ಮೈಸೂರು ಸ್ಯಾಂಡಲ್​ಗೆ ತಮನ್ನಾ ರಾಯಭಾರಿ, ನಟಿ ರಮ್ಯಾ ಟೀಕೆ

Ramya-Tamannaah Bhatia: ತಮನ್ನಾ ಭಾಟಿಯಾ ಅವರನ್ನು ಕರ್ನಾಟಕದ ಹೆಮ್ಮೆಯ ಮೈಸೂರು ಸ್ಯಾಂಡಲ್ ಸೋಪಿಗೆ ರಾಯಭಾರಿ ಅನ್ನಾಗಿ ಮಾಡಿರುವುದು ವಿವಾದ ಎಬ್ಬಿಸಿದೆ. ಹಲವರು ತಮನ್ನಾ ಅವರ ಆಯ್ಕೆಯನ್ನು ಖಂಡಿಸಿದ್ದಾರೆ. ಇದೀಗ ನಟಿ ರಮ್ಯಾ ಸಹ ಚರ್ಚೆಗೆ ಇಳಿದಿದ್ದು, ತಮನ್ನಾ ಆಯ್ಕೆಯನ್ನು ರಮ್ಯಾ ಸಹ ಟೀಕೆ ಮಾಡಿದ್ದು, ಸರ್ಕಾರಕ್ಕೆ ಕೆಲವು ಸಲಹೆಗಳನ್ನು ಸಹ ನೀಡಿದ್ದಾರೆ. ಇಲ್ಲಿದೆ ನೋಡಿ ಮಾಹಿತಿ...

ಮೈಸೂರು ಸ್ಯಾಂಡಲ್​ಗೆ ತಮನ್ನಾ ರಾಯಭಾರಿ, ನಟಿ ರಮ್ಯಾ ಟೀಕೆ
Tamannah Ramya

Updated on: May 24, 2025 | 3:07 PM

ಮೈಸೂರು ಸ್ಯಾಂಡಲ್ (Mysore Sandal) ಕನ್ನಡಿಗರ ಪಾಲಿಗೆ ಕೇವಲ ಸೋಪು ಮಾತ್ರವಲ್ಲ. ಅದು ರಾಜ್ಯದ ಸಂಸ್ಕೃತಿಕ, ಐತಿಹಾಸಿಕ ಶ್ರೀಮಂತಿಕೆಯ ಗುರುತುಗಳಲ್ಲಿ ಒಂದು ಎಂಬಂತಾಗಿದೆ. ಆದರೆ ಇತ್ತೀಚೆಗೆ ಮೈಸೂರು ಸ್ಯಾಂಡಲ್ ಸೋಪು ಚರ್ಚೆಯ ವಿಷಯವಾಗಿದೆ. ತಮನ್ನಾ ಭಾಟಿಯಾ ಅವರನ್ನು ಮೈಸೂರು ಸ್ಯಾಂಡಲ್ ಸೋಪಿಗೆ ರಾಯಭಾರಿ ಆಗಿ ಪರಭಾಷೆ ನಟಿ ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿದ್ದು, ಸುಮಾರು ಆರು ಕೋಟಿ ರೂಪಾಯಿ ಹಣ ನೀಡಿ ಅವರನ್ನು ರಾಯಭಾರಿಯನ್ನಾಗಿಸಲಾಗಿದೆ. ಈ ಬಗ್ಗೆ ಕನ್ನಡಪರ ಸಂಘಟನೆಗಳು, ನೆಟ್ಟಿಗರು, ಬಹುತೇಕ ಕನ್ನಡಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದೀಗ ಜನಪ್ರಿಯ ನಟಿ ಮಾಜಿ ಸಂಸದೆ ರಮ್ಯಾ ಸಹ ತಮನ್ನಾ ಆಯ್ಕೆಯನ್ನು ಟೀಕೆ ಮಾಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಈ ಬಗ್ಗೆ ಸ್ಟೋರಿ ಹಂಚಿಕೊಂಡಿರುವ ನಟಿ ರಮ್ಯಾ, ಇಂದಿನ ಆಧುನಿಕ ಯುಗದಲ್ಲಿ, ಮಾಹಿತಿಯೊಂದನ್ನು ಜನರಿಗೆ ತಲುಪಿಸಲು ಹಲವು ವಿವಿಧ ಕ್ರಿಯಾಶೀಲ ದಾರಿಗಳಿವೆ. ಪ್ರಾಡಕ್ಟ್ ಒಂದನ್ನು ಜನರಿಗೆ ತಲುಪಿಸಲು ಅದಕ್ಕೆ ಸೆಲೆಬ್ರಿಟಿಯೊಬ್ಬರನ್ನು ಆಯ್ಕೆ ಮಾಡಿ ಅವರ ಮೂಲಕವೇ ಪ್ರಚಾರ ಮಾಡಬೇಕು ಎಂಬುದು ಬಹಳ ಹಳೆಯ ಮಾದರಿಯ ಯೋಜನೆ ಮಾತ್ರವಲ್ಲದೆ ಇದು ತೆರಿಗೆದಾರರ ಹಣವನ್ನು ಪೋಲು ಮಾಡಿದಂತೆ’ ಎಂದಿದ್ದಾರೆ ನಟಿ ರಮ್ಯಾ.

ಜನ ಇಂದು ಯಾರೋ ಸೆಲೆಬ್ರಿಟಿ ಪ್ರಚಾರ ಮಾಡಿದ್ದಾರೆ ಎಂಬ ಕಾರಣಕ್ಕೆ ಸೋಪನ್ನು ಖರೀದಿಸುವುದಿಲ್ಲ. ಅವರಿಗೆ ಚೆನ್ನಾಗಿ ಗೊತ್ತಿದೆ. ಆ ಸೋಪು ಬಳಸಿದರೆ ಪ್ರಚಾರ ಮಾಡಿದ ಸೆಲೆಬ್ರಿಟಿ ರೀತಿ ನಾನು ಆಗುವುದಿಲ್ಲ ಎಂದು. ಪ್ರಾಡೆಕ್ಟ್ ಚೆನ್ನಾಗಿದ್ದರೆ ಬಳಕೆದಾರರು ನಂಬಿಕಸ್ತ ಗ್ರಾಹಕರಾಗುತ್ತಾರೆ. ಮೈಸೂರು ಸ್ಯಾಂಡಲ್​ ಎಂಬುದು ಒಂದೊಳ್ಳೆ ಪ್ರಾಡಕ್ಟ್ ಮಾತ್ರವೇ ಅಲ್ಲ, ಇತಿಹಾಸವನ್ನು ಹೊಂದಿರುವ ಪ್ರಾಡಕ್ಟ್ ಆಗಿದೆ. ಹಾಗಾಗಿ ಅದಕ್ಕೆ ಲಾಯಲ್ ಗ್ರಾಹಕರು ಇದ್ದಾರೆ’ ಎಂದಿದ್ದಾರೆ ನಟಿ ರಮ್ಯಾ.

ಇದನ್ನೂ ಓದಿ:ಚಿತ್ರರಂಗದಲ್ಲಿ ಹೊಸ ಹೆಜ್ಜೆ ಇಡಲು ಮುಂದಾದ ತಮನ್ನಾ ಭಾಟಿಯಾ

‘ಮೈಸೂರು ಸ್ಯಾಂಡಲ್ ಸೋಪು ಬಳಸುತ್ತಿರುವ ಪ್ರತಿಯೊಬ್ಬ ಕನ್ನಡಿಗನೂ ಸಹ ಈ ಸೋಪಿನ ರಾಯಭಾರಿ, ಪ್ರತಿಯೊಬ್ಬ ಕನ್ನಡಿಗನೂ ಸಹ ಮೈಸೂರು ಸ್ಯಾಂಡಲ್ ಸೋಪಿನ ರಾಯಭಾರಿ. ಕನ್ನಡಿಗನೇ ಮೈಸೂರು ಸ್ಯಾಂಡಲ್ ಸೋಪಿನ ಮಹತ್ವವನ್ನು, ಅದ್ಭುತತೆಯನ್ನು ದೇಶ, ವಿದೇಶಗಳಲ್ಲಿ ಸಾರುತ್ತಾ ಬಂದಿದ್ದಾನೆ ಅದೂ ಉಚಿತವಾಗಿ. ಮೈಸೂರು ಸ್ಯಾಂಡಲ್ ಸೋಪು ಕನ್ನಡಿಗರ ಹೆಮ್ಮೆಯ ಸಂಕೇತ’ ಎಂದಿದ್ದಾರೆ.

ಆಪಲ್ ಕಂಪೆನಿ ವಿಶ್ವದ ಅತ್ಯಂತ ದೊಡ್ಡ ಕಂಪೆನಿ ಆದರೆ ಆ ಸಂಸ್ಥೆ ಯಾವುದೇ ರಾಯಭಾರಿಯನ್ನು ಹೊಂದಿಲ್ಲ. ಡೌವ್ ಸೋಪುಗಳು ಸಹ ರಾಯಭಾರಿಯನ್ನು ಹೊಂದಿಲ್ಲ, ತನ್ನ ಗ್ರಾಹಕರನ್ನೇ ರಾಯಭಾರಿಗಳನ್ನಾಗಿ ಬಳಸಿ ಮಾಡುವ ಅವರ ಜಾಹೀರಾತು ನನಗೆ ಬಹಳ ಇಷ್ಟವಾಗುತ್ತದೆ’ ಎಂದಿದ್ದಾರೆ ರಮ್ಯಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:07 pm, Sat, 24 May 25