‘ಮೃತ್ಯುದೇವತೆ’ ಸಿನಿಮಾದ ಹೊಸ ಹಾಡು ರಿಲೀಸ್; ಇದು ಮಹಿಳಾ ಪ್ರಧಾನ ಸಿನಿಮಾ

ಟ್ರ್ಯಾಪ್​ಗೆ ಒಳಗಾದ ಮೂವರು ಹೆಣ್ಣುಮಕ್ಕಳ ಕಥೆಯನ್ನು ‘ಮೃತ್ಯುದೇವತೆ’ ಸಿನಿಮಾ ಮೂಲಕ ಹೇಳಲಾಗುತ್ತದೆ. ವಿನಯಾ ಪ್ರಸಾದ್, ಹಿಮಶ್ರೀ, ಸಾರಿಕಾ ರಾವ್, ಪವನ್ ಶೆಟ್ಟಿ, ಸೂರ್ಯ, ನವೀನ್ ಮಹದೇವ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ‘ವರ್ಷಿತಾ ಪ್ರೊಡಕ್ಷನ್ಸ್’ ಮೂಲಕ ಸರಸ್ವತಿ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ.

‘ಮೃತ್ಯುದೇವತೆ’ ಸಿನಿಮಾದ ಹೊಸ ಹಾಡು ರಿಲೀಸ್; ಇದು ಮಹಿಳಾ ಪ್ರಧಾನ ಸಿನಿಮಾ
Mruthyudevathe Movie Cast

Updated on: May 22, 2026 | 9:10 PM

ನವೀನ್ ಮಹದೇವ್ ಅವರು ನಿರ್ದೇಶನ ಮಾಡಿರುವ ‘ಮೃತ್ಯುದೇವತೆ’ (Mruthyudevathe) ಸಿನಿಮಾದ ಹೊಸ ಹಾಡನ್ನು ಬಿಡುಗಡೆ ಮಾಡಲಾಗಿದೆ. ಈಗಿನ ಸಮಾಜದಲ್ಲಿ ಮಹಿಳೆ ಯಾವ ರೀತಿ ಟ್ರ್ಯಾಪ್ ಆಗಿ ವಂಚಕರ ಜಾಲದಲ್ಲಿ ಸಿಲುಕಿಕೊಳ್ಳುತ್ತಾಳೆ, ನಂತರ ಅದರಿಂದ ಹೊರಬರಲು ಹೇಗೆ ಪ್ರಯತ್ನಿಸುತ್ತಾಳೆ, ವಂಚಕರನ್ನು ಶಿಕ್ಷಿಸಲು ಯಾವ ಅವತಾರ ಎತ್ತುತ್ತಾಳೆ ಎಂಬುದನ್ನು ಈ ಸಿನಿಮಾ ಮೂಲಕ ಹೇಳಲು ಪ್ರಯತ್ನಿಸಿರುವುದಾಗಿ ಚಿತ್ರತಂಡ ತಿಳಿಸಿದೆ. ಮಹಿಳಾ ಪ್ರಧಾನ ಕಥಾಹಂದರ ಇರುವ ಈ ಸಿನಿಮಾಗೆ ನವೀನ್ ಮಹಾದೇವ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಪಾತ್ರವರ್ಗದಲ್ಲೂ ಅವರಿದ್ದಾರೆ. ಮುಖ್ಯ ಪಾತ್ರದಲ್ಲಿ ಹಿರಿಯ ನಟಿ ವಿನಯಾ ಪ್ರಸಾದ್ (Vinaya Prasad) ಅಭಿನಯಿಸಿದ್ದಾರೆ.

‘ಮೃತ್ಯುದೇವತೆ’ ಸಿನಿಮಾದ ‘ನಮ್ಮಾವ ಮಾದೇವ’ ಹಾಡಿನ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಹಿಮಶ್ರೀ, ನವೀನ್ ಮಹದೇವ್ ಅಭಿನಯದ ಈ ಗೀತೆಗೆ ನಿರ್ದೇಶಕರೇ ಸಾಹಿತ್ಯ ರಚಿಸಿದ್ದಾರೆ. ಈ ವೇಳೆ ಮಾತನಾಡಿದ ನವೀನ್ ಮಹದೇವ್ ಅವರು, ‘ಈ ಹಿಂದೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದೆವು. ಕಾರಣಾಂತರಗಳಿಂದ ರಿಲೀಸ್ ತಡವಾಯಿತು. ಮೊದಲ ಹಾಡಿಗೆ ಎಲ್ಲಾ ಕಡೆಯಿಂದ ಒಳ್ಳೆಯ ಪ್ರಶಂಸೆ ಬಂತು’ ಎಂದು ಹೇಳಿದರು.

‘ಹೆಣ್ಣು, ಹೆಣ್ತನದ ಬಗ್ಗೆ ತುಂಬಾ ಚೆನ್ನಾಗಿ ಹೇಳಿದ್ದೀರಿ ಎಂದು ಜನರು ಮೆಚ್ಚಿಕೊಂಡರು. ಮೊದಲು ಈ ಹಾಡನ್ನು ಬಳಸಿಕೊಂಡಿರಲಿಲ್ಲ‌. ಹಿಮಶ್ರೀ ಅವರ ಒತ್ತಾಯದಿಂದ ಮಾಡಬೇಕಾಯಿತು. ಟ್ರೇಲರ್ ತುಂಬಾ ಚೆನ್ನಾಗಿ ಬಂದಿದೆ. ಟ್ರೇಲರ್, ಹಾಡುಗಳನ್ನು ಎಷ್ಟು ಚೆನ್ನಾಗಿ ಪ್ರೆಸೆಂಟ್ ಮಾಡುತ್ತೇವೋ ಅದರ ಮೇಲೆ ಸಿನಿಮಾದ ಫಲಿತಾಂಶ ಇರುತ್ತದೆ. ಒಂದೊಳ್ಳೆ ಸಿನಿಮಾ ಅಂದರೆ ಜನ ಏನು ಬಯಸುತ್ತಾರೋ ಅದನ್ನು ಟ್ರೇಲರ್ ಮೂಲಕ ಹೇಳಿದ್ದೇನೆ’ ಎಂದರು ನಿರ್ದೇಶಕರು.

ನಾಯಕಿ ಸಾರಿಕಾ ರಾವ್ ಮಾತನಾಡಿ, ‘ತುಂಬಾ ಇಷ್ಟಪಟ್ಟು ಮಾಡಿರುವ ಸಿನಿಮಾ. ಎಲ್ಲರೂ ಅವರವರ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಈ ಸಿನಿಮಾ ಕೇವಲ ಮನರಂಜನೆಗಾಗಿ ಅಲ್ಲ, ಬದಲಾವಣೆ ಆಗಬೇಕು. ಎಷ್ಟೋ ಜನರಿಗೆ ಪ್ರೇರಣೆಯಾಗುತ್ತದೆ. ಹೆಣ್ಣುಮಕ್ಕಳ ಜತೆ ತಂದೆ-ತಾಯಿ ಬಂದು ಸಿನಿಮಾ ನೋಡಬೇಕು. ಹೆಣ್ಣಿನ ಸಹನೆಯ ಕಟ್ಟಿ ಒಡೆದಾಗ ಏನಾಗುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳಿದ್ದೇವೆ’ ಎಂದು ಹೇಳಿದರು.

ಇದನ್ನೂ ಓದಿ: ವಿನಯಾ ಪ್ರಸಾದ್ ರೌದ್ರಾವತಾರ ನೋಡಿ ಸೃಜನ್ ಲೋಕೇಶ್ ಶಾಕ್ 

ಮತ್ತೊಬ್ಬ ನಾಯಕಿ ಹಿಮಶ್ರೀ ಮಾತನಾಡಿ, ‘ಇವತ್ತು ನನ್ನ ಸಾಂಗ್ ರಿಲೀಸಾಗಿದೆ. ನಾನಿಲ್ಲಿ ಮಲೆನಾಡಿನ ಹಳ್ಳಿಯ ಮುಗ್ಧ ಹುಡುಗಿ ಸೌಮ್ಯ ಎಂಬ ಪಾತ್ರ ಮಾಡಿದ್ದೇನೆ. ಸಡನ್ ಆಗಿ ಪರಿಚಯ ಆಗುವ ವ್ಯಕ್ತಿಗಳನ್ನು ತಕ್ಷಣಕ್ಕೆ ನಂಬಬಾರದು ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದಾರೆ’ ಎಂದು ಹೇಳಿದರು. ‘ಅಣ್ಣಯ್ಯ’ ಖ್ಯಾತಿಯ ಮಾಹೀನ್ ಮಾತನಾಡಿ, ‘ಇದು ಮಹಿಳಾ ಪ್ರಧಾನ ಚಿತ್ರವಾದರೂ ಪುರುಷರೂ ಬಂದು ನೋಡಬೇಕು’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us