
ದುಬೈನಿಂದ ಚಿನ್ನ ಕಳ್ಳ ಸಾಗಣೆ (Gold Smuggling) ಮಾಡಿದ ಆರೋಪದಲ್ಲಿ ಸಿಕ್ಕಿ ಬಿದ್ದಿರುವ ನಟಿ ರನ್ಯಾ ರಾವ್ (Ranya Rao) ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಇಂದು (ಮಾರ್ಚ್ 12) ಬೆಂಗಳೂರಿನ ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ಈ ಅರ್ಜಿ ವಿಚಾರಣೆ ನಡೆದಿದೆ. ಡಿಆರ್ಐ (DRI) ಅಧಿಕಾರಿಗಳ ಪರ ವಕೀಲರು ಹಾಗೂ ರನ್ಯಾ ರಾವ್ ಪರ ವಕೀಲರ ವಾದವನ್ನು ಆಲಿಸಲಾಗಿದೆ. ರನ್ಯಾ ಅವರ ಜಾಮೀನು ಅರ್ಜಿ ಆದೇಶವನ್ನು ಮಾರ್ಚ್ 14ಕ್ಕೆ ಕಾಯ್ದಿರಿಸಲಾಗಿದೆ. ಅಲ್ಲಿಯವರೆಗೂ ರನ್ಯಾ ಅವರು ಜೈಲಿನಲ್ಲಿ ಕಾಲ ಕಳೆಯುವುದು ಅನಿವಾರ್ಯ ಆಗಿದೆ. ರನ್ಯಾಗೆ ಜಾಮೀನು ನೀಡಲೇಬಾರದು ಎಂದು ಡಿಆರ್ಐ ಅಧಿಕಾರಿಗಳ ಪರ ವಕೀಲರಾದ ಮಧು ಎನ್. ರಾವ್ ಅವರು ವಾದ ಮಂಡಿಸಿದ್ದಾರೆ.
‘ಮಹಿಳೆಯಾಗಿದ್ದರೂ ಆಕೆಯ ಕೃತ್ಯವನ್ನು ಪರಿಗಣಿಸಿ ಜಾಮೀನು ನಿರಾಕರಿಸಬೇಕು. ರಾಧಿಕಾ ಅಗರ್ವಾಲ್ ಕೇಸ್ನ ಸುಪ್ರೀಂ ಕೋರ್ಟ್ ತೀರ್ಪು ಪರಿಗಣಿಸಬೇಕು. ದೇಶ ತೊರೆಯುವ ಸಾಧ್ಯತೆ ಇದೆ. ಸಾಕ್ಷ್ಯನಾಶದ ಸಾಧ್ಯತೆ ಪರಿಗಣಿಸಬಹುದು. ದೊಡ್ಡ ಮಟ್ಟದ ಸ್ಮಗ್ಲಿಂಗ್ ಆಗಿರುವುದನ್ನು ಪರಿಗಣಿಸಬೇಕು. ತನಿಖಾ ತಂಡ ಈ ಹಂತದಲ್ಲಿ ಸಂಗ್ರಹಿಸಿದ ದಾಖಲೆ ಸಂಶಯಿಸುವಂತಿಲ್ಲ. ಹೇಗಿದೆಯೋ ಹಾಗೆಯೇ ಕೋರ್ಟ್ ಅದನ್ನು ಪರಿಗಣಿಸಬೇಕು. ಆರ್ಟಿಕಲ್ 22ರಂತೆ ಬಂಧನಕ್ಕೆ ಕಾರಣಗಳನ್ನು ನೀಡಲಾಗಿದೆ. ಮಾರ್ಚ್ 4ರಂದು 4 ಗಂಟೆಗೆ ಬಂಧಿಸಿ ಸಂಜೆ 7.15ಕ್ಕೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದೆ’ ಎಂದು ಜಾನ್ ಮೊಸೆಸ್ ಕೇಸ್ನಲ್ಲಿನ ತೀರ್ಪು ಉಲ್ಲೇಖಿಸಿ ಡಿಆರ್ಐ ಪರ ವಕೀಲ ಮಧು ರಾವ್ ವಾದಿಸಿದ್ದಾರೆ.
‘ಕಸ್ಟಡಿ ಅವಧಿಯಲ್ಲಿ ರನ್ಯಾ ರಾವ್ ತನಿಖೆಗೆ ಸಹಕರಿಸಿಲ್ಲ. 2ನೇ ಆರೋಪಿಯನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ಮಾರ್ಚ್ 4ರ ಬೆಳಗ್ಗೆ ರನ್ಯಾ ರಾವ್ ಮನೆಯಲ್ಲಿ ಶೋಧ ನಡೆಸಲಾಯಿತು. 2.67 ಕೋಟಿ ನಗದು, 2.6 ಕೋಟಿ ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ. ರನ್ಯಾ ರಾವ್ಗೆ ಜಾಮೀನು ನೀಡಲು ಯಾವುದೇ ಯೋಗ್ಯ ಕಾರಣಗಳಿಲ್ಲ. 12.56 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆಯಾಗಿದೆ. ಸ್ಟೇಟ್ ಪೊಲೀಸ್ ಪ್ರೋಟೋಕಾಲ್ ಆಫೀಸರ್ ನೆರವು ಪಡೆದು ಸ್ಮಗ್ಲಿಂಗ್ ಆಗಿದೆ. ಹೀಗಾಗಿ ಇದೊಂದು ಗಂಭೀರ ಅಪರಾಧವಾಗಿದೆ. ರನ್ಯಾ ಬಳಿ ದುಬೈ ನಿವಾಸಿಯಾಗಿರುವ ಐಡೆಂಟಿಟಿ ಕಾರ್ಡ್ ಇದೆ. ಆಕೆ ದೇಶ ಬಿಟ್ಟು ಪರಾರಿಯಾಗುವ ಸಾಧ್ಯತೆ ಇದೆ’ ಎಂದು ಡಿಆರ್ಐ ಪರ ವಕೀಲರು ವಾದ ಮಾಡಿದ್ದಾರೆ.
ಇದನ್ನೂ ಓದಿ: ರನ್ಯಾ ಕಾರಣಕ್ಕೆ ಸುದೀಪ್ಗೆ ಆದ ಕಷ್ಟ ಒಂದೆರಡಲ್ಲ: ಶಾಕಿಂಗ್ ವಿಚಾರ ತಿಳಿಸಿದ ರವಿ ಶ್ರೀವತ್ಸ
‘ಚಿನ್ನ ಕಳ್ಳಸಾಗಣೆಯ ಪ್ರಮಾಣವನ್ನೂ ಗಮನಿಸಬೇಕು. ಹವಾಲಾ ಮೂಲಕ ಚಿನ್ನದ ಬದಲು ನಗದು ವರ್ಗಾವಣೆ ಆಗಿದೆ. ಈ ಹವಾಲಾ ಬಗ್ಗೆಯೂ ತನಿಖೆ ನಡೆಸಬೇಕಿದೆ. ಇಷ್ಟು ಚಿನ್ನ ಖರೀದಿಸಲು ಹಣ ಎಲ್ಲಿಂದ ಬಂತು? ಹಣ ಹೇಗೆ ವರ್ಗಾಯಿಸಲಾಯಿತು ಎಂಬ ಬಗ್ಗೆ ತನಿಖೆ ಅಗತ್ಯ. ಇದರಲ್ಲಿ ಸಿಂಡಿಕೇಟ್ ಭಾಗಿಯಾಗಿರುವ ಬಗ್ಗೆಯೂ ತನಿಖೆಯಾಗಬೇಕಿದೆ. ಪ್ರಾಥಮಿಕ ತನಿಖೆಯಲ್ಲಿ ಈಕೆಗೆ ಅಂತಾರಾಷ್ಟ್ರೀಯ ಲಿಂಕ್ ಬಗ್ಗೆಯೂ ಪರಿಶೀಲನೆ ಮಾಡಲಾಗಿದೆ. ಹವಾಲಾ ದಂಧೆ ಬಗ್ಗೆಯೂ ತನಿಖೆಯಾಗುತ್ತಿದೆ. ರಾಷ್ಟ್ರೀಯ ಭದ್ರತೆಯ ವಿಷಯವೂ ಇರುವುದರಿಂದ ಜಾಮೀನು ನೀಡಬಾರದು’ಎಂದು ವಾದ ಮಾಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.