‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೆ ಅನ್ಯಾಯ; ಪರಭಾಷೆಗೆ ಮಣೆ ಹಾಕಿದ ಮಲ್ಟಿಪ್ಲೆಕ್ಸ್​ ವಿರುದ್ಧ ಚಿತ್ರತಂಡದ ಆಕ್ರೋಶ

Kousalya Supraja Rama: ಆಗಸ್ಟ್​ 2ನೇ ವಾರದಲ್ಲಿ ತಮಿಳು ಮತ್ತು ತೆಲುಗಿನ ಸ್ಟಾರ್​ ಸಿನಿಮಾಗಳು ಬಿಡುಗಡೆ ಆಗಲಿವೆ. ಪರಭಾಷೆಯ ಈ ಚಿತ್ರಗಳಿಂದ ಕನ್ನಡದ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾಗೆ ಸೂಕ್ತ ರೀತಿಯಲ್ಲಿ ಶೋಗಳು ಸಿಗದೇ ತೊಂದರೆ ಆಗುವ ಸಾಧ್ಯತೆ ದಟ್ಟವಾಗಿದೆ. ಈ ಸಮಸ್ಯೆಗೆ ಪರಿಹಾರ ಕೋರಿ ವಾಣಿಜ್ಯ ಮಂಡಳಿಗೆ ಪತ್ರ ಬರೆಯಲಾಗಿದೆ.

‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೆ ಅನ್ಯಾಯ; ಪರಭಾಷೆಗೆ ಮಣೆ ಹಾಕಿದ ಮಲ್ಟಿಪ್ಲೆಕ್ಸ್​ ವಿರುದ್ಧ ಚಿತ್ರತಂಡದ ಆಕ್ರೋಶ
‘ಕೌಸಲ್ಯ ಸುಪ್ರಜಾ ರಾಮ’ ಪೋಸ್ಟರ್​, ನಿರ್ದೇಶಕ ಶಶಾಂಕ್​

Updated on: Aug 07, 2023 | 7:21 PM

ಕನ್ನಡದ ಸಿನಿಮಾಗಳಿಗೆ ಸರಿಯಾದ ರೀತಿಯಲ್ಲಿ ಚಿತ್ರಮಂದಿರಗಳು ಸಿಗುವುದಿಲ್ಲ ಎಂಬ ದೂರು ಮೊದಲಿನಿಂದಲೂ ಕೇಳಿಬರುತ್ತಲೇ ಇದೆ. ಇತ್ತೀಚೆಗೆ ಕನ್ನಡದ ‘ಕೌಸಲ್ಯ ಸುಪ್ರಜಾ ರಾಮ’ (Kousalya Supraja Rama), ‘ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ’, ‘ಆಚಾರ್​ ಆ್ಯಂಡ್​ ಕೋ’ ಸಿನಿಮಾಗಳು ಉತ್ತಮವಾಗಿ ಪ್ರದರ್ಶನ ಕಾಣುತ್ತಿವೆ. ಆದರೆ ಈಗ ಪರಭಾಷಾ ಸಿನಿಮಾಗಳ ಆಗಮನದಿಂದ ಈ ಚಿತ್ರಗಳಿಗೆ ಚಿತ್ರಮಂದಿರದ ಕೊರತೆ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರತಂಡ ಧ್ವನಿ ಎತ್ತಿದೆ. ಕರ್ನಾಟಕದ ಮಲ್ಟಿಪ್ಲೆಕ್ಸ್​ಗಳಲ್ಲಿ ಕನ್ನಡದ ಸಿನಿಮಾಗಳ (Kannada Cinema) ಬದಲಿಗೆ ಪರಭಾಷೆಯ ಚಿತ್ರಗಳಿಗೆ ಮಣೆ ಹಾಕುವ ಕೆಲಸ ಆಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (Karnataka Film Chamber of Commerce) ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ತಂಡ ಮತ್ತು ವಿತರಣಾ ಸಂಸ್ಥೆಯಾದ ‘ಕೆವಿಎನ್​ ಪ್ರೊಡಕ್ಷನ್ಸ್​’ ಕಡೆಯಿಂದ ಪತ್ರ ಬರೆಯಲಾಗಿದೆ.

ಜುಲೈ 28ರಂದು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ಬಿಡುಗಡೆ ಆಯಿತು. ಈ ಸಿನಿಮಾದಲ್ಲಿ ಡಾರ್ಲಿಂಗ್​ ಕೃಷ್ಣ, ಬೃಂದಾ ಆಚಾರ್ಯ, ಮಿಲನಾ ನಾಗರಾಜ್​ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ರಂಗಾಯಣ ರಘು, ಸುಧಾ ಬೆಳವಾಡಿ, ನಾಗಭೂಷಣ, ಅಚ್ಯುತ್​ ಕುಮಾರ್​, ಸುಜಿತ್​ ಮುಂತಾದವರು ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಶಶಾಂಕ್​ ಅವರ ನಿರ್ದೇಶನದ ಈ ಸಿನಿಮಾಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿದೆ. ವಿಶೇಷವಾಗಿ ಕೌಟುಂಬಿಕ ಪ್ರೇಕ್ಷಕರು ಮನಸೋತಿದ್ದಾರೆ. ಆದರೆ ಬಿಡುಗಡೆಯಾಗಿ ಕೆಲವೇ ದಿನ ಕಳೆಯುವುದರೊಳಗೆ ಮಲ್ಟಿಪ್ಲೆಕ್ಸ್​ಗಳಲ್ಲಿ ಸರಿಯಾಗಿ ಶೋ ಸಿಗುತ್ತಿಲ್ಲ ಎಂದು ಚಿತ್ರತಂಡದವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ಕೌಸಲ್ಯ ಸುಪ್ರಜಾ ರಾಮ’ ಸೂಪರ್​ ಹಿಟ್​; ಗೆದ್ದ ಖುಷಿಯಲ್ಲಿ ಏನ್​ ಹೇಳ್ತಾರೆ ಚಿತ್ರತಂಡದವರು?

ಆಗಸ್ಟ್​ ಎರಡನೇ ವಾರದಲ್ಲಿ ತಮಿಳು ಮತ್ತು ತೆಲುಗಿನಲ್ಲಿ ಸ್ಟಾರ್​ ಸಿನಿಮಾಗಳು ಬಿಡುಗಡೆ ಆಗಲಿವೆ. ಆಗಸ್ಟ್​ 10ರಂದು ರಜನಿಕಾಂತ್​ ನಟನೆಯ ‘ಜೈಲರ್​’ ಸಿನಿಮಾ ತೆರೆಕಾಣಲಿದೆ. ತಮಿಳಿನ ಈ ಸಿನಿಮಾಗೆ ನೆಲ್ಸನ್​ ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಬುಕಿಂಗ್​ ಓಪನ್​ ಆಗಿದೆ. ಆಗಸ್ಟ್​ 11ರಂದು ತೆಲುಗಿನ ‘ಭೋಲಾ ಶಂಕರ್​’ ಚಿತ್ರ ರಿಲೀಸ್​ ಆಗಲಿದೆ. ಈ ಸಿನಿಮಾದಲ್ಲಿ ‘ಮೆಗಾ ಸ್ಟಾರ್’​ ಚಿರಂಜೀವಿ ನಟಿಸಿದ್ದಾರೆ. ಪರಭಾಷೆಯ ಈ ಚಿತ್ರಗಳಿಂದ ಕನ್ನಡದ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾಗೆ ಶೋ ಸಿಗದೇ ತೊಂದರೆ ಆಗುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ಪರಿಹಾರ ಕೋರಿ ವಾಣಿಜ್ಯ ಮಂಡಳಿಗೆ ಪತ್ರ ಬರೆಯಲಾಗಿದೆ.

ಇದನ್ನೂ ಓದಿ: ‘ಕೌಸಲ್ಯ ಸುಪ್ರಜಾ ರಾಮ’ ಚಿತ್ರಕ್ಕೆ ಟಿಎನ್​ ಸೀತಾರಾಮ್​ ಮೆಚ್ಚುಗೆ; ಸಾಹಿತಿಗಳಿಗೆ ಇಷ್ಟವಾಯ್ತು ಶಶಾಂಕ್​ ಸಿನಿಮಾ

‘ಈ ಪರಭಾಷಾ ಧೋರಣೆಯ ವಿರುದ್ಧ ಮಲ್ಟಿಪ್ಲೆಕ್ಸ್​ ಆಡಳಿತ ಮಂಡಳಿಯೊಂದಿಗೆ ಮಾತನಾಡಿ, ಕನ್ನಡದಲ್ಲಿ ಕನ್ನಡ ಚಿತ್ರಗಳಿಗೆ ಮೊದಲ ಆದ್ಯತೆ ಎಂಬ ವಿಷಯವನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ನಮ್ಮ ಚಿತ್ರಕ್ಕೆ ನ್ಯಾಯ ಕೊಡಿಸುವಂತೆ ಈ ಮೂಲಕ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇವೆ’ ಎಂದು ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾ ತಂಡದವರು ಫಿಲ್ಮ್​ ಚೇಂಬರ್​ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us