‘ನರಮನ್ಸ ನರಮನ್ಸ ಬದುಕೋದು ಹೀಗಲ್ಲ’; ಕೊವಿಡ್​ ದುಸ್ಥಿತಿಯಲ್ಲಿ ವೈರಲ್​ ಆಗುತ್ತಿರುವ ದರ್ಶನ್​ ಹಾಡಿನ ವಿಶೇಷ ಏನು?

‘ನರಮೇದವ ಶುರುಮಾಡಿದ ನರರಾಕ್ಷಸ ಯಾರೋ? ಅಭಿಮಾನದ ಒಳಸಂಚನು ನಡೆಸೋರು ಯಾರೋ? ಪಾಪಿಗಳ ಸಂತೆಯಲ್ಲಿ ಪ್ರಾಣಕೆ ಬೆಲೆಯೇ ಇಲ್ಲ’ ಎಂಬ ಸಾಲುಗಳು ಹೆಚ್ಚು ವೈರಲ್​ ಆಗುತ್ತಿದೆ.

‘ನರಮನ್ಸ ನರಮನ್ಸ ಬದುಕೋದು ಹೀಗಲ್ಲ’; ಕೊವಿಡ್​ ದುಸ್ಥಿತಿಯಲ್ಲಿ ವೈರಲ್​ ಆಗುತ್ತಿರುವ ದರ್ಶನ್​ ಹಾಡಿನ ವಿಶೇಷ ಏನು?
ನವಗ್ರಹ ಸಿನಿಮಾ ಪೋಸ್ಟರ್​ - ಕೊರೊನಾ ವೈರಸ್​

Updated on: May 01, 2021 | 12:19 PM

ಎಲ್ಲೆಲ್ಲೂ ಕೊರೊನಾ ವೈರಸ್​ ತಾಂಡವ ಆಡುತ್ತಿದೆ. ಬೆಂಗಳೂರಿನಲ್ಲಿ ಜನರು ಶವ ಸಂಸ್ಕಾರಕ್ಕೂ ಸಾಲುಗಟ್ಟಿ ನಿಲ್ಲುವಂತಹ ದುಸ್ಥಿತಿ ನಿರ್ಮಾಣ ಆಗಿದೆ. ಬೇರೆ ಬೇರೆ ಕಡೆಗಳಲ್ಲಿ ಸಾಮೂಹಿಕವಾಗಿ ಜನರ ಅಂತ್ಯ ಸಂಸ್ಕಾರ ಮಾಡುತ್ತಿರುವ ದೃಶ್ಯಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಅದರಲ್ಲಿ ಗಮನ ಸೆಳೆಯುತ್ತಿರುವ ಒಂದು ಅಂಶ ಎಂದರೆ, ಕನ್ನಡ ಸಿನಿಮಾದ ಒಂದು ಗೀತೆ ಹಿನ್ನೆಲೆಯಲ್ಲಿ ಕೇಳಿಬರುತ್ತಿದೆ. ‘ನರಮನ್ಸ ನರಮನ್ಸ ಬದುಕೋದು ಹೀಗಲ್ಲ.. ಕಲಿಸೋಕೆ ಯಾರೂ ಇಲ್ಲ…’ ಎಂಬ ಹಾಡಿನ ಹಿನ್ನೆಲೆಯಲ್ಲಿ ಕೊವಿಡ್​ನ ನರಕ ಸದೃಶ್ಯ ಸ್ಥಿತಿಯನ್ನು ವಿವರಿಸಲಾಗುತ್ತಿದೆ.

ಇದು 2008ರಲ್ಲಿ ತೆರೆಕಂಡ ನವಗ್ರಹ ಸಿನಿಮಾದ ಗೀತೆ. ದರ್ಶನ್​, ತರುಣ್​ ಸುಧೀರ್​, ಸೃಜನ್​ ಲೋಕೇಶ್​, ವಿನೋದ್​ ಪ್ರಭಾಕರ್​, ಧರ್ಮ ಕೀರ್ತಿ ರಾಜ್​, ಶರ್ಮಿಳಾ ಮಾಂಡ್ರೆ, ನಾಗೇಂದ್ರ ಅರಸ್​ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದರು. ದರ್ಶನ್​ ಸಹೋದರ ದಿನಕರ ತೂಗುದೀಪ್​ ನಿರ್ದೇಶನ ಮಾಡಿದ್ದ ನವಗ್ರಹ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲೂ ಯಶಸ್ವಿ ಆಗಿತ್ತು. ಚಿತ್ರಕ್ಕೆ ವಿ. ಹರಿಕೃಷ್ಣ ಸಂಗೀತ ನೀಡಿದ್ದರು. ಅದೇ ಸಿನಿಮಾದ ‘ನರ ಮನ್ಸ ಮನ್ಸ..’ ಹಾಡು ಈಗ ಕೊವಿಡ್​ ಮಹಾಮಾರಿಯ ಮರಣಮೃದಂಗವನ್ನು ಎಳೆಎಳೆಯಾಗಿ ವಿವರಿಸುವಂತಿದೆ.

ಮೈಸೂರಿನ ಚಿನ್ನದ ಅಂಬಾರಿ ಕದಿಯಬೇಕು ಎಂದುಕೊಳ್ಳುವ 9 ಜನರ ಕಥೆಯನ್ನು ಈ ಸಿನಿಮಾ ಒಳಗೊಂಡಿತ್ತು. ದುಡ್ಡಿನ ಆಸೆಗೆ ಬಿದ್ದು ಪ್ರಾಣವನ್ನೇ ಕಳೆದುಕೊಳ್ಳುವ ಆಪ್ತ ಸ್ನೇಹಿತರ ಬಗ್ಗೆ ಚಿತ್ರದಲ್ಲಿ ವಿವರಿಸಲಾಗಿತ್ತು. ಒಟ್ಟಾರೆ ಸಿನಿಮಾದ ಆಶಯಕ್ಕೆ ತಕ್ಕಂತೆ ವಿ. ನಾಗೇಂದ್ರ ಪ್ರಸಾದ್​ ಅವರು ‘ನರ ಮನ್ಸ ನರ ಮನ್ಸ..’ ಹಾಡನ್ನು ಬರೆದಿದ್ದರು. ಆ ಹಾಡಿನಲ್ಲಿ ಇರುವ ಒಂದೊಂದು ಸಾಲು ಕೂಡ ಈಗ ಕೊವಿಡ್​ ಪರಿಸ್ಥಿತಿಗೆ ಸೂಕ್ತವೇನೂ ಅನಿಸುತ್ತಿದೆ. ಹಾಗಾಗಿ, ಕೊರೊನಾ ವೈರಸ್​ನಿಂದ ಉಂಟಾಗಿರುವ ನರಕದಂತಹ ದೃಶ್ಯಗಳ ಹಿನ್ನೆಲೆಗೆ ನೆಟ್ಟಿಗರು ಈ ಹಾಡನ್ನು ಬಳಸುತ್ತಿದ್ದಾರೆ.

‘ನರ ಮನ್ಸ ನರ ಮನ್ಸ ಬದುಕೋದು ಹೀಗಲ್ಲ.. ಕಲಿಸೋಕೆ ಯಾರೂ ಇಲ್ಲ. ನರ ಮನ್ಸ ನರ ಮನ್ಸ ಹಿಂದೇನೂ ನಡೆಯಿಲ್ಲ.. ಅವನಿಷ್ಟದಂಗೆ ಎಲ್ಲಾ. ಬರಿಗೈಲೇ ಬರೋದು, ಬರಿಗೈಲಿ ಹೋಗೋದು. ತಿಳಿದಾಗ ನೀನೇ ಬುದ್ಧನು. ಕಳಬೇಡ ಕೊಲಬೇಡ, ಈ ವಚನ ಮರಿಬೇಡ… ಸುಮ್​ ಸುಮ್ನೇ ಮೆರಿಬೇಡವೋ’ ಎಂಬ ಸಾಲುಗಳ ಮೂಲಕ ಎಲ್ಲರಿಗೂ ಪಾಠ ಮಾಡುವಂತಿದೆ ಈ ಹಾಡು.

‘ನರಮೇದವ ಶುರುಮಾಡಿದ ನರರಾಕ್ಷಸ ಯಾರೋ? ಅಭಿಮಾನದ ಒಳಸಂಚನು ನಡೆಸೋರು ಯಾರೋ? ಪಾಪಿಗಳ ಸಂತೆಯಲ್ಲಿ ಪ್ರಾಣಕೆ ಬೆಲೆಯೇ ಇಲ್ಲ. ನಿನ್ನೋರು ಅನ್ನೋರೇ ಇಲ್ಲ. ಸುಖ ನೆಮ್ಮದಿ ಹಣದಲ್ಲಿದೆ ಅಂದುಕೊಂಡರೆ ಮೋಹ. ನಿನ್ನ ನಾಳೆಯು ಹಣೆಯಲ್ಲಿದೆ, ಅರಿವಾದರೆ ಸ್ನೇಹ. ಆಸೆಗೆ ಬದುಕೋರೆಲ್ಲ ಮಣ್ಣಾಗಿ ಹೋಗೋರೆ.. ನಿಂದೂನೂ ಅಷ್ಟೇ ತಾನೇ..’ ಎಂಬ ಸಾಲುಗಳನ್ನು ಹೊಂದಿರುವ ಈ ಹಾಡು ಈಗ ಹೆಚ್ಚು ವೈರಲ್​ ಆಗುತ್ತಿದೆ.

ಈ ಹಾಡಿಗೆ ಧ್ವನಿ ನೀಡಿದ್ದು ಖ್ಯಾತ ಗಾಯಕ ಹರಿಹರನ್​.

ಇದನ್ನೂ ಓದಿ: Producer Ramu Death: ಕೊರೊನಾ ಸೋಂಕಿನಿಂದ ನಟಿ ಮಾಲಾಶ್ರೀ ಪತಿ, ಖ್ಯಾತ ನಿರ್ಮಾಪಕ ರಾಮು ನಿಧನ

ಕೊರೊನಾಗೆ ಬಲಿಯಾದ ಮತ್ತೋರ್ವ ಸ್ಯಾಂಡಲ್​ವುಡ್​ ಯುವ ನಿರ್ಮಾಪಕ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us