ರಜನಿಕಾಂತ್​.

‘ಅಂದು ನೋಡಿದ ನಮ್ಮ ಪುನೀತ್​ ಬೆಳೆದು ಸ್ಟಾರ್​ ಆದ. ಅಪ್ಪು ಸಿನಿಮಾ 100 ಡೇಸ್​ ಓಡಿತು. ನನ್ನ ಕೈಯಾರೆ ಶೀಲ್ಡ್​ ನೀಡಿದ್ದೆ. ಇಂದು ಅಪ್ಪು ಇಲ್ಲ ಎಂಬುದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಪ್ಪು ನಿಧನರಾದಾಗ ನನಗೆ ಆಪರೇಷನ್​ ಆಗಿ ಐಸಿಯುನಲ್ಲಿ ಇದ್ದೆ. ಮೂರು ದಿನ ಆದ ಬಳಿಕ ನನಗೆ ವಿಷಯ ತಿಳಿಯಿತು’ ಎಂದು ರಜನಿಕಾಂತ್​ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 7:52 pm, Tue, 1 November 22