ಮಲೆನಾಡಿನ ಕಥೆಯ ಝಲಕ್​ ತೋರಿಸಿದ ‘ಕೆರೆಬೇಟೆ’ ಟ್ರೇಲರ್​; ಮಾ.15ಕ್ಕೆ ಸಿನಿಮಾ ಬಿಡುಗಡೆ

ಅಪ್ಪಟ ಮಲೆನಾಡಿನ ಪರಿಸರದಲ್ಲಿ ನಡೆಯುವ ಕಹಾನಿ ‘ಕರೆಬೇಟೆ’ ಸಿನಿಮಾದಲ್ಲಿದೆ. ರಫ್​ ಆ್ಯಂಡ್​ ಟಫ್​ ಆದಂತಹ ಪಾತ್ರಕ್ಕೆ ನಾಯಕ ಗೌರಿಶಂಕರ್​ ಅವರು ಬಣ್ಣ ಹಚ್ಚಿದ್ದಾರೆ. ಅವರಿ​ಗೆ ಜೋಡಿಯಾಗಿ ಬಿಂಧು ಶಿವರಾಮ್ ನಟಿಸಿದ್ದಾರೆ. ಸಿನಿಮಾದ ಮೇಲಿನ ನಿರೀಕ್ಷೆಯನ್ನು ಡಬಲ್​ ಮಾಡುವ ರೀತಿಯಲ್ಲಿ ಟ್ರೇಲರ್​ ಮೂಡಿಬಂದಿದೆ. ಕೆಲವು ಡೈಲಾಗ್​ಗಳು ಖಾರವಾಗಿದ್ದು, ಚರ್ಚೆ ಹುಟ್ಟುಹಾಕಿವೆ.

ಮಲೆನಾಡಿನ ಕಥೆಯ ಝಲಕ್​ ತೋರಿಸಿದ ‘ಕೆರೆಬೇಟೆ’ ಟ್ರೇಲರ್​; ಮಾ.15ಕ್ಕೆ ಸಿನಿಮಾ ಬಿಡುಗಡೆ
ಗೌರಿಶಂಕರ್​, ಬಿಂಧು ಶಿವರಾಮ್​

Updated on: Feb 23, 2024 | 3:25 PM

ಈಗಾಗಲೇ ಹಾಡು ಮತ್ತು ಟೀಸರ್​ ಮೂಲಕ ಗಮನ ಸೆಳೆದಿರುವ ಕೆರೆಬೇಟೆ’ (Kerebete) ಚಿತ್ರತಂಡ ಈಗ ಟ್ರೇಲರ್​ ರಿಲೀಸ್​ ಮಾಡಿದೆ. ಈ ಸಿನಿಮಾದ ಕಥಾವಸ್ತು ಡಿಫರೆಂಟ್​ ಆಗಿದೆ. ಮಲೆನಾಡಿನ ಭಾಗದಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಅದರಲ್ಲೂ ವಿಶೇಷವಾಗಿ ಮೀನು ಬೇಟೆಯ ಬಗ್ಗೆ ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ. ಹಾಗಂತ ‘ಕೆರೆಬೇಟೆ’ ಸಿನಿಮಾದ ಕಥೆ ಅಷ್ಟಕ್ಕೇ ಸೀಮಿತವಲ್ಲ. ಇದರಲ್ಲಿ ಇನ್ನೂ ಅನೇಕ ಅಂಶಗಳು ಇವೆ. ಅವುಗಳ ಝಲಕ್​ ತೋರಿಸುವ ರೀತಿಯಲ್ಲಿ ಟ್ರೇಲರ್​ (Kerebete Trailer) ಮೂಡಿಬಂದಿದೆ. ಈ ಸಿನಿಮಾದಲ್ಲಿ ಗೌರಿಶಂಕರ್​ (Gowrishankar) ಹೀರೋ ಆಗಿ ನಟಿಸಿದ್ದಾರೆ. ರಾಜ್​ಗುರು ನಿರ್ದೇಶನ ಮಾಡಿದ್ದಾರೆ. ನಾಯಕಿಯಾಗಿ ಬಿಂಧು ಶಿವರಾಮ್ ನಟಿಸಿದ್ದಾರೆ. ಮಾರ್ಚ್​ 15ಕ್ಕೆ ‘ಕೆರೆಬೇಟೆ’ ಬಿಡುಗಡೆ ಆಗಲಿದೆ.

ಗೌರಿಶಂಕರ್ ಅವರಿಗೆ ‘ಕೆರೆಬೇಟೆ’ ಸಿನಿಮಾದಲ್ಲಿ ರಗಡ್​ ಆದಂತಹ ಪಾತ್ರ ಇದೆ. ಅವರು ವಿಲನಿಶ್​ ಶೇಡ್​ ಇರುವ ಪಾತ್ರವನ್ನು ನಿಭಾಯಿಸಿದ್ದಾರೆ ಎಂಬುದು ಟ್ರೇಲರ್​ ಮೂಲಕ ಗೊತ್ತಾಗಿದೆ. ಸಿನಿಮಾದ ಕಥೆ ಏನು ಎಂಬುದನ್ನು ತಿಳಿಯಲು ಸಿನಿಪ್ರಿಯರಲ್ಲಿ ಕೌತುಕ ಮೂಡಿದೆ. ಟ್ರೇಲರ್​ನಲ್ಲಿ ಅಂಟಿಗೆ-ಪಿಂಟಿಗೆ ಶೈಲಿಯ ದೃಶ್ಯ ಹೈಲೈಟ್​ ಆಗಿದೆ. ಅದೇ ರೀತಿಯೇ ಸಿನಿಮಾದ ಪ್ರಚಾರ ಮಾಡಲಾಗುತ್ತಿದೆ. ಟ್ರೇಲರ್ ರಿಲೀಸ್​ಗೂ ಮುನ್ನ ಬೆಂಗಳೂರಿನ ಹಲವು ಮನೆಗಳಿಗೆ ತೆರಳಿದ ಚಿತ್ರತಂಡದವರು ದೀಪ ಹಿಡಿದುಕೊಂಡು ಪ್ರೇಕ್ಷಕರ ಬೆಂಬಲ ಕೋರಿದ್ದಾರೆ.

ನಾಯಕ ಗೌರಿ ಶಂಕರ್ ಅವರ ಪುತ್ರಿ ಈಶ್ವರಿ ಮನ ಟ್ರೇಲರ್ ಬಿಡುಗಡೆ ಮಾಡಿದ್ದು ವಿಶೇಷ. ಸಂಪೂರ್ಣ ಮಲೆನಾಡಿನ ಪರಿಸರದಲ್ಲಿ ನಡೆಯುವ ಸಿನಿಮಾ ಕಥೆ ಇದಾಗಿದೆ. ಮೀನು ಬೇಟೆಯ ಜೊತೆಗೆ ಗ್ರಾಮೀಣ ಜನರ ಜಗಕ, ಕಿತ್ತಾಟ ಸೇರಿದಂತೆ ಹಲವು ಅಂಶಗಳನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ. ಒಟ್ಟಿನಲ್ಲಿ ಟ್ರೇಲರ್​ನಿಂದಾಗಿ ಸಿನಿಮಾದ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಇದರಲ್ಲಿ ಗೌರಿ ಶಂಕರ್ ಅವರ ನಟನೆಗೆ ಸಿನಿಪ್ರಿಯರು ಮೆಚ್ಚುಗೆ ಸೂಚಿಸುತ್ತಿದ್ದಾರೆ.

‘ಕೆರೆಬೇಟೆ’ ಸಿನಿಮಾ ಟ್ರೇಲರ್:

Kerebete Official Trailer | Gowrishankar SRG | Rajguru B | Gagan Baderiya | A2 Music

ನಟಿ ಬಿಂಧು ಶಿವರಾಮ್ ಅವರಿಗೆ ಇದು ಮೊದಲ ಸಿನಿಮಾ. ಮಲೆನಾಡಿನ ಹುಡುಗಿಯಾಗಿ ಅವರು ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚೊಚ್ಚಲ ಸಿನಿಮಾದ ಬಿಡುಗಡೆಗಾಗಿ ಅವರು ಕಾದಿದ್ದಾರೆ. ನಿರ್ದೇಶಕ ರಾಜ್​ಗುರು ಅವರಿಗೆ ಇದು ಮೊದಲ ಸಿನಿಮಾ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ಅವರು ಈಗ ಮೊದಲ ಬಾರಿಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಪವನ್ ಒಡೆಯರ್ ನಿರ್ದೇಶನದ ಹಲವು ಸಿನಿಮಾಗಳಿಗೆ ಸಹ-ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ರಾಜ್​ಗುರು ಅವರಿಗೆ ಇದೆ. ತಮ್ಮ ಮೊದಲ ಸಿನಿಮಾದಲ್ಲಿ ಅವರು ಮಲೆನಾಡಿನ ಕಹಾನಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ‘ಕೆರೆಬೇಟೆ’ ಸಿನಿಮಾದ ರೊಮ್ಯಾಂಟಿಕ್ ಹಾಡು ರಿಲೀಸ್ ಮಾಡಿದ ಉಪೇಂದ್ರ

ಗೌರಿಶಕಂಕರ್ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸುವುದರ ಜೊತೆಗೆ ‘ಜನಮನ ಸಿನಿಮಾಸ್’ ಬ್ಯಾನರ್‌ನಲ್ಲಿ ಅವರ ಸಹೋದರ ಜೈಶಂಕರ್ ಪಟೇಲ್ ಜೊತೆ ಸೇರಿ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಕುಮಾರ್ ಮುಂತಾದ ಕಲಾವಿದರು ‘ಕೆರೆಬೇಟೆ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಗಗನ್ ಬಡೇರಿಯಾ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಕರೆಬೇಟೆ’ ಟ್ರೇಲರ್​ನಲ್ಲಿ ಹಿನ್ನೆಲೆ ಸಂಗೀತ ಕೂಡ ಗಮನ ಸೆಳೆಯುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us