ಎಸ್​ಪಿ ಬಾಲಸುಬ್ರಮಣ್ಯಂ ಚಿತ್ರದಲ್ಲಿ ಹಾಡಿದ್ದ ರಾಜ್​ಕುಮಾರ್; ಅಣ್ಣಾವ್ರ ಅಂಜಿಕೆ ಏನಿತ್ತು?  

ರಾಜ್​ಕುಮಾರ್ ಅವರ ಅದ್ಭುತ ಗಾಯನ ಪ್ರತಿಭೆಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಒಮ್ಮೆ ಎಸ್​ಪಿಬಿ ನಟಿಸಿದ್ದ ‘ಮುದ್ದಿನ ಮಾವ’ ಚಿತ್ರಕ್ಕಾಗಿ ರಾಜ್​ಕುಮಾರ್ ಹಾಡಿದ್ದರು. ಎಸ್​ಪಿಬಿ ಅವರು ತಮ್ಮ ಪಾತ್ರದ ಹಾಡನ್ನು ರಾಜ್​ಕುಮಾರ್ ಹಾಡಬೇಕೆಂದು ಬಯಸಿದ್ದರು. ರಾಜ್​ಕುಮಾರ್ ಅವರು ಹಾಡಿದ ಬಳಿಕ, ಹಾಡು ಜನರಿಗೆ ಇಷ್ಟವಾಗುತ್ತದೆಯೇ ಎಂಬ ಆತಂಕ ಅವರಿಗೆ ಇತ್ತು

ಎಸ್​ಪಿ ಬಾಲಸುಬ್ರಮಣ್ಯಂ ಚಿತ್ರದಲ್ಲಿ ಹಾಡಿದ್ದ ರಾಜ್​ಕುಮಾರ್; ಅಣ್ಣಾವ್ರ ಅಂಜಿಕೆ ಏನಿತ್ತು?  
ರಾಜ್​ಕುಮಾರ್​-ಎಸ್​ಪಿಬಿ
Edited By:

Updated on: Jun 04, 2025 | 9:20 AM

ರಾಜ್​ಕುಮಾರ್ (Rajkumar) ಕಂಠ ಸಿರಿ ಬಗ್ಗೆ ಎಲ್ಲರಿಗೂ ತಿಳಿದಿದೆ. ಅವರು ಅದ್ಭುತವಾಗಿ ಹಾಡುತ್ತಿದ್ದರು. ಅವರ ಕಂಠದಿಂದ ಮೂಡಿ ಬಂದ ಹಾಡನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ ಮತ್ತು ಇದಕ್ಕೆ ಅವರಿಗೆ ಅವಾರ್ಡ್​ಗಳೂ ಕೂಡ ಸಂದಿವೆ. ಒಮ್ಮೆ ಎಸ್​ಪಿಬಿ ನಟಿಸಿದ್ದ ಸಿನಿಮಾಗಾಗಿ ರಾಜ್​ಕುಮಾರ್ ಹಾಡಿದ್ದರು. ಈ ಘಟನೆಯನ್ನು ಎಸ್​ಪಿಬಿ ಅವರು ಅಂದು ನೆನಪಿಸಿಕೊಂಡಿದ್ದರು. ಬಾಲಸುಬ್ರಮಣ್ಯಂ ಅವರ ಜನ್ಮದಿನದ ಸಂದರ್ಭದಲ್ಲಿ ಆ ಘಟನೆಯನ್ನು ನೆನಪಿಸಿಕೊಳ್ಳೋಣ.

ಎಸ್​ಪಿಬಿ ಹಾಗೂ ಶಶಿಕುಮಾರ್ ಅವರು ‘ಮುದ್ದಿನ ಮಾವ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಶಶಿಕುಮಾರ್ ಮಾವನ ಪಾತ್ರದಲ್ಲಿ ಎಸ್​ಪಿಬಿ ನಟಿಸಿದ್ದರು. ಈ ಸಿನಿಮಾ ಮೆಚ್ಚುಗೆ ಪಡೆಯಿತು. ಈ ಚಿತ್ರದ ತೂಕ ಹೆಚ್ಚಲು ರಾಜ್​ಕುಮಾರ್ ಹಾಡೂ ಕೂಡ ಕಾರಣ ಆಯಿತು. ಈ ಸಿನಿಮಾಗಾಗಿ ರಾಜ್​ಕುಮಾರ್ ಅವರು ‘ದೀಪಾವಳಿ.. ದೀಪಾವಳಿ’ ಹಾಡು ಹಾಗೂ ‘ಶಿವನೆ’ ಹಾಡನ್ನು ಹಾಡಿದ್ದರು.

ಹೀರೋ ಹಾಡನ್ನು ಎಸ್​ಪಿಬಿ ಹಾಡುವುದಾಗಿ ತೀರ್ಮಾನಿಸಲಾಯಿತು. ಆದರೆ, ಎಸ್​ಪಿಬಿ ತಮ್ಮ ಪಾತ್ರದ ಹಾಡನ್ನು ಬೇರೊಬ್ಬ ಗಾಯಕರು ಹಾಡಬೇಕು ಎಂದು ಬೇಡಿಕೆ ಇಟ್ಟರು. ಆದರೆ, ಆಗ ನೆನಪಾಗಿದ್ದು ರಾಜ್​ಕುಮಾರ್. ಆದರೆ, ಹಾಡಲು ಅವರು ಒಪ್ಪಬೇಕಲ್ಲ. ಇದೇ ಅಂಜಿಕೆಯಲ್ಲಿ ತಂಡದವರು ರಾಜ್​ಕುಮಾರ್ ಅವರನ್ನು ಸಂಪರ್ಕಿಸಿದರು.

ಎಸ್​ಪಿಬಿ ಅವರು ರಾಘವೇಂದ್ರ ರಾಜ್​ಕುಮಾರ್ ಬಳಿ ತಮ್ಮ ಇಂಗಿತ ಹೊರಹಾಕಿದರು. ಅವರು ಹೋಗಿ ರಾಜ್​ಕುಮಾರ್ ಬಳಿ ಈ ವಿಚಾರ ಹೇಳಿದರು. ಇದನ್ನು ಕೇಳಿದ ರಾಜ್​ಕುಮಾರ್ ಅವರು ‘ಗಂಗೆ ಬಂದು ಒಂದು ಬಟ್ಟಲಲ್ಲಿ ನೀರು ಕೊಡಿ’ ಅಂತ ಕೇಳಿದ ಹಾಗಾಯ್ತು ಎಂದು ಹೇಳಿಕೊಂಡಿದ್ದರಂತೆ.

ಇದನ್ನೂ ಓದಿ: ರಾಜ್​ಕುಮಾರ್ ಸದಾ ಬಿಳಿ ಪಂಚೆ, ಶರ್ಟ್​ನಲ್ಲೇ ಇರುತ್ತಿದ್ದರೇಕೆ? ಆ ಘಟನೆಯೇ ಕಾರಣ

ಹಾಡು ಹಾಡಿದ ಬಳಿಕ ರಾಜ್​ಕುಮಾರ್ ಕರೆ ಮಾಡಿ ಹಾಡು ಹೇಗಿದೆ? ಎಲ್ಲಾದರೂ ತಪ್ಪಾಗಿದೆಯಾ ಎಂದೆಲ್ಲ ಕೇಳಿದ್ದರಂತೆ. ಜನರು ಇದ್ದನ್ನು ಒಪ್ಪಿಕೊಳ್ಳುತ್ತಾರಾ ಎನ್ನುವ ಭಯ ಅವರಿಗೆ ಇತ್ತು. ಈ ಘಟನೆಯನ್ನು ಎಸ್​ಪಿಬಿ ಅವರು ಈ ಮೊದಲು ನೆನಪಿಸಿಕೊಂಡಿದ್ದರು. ಎಸ್​ಪಿಬಿ ಅವರು ಹಲವು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿದ್ದಾರೆ. ಅವರಿಗೆ ಇಂದು (ಜೂನ್ 4) ಜನ್ಮದಿನ. ಅವರ ಹಾಡುಗಳನ್ನು ನೆನಪಿಸಿಕೊಳ್ಳಲಾಗುತ್ತಿದೆ. ಎಸ್​ಪಿಬಿ ಅವರಿಗೆ ಕನ್ನಡದ ಬಗ್ಗೆ ವಿಶೇಷ ಪ್ರೀತಿ ಇತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

 

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us