‘ಕೆಜಿಎಫ್​ 2’ ರಿಲೀಸ್​ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸಂಜಯ್​ ದತ್​

| Updated By: ರಾಜೇಶ್ ದುಗ್ಗುಮನೆ

Updated on: Jan 13, 2022 | 7:49 PM

2022ರಲ್ಲಿ ಸಂಜಯ್​ ದತ್​ ನಟನೆಯ ಮೂರು ಸಿನಿಮಾಗಳು ತೆರೆಗೆ ಬರಬೇಕಿದೆ. ಈ ಸಿನಿಮಾಗಳ ರಿಲೀಸ್​ ದಿನಾಂಕಗಳು ಮುಂದಕ್ಕೆ ಹೋಗಬಹುದೇ ಎನ್ನುವ ಅನುಮಾನ ಮೂಡಿದೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

‘ಕೆಜಿಎಫ್​ 2’ ರಿಲೀಸ್​ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸಂಜಯ್​ ದತ್​
Follow us on

ಕರ್ನಾಟಕದಲ್ಲಿ ಕೊವಿಡ್​ ಪ್ರಕರಣಗಳು ಹೆಚ್ಚುತ್ತಲೇ ಇದೆ. ಇಂದು (ಜನವರಿ 13) ರಾಜ್ಯದಲ್ಲಿ ಒಂದೇ ದಿನ 25 ಸಾವಿರ ಪ್ರಕರಣಗಳು ವರದಿ ಆಗಿವೆ. ಹೀಗಾಗಿ, ರಾಜ್ಯದಲ್ಲಿ ಮತ್ತೆ ಲಾಕ್​ಡೌನ್​ ಆಗುವ ಭಯ ಕಾಡಿದೆ. ಹಾಗಾದಲ್ಲಿ ಮತ್ತೆ ಚಿತ್ರಮಂದಿರಗಳನ್ನು ಸಂಪೂರ್ಣವಾಗಿ ಮುಚ್ಚಲಾಗುತ್ತದೆ. ಆ ಬಳಿಕ ಮತ್ತೆ ಥಿಯೇಟರ್​​ಗಳು ಓಪನ್​ ಆಗೋಕೆ ಹಲವು ತಿಂಗಳೇ ಬೇಕಾಗಬಹುದು. ಹಾಗಾದಲ್ಲಿ ‘ಕೆಜಿಎಫ್​ 2’ ರಿಲೀಸ್ ಮತ್ತೆ ವಿಳಂಬವಾಗಬಹುದು. ಈಗ ಈ ಬಗ್ಗೆ ‘ಕೆಜಿಎಫ್​ 2’ ವಿಲನ್​, ಬಾಲಿವುಡ್​ ನಟ ಸಂಜಯ್​ ದತ್​ ಮಾತನಾಡಿದ್ದಾರೆ.

2022ರಲ್ಲಿ ಸಂಜಯ್​ ದತ್​ ನಟನೆಯ ಮೂರು ಸಿನಿಮಾಗಳು ತೆರೆಗೆ ಬರಬೇಕಿದೆ. ಈ ಸಿನಿಮಾಗಳ ರಿಲೀಸ್​ ದಿನಾಂಕಗಳು ಮುಂದಕ್ಕೆ ಹೋಗಬಹುದೇ ಎನ್ನುವ ಅನುಮಾನ ಮೂಡಿದೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಅಷ್ಟೇ ಅಲ್ಲ, ‘ಕೆಜಿಎಫ್​ 2’ ಸಿನಿಮಾ ಚಿತ್ರಮಂದಿರದಲ್ಲೇ ಬಿಡುಗಡೆ ಆಗಲಿದೆ ಎಂದು ಅವರು ಹೇಳಿದ್ದಾರೆ.

‘2022 ಆರಂಭದಲ್ಲೇ ನನ್ನ ಮೂರು ಚಿತ್ರಗಳು ಬಿಡುಗಡೆ ಆಗಬೇಕಿದೆ. ಇದಕ್ಕೆ ನಾನು ತುಂಬಾ ಉತ್ಸುಕನಾಗಿದ್ದೇನೆ. ಈ ಸಿನಿಮಾಗಳು ರಿಲೀಸ್​ ಆಗುವುದಕ್ಕೆ ಎದುರು ನೋಡುತ್ತಿದ್ದೇನೆ. ಆದರೆ, ಕೊವಿಡ್​ ಹೆಚ್ಚುತ್ತಿದೆ. ಹೀಗಾಗಿ ಎಲ್ಲವೂ ಅನಿಶ್ಚಿತವಾಗಿದೆ. ‘ಶಂಶೇರಾ’, ‘ಕೆಜಿಎಫ್ 2’ ಮತ್ತು ‘ಪೃಥ್ವಿರಾಜ್’ ಈ ಮೂರು ಚಿತ್ರಗಳು ಥಿಯೇಟರ್​ ರಿಲೀಸ್​​ಗಾಗಿಯೇ ಮಾಡಿದ್ದಾಗಿದೆ’ ಎಂದಿದ್ದಾರೆ ಸಂಜಯ್​ ದತ್​. ಈ ಮೂಲಕ ಈ ಮೂರು ಚಿತ್ರಗಳು ಒಟಿಟಿ ಹಾದಿ ಹಿಡಿಯುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

‘ದೇಶದ ಕೋವಿಡ್ 19 ಪರಿಸ್ಥಿತಿ ನಿಯಂತ್ರಣದಲ್ಲಿದ್ದಾಗ ಮಾತ್ರ ಥಿಯೇಟರ್​ನಲ್ಲಿ ಸಿನಿಮಾ ವೀಕ್ಷಣೆ ಮಾಡಬಹುದು. ಮುಂಬರುವ ದಿನಗಳಲ್ಲಿ ಕೊವಿಡ್​ ನಿಯಂತ್ರಣಕ್ಕೆ ಬರಬಹುದು ಎಂದು ನಾನು ಭಾವಿಸಿದ್ದೇನೆ. ಇದಕ್ಕಾಗಿ ಜನರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದನ್ನು ಮತ್ತು ಮಾಸ್ಕ್​ ಧರಿಸುವುದನ್ನು ಮುಂದುವರಿಸಬೇಕು’ ಎಂದು ಕೋರಿದ್ದಾರೆ ಸಂಜಯ್​ ದತ್​.

ಕಳೆದ ಜುಲೈ ತಿಂಗಳಲ್ಲೇ ‘ಕೆಜಿಎಫ್​ 2’ ತೆರೆಗೆ ಬರಬೇಕಿತ್ತು. ಆದರೆ, ಕೊವಿಡ್ ಕಾರಣದಿಂದ ಸಿನಿಮಾ ರಿಲೀಸ್​ ದಿನಾಂಕವನ್ನು 8 ತಿಂಗಳು ಮುಂದೂಡಿತ್ತು ಚಿತ್ರತಂಡ. ಸಿನಿಮಾ ಕೆಲಸ ಬಹುತೇಕ ಪೂರ್ಣಗೊಂಡ ಹೊರತಾಗಿಯೂ ಸಿನಿಮಾ ರಿಲೀಸ್​ ದಿನಾಂಕವನ್ನು ಇಷ್ಟು ದೂರಕ್ಕೆ ತಳ್ಳಿದ್ದೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಇದಕ್ಕೆ ಯಶ್​ ಕಡೆಯಿಂದ ಉತ್ತರ ನೀಡಿದ್ದರು.

‘ಶೀಘ್ರವೇ ಮೂರನೆ ಅಲೆ ಕಡಿಮೆ ಆಗಲಿದೆ. ತಜ್ಞರ ವರದಿ ಆಧರಿಸಿ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಸಿನಿಮಾ ರಿಲೀಸ್​ ದಿನಾಂಕವನ್ನು 8 ತಿಂಗಳ ಕಾಲ ಮುಂದೂಡಿದ್ದು ಏಕೆ ಎನ್ನುವ ಪ್ರಶ್ನೆ ಎದುರಾಗುತ್ತಲೇ ಇತ್ತು. ನಾವು ಈ ರೀತಿಯ ಪರಿಸ್ಥಿತಿ ಬರುತ್ತದೆ ಎಂದು ನಿರೀಕ್ಷಿಸಿದ್ದೆವು. ಹೀಗಾಗಿ, ಸೇಫ್​ ರಿಲೀಸ್​ ದಿನಾಂಕವನ್ನು ಆಯ್ಕೆ ಮಾಡಿಕೊಂಡೆವು’ ಎಂದು ಯಶ್ ಮಾಧ್ಯಮ ಒಂದರ ಸಂದರ್ಶನದಲ್ಲಿ ಹೇಳಿದ್ದರು.

ಇದನ್ನೂ ಓದಿ: ‘ಕೆಜಿಎಫ್​ ಸಿನಿಮಾ ಕಥೆ ಆಧರಿಸಿಯೇ ‘ಪುಷ್ಪ’ ಚಿತ್ರ ರೆಡಿ ಆಯ್ತು’; ಹೋಲಿಕೆ ಮಾಡಿ ಕಿಡಿಕಾರಿದ ನೆಟ್ಟಿಗರು