‘ದಾದಾಸಾಹೇಬ್​ ಫಾಲ್ಕೆ’ ರೀತಿಯೇ ಡಾ. ರಾಜ್​ ಹೆಸರಲ್ಲಿ ನೀಡುವ ಪ್ರಶಸ್ತಿ​ ಬಗ್ಗೆ ಹೊಸ ಕನಸು ಕಂಡಿದ್ದ​ ಪುನೀತ್​

| Updated By: ಮದನ್​ ಕುಮಾರ್​

Updated on: Nov 02, 2021 | 9:32 AM

Puneeth Rajkumar: ಡಾ. ರಾಜ್​ಕುಮಾರ್​ ಟ್ರಸ್ಟ್​ನಿಂದ ಪ್ರತಿ ವರ್ಷ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ. ಅದನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಪುನೀತ್​ ರಾಜ್​ಕುಮಾರ್​ ಆಸೆಪಟ್ಟಿದ್ದರು.

‘ದಾದಾಸಾಹೇಬ್​ ಫಾಲ್ಕೆ’ ರೀತಿಯೇ ಡಾ. ರಾಜ್​ ಹೆಸರಲ್ಲಿ ನೀಡುವ ಪ್ರಶಸ್ತಿ​ ಬಗ್ಗೆ ಹೊಸ ಕನಸು ಕಂಡಿದ್ದ​ ಪುನೀತ್​
ಪುನೀತ್​ ರಾಜ್​ಕುಮಾರ್​, ರಾಘವೇಂದ್ರ ರಾಜ್​ಕುಮಾರ್
Follow us on

ನಟ ಪುನೀತ್ ರಾಜ್​ಕುಮಾರ್​ ಹೃದಯಾಘಾತದಿಂದ ನಿಧನರಾಗಿರುವುದು ತೀವ್ರ ನೋವಿನ ಸಂಗತಿ. ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲ ಎಂಬ ಕಟು ಸತ್ಯವನ್ನು ಒಪ್ಪಿಕೊಂಡು ​ಮುಂದೆ ಸಾಗಬೇಕಾದ ಅನಿವಾರ್ಯತೆ ಇದೆ. ಜೀವನದಲ್ಲಿ ನೂರಾರು ಯೋಜನೆಗಳನ್ನು ಪುನೀತ್​ ಹಾಕಿಕೊಂಡಿದ್ದರು. ಅವು ಯಾವುದೂ ಕೂಡ ತಮಗಾಗಿ ಅಲ್ಲ. ಪರೋಪಕಾರಕ್ಕಾಗಿ ಅವರು ಹಗಲಿರುಳು ಶ್ರಮಿಸುತ್ತಿದ್ದರು. ಆದರೆ ಅದನ್ನು ಎಲ್ಲಿಯೂ ಹೇಳಿಕೊಳ್ಳುತ್ತಿರಲಿಲ್ಲ. ಅವರ ನಿಧನದ ನಂತರ ಅನೇಕ ವಿಚಾರಗಳು ಹೊರಬರುತ್ತಿವೆ. ಪುನೀತ್​ ಕಂಡ ಒಂದು ಕನಸಿನ ಬಗ್ಗೆ ರಾಘವೇಂದ್ರ ರಾಜ್​ಕುಮಾರ್​ ಅವರು ಈಗ ವಿವರಿಸಿದ್ದಾರೆ.

ಡಾ. ರಾಜ್​ಕುಮಾರ್​ ಟ್ರಸ್ಟ್​ನಿಂದ ಪ್ರತಿ ವರ್ಷ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ. ಅದನ್ನು ಇನ್ನೊಂದು ಎತ್ತರಕ್ಕೆ ಕೊಂಡೊಯ್ಯಬೇಕು ಎಂದು ಪುನೀತ್​ ಆಸೆಪಟ್ಟಿದ್ದರು. ಆ ಕನಸನ್ನು ಸಹೋದರ ರಾಘವೇಂದ್ರ ರಾಜ್​ಕುಮಾರ್​ ಜೊತೆ ಹೇಳಿಕೊಂಡಿದ್ದರು. ಅದು ನನಸಾಗುವುದಕ್ಕೂ ಮುನ್ನವೇ ಅವರು ಇಹಲೋಕ ತ್ಯಜಿಸಿರುವುದು ದುಃಖದ ಸಂಗತಿ. ಆ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ರಾಘಣ್ಣ ಪೋಸ್ಟ್​ ಮಾಡಿದ್ದಾರೆ.

‘ಇತ್ತೀಚೆಗೆ ನನಗೆ ದಾದಾಸಾಹೇಬ್​ ಫಾಲ್ಕೆ ಎಮ್​ಎಸ್​ಕೆ ಟ್ರಸ್ಟ್​ ವತಿಯಿಂದ ಜೀವಮಾನ ಸಾಧನೆ ಪ್ರಶಸ್ತಿ ಬಂದ ಸಂದರ್ಭದಲ್ಲಿ ಅಪ್ಪುಗೆ ಎಲ್ಲಿಲ್ಲದ ಸಂತೋಷ. ನನ್ನನ್ನು ತಕ್ಷಣ ಭೇಟಿ ಮಾಡಿ, ಈ ಸೆಲ್ಫಿ ತೆಗೆದು, ರಾಘಣ್ಣ.. ನಾವೂ ಸಹ ಈ ಮೂರ್ತಿಯ ರೂಪದ ಹಾಗೆ ಅಪ್ಪಾಜಿಯವರ ಮೂರ್ತಿಯನ್ನು ಮಾಡಿ ಎಂದಿನಂತೆ ಡಾ. ರಾಜ್​ಕುಮಾರ್​ ಟ್ರಸ್ಟ್​ನಿಂದ ನೀಡುವ ಪ್ರಶಸ್ತಿಯನ್ನು ಇದೇ ರೂಪದಲ್ಲಿ ಮಾಡೋಣ ಅಂತ ಹೇಳಿದ್ದನು. ಅಪ್ಪು ನಿನ್ನ ಆಲೋಚನೆಗೆ ನನ್ನದೊಂದು ನಮನ. ಲವ್​ ಯೂ ಮಗನೆ’ ಎಂದು ರಾಘವೇಂದ್ರ ರಾಜ್​ಕುಮಾರ್​ ಬರೆದುಕೊಂಡಿದ್ದಾರೆ.

ಕಂಠೀರವ ಸ್ಡುಡಿಯೋ ಆವರಣದಲ್ಲಿ ಪುನೀತ್​ ರಾಜ್​ಕುಮಾರ್​ ಅವರ ಅಂತ್ಯಕ್ರಿಯೆ ನಡೆದು ಇಂದಿಗೆ (ನ.2) ಮೂರನೇ ದಿನ. ಆ ಪ್ರಯುಕ್ತ ಕುಟುಂಬದವರು ಸಮಾಧಿಗೆ ಹಾಲು ತುಪ್ಪ ಬಿಡುವ ಕಾರ್ಯ ನೆರವೇರಿಸಿದ್ದಾರೆ. ಈ ಕಾರ್ಯ ಮುಗಿದ ನಂತರದಲ್ಲಿ ಸಾರ್ವಜನಿಕರಿಗೆ ಸಮಾಧಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಈ ಹಿಂದೆ ರಾಘಣ್ಣ ಹೇಳಿದ್ದರು.

ಇದನ್ನೂ ಓದಿ:

Puneeth Rajkumar: ಪುನೀತ್​ ಬಗ್ಗೆ ಅವಹೇಳನಕಾರಿ ಪೋಸ್ಟ್​ ಮಾಡಿದ್ದ ವ್ಯಕ್ತಿ ಅರೆಸ್ಟ್​; ಸೈಬರ್​ ಪೊಲೀಸರ ಬಲೆಗೆ ಬಿದ್ದ ಕಿಡಿಗೇಡಿ

ಪುನೀತ್​ ಅಂತ್ಯಕ್ರಿಯೆ ಮರುದಿನ ಹೇಗಿದೆ ಶಿವಣ್ಣನ ದಿನಚರಿ? ನೋವು ನುಂಗಿಕೊಂಡು ಮುಂದಿನ ಹೆಜ್ಜೆ ಇಟ್ಟ ಶಿವರಾಜ್​ಕುಮಾರ್​