Puneetha Namana: ‘​ನಾನು ಮನೆ ಖರೀದಿಗಾಗಿ ಇಟ್ಟುಕೊಂಡ ಹಣದಲ್ಲಿ ಈ ಸಹಾಯ ಮಾಡ್ತೀನಿ’: ವಿಶಾಲ್

| Updated By: ಮದನ್​ ಕುಮಾರ್​

Updated on: Nov 16, 2021 | 6:33 PM

Puneeth Rajkumar: ತಾವು ಮನೆ ಕಟ್ಟುವ ಸಲುವಾಗಿ ಕೂಡಿಟ್ಟಿರುವ ಹಣದಲ್ಲಿ ಈ​ ಸಮಾಜಸೇವೆಯನ್ನು ಮಾಡುವುದಾಗಿ ವಿಶಾಲ್​ ತಿಳಿಸಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪುನೀತ್​ ರಾಜ್​ಕುಮಾರ್​ ಕುಟುಂಬಸ್ಥರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.

Puneetha Namana: ‘​ನಾನು ಮನೆ ಖರೀದಿಗಾಗಿ ಇಟ್ಟುಕೊಂಡ ಹಣದಲ್ಲಿ ಈ ಸಹಾಯ ಮಾಡ್ತೀನಿ’: ವಿಶಾಲ್
ವಿಶಾಲ್​, ಪುನೀತ್​ ರಾಜ್​ಕುಮಾರ್​
Follow us on

ಅಗಲಿದ ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಡೆಯಿಂದ ‘ಪುನೀತ ನಮನ’ (Puneetha Namana) ಕಾರ್ಯಕ್ರಮ ಮಾಡಲಾಗಿದೆ. ಮಂಗಳವಾರ (ನ.16) ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ತಮಿಳು ನಟ ವಿಶಾಲ್​ (Actor Vishal) ಅವರು ಆಗಮಿಸಿದ್ದಾರೆ. ವೇದಿಕೆ ಮೇಲೆ ಪುನೀತ್​ ಬಗ್ಗೆ ಮಾತನಾಡಿದ ವಿಶಾಲ್​ ಅವರು ಅಪ್ಪು ಬಗ್ಗೆ ಭಾವುಕ ನುಡಿಗಳನ್ನು ಹಂಚಿಕೊಂಡರು. ಪುನೀತ್​ ಅವರ ಸಾವಿರಾರು ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿದ್ದರು. ಆ ಮಕ್ಕಳಿಗೆ ಇನ್ಮುಂದೆ ತಾವು ಸಹಾಯ ಮಾಡುವುದಾಗಿ ವಿಶಾಲ್​ ಈ ಹಿಂದೆಯೇ ಘೋಷಣೆ ಮಾಡಿದ್ದರು. ಇಂದಿನ ಕಾರ್ಯಕ್ರಮದಲ್ಲೂ ಆ ಮಾತನ್ನು ವಿಶಾಲ್​ ಪುನಃ ಹೇಳಿದ್ದಾರೆ. ತಾವು ಮನೆ ಕಟ್ಟುವ ಸಲುವಾಗಿ ಕೂಡಿಟ್ಟಿರುವ ಹಣದಲ್ಲಿ ಈ ಸಮಾಜಸೇವೆಯನ್ನು ಮಾಡುವುದಾಗಿ ವಿಶಾಲ್​ ತಿಳಿಸಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಪುನೀತ್​ ಕುಟುಂಬಸ್ಥರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.

ಈ ಕಾರ್ಯಕ್ರಮಕ್ಕಾಗಿ ಇಡೀ ದಕ್ಷಿಣ ಭಾರತ ಚಿತ್ರರಂಗ ಒಂದೆಡೆ ಸೇರಿದೆ. ಕಾರ್ಯಕ್ರಮ ಆರಂಭ ಆಗುವುದಕ್ಕೂ ಮುನ್ನ ಮಾಧ್ಯಮಗಳ ಜೊತೆ ವಿಶಾಲ್​ ಮಾತನಾಡಿದ್ದರು. ‘ನನ್ನ ಸ್ನೇಹಿತ ಪುನೀತ್​ ಒಳ್ಳೆಯ ನಟ, ವ್ಯಕ್ತಿ ಆಗಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಸಹೋದರನಾಗಿ ಪುನೀತ್​ಗೆ ಪ್ರಾಮಿಸ್​ ಮಾಡುತ್ತಿದ್ದೇನೆ. ನಾನು ಹೇಳಿದ ಮಾತನ್ನು ನಡೆಸಿಕೊಡುತ್ತೇನೆ. ಬದುಕಿದ್ದಾಗ ನೀವು ಮಾಡಿದ ಸಮಾಜಸೇವೆಯನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ನೀವು ಮೃತಪಟ್ಟ ನಂತರ ನಿಮ್ಮ ಕಾರ್ಯಗಳ ಬಗ್ಗೆ ಇಡೀ ದೇಶಕ್ಕೆ ತಿಳಿಯಿತು. ನೀವು ಮಾಡುತ್ತಿದ್ದ ಕಾರ್ಯವನ್ನು ನಾನು ಮುಂದುವರಿಸುತ್ತೇನೆ’ ಎಂದು ವಿಶಾಲ್​ ಹೇಳಿದರು.

‘ಪುನೀತ ನಮನ’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿದಂತೆ ಅನೇಕ ರಾಜಕೀಯ ಗಣ್ಯರು ಭಾಗಿ ಆಗಿದ್ದಾರೆ. ಡಾ. ರಾಜ್​ಕುಮಾರ್​ ಕುಟುಂಬದ ಎಲ್ಲರೂ ಹಾಜರಿದ್ದು, ಅಪ್ಪುಗೆ ಪುಷ್ಪ ನಮನ ಸಲ್ಲಿಸಿದ್ದಾರೆ. ಕೇವಲ ಸೆಲೆಬ್ರಿಟಿಗಳು ಮತ್ತು ಗಣ್ಯರಿಗೆ ಈ ಕಾರ್ಯಕ್ರಮಕ್ಕೆ ಪ್ರವೇಶ ನೀಡಲಾಗಿದೆ. ಅಭಿಮಾನಿಗಳಿಗೆ ಅವಕಾಶ ನೀಡಲಾಗಿಲ್ಲ.

‘ಪುನೀತ್​ ನಮ್ಮೆಲ್ಲರಿಗೂ ಆತ್ಮೀಯ. ಅವನನ್ನು ನಾನು ಬಾಲ್ಯದಿಂದ ಬಲ್ಲೆ. ಬಾಲ್ಯದಲ್ಲಿಯೇ ಪ್ರತಿಭೆಯ ಚಿಲುಮೆ ಹೊಂದಿದ ವ್ಯಕ್ತಿ. ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿದ ಕರ್ನಾಟಕದ ಏಕೈಕ ಬಾಲಕ ಪುನೀತ್​. ಸಣ್ಣ ವಯಸ್ಸಿನಲ್ಲೇ ಆತ ಅದ್ಭುತವಾಗಿ ನಟಿಸುತ್ತಿದ್ದ. ಅಷ್ಟು ಸಣ್ಣ ವಯಸ್ಸಿನಲ್ಲಿ ಹಾಗೆ ನಟಿಸೋದು ಸುಲಭವಲ್ಲ’ ಎಂದಿದ್ದಾರೆ ಬಸವರಾಜ ಬೊಮ್ಮಾಯಿ.

ಇದನ್ನೂ ಓದಿ:

‘ಆರು ಕೋಟಿ ಜನರ ಪರವಾಗಿ ಪುನೀತ್​ಗೆ ಅಂದು ಮುತ್ತು ಕೊಟ್ಟಿದ್ದೆ’: ಸಿಎಂ ಬೊಮ್ಮಾಯಿ ಭಾವುಕ ನುಡಿ

ಬಸ್​ ನಿಲ್ದಾಣದಲ್ಲಿ ಪುನೀತ್​ ಫೋಟೋಗೆ ಮುತ್ತಿಟ್ಟು ಕಂಬನಿ ಸುರಿಸಿದ ಅಜ್ಜಿ; ವಿಡಿಯೋ ವೈರಲ್​