ರಕ್ಷಿತ್ ಶೆಟ್ಟಿಗೆ ಟ್ರೆಂಡಿಂಗ್ ಆ್ಯಕ್ಟರ್, ರಿಷಬ್​ ಶೆಟ್ಟಿಗೆ ಐಕಾನಿಕ್‍ ಡೈರೆಕ್ಟರ್ ಅವಾರ್ಡ್

‘ಕಾಂತಾರ’ ಸಿನಿಮಾ ಮೂಲಕ ರಿಷಬ್ ಶೆಟ್ಟಿ ಅವರು ದೊಡ್ಡ ಮಟ್ಟದ ಗೆಲುವು ಕಂಡರು. ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ‘777 ಚಾರ್ಲಿ’ ಚಿತ್ರದ ಮೂಲಕ ರಕ್ಷಿತ್‍ ಶೆಟ್ಟಿ ನಟನಾಗಿ, ನಿರ್ಮಾಪಕನಾಗಿ ಗೆದ್ದರು. ಇನ್ನೋವೇಟೀವ್‍ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಇವರಿಗೆ ಅವಾರ್ಡ್ ನೀಡಲಾಗಿದೆ.

ರಕ್ಷಿತ್ ಶೆಟ್ಟಿಗೆ ಟ್ರೆಂಡಿಂಗ್ ಆ್ಯಕ್ಟರ್, ರಿಷಬ್​ ಶೆಟ್ಟಿಗೆ ಐಕಾನಿಕ್‍ ಡೈರೆಕ್ಟರ್ ಅವಾರ್ಡ್
ರಕ್ಷಿತ್-ರಿಷಬ್
Updated By: ರಾಜೇಶ್ ದುಗ್ಗುಮನೆ

Updated on: Oct 14, 2023 | 1:11 PM

ರಕ್ಷಿತ್ ಶೆಟ್ಟಿ ಹಾಗೂ ರಿಷಬ್ ಶೆಟ್ಟಿ ವೃತ್ತಿ ಜೀವನದ ಆರಂಭದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು. ಈಗ ಇಬ್ಬರೂ ನಟರಾಗಿ, ನಿರ್ದೇಶಕರಾಗಿ, ನಿರ್ಮಾಪಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ‘ಇನ್ನೋವೇಟೀವ್‍ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ’ದಲ್ಲಿ ರಿಷಬ್ ಶೆಟ್ಟಿಗೆ ಐಕಾನಿಕ್‍ ಡೈರೆಕ್ಟರ್ ಹಾಗೂ ರಕ್ಷಿತ್ ಶೆಟ್ಟಿಗೆ ಟ್ರೆಂಡಿಂಗ್ ಆ್ಯಕ್ಟರ್ ಅವಾರ್ಡ್ ಸಿಕ್ಕಿದೆ. ಈ ಸಂದರ್ಭದ ಫೋಟೋ ವೈರಲ್ ಆಗಿದೆ.

‘ಕಾಂತಾರ’ ಸಿನಿಮಾ ಮೂಲಕ ರಿಷಬ್ ಶೆಟ್ಟಿ ಅವರು ದೊಡ್ಡ ಮಟ್ಟದ ಗೆಲುವು ಕಂಡರು. ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ‘777 ಚಾರ್ಲಿ’ ಚಿತ್ರದ ಮೂಲಕ ರಕ್ಷಿತ್‍ ಶೆಟ್ಟಿ ನಟನಾಗಿ, ನಿರ್ಮಾಪಕನಾಗಿ ಗೆದ್ದರು. ಇನ್ನೋವೇಟೀವ್‍ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಇವರಿಗೆ ಅವಾರ್ಡ್ ನೀಡಲಾಗಿದೆ.

‘ಇನ್ನೋವೇಟೀವ್‍ ಫಿಲಂ ಅಕಾಡೆಮಿ’ಯನ್ನು ಶರವಣ ಪ್ರಸಾದ್‍ ಸಂಸ್ಥಾಪಿಸಿದ್ದಾರೆ. ಮಾರತ್‍ಹಳ್ಳಿಯ ಇನ್ನೋವೇಟೀವ್‍ ಮಲ್ಟಿಪ್ಲೆಕ್ಸ್​​ನಲ್ಲಿ 6ನೇ ಇನ್ನೋವೇಟೀವ್‍ ಅಂತರರಾಷ್ಟ್ರೀಯ ಚಲನಚಿತ್ರೋತ್ಸ’ದ ಉದ್ಘಾಟನಾ ಸಮಾರಂಭ ಇತ್ತೀಚೆಗೆ ನಡೆದಿದೆ. ಐ.ಎ.ಎಸ್‍. ಅಧಿಕಾರಿ ಅಪೂರ್ವ ಚಂದ್ರ ಮುಖ್ಯ ಅತಿಥಿಗಳಾಗಿ ಈ ಸಮಾರಂಭದಲ್ಲಿ ಭಾಗವಹಿಸಿದರು. ಅವರು ಚಿತ್ರೋತ್ಸವಕ್ಕೆ ಚಾಲನೆ ನೀಡಿದರು.

ಅವಾರ್ಡ್ ಸ್ವೀಕರಿಸಿ ಮಾತನಾಡಿದ ರಿಷಬ್ ಶೆಟ್ಟಿ ಅವರು, ‘ಈ ಗೌರವ ಸಲ್ಲಿಕೆ ಆಗಬೇಕಾಗಿದ್ದು ಕನ್ನಡಿಗರಿಗೆ. ಸಿನಿಮಾ ಯಶಸ್ಸಿಗೆ ಅವರೇ ಕಾರಣ. ಅವರ ಪ್ರತಿಕ್ರಿಯೆಯಿಂದ ಸಿನಿಮಾ ಬೇರೆ ಭಾಷೆಗಳಿಗೂ ತಲುಪಿತು. ನಾನು ಕನ್ನಡಿಗರಿಗೆ ಚಿರಋಣಿ. ಕನ್ನಡ ಚಿತ್ರಗಳಿಗೆ ನಮ್ಮಲ್ಲಿ ಮನ್ನಣೆ ಸಿಗಬೇಕು. ಒಟಿಟಿಯಲ್ಲೂ ನಮ್ಮ ಕನ್ನಡದ ಚಿತ್ರಗಳಿಗೆ ಪ್ರಾಧಾನ್ಯತೆ ಸಿಗುವಂತೆ ಆಗಬೇಕು. ಈ ಸಮಸ್ಯೆ ಬಗೆಹರಿಯಬೇಕು’ ಎಂದು ಐ.ಎ.ಎಸ್‍ ಅಧಿಕಾರಿ ಅಪೂರ್ವ ಚಂದ್ರಗೆ ಮನವಿ ಸಲ್ಲಿಸಿದರು.

ರಕ್ಷಿತ್ ಶೆಟ್ಟಿ ಅವರು ‘777 ಚಾರ್ಲಿ’ ಸಿನಿಮಾ ಬಗ್ಗೆ ಮಾತನಾಡಿದರು. ‘ಈ ಸಿನಿಮಾ ನನ್ನ ಕರಿಯರ್​ನ ಅದ್ಭುತ ಸಿನಿಮಾ. ಪರಂವಾ ಸ್ಟುಡಿಯೋಸ್‍ ಅಡಿಯಲ್ಲಿ ನಿರ್ಮಾಣ ಆದ ಮೊದಲ ಪ್ಯಾನ್‍ ಇಂಡಿಯಾ ಚಿತ್ರ ಇದು. ಈ ಚಿತ್ರ ರಾಷ್ಟ್ರಪ್ರಶಸ್ತಿ ಪಡೆದಿದ್ದು ಖುಷಿ ನೀಡಿದೆ’ ಎಂದಿದ್ದಾರೆ ಅವರು. ರಕ್ಷಿತ್​​ಗೆ ‘ಟ್ರೆಂಡಿಂಗ್‍ ಆ್ಯಕ್ಟರ್’ ಜೊತೆ ಎಂ.ಎಸ್‍.ಕೆ ಟ್ರಸ್ಟ್ ನೀಡುವ ‘ದಾದಾ ಸಾಹೇಬ್‍ ಫಾಲ್ಕೆ- ಎಂ.ಎಸ್‍.ಕೆ ಟ್ರಸ್ಟ್’ ಅವಾರ್ಡ್​ ಕೂಡ ನೀಡಲಾಗಿದೆ.

ಇದನ್ನೂ ಓದಿ: ಮುಂಬೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ರಿಷಬ್ ಶೆಟ್ಟಿಯ ಸಿನಿಮಾ,ಕಾಂತಾರ ಅಲ್ಲ

ನಿರ್ದೇಶಕರಾದ ಭಾರತೀರಾಜ, ರಾಜೇಂದ್ರ ಸಿಂಗ್‍ ಬಾಬು, ಬಣ್ಣದ ಲೋಕದಲ್ಲಿ 50 ವರ್ಷ ಪೂರೈಸಿದ ನಟ ಸಾಯಿಕುಮಾರ್ ಮೊದಲಾದವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗಿದೆ. ಚಿತ್ರೋತ್ಸವದ ಅಧ್ಯಕ್ಷ ರಾಕ್‍ಲೈನ್‍ ವೆಂಕಟೇಶ್‍, ಫಿಲಂ ಫೆಡರೇಶನ್‍ ಆಫ್‍ ಇಂಡಿಯಾದ ಅಧ್ಯಕ್ಷ ರವಿ ಕೊಟ್ಟಾರ್ಕರ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ