‘ಜಲಂಧರ’ ಸಿನಿಮಾಗೆ ಪ್ರಮೋದ್​ ಶೆಟ್ಟಿ ಹೀರೋ; ಶೂಟಿಂಗ್ ಮುಗಿಸಿ ಪೋಸ್ಟರ್​ ಹಂಚಿಕೊಂಡ ಚಿತ್ರತಂಡ

ಪ್ರಮೋದ್​ ಶೆಟ್ಟಿ ಮುಖ್ಯ ಭೂಮಿಕೆ ನಿಭಾಯಿಸಿರುವ ‘ಜಲಂಧರ’ ಚಿತ್ರಕ್ಕೆ ವಿಷ್ಣು ವಿ. ಪ್ರಸನ್ನ ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಚೊಚ್ಚಲ ನಿರ್ದೇಶನದ ಸಿನಿಮಾ. ತಮ್ಮ ಮೊದಲ ಪ್ರಯತ್ನದಲ್ಲೇ ಅವರು ಕ್ರೈಂ ಥ್ರಿಲ್ಲರ್ ಅಂಶಗಳನ್ನು ಹೊಂದಿರುವ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಚಿತ್ರದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ.

‘ಜಲಂಧರ’ ಸಿನಿಮಾಗೆ ಪ್ರಮೋದ್​ ಶೆಟ್ಟಿ ಹೀರೋ; ಶೂಟಿಂಗ್ ಮುಗಿಸಿ ಪೋಸ್ಟರ್​ ಹಂಚಿಕೊಂಡ ಚಿತ್ರತಂಡ
ಪ್ರಮೋದ್​ ಶೆಟ್ಟಿ

Updated on: Sep 04, 2023 | 10:11 PM

ಹಲವು ಸಿನಿಮಾಗಳಲ್ಲಿ ನಟ ಪ್ರಮೋದ್ ಶೆಟ್ಟಿ (Pramod Shetty) ಅವರು ಅಭಿನಯಿಸಿದ್ದಾರೆ. ಎಲ್ಲ ಬಗೆಯ ಪಾತ್ರಗಳನ್ನೂ ಮಾಡುವ ಕಲಾವಿದ ಅವರು. ಈಗ ಅವರು ಹೀರೋ ಆಗಿ ನಟಿಸಿರುವ ‘ಜಲಂಧರ’ ಸಿನಿಮಾದ ಬಗ್ಗೆ ಅಪ್​ಡೇಟ್​ ಸಿಕ್ಕಿದೆ. ಈ ಸಿನಿಮಾದ ಶೂಟಿಂಗ್​ ಮುಕ್ತಾಯ ಆಗಿದೆ. ಸದ್ಯಕ್ಕೆ ಪೋಸ್ಟ್​ ಪ್ರೊಡಕ್ಷನ್ ಕೆಲಸಗಳು ಬಿರುಸಿನಿಂದ ಸಾಗಿವೆ. ಇತ್ತೀಚೆಗೆ ನಟ ಪ್ರಮೋದ್ ಶೆಟ್ಟಿ ಅವರು ಜನ್ಮದಿನವನ್ನು ಆಚರಿಸಿಕೊಂಡರು. ಆ ಪ್ರಯುಕ್ತ ‘ಜಲಂಧರ’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಸಿನಿಪ್ರಿಯರಿಗೆ ಈ ಪೋಸ್ಟರ್​ ನೋಡಿ ಕೌತುಕ ಮೂಡಿದೆ. ಪ್ರಮೋದ್ ಶೆಟ್ಟಿ ಅವರು ಮುಖ್ಯ ಭೂಮಿಕೆ ನಿಭಾಯಿಸುತ್ತಿರುವ ಕಾರಣ ಈ ಸಿನಿಮಾ ಮೇಲೆ ಅವರ ಅಭಿಮಾನಿಗಳು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಜಲಂಧರ’ ಸಿನಿಮಾ (Jalandhara Kannada Movie) ಬಗ್ಗೆ ಇಲ್ಲಿದೆ ಒಂದಷ್ಟು ಮಾಹಿತಿ..

ಲೋಕೇಶ್ ಅವರು ‘ಜಲಂಧರ’ ಚಿತ್ರಕ್ಕೆ ಕಥೆ ಬರೆದಿದ್ದಾರೆ. ವಿಷ್ಣು ವಿ. ಪ್ರಸನ್ನ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ವಿಷ್ಣು ವಿ. ಪ್ರಸನ್ನ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾ. ತಮ್ಮ ಮೊದಲ ಪ್ರಯತ್ನದಲ್ಲೇ ಅವರು ಕ್ರೈಂ ಥ್ರಿಲ್ಲರ್ ಅಂಶಗಳನ್ನು ಹೊಂದಿರುವ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಕಾವೇರಿ ನದಿಯ ದಡದಲ್ಲಿ ಇರುವ ಮಧುವತ್ತಿ ಎನ್ನುವ ಒಂದು ಗ್ರಾಮದಲ್ಲಿ ಈ ಸಿನಿಮಾದ ಕಥೆ ಸಾಗುತ್ತದೆ. ಶೂಟಿಂಗ್​ ಮುಗಿದಿದೆ ಎಂಬ ಸುದ್ದಿಯನ್ನು ‘ಜಲಂಧರ’ ಚಿತ್ರತಂಡ ಹಂಚಿಕೊಂಡಿದೆ.

ಇದನ್ನೂ ಓದಿ: ರಿಷಬ್ ಶೆಟ್ಟಿಯಿಂದ ರಾಜ್​ ಶೆಟ್ಟಿಗೆ ಮೋಸ ಆಯ್ತಾ? ಪ್ರಮೋದ್ ಶೆಟ್ಟಿಯದ್ದೂ ಇದೆ ಪಾಲು

ಮದನ್ ಎಸ್. ಅವರು ‘ಸ್ಟೆಪ್ ಅಪ್ ಪಿಕ್ಚರ್ಸ್’ ಲಾಂಛನದಲ್ಲಿ ‘ಜಲಂಧರ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಂದ್ರ ಮೋಹನ್, ರಾಮಚಂದ್ರ ಮತ್ತು ಪದ್ಮನಾಭನ್ ಅವರು ಸಹ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಮುತ್ತತ್ತಿ ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಅನೇಕ ಕಡೆಗಳಲ್ಲಿ ಈ ಸಿನಿಮಾದ ಶೂಟಿಂಗ್​ ಮಾಡಲಾಗಿದೆ. ಸರಿನ್ ರವೀಂದ್ರನ್ ಮತ್ತು ವಿದ್ಯಾಶಂಕರ್ ಅವರು ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ಜತಿನ್ ದರ್ಶನ್ ಅವರು ಸಂಗೀತ ನಿರ್ದೇಶನದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ವೆಂಕಿ ಯು.ಡಿ.ವಿ. ಅವರು ಸಂಕಲನ ಮಾಡುತ್ತಿದ್ದಾರೆ.

ಇದನ್ನೂ ಓದಿ: ರಿಷಬ್ ಶೆಟ್ಟಿ ಬಗ್ಗೆ ಯಾರಿಗೂ ಗೊತ್ತಿರದ ವಿಷಯ ಹಂಚಿಕೊಂಡ ಗೆಳೆಯ ಪ್ರಮೋದ್ ಶೆಟ್ಟಿ

ಪ್ರಮೋದ್ ಶೆಟ್ಟಿ ಅವರು ನಿಭಾಯಿಸುತ್ತಿರುವ ‘ಜಲಂಧರ’ ಚಿತ್ರದ ಪ್ರಧಾನ ಪಾತ್ರ ಹೇಗಿರಲಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಪ್ರಮೋದ್ ಶೆಟ್ಟಿ ಜೊತೆಗೆ ಲೋಕೇಶ್ ಗೌಡ, ಬಾಲ ರಾಜವಾಡಿ, ರಘು ರಮಣಕೊಪ್ಪ, ರಿಶಿಕಾ ರಾಜ್, ನವೀನ್ ಸಾಗರ್, ಆರೋಹಿತ ಗೌಡ, ಪ್ರತಾಪ್ ಸೇರಿದಂತೆ ಅನೇಕ ಕಲಾವಿದರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us