‘ಜೈಲಿನಲ್ಲಿ ದರ್ಶನ್​ ಮೌನ; 1 ಸೆಕೆಂಡ್​​ ಮಾತ್ರ ಮಾತಾಡಿದ್ದು’: ವಿನೋದ್ ಪ್ರಭಾಕರ್​

ನಟ ದರ್ಶನ್​ ಅವರನ್ನು ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿನೋದ್ ಪ್ರಭಾಕರ್​ ಭೇಟಿ ಮಾಡಿದ್ದಾರೆ. ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ‘ಇದು ಬಹಳ ಗಂಭೀರವಾಗಿದೆ. ಪೊಲೀಸ್​ ತನಿಖೆ ನಡೆಯುತ್ತಿದೆ. ಅದಕ್ಕೆ ಯಾವುದೇ ತೊಂದರೆ ಆಗಬಾರದು. ಎಲ್ಲರಿಗೂ ನ್ಯಾಯ ಸಿಗಬೇಕು. ಯಾರೂ ಕೂಡ ಕಾನೂನಿಗಿಂತ ದೊಡ್ಡವರಲ್ಲ’ ಎಂದು ವಿನೋದ್​ ಪ್ರಭಾಕರ್​ ಹೇಳಿದ್ದಾರೆ.

‘ಜೈಲಿನಲ್ಲಿ ದರ್ಶನ್​ ಮೌನ; 1 ಸೆಕೆಂಡ್​​ ಮಾತ್ರ ಮಾತಾಡಿದ್ದು’: ವಿನೋದ್ ಪ್ರಭಾಕರ್​
ವಿನೋದ್​ ಪ್ರಭಾಕರ್, ದರ್ಶನ್​

Updated on: Jun 24, 2024 | 3:46 PM

ರೇಣುಕಾ ಸ್ವಾಮಿಯ (Renuka Swamy) ಕೊಲೆ ಆರೋಪದಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ದರ್ಶನ್​ ಅವರನ್ನು ನೋಡಲು ವಿನೋದ್​ ಪ್ರಭಾಕರ್​ ಬಂದಿದ್ದಾರೆ. ಇಂದು (ಜೂನ್ 24) ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್​ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳ ಜೊತೆ ವಿನೋದ್​ ಪ್ರಭಾಕರ್​ (Vinod Prabhakar) ಮಾತನಾಡಿದರು. ಇಷ್ಟು ದಿನ ದರ್ಶನ್​ ಅವರನ್ನು ನೋಡಲು ಬಂದಿಲ್ಲ ಹಾಗೂ ಸೋಶಿಯಲ್​ ಮೀಡಿಯಾದಲ್ಲೂ ವಿನೋದ್​ ಪ್ರಭಾಕರ್​ ಯಾವುದೇ ಪೋಸ್ಟ್ ಹಾಕಿಲ್ಲ ಎಂದು ಕೆಲವರು ಟೀಕೆ ಮಾಡಿದ್ದರು. ಆ ಬಗ್ಗೆಯೂ ಈಗ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಜೈಲಿನ ಒಳಗೆ ದರ್ಶನ್​ (Darshan) ಅವರು ಮೌನವಾಗಿದ್ದಾರೆ ಎಂದು ಕೂಡ ವಿನೋದ್​ ಪ್ರಭಾಕರ್​ ತಿಳಿಸಿದ್ದಾರೆ.

‘ರೇಣುಕಾ ಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಬೇಕು. ಅವರ ಪತ್ನಿ ಗರ್ಭಿಣಿ ಆಗಿದ್ದಾರೆ. ಅವರ ಕುಟುಂಬಕ್ಕೆ ಭಗವಂತ ಧೈರ್ಯ ಕೊಡಲಿ ಅಂತ ನಾನು ಕೇಳಿಕೊಳ್ಳುತ್ತೇನೆ’ ಎನ್ನುವ ಮೂಲಕ ವಿನೋದ್​ ಪ್ರಭಾಕರ್​ ಮಾತು ಪ್ರಾರಂಭಿಸಿದ್ದಾರೆ. ‘ಇದು ಆಗಬಾರದಾಗಿತ್ತು. ನಿಮಗೆಲ್ಲ ಎಷ್ಟು ಗೊತ್ತಿದೆಯೋ ನನಗೂ ಅಷ್ಟೇ ಗೊತ್ತಿರುವುದು. ಯಾಕೆಂದರೆ, ನಾನು ದರ್ಶನ್​ ಅವರನ್ನು ಭೇಟಿ ಮಾಡಿ 4 ತಿಂಗಳು ಆಗಿತ್ತು. ಕೊನೆಯದಾಗಿ ಬರ್ತ್​ಡೇ ಸಮಯದಲ್ಲಿ ಅವರನ್ನು ಭೇಟಿ ಆಗಿದ್ದೆ’ ಎಂದಿದ್ದಾರೆ ವಿನೋದ್​ ಪ್ರಭಾಕರ್​.

‘ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಯ ಬಳಿ ಭೇಟಿ ಮಾಡಲು ತೆರಳಿದ್ದೆ. ಅಲ್ಲಿ ಸಾಧ್ಯವಾಗಲಿಲ್ಲ. ಆದರೆ ಇಂದು ಇಲ್ಲಿ ಭೇಟಿ ಮಾಡಿಕೊಂಡು ಬಂದಿದ್ದೇನೆ. ಅವರು ಮೌನವಾಗಿದ್ದರು. ನಾನು ಸುಮ್ಮನೆ ವಿಶ್​ ಮಾಡಿದೆ. ಒಂದೇ ಸೆಕೆಂಡ್​ ಮಾತಾಡಿದರು. ಟೈಗರ್​ ಅಂತ ಅಂದರು, ನಾನು ಬಾಸ್​ ಅಂದೆ. ಅದನ್ನು ಬಿಟ್ಟು ಅವರು ಏನೂ ಮಾತನಾಡಿಲ್ಲ. ಶೇಕ್​ ಹ್ಯಾಂಡ್​ ಮಾಡಿ ಬಂದೆ’ ಎಂದು ವಿನೋದ್​ ಪ್ರಭಾಕರ್​ ಹೇಳಿದ್ದಾರೆ.

ಇದನ್ನೂ ಓದಿ: ದರ್ಶನ್​ ಖೈದಿ ಸಂಖ್ಯೆ 6106; ಈ ನಂಬರ್​ನಲ್ಲೇ ವಾಹನ ನೋಂದಣಿಗೆ ಹೆಚ್ಚಿದೆ ಬೇಡಿಕೆ

‘ಬೇರೆ ಸಂದರ್ಭಗಳಲ್ಲಿ ನಾನು ಅವರನ್ನು ಭೇಟಿ ಮಾಡಿದ್ದೆ. ಆದರೆ ಈಗ ಏನು ಹೇಳಬೇಕು ತಿಳಿಯಲಿಲ್ಲ. ನನ್ನನ್ನು ಪ್ರತ್ಯೇಕವಾಗಿ ಒಂದು ರೂಮಿನಲ್ಲಿ ಕೂರಿಸಿದ್ದರು. ವಿಜಯಲಕ್ಷ್ಮಿ ಅಥವಾ ವಿನೀಶ್​ ಬಂದಿದ್ದು ನನಗೆ ಗೊತ್ತಿಲ್ಲ. ಬೇರೆ ಯಾರು ಬಂದಿದ್ದಾರೆ ಅಂತ ನಾನು ನೋಡಲಿಲ್ಲ’ ಎಂದಿದ್ದಾರೆ ವಿನೋದ್​ ಪ್ರಭಾಕರ್​.

‘ಕೆಲವು ದಿನಗಳಿಂದ ನಾನು ನೋಡುತ್ತಿದ್ದೇನೆ. ವಿನೋದ್​ ಪ್ರಭಾಕರ್​ ಬಂದಿಲ್ಲ, ಹೇಳಿಕೆ ನೀಡಲ್ಲ, ಎಲ್ಲಿಯೂ ಪೋಸ್ಟ್​ ಹಾಕಿಲ್ಲ ಅಂತ ಜನರು ಹೇಳುತ್ತಿದ್ದಾರೆ. ಪೋಸ್ಟ್​ ಹಾಕುವುದರಿಂದ ಈ ಸಮಸ್ಯೆ ಬಗೆಹರಿಯುವುದಾಗಿದ್ದರೆ ನಾನೇ ಒಂದು ಲಕ್ಷ ಪೋಸ್ಟ್​ ಹಾಕುತ್ತಿದ್ದೆ. ಇದು ಬಹಳ ಗಂಭೀರವಾಗಿದೆ. ಪೊಲೀಸ್​ ತನಿಖೆ ನಡೆಯುತ್ತಿದೆ. ಅದಕ್ಕೆ ಯಾವುದೇ ತೊಂದರೆ ಆಗಬಾರದು. ನಮಗೆ ಎಷ್ಟು ಗೊತ್ತಿದೆಯೋ ಅಷ್ಟು ಮಾತ್ರ ನಾವು ಹೇಳಬೇಕು. ದರ್ಶನ್​ ಅವರನ್ನು ಭೇಟಿ ಮಾಡುವ ತನಕ ನಾನು ಮಾತನಾಡಬಾರದು ಅಂತ ಇದ್ದೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಎಲ್ಲರಿಗೂ ನ್ಯಾಯ ಸಿಗಬೇಕು. ಎಲ್ಲರಿಗೂ ಒಳ್ಳೆಯದಾಗಬೇಕು. ದೇವರ ಮೇಲೆ ನನಗೆ ಅಪಾರವಾದ ಭಕ್ತಿ ಇದೆ’ ಎಂದು ಹೇಳಿದ್ದಾರೆ ವಿನೋದ್​ ಪ್ರಭಾಕರ್​.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us