‘ಲಾಕ್‌ಡೌನ್’ ಕಥೆ ಇರುವ ಇನ್ನೊಂದು ಸಿನಿಮಾ ರೆಡಿ; ಇದರಲ್ಲಿದೆ ಕಾಮಿಡಿ, ವಿಷಾದ

ಹೊಸ ಕಲಾವಿದರು ನಟಿಸಿರುವ ‘ಲಾಕ್‌ಡೌನ್’ ಚಿತ್ರಕ್ಕೆ ಜಾವೇದ್ ತಿಪ್ಪನಹಟ್ಟಿ ನಿರ್ದೇಶನ ಮಾಡಿದ್ದು, ಮಂಜು ಮುದ್ಗಲ್ ಬಂಡವಾಳ ಹೂಡಿದ್ದಾರೆ. ಹೆಸರಿಗೆ ತಕ್ಕಂತೆ ಲಾಕ್​ಡೌನ್ ಸಮಯದ ಕಥೆಯನ್ನು ಈ ಚಿತ್ರದಲ್ಲಿ ತೋರಿಸಲಾಗುತ್ತಿದೆ. ಕೊಪ್ಪಳ, ಉಪ್ಪಿನ ಬೆಟಗೇರಿ ಸುತ್ತಮುತ್ತ ಹಳ್ಳಿಗಳಲ್ಲಿ ಈ ಸಿನಿಮಾಗೆ ಶೂಟಿಂಗ್ ಮಾಡಲಾಗಿದೆ.

‘ಲಾಕ್‌ಡೌನ್’ ಕಥೆ ಇರುವ ಇನ್ನೊಂದು ಸಿನಿಮಾ ರೆಡಿ; ಇದರಲ್ಲಿದೆ ಕಾಮಿಡಿ, ವಿಷಾದ
Lockdown Movie Poster

Updated on: May 06, 2026 | 11:12 AM

ಕೊರೊನಾ ವೈರಸ್ ಕಾರಣಕ್ಕೆ ಹೇರಿದ್ದ ಲಾಕ್​ಡೌನ್​ನಿಂದಾಗಿ ಅನೇಕರ ಜೀವನದಲ್ಲಿ ಬದಲಾವಣೆ ಆಯಿತು. ಆ ಘಟನೆಗಳನ್ನು ಇಟ್ಟುಕೊಂಡು ಹಲವು ಸಿನಿಮಾಗಳು ಬಂದಿವೆ. ಈಗ ಕನ್ನಡದಲ್ಲಿ ಕೂಡ ಹೊಸ ಸಿನಿಮಾ ಸಿದ್ಧವಾಗಿದೆ. ಅದಕ್ಕೆ ‘ಲಾಕ್​ಡೌನ್​’ (Lockdown) ಎಂದೇ ಹೆಸರು ಇಡಲಾಗಿದೆ. ಶೀಘ್ರದಲ್ಲೇ ಈ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡದವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಟ್ರೇಲರ್ (Trailer) ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದಲ್ಲಿ ಉತ್ತರ ಕರ್ನಾಟಕದ ಭಾಷೆಯ ಸೊಗಡು ಇರಲಿದೆ.

‘ಲಾಕ್​ ಡೌನ್’ ಸಿನಿಮಾದಲ್ಲಿ ಬಹುತೇಕ ಹೊಸ ಕಲಾವಿದರೇ ನಟಿಸಿದ್ದಾರೆ. ‘ಅಭಿನವ ಪ್ರೊಡಕ್ಷನ್’ ಮೂಲಕ ಮಂಜು ಮುದ್ಗಲ್ ಅವರು ನಿರ್ಮಾಣ ಮಾಡುವ ಜತೆಗೆ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹಲವು ನಿರ್ದೇಶಕರ ಬಳಿ ಕೆಲಸ ಮಾಡಿರುವ ಜಾವೇದ್ ತಿಪ್ಪನಹಟ್ಟಿ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಅಲ್ಲದೇ, ಚಿತ್ರಕಥೆ, ಸಾಹಿತ್ಯ, ಸಂಗೀತದ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ.

ಈ ಸಿನಿಮಾಗೆ ಪ್ರಚಾರದ ಮೊದಲ ಹಂತವಾಗಿ ಇತ್ತೀಚೆಗೆ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ‘ಸಿರಿ ಮ್ಯೂಸಿಕ್’ ಮೂಲಕ ಟ್ರೇಲರ್ ಅನಾವರಣ ಆಗಿದೆ. ಬೆಂಗಳೂರಿನ ಶ್ರೀರೇಣುಕಾಂಬ ಸ್ಟುಡಿಯೋದಲ್ಲಿ ಟ್ರೇಲರ್ ರಿಲೀಸ್ ಕಾರ್ಯಕ್ರಮ ನಡೆಯಿತು. ಈ ವೇಳೆ ಚಿತ್ರತಂಡದವರು ಭಾಗಿಯಾಗಿ ಸಿನಿಮಾ ಬಗ್ಗೆ ಒಂದಷ್ಟ ಮಾಹಿತಿ ಹಂಚಿಕೊಂಡರು.

‘ಲಾಕ್​ಡೌನ್’ ಸಿನಿಮಾದ ಟ್ರೇಲರ್:

‘ಲಾಕ್​ಡೌನ್’ ಸಿನಿಮಾದಲ್ಲಿ ಬೆಂಗಳೂರಿನ ವಿಜಯ್ ವಿಘ್ನೇಶ್ ಅವರು ಹೀರೋ ಆಗಿ ನಟಿಸಿದ್ದಾರೆ. ದಾವಣಗೆರೆ ಮೂಲದ ವಾಣಿಶ್ರೀ ಶ್ರೀನಿವಾಸ್ ಅವರು ನಾಯಕಿ ಆಗಿದ್ದಾರೆ. ಶ್ರಾವಣಿ, ಅಶ್ವಿನಿ ಮುದ್ಗಲ್, ಮಮತಾ, ಗೋವಿಂದರಾಜು, ವೈಲಾ ಮುಂತಾದವರು ನಟಿಸಿದ್ದಾರೆ. ಶರಣಪ್ಪ ಸುಗ್ಗನಹಳ್ಳಿ ಅವರು ಛಾಯಾಗ್ರಹಣ ಮಾಡಿದ್ದಾರೆ. ಶಿವರಾಜ್ ಮೆಹೂ ಅವರ ಸಂಕಲನ ಈ ಸಿನಿಮಾಗಿದೆ.

ಇದನ್ನೂ ಓದಿ: Photo Movie Review: ಲಾಕ್​ಡೌನ್​ನಲ್ಲಿ ಬೆಂದ ಬಡವನ ನೋವಿನ ಸತ್ಯದರ್ಶನ

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರು ಮಾತನಾಡಿದರು. ‘ಲಾಕ್‌ಡೌನ್ ಸಂದರ್ಭದಲ್ಲಿ ಹಲವರಿಗೆ ನೋವು ಉಂಟಾಗಿತ್ತು. ಆದರೆ ಕೆಲವರಿಗೆ ನಲಿವು ತಂದುಕೊಟ್ಟಿದೆ. ಅದಕ್ಕೆ ಟ್ಯಾಗ್ ಲೈನ್‌ನಲ್ಲಿ ವಿಷಾದ ಮತ್ತು ರಂಜನೆ ಎಂದು ಬರೆಯಲಾಗಿದೆ. ಬಳ್ಳಾರಿಯಲ್ಲಿ ಒಂದಷ್ಟು ಕಹಿ ಘಟನೆಗಳು ನಡೆದಿದ್ದನ್ನು ಚಿತ್ರಕತೆಗೆ ಅಳವಡಿಸಿಕೊಳ್ಳಲಾಗಿದೆ. ಈ ಚಿತ್ರದಲ್ಲಿನ ಸನ್ನಿವೇಶಗಳು ವಾಸ್ತವ. ಆದರೆ ಕಥೆ ಕಾಲ್ಪನಿಕವಾಗಿದೆ’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us