
ಸ್ಯಾಂಡಲ್ವುಡ್ನ ‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ ನಿರ್ದೇಶನ ಮಾಡಲಿರುವ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಬಿಗ್ ಬಜೆಟ್ ಸಿನಿಮಾ ‘ರಿಚರ್ಡ್ ಆ್ಯಂಟನಿ’ ಮೇಲೆ ಇಡೀ ಕರುನಾಡಿಗೆ ಭಾರಿ ನಿರೀಕ್ಷೆಯಿದೆ. ಚಿತ್ರ ಘೋಷಣೆಯಾಗಿ ಕೆಲವು ವರ್ಷಗಳು ಕಳೆದಿದ್ದರೂ ಯಾವುದೇ ಪ್ರಮುಖ ಅಪ್ಡೇಟ್ ಸಿಗದೇ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ, ಚಿತ್ರದ ಸಂಗೀತ ನಿರ್ದೇಶಕರಾದ ಬಿ. ಅಜನೀಶ್ ಲೋಕನಾಥ್ (Ajaneesh Lokanath) ‘ರಿಚರ್ಡ್ ಆ್ಯಂಟನಿ’ ಬಗ್ಗೆ ಬಿಗ್ ಅಪ್ಡೇಟ್ ಒಂದನ್ನು ನೀಡಿದ್ದಾರೆ.
ಇತ್ತೀಚೆಗೆ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವೇದಿಕೆ ಮೇಲೆ ಮಾತನಾಡಿದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರಿಗೆ ಚಿತ್ರದ ಬಗ್ಗೆ ಪ್ರಶ್ನೆ ಎದುರಾಯಿತು. ಇದಕ್ಕೆ ಅತ್ಯಂತ ಉತ್ಸಾಹದಿಂದ ಉತ್ತರಿಸಿದ ಅವರು ಚಿತ್ರದ ಪ್ರಸ್ತುತ ಸ್ಥಿತಿಯ ಬಗ್ಗೆ ಮಾಹಿತಿ ಹಂಚಿಕೊಂಡರು. ‘ರಿಚರ್ಡ್ ಆ್ಯಂಟನಿ ಚಿತ್ರಕ್ಕೆ ನಾನು ರೆಡಿಯಾಗಿದ್ದೀನಿ, ರಕ್ಷಿತ್ ಶೆಟ್ಟಿ ಅವರು ಕೂಡ ರೆಡಿಯಾಗಿದ್ದಾರೆ. ಅಭಿಮಾನಿಗಳೂ ಸೇರಿದಂತೆ ಚಿತ್ರತಂಡದ ಪ್ರತಿಯೊಬ್ಬರೂ ಸಜ್ಜಾಗಿದ್ದಾರೆ. ಈಗ ಕೇವಲ ಶೂಟಿಂಗ್ ಆರಂಭವಾಗುವುದು ಒಂದೇ ಬಾಕಿ ಉಳಿದಿದೆ’ ಎಂದು ಅಜನೀಶ್ ಲೋಕನಾಥ್ ತಿಳಿಸಿದರು.
ಇದನ್ನೂ ಓದಿ: ‘ಕಾಂತಾರ’ ಹಾಡಿನ ಟ್ಯೂನ್ ಕದ್ದಿದ್ದು ಎಂದವರಿಗೆ ಉತ್ತರ ಕೊಟ್ಟ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್
ಚಿತ್ರದ ಔಟ್ಪುಟ್ ಹಾಗೂ ಕಥೆಯ ಮೇಲಿರುವ ಭರವಸೆಯ ಬಗ್ಗೆ ಮಾತನಾಡುತ್ತಾ, ‘ನನಗೆ ಒಂದು ವಿಷಯದಲ್ಲಿ ಭಾರಿ ನಂಬಿಕೆಯಿದೆ. ರಿಚರ್ಡ್ ಆ್ಯಂಟನಿ ಸಿನಿಮಾ ತೆರೆಗೆ ಬಂದಾಗ ಅದು ಕೇವಲ ಸಿನಿಮಾವಾಗಿರದೆ ಒಂದು ನ್ಯೂಕ್ಲಿಯರ್ ಬಾಂಬ್ ತರಹ ಧೂಳೆಬ್ಬಿಸಲಿದೆ. ಅಂತಹ ಒಂದು ದೊಡ್ಡ ಬ್ಯಾಂಗ್ ಹಾಗೂ ಅದ್ಭುತ ಕಲ್ಪನೆಯೊಂದಿಗೆ ರಕ್ಷಿತ್ ಶೆಟ್ಟಿ ಅವರು ಬರಲಿದ್ದಾರೆ’ ಎಂದು ಅಜನೀಶ್ ಹೇಳಿದರು.
ಚಿತ್ರದ ಪ್ರತಿಯೊಬ್ಬ ತಂತ್ರಜ್ಞರು ‘ರಿಚರ್ಡ್ ಆ್ಯಂಟನಿ’ ಸಿನಿಮಾಗಾಗಿ ಕೆಲಸ ಮಾಡಲು ಕಾತರದಿಂದ ಕಾಯುತ್ತಿದ್ದು, ಆ ಕ್ಷಣಕ್ಕಾಗಿ ತಾವು ಕೂಡ ಕೌಂಟ್ಡೌನ್ ಆರಂಭಿಸಿರುವುದಾಗಿ ಅವರು ಹಂಚಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಅತ್ಯಂತ ಯಶಸ್ವಿ ಚಿತ್ರ ‘ಉಳಿದವರು ಕಂಡಂತೆ’ ಸಿನಿಮಾದ ಮುಂದುವರಿದ ಭಾಗವಾಗಿ ಈ ‘ರಿಚರ್ಡ್ ಆ್ಯಂಟನಿ’ ಮೂಡಿಬರಲಿದೆ.’ರಿಚ್ಚಿ’ ಎಂಬ ಐಕಾನಿಕ್ ಪಾತ್ರದ ಮೇಲೆ ಕಥೆ ಸಾಗಲಿದೆ. ಅಜನೀಶ್ ಅವರ ಈ ಮಾತುಗಳು ಸದ್ಯ ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ದುಪ್ಪಟ್ಟು ಮಾಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.