‘ಧುರಂಧರ್’ ರಿಲೀಸ್​ಗೂ ಮೊದಲೇ ರಣವೀರ್​ಗೆ ಬೆಂಗಳೂರಲ್ಲಿ ಎದುರಾಯ್ತು ದೊಡ್ಡ ಸಂಕಷ್ಟ

ನಟ ರಣವೀರ್ ಸಿಂಗ್, 'ದೈವ'ವನ್ನು 'ಹೆಣ್ಣು ದೆವ್ವ' ಎಂದು ಕರೆದು ವಿವಾದಕ್ಕೆ ಸಿಲುಕಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ವಕೀಲ ಪ್ರಶಾಂತ್ ಮೇತಲ್ ಅವರು ದೂರು ದಾಖಲಿಸಿ, ಎಫ್‌ಐಆರ್ ದಾಖಲಿಸಲು ಆಗ್ರಹಿಸಿದ್ದಾರೆ. ಕ್ಷಮೆ ಕೇಳಿದ್ದರೂ, ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಅವರ ಹೊಸ ಸಿನಿಮಾ 'ಧುರಂಧರ್' ಬಿಡುಗಡೆಗೂ ಮುನ್ನವೇ ಈ ವಿವಾದ ಚಿತ್ರದ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ.

‘ಧುರಂಧರ್’ ರಿಲೀಸ್​ಗೂ ಮೊದಲೇ ರಣವೀರ್​ಗೆ ಬೆಂಗಳೂರಲ್ಲಿ ಎದುರಾಯ್ತು ದೊಡ್ಡ ಸಂಕಷ್ಟ
ರಣವೀರ್
Updated By: ರಾಜೇಶ್ ದುಗ್ಗುಮನೆ

Updated on: Dec 04, 2025 | 8:20 AM

ನಟ ರಣವೀರ್ ಸಿಂಗ್ (Ranveer Singh) ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಆಗಿದ್ದು ಅವರು ನೀಡಿದ ಹೇಳಿಕೆ. ‘ದೈವವನ್ನು ದೆವ್ವ’ ಎಂದು ಕರೆದಿದ್ದರು. ದೈವವನ್ನು ಅನುಕರಿಸಲು ಹೋಗಿ ಟೀಕೆಗೆ ಗುರಿಯಾಗಿದ್ದರು. ಇದರ ಸಂಬಂಧ ಅವರ ವಿರುದ್ಧ ನಾನಾ ಕಡೆಗಳಲ್ಲಿ ದೂರು ದಾಖಲಾಗುತ್ತಿದೆ. ಈಗ ಬೆಂಗಳೂರಿನಲ್ಲೂ ಅವರ ಮೇಲೆ ದೂರು ನೀಡಲಾಗಿದೆ. ಸಿನಿಮಾ ರಿಲೀಸ್​ಗೂ ಮೊದಲೇ ಅವರು ಸಾಕಷ್ಟು ಸಂಕಷ್ಟ ಎದುರಿಸುತ್ತಿದ್ದಾರೆ.

ಇತ್ತಿಚೇಗೆ ಗೋವಾದಲ್ಲಿ ಅಂತಾರಾಷ್ಟ್ರೀಯ ಸಿನಿಮೋತ್ಸವ ನಡೆದಿದೆ. ಈ ವೇಳೆ ರಣವೀರ್ ಸಿಂಗ್ ಅವರು ದೈವದ ಅವಹೇಳನ ಮಾಡಿದ್ದಾರೆ. ಉಳ್ಳಾಳ್ತಿ ದೈವವನ್ನು ‘ಫೀಮೇಲ್ ಗೋಸ್ಟ್ ’ ಅಂದರೆ ‘ಹೆಣ್ಣು ದೆವ್ವ’ ಎಂದು ಸಂಬೋಧಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅವರು ಕ್ಷಮೆ ಕೂಡ ಕೇಳಿದ್ದಾರೆ. ಆದಾಗ್ಯೂ ಅವರ ವಿರುದ್ಧ ದೂರು ದಾಖಲಾಗಿದೆ. ಕ್ಷಮೆ ಒಪ್ಪಲು ಸಾಧ್ಯವಿಲ್ಲ ಎಂಬ ಮಾತು ಕೇಳಿ ಬಂದಿದೆ.

ಈ ಹೇಳಿಕೆ ಸಂಬಂಧ ವಕೀಲ ಪ್ರಶಾಂತ್ ಮೇತಲ್ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ರಣವೀರ್ ಸಿಂಗ್ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣದಲ್ಲಿ ಎಫ್​ಐಆರ್ ದಾಖಲಿಸುವಂತೆ ಪ್ರಶಾಂತ್ ಆಗ್ರಹಿಸಿದ್ದಾರೆ.

‘ರಣವೀರ್ ಸದ್ಯ ಕ್ಷಮೇ ಕೇಳಿದ್ದಾರೆ. ಆದರೆ, ಅದನ್ನ ಒಪ್ಪಲು ಸಾಧ್ಯವಿಲ್ಲ. ರಣವೀರ್ ದಂಡನಾರ್ಹ ಅಪರಾಧ ಮಾಡಿದ್ದು ಅವರಿಗೆ ಕಾನೂನು ರೀತಿ ಶಿಕ್ಷೆ ಆಗಬೇಕು’ ಎಂಬುದು ಪ್ರಶಾಂತ್ ಅವರ ವಾದ.

ಇದನ್ನೂ ಓದಿ: ದೈವಕ್ಕೆ ಅವಮಾನ ಮಾಡಿದ ಆರೋಪ; ಬೇಷರತ್ ಕ್ಷಮೆ ಕೇಳಿದ ರಣವೀರ್ ಸಿಂಗ್

ರಣವೀರ್ ಸಿಂಗ್ ನಟನೆಯ ‘ಧುರಂಧರ್ ಸಿನಿಮಾ ಈ ವಾರ (ಡಿಸೆಂಬರ್ 5) ರಿಲೀಸ್ ಆಗುತ್ತಿದೆ. ಚಿತ್ರಕ್ಕೆ ಮೊದಲೇ ಹೈಪ್ ಸೃಷ್ಟಿ ಆಗುತ್ತಿಲ್ಲ. ಈ ಮಧ್ಯದಲ್ಲಿ ಈ ರೀತಿಯ ವಿವಾದಗಳು ಸಿನಿಮಾ ಬಿಸ್ನೆಸ್​ಗೆ ಮತ್ತಷ್ಟು ಹೊಡೆತ ಕೊಡುತ್ತಿದೆ. ಸಿನಿಮಾದ ಅವಧಿ 3 ಗಂಟೆ 36 ನಿಮಿಷ ಇದೆ. ಇಷ್ಟು ದೀರ್ಘ ಸಿನಿಮಾ ವೀಕ್ಷಿಸೋದು ಹೇಗೆ ಎಂಬುದು ವೀಕ್ಷಕರ ಪ್ರಶ್ನೆಯಾಗಿದೆ. ಸಿನಿಮಾಗೆ ನೆಗೆಟಿವ್ ವಿಮರ್ಶೆ ಸಿಕ್ಕರೆ ನಿರ್ಮಾಪಕರು ದೊಡ್ಡ ನಷ್ಟ ಅನುಭವಿಸಬೇಕಾಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.