‘ಹಿಕೋರಾ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ಪ್ರಕಾಶ್ ಬೆಳವಾಡಿ

ನೀನಾಸಂ ಕಿಟ್ಟಿ ನಿರ್ದೇಶನ ಮಾಡಿ ನಟಿಸಿರುವ ‘ಹಿಕೋರಾ’ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಪ್ರಕಾಶ್ ಬೆಳವಾಡಿ ಅವರಿಂದ ಇತ್ತೀಚೆಗೆ ಈ ಸಿನಿಮಾ ಟ್ರೇಲರ್ ಬಿಡುಗಡೆ ಮಾಡಿಸಲಾಯಿತು. ರತ್ನ ಶ್ರೀಧರ್ ನಿರ್ಮಾಣ ಮಾಡಿದ ಈ ಚಿತ್ರದಲ್ಲಿ ನೀನಾಸಂ ಕಿಟ್ಟಿ, ಪ್ರಕಾಶ್ ಬೆಳವಾಡಿ, ಗುರುಪ್ರಸಾದ್ ಮುಂತಾದವರು ನಟಿಸಿದ್ದಾರೆ.

‘ಹಿಕೋರಾ’ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ಪ್ರಕಾಶ್ ಬೆಳವಾಡಿ
Hikora Movie Team

Updated on: Aug 04, 2025 | 5:15 PM

‘ಹಿಕೋರಾ’ ಸಿನಿಮಾದ ಟ್ರೇಲರ್ (Hikora Movie Trailer) ಬಿಡುಗಡೆ ಆಗಿದೆ. ರತ್ನ ಶ್ರೀಧರ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ನೀನಾಸಂ ಕಿಟ್ಟಿ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ಪೂರ್ಣಚಂದ್ರ ತೇಜಸ್ವಿ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಹಿಕೋರಾ’ (Hikora) ಸಿನಿಮಾದ ಟ್ರೇಲರ್ ಅನ್ನು ರಂಗಕರ್ಮಿ, ನಟ ಪ್ರಕಾಶ್ ಬೆಳವಾಡಿ (Prakash Belawadi) ಅವರು ಬಿಡುಗಡೆ ಮಾಡಿದರು. ಈ ಕಾರ್ಯಕ್ರಮದಲ್ಲಿ ದಿನೇಶ್ ಬಾಬು, ಮಾಜಿ ಶಾಸಕ ಬಾಲರಾಜ್, ವಿತರಕರ ಸಂಘದ ಅಧ್ಯಕ್ಷ ನವಶಕ್ತಿ ನಾಗರಾಜ್, ನಿರ್ಮಾಪಕರಾದ ಎ. ನರಸಿಂಹ, ಕಾಮಾಕ್ಷಿ ರಾಜು, ನಾಗೇಶ್ ಕುಮಾರ್, ಕಾಮಾಕ್ಯ ಮುರಳಿ, ಧನಲಕ್ಷ್ಮೀ ಗ್ರೂಪ್​ನ ನಾರಾಯಣಸ್ವಾಮಿ ಮುಂತಾದವರು ಭಾಗಿಯಾಗಿದ್ದರು.

ಈ ವೇಳೆ ಪ್ರಕಾಶ್ ಬೆಳವಾಡಿ ಅವರು ಮಾತನಾಡಿದರು. ‘ನಾನು ಸಹ ನೀನಾಸಂನಲ್ಲಿ ಹಲವು ನಾಟಕಗಳನ್ನು ಮಾಡಿದ್ದೇನೆ. ಅಲ್ಲಿಗೆ ನಾನು ಹೋಗುತ್ತಿದ್ದಾಗ ನಿರ್ಮಾಪಕಿ ರತ್ನ ಶ್ರೀಧರ್ ರುಚಿಯಾದ ಊಟ ನೀಡುತ್ತಿದ್ದರು. ಅಲ್ಲಿಂದ ಅವರ ಪರಿಚಯ ಆಯಿತು. ಅವರು ನನ್ನ ಬಳಿ ಬಂದು ಸಿನಿಮಾ ನಿರ್ಮಾಣ ಮಾಡುತ್ತಿದ್ದೇನೆ ಎಂದು ಹೇಳಿದಾಗ, ಬೇಡ ಎಂದಿದ್ದೆ. ಆದರೂ ಸಿನಿಮಾ ಮೇಲಿನ ಪ್ರೀತಿಯಿಂದ ಅವರು ನಿರ್ಮಾಣ ಮಾಡಿದ್ದಾರೆ. ನಾನು ಸಹ ಈ ಸಿನಿಮಾದಲ್ಲಿ ಅಭಿನಯಿಸಿದ್ದೇನೆ. ಟ್ರೇಲರ್ ಗಮನ ಸೆಳೆಯಿತು. ರತ್ನ ಮತ್ತು ಇಡೀ ತಂಡಕ್ಕೆ ಒಳ್ಳೆಯದಾಗಲಿ’ ಎಂದು ಪ್ರಕಾಶ್ ಬೆಳವಾಡಿ ಶುಭ ಕೋರಿದರು.

ನಾಯಕ ನಟ ನೀನಾಸಂ ಕಿಟ್ಟಿ ಮಾತನಾಡಿ ಸಿನಿಮಾ ಬಗ್ಗೆ ವಿವರ ನೀಡಿದರು. ‘ನೀನಾಸಂನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಟ್ರೇಲರ್ ಬಿಡುಗಡೆ ಮಾಡಬೇಕು ಎಂದು ನಿಗದಿಯಾಗಿತ್ತು. ಆದರೆ ನಿನ್ನೆ ನೀನಾಸಂನ ಹಿರಿಯ ಜೀವವೊಂದು ವಿಧಿವಶರಾದ ಕಾರಣ ಇಂದು ಹೆಚ್ಚು ವಿದ್ಯಾರ್ಥಿಗಳು ಬರಲು ಆಗಲಿಲ್ಲ. ಆದರೂ ಕೆಲವು ವಿದ್ಯಾರ್ಥಿಗಳು ಬಂದಿದ್ದಾರೆ‌‌’ ಎಂದು ಅವರು ಹೇಳಿದರು.

‘ಹಿಕೋರಾ’ ಸಿನಿಮಾದ ಟ್ರೇಲರ್:

‘ನಿರ್ಮಾಪಕಿ ರತ್ನ ಮತ್ತು ಅವರ ಪತಿ ಶ್ರೀಧರ್ ಅವರು ನೀನಾಸಂನಲ್ಲೇ ಮೆಸ್ ನಡೆಸುತ್ತಿದ್ದರು. ನಮಗೆಲ್ಲ ಅನ್ನ ಹಾಕಿದ ಮಹಾತಾಯಿ ಅವರು. ರತ್ನಕ್ಕ ಈಗ ನಿರ್ಮಾಪಕಿ ಆಗಿದ್ದಾರೆ. ನಾನು ನಿರ್ದೇಶನದ ಜತೆಗೆ ನಾಯಕನಾಗಿಯೂ ಅಭಿನಯಿಸಿದ್ದೇನೆ. ನಾನು ಪ್ರೇಕ್ಷಕರಲ್ಲಿ ಕೇಳಿಕೊಳ್ಳುವುದು ಇಷ್ಟೇ. ನಾನು ಒಬ್ಬ ನಿರ್ದೇಶಕ ಮತ್ತು ನಟನಾಗಿ ಹೇಳುತ್ತಿಲ್ಲ. ಒಬ್ಬ ಸಾಮಾನ್ಯ ಪ್ರೇಕ್ಷಕನಾಗಿ ಹೇಳುತ್ತಿದ್ದೇನೆ. ನೀವು ಕೊಡುವ ಹಣಕ್ಕೆ ಮೋಸ ಮಾಡದಂತಹ ಸಿನಿಮಾ ಇದು. ದಯವಿಟ್ಟು ಎಲ್ಲರೂ ಚಿತ್ರಮಂದಿರಗಳಲ್ಲಿ ನಮ್ಮ ಸಿನಿಮಾವನ್ನು ನೋಡುವ ಮೂಲಕ ಪ್ರೋತ್ಸಾಹ ನೀಡಿ’ ಎಂದರು ನೀನಾಸಂ ಕಿಟ್ಟಿ.

ಇದನ್ನೂ ಓದಿ: ‘ಕಾಂತಾರ’ ಚಿತ್ರಕ್ಕೆ ಬರಲಿದೆ ಮತ್ತೊಂದು ಪಾರ್ಟ್? ಟಾಲಿವುಡ್​ ಖ್ಯಾತ ಹೀರೋಗೆ ಮಣೆ?

ನಿರ್ಮಾಪಕಿ ರತ್ನ ಅವರು ಮಾತನಾಡಿ, ‘ನಾವು ನೀನಾಸಂಗೆ ಬಂದಾಗ ದರ್ಶನ್ ಅವರು ಅಲ್ಲಿ ಇದ್ದರು. ನಾವು ನೀನಾಸಂ ಬಿಡುವ ಹೊತ್ತಿನಲ್ಲಿ ನೀನಾಸಂ ಕಿಟ್ಟಿ ಅಲ್ಲಿ ಕಲಿಯುತ್ತಿದ್ದರು‌. ಪ್ರಕಾಶ್ ಬೆಳವಾಡಿ ಅವರ ನಾಟಕದಲ್ಲಿ ನಾನು ಅಭಿನಯ ಕೂಡ ಮಾಡಿದ್ದೇನೆ. ಹೀಗೆ ಕೆಲವು ಸಮಯದ ನಂತರ ನಾನು ನಿರ್ಮಾಣಕ್ಕೆ ಮುಂದಾದೆ. ಆಗ ನನ್ನ ಪತಿ ಶ್ರೀಧರ್ ನನ್ನ ಜೊತೆಗಿದ್ದರು. ಈಗ ಅವರು ನಮ್ಮೊಂದಿಗೆ ಇಲ್ಲ‌. ಸಿನಿಮಾ ಪೂರ್ಣ ಮಾಡಲು ಮಗ ಸಹಕಾರ ನೀಡಿದ್ದಾನೆ. ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲು ವಿತರಕ ಟೇ.ಶಿ. ವೆಂಕಟೇಶ್ ಸಹಕಾರ ನೀಡುತ್ತಿದ್ದಾರೆ. ಆದಷ್ಟು ಬೇಗ ಸಿನಿಮಾ ನಿಮ್ಮ ಮುಂದೆ ಬರಲಿದೆ’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.