ಗೌರಿಶಂಕರ್ ಅಭಿನಯದ ‘ಕೆರೆಬೇಟೆ’ ಸಿನಿಮಾಗೆ 50 ದಿನದ ಸಂಭ್ರಮ; ಆದರೆ..

ಮಲೆನಾಡಿನ ಕಥೆಯನ್ನು ಹೊಂದಿದ ‘ಕೆರೆಬೇಟೆ’ ಸಿನಿಮಾ ಬಿಡುಗಡೆಯಾಗಿ 50 ದಿನಗಳನ್ನು ಪೂರೈಸಿದೆ. ‘ಜನಮನ ಸಿನಿಮಾ’ ಬ್ಯಾನರ್​ ಮೂಲಕ ನಿರ್ಮಾಣ ಆದ ಈ ಚಿತ್ರದಲ್ಲಿ ಗೌರಿಶಂಕರ್​ ಮತ್ತು ಬಿಂದು ಶಿವರಾಮ್​ ಜೋಡಿಯಾಗಿ ನಟಿಸಿದ್ದಾರೆ. ರಾಜ್​ ಗುರು ನಿರ್ದೇಶನ ಮಾಡಿದ್ದಾರೆ. 50 ಡೇಸ್​ ಪ್ರಯುಕ್ತ ಚಿತ್ರತಂಡದವರು ಮಾಧ್ಯಮಗಳ ಎದುರು ಬಂದಿದ್ದಾರೆ.

ಗೌರಿಶಂಕರ್ ಅಭಿನಯದ ‘ಕೆರೆಬೇಟೆ’ ಸಿನಿಮಾಗೆ 50 ದಿನದ ಸಂಭ್ರಮ; ಆದರೆ..
ಗೌರಿಶಂಕರ್​, ಬಿಂದು ಶಿವರಾಮ್​

Updated on: May 27, 2024 | 9:41 PM

ಈ ವರ್ಷ ತೆರೆಕಂಡು ಸದ್ದು ಮಾಡಿದ ಕನ್ನಡದ ಕೆಲವೇ ಚಿತ್ರಗಳಲ್ಲಿ ‘ಕೆರೆಬೇಟೆ’ ಸಿನಿಮಾ (Kerebete Movie) ಕೂಡ ಇದೆ. ಈ ಸಿನಿಮಾ ಬಿಡುಗಡೆಯಾಗಿ 50 ದಿನ ಪೂರೈಸಿದೆ. ಗೌರಿಶಂಕರ್ ಮುಖ್ಯ ಭೂಮಿಕೆ ನಿಭಾಯಿಸಿದ ಈ ಚಿತ್ರಕ್ಕೆ ರಾಜ್​ಗುರು ಅವರ ನಿರ್ದೇಶನವಿದೆ. 50 ದಿನ ಪೂರೈಸಿದ ಖುಷಿಯಲ್ಲಿ ಚಿತ್ರತಂಡದವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಜನರಿಂದ, ವಿಮರ್ಶಕರಿಂದ ‘ಕೆರೆಬೇಟೆ’ ಸಿನಿಮಾಗೆ ಉತ್ತಮ ವಿಮರ್ಶೆ ಸಿಕ್ಕಿದೆ. ಆದರೆ ಕಮರ್ಷಿಯಲ್​ ದೃಷ್ಟಿಯಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿಲ್ಲ ಎಂಬ ಬೇಸರ ಈ ಚಿತ್ರತಂಡಕ್ಕೆ ಇದೆ. ಈ ಬಗ್ಗೆ ಗೌರಿಶಂಕರ್​ (Gowri Shankar) ಅವರು ಮಾತನಾಡಿದರು. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಶಶಾಂಕ್, ದಯಾಳ್ ಪದ್ಮನಾಭ್​, ನಿರ್ಮಾಪಕ ಉದಯ್​ ಮೆಹ್ತಾ, ನಟ ಪ್ರಥಮ್ ಕೂಡ ಈ ಸುದ್ದಿಗೋಷ್ಠಿಯಲ್ಲಿ ಭಾಗಿಯಾದರು.

50 ದಿನಗಳ ಸಂಭ್ರಮದ ಬಗ್ಗೆ ಗೌರಿಶಂಕರ್​ ಮಾತನಾಡಿದ್ದಾರೆ. ‘ನಮ್ಮ ಸಿನಿಮಾ ಕಮರ್ಷಿಯಲಿ ದೊಡ್ಡ ಮಟ್ಟಕ್ಕೆ ಹಿಟ್​ ಆಗಿಲ್ಲ. ಆದರೆ ಜನರು ಉತ್ತಮವಾಗಿ ವಿಮರ್ಶೆ ನೀಡಿದ್ದಾರೆ. ನಾನು ಎಲ್ಲಿಯೇ ಹೋದರೂ ಕೂಡ ‘ಕೆರೆಬೇಟೆ’ ಸಿನಿಮಾದ ಹೀರೋ ಅಂತ ಜನರು ಗುರುತಿಸುತ್ತಿದ್ದಾರೆ. ರಾಜ್ಯದ ಹಲವು ಚಿತ್ರಮಂದಿರಗಳಲ್ಲಿ ಐವತ್ತು ದಿನಗಳು ಪ್ರದರ್ಶನ ಆಗಿದೆ. ಕೆಲವು ಚಿತ್ರಮಂದಿರಗಳಲ್ಲಿ ಇನ್ನೂ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ನನಗೆ ದೊಡ್ಡ ಕನಸಾಗಿತ್ತು. ಕಮರ್ಷಿಯಲ್​ ಸಕ್ಸಸ್ ಆಗಲಿಲ್ಲ ಎಂಬ ಬೇಸರವಿದೆ. ಇನ್ಮುಂದೆ ಒಳ್ಳೆಯ ಕಥೆ ಬಂದರೆ ಅಭಿನಯಿಸುತ್ತೇನೆ. ಸದ್ಯಕ್ಕಂತೂ ನಿರ್ಮಾಣ ಮಾಡಲ್ಲ’ ಎಂದು ಗೌರಿಶಂಕರ್​ ಹೇಳಿದರು.

ಈ ಸಿನಿಮಾದಿಂದ ನಿರ್ದೇಶಕ ರಾಜ್​ ಗುರು ಅವರಿಗೆ ಹೆಸರು ಬಂದಿದೆ. ‘ನನ್ನ ಕನಸನ್ನು ನನಸು ಮಾಡಿದ ‘ಜನಮನ ಸಿನಿಮಾ’ ಸಂಸ್ಥೆಗೆ ಧನ್ಯವಾದ. ಈ ಚಿತ್ರಕ್ಕೆ ದೊಡ್ಡ ದೊಡ್ಡ ನಿರ್ದೇಶಕರು, ಹೀರೋಗಳು, ನಾಯಕಿಯರು ಬೆಂಬಲ ನೀಡಿದರು. ಅವರೆಲ್ಲರಿಗೂ ಥ್ಯಾಂಕ್ಸ್​’ ಎಂದು ಅವರು ಹೇಳಿದ್ದಾರೆ. ಒಳ್ಳೆಯ ವಿಮರ್ಶೆ ಸಿಕ್ಕಿದ್ದಕ್ಕೆ ಖುಷಿ ಇದೆ ಎಂದು ನಟಿ ಬಿಂದು ಶಿವರಾಮ್​ ಹೇಳಿದರು. ನಟಿ ಹರಿಣಿ ಶ್ರೀಕಾಂತ್​ ಕೂಡ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: Kerebete Review: ಕುತೂಹಲಭರಿತ ಕೆರೆಬೇಟೆಯಲ್ಲಿ ಊಹಿಸಲಾಗದ ಟ್ವಿಸ್ಟ್​

‘ಕೆರೆಬೇಟೆ’ ಸಿನಿಮಾದ 50ನೇ ದಿನದ ಈ ಕಾರ್ಯಕ್ರಮದಲ್ಲಿ ದಯಾಳ್ ಪದ್ಮನಾಭ್​, ಶಶಾಂಕ್, ಉದಯ್ ಮೆಹ್ತಾ ಅವರು ಚಿತ್ರರಂಗದಲ್ಲಿನ ತಮ್ಮ ಅನುಭವಗಳ ಬಗ್ಗೆ ಮಾತನಾಡಿದರು. ಆ ಮೂಲಕ, ಸಿನಿಮಾ ಯಶಸ್ಸು ಕಂಡಿಲ್ಲ ಎಂಬ ಬೇಸರದಲ್ಲಿದ್ದ ನಟ, ನಿರ್ಮಾಪಕ ಗೌರಿಶಂಕರಿಗೆ ಸಮಾಧಾನ ಮಾಡಿದರು. ‘ಈ ಚಿತ್ರವನ್ನು ಜನರು ಒಪ್ಪಿಕೊಂಡಿದ್ದಾರೆ. ಉತ್ತಮ ವಿಮರ್ಶೆ ನೀಡಿದ್ದಾರೆ. ಇದಕ್ಕಿಂತ ಇನ್ನೇನು ಬೇಕು’ ಎಂದರು. ‘50 ದಿನದ ಸಂಭ್ರಮದಲ್ಲಿ ಬೇಸರದ ಮಾತುಗಳು ಬೇಡ’ ಎಂದರು ಪ್ರಥಮ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us