‘ಸಂಜು ವೆಡ್ಸ್ ಗೀತಾ 2’ ಹೊಸ ಹಾಡು ರಿಲೀಸ್; ಕ್ಲೈಮ್ಯಾಕ್ಸ್​ಗೆ ಉಪೇಂದ್ರ ಮೆಚ್ಚುಗೆ

‘ಸಂಜು ವೆಡ್ಸ್ ಗೀತಾ 2’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಶ್ರೀನಗರ ಕಿಟ್ಟಿ, ರಚಿತಾ ರಾಮ್ ಮುಖ್ಯ ಭೂಮಿಕೆ ನಿಭಾಯಿಸಿರುವ ಈ ಚಿತ್ರದಿಂದ ಹೊಸ ಹಾಡು ರಿಲೀಸ್ ಆಗಿದೆ. ನಿರ್ದೇಶಕ ನಾಗಶೇಖರ್, ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್, ಗೀತರಚನಕಾರ ಕವಿರಾಜ್ ಅವರು ಹಾಡಿನ ಬಗ್ಗೆ ಮಾತನಾಡಿದ್ದಾರೆ. ಉಪೇಂದ್ರ ಈ ಹಾಡನ್ನು ರಿಲೀಸ್ ಮಾಡಿದ್ದಾರೆ.

‘ಸಂಜು ವೆಡ್ಸ್ ಗೀತಾ 2’ ಹೊಸ ಹಾಡು ರಿಲೀಸ್; ಕ್ಲೈಮ್ಯಾಕ್ಸ್​ಗೆ ಉಪೇಂದ್ರ ಮೆಚ್ಚುಗೆ
‘ಸಂಜು ವೆಡ್ಸ್ ಗೀತಾ 2’ ಸಾಂಗ್ ಬಿಡುಗಡೆ ಕಾರ್ಯಕ್ರಮ

Updated on: Nov 12, 2024 | 7:44 PM

ನಾಗಶೇಖರ್ ನಿರ್ದೇಶನ ಮಾಡುತ್ತಿರುವ ‘ಸಂಜು ವೆಡ್ಸ್ ಗೀತಾ 2’ ಸಿನಿಮಾವನ್ನು ‘ಪವಿತ್ರಾ ಇಂಟರ್‌ನ್ಯಾಷನಲ್ ಮೂವೀ ಮೇಕರ್ಸ್’ ಸಂಸ್ಥೆ ಬಂಡವಾಳ ಹೂಡಿದೆ. ಛಲವಾದಿ ಕುಮಾರ್ ಅವರು ನಿರ್ಮಾಣ ಮಾಡಿದ್ದಾರೆ. ಶೀರ್ಷಿಕೆಯ ಕಾರಣದಿಂದಲೇ ಈ ಸಿನಿಮಾ ನಿರೀಕ್ಷೆ ಮೂಡಿಸಿದೆ. ಇತ್ತೀಚೆಗೆ ನಾಗಶೇಖರ್ ಅವರ ಜನ್ಮದಿನದ ಪ್ರಯುಕ್ತ ‘ಸಂಜು ವೆಡ್ಸ್ ಗೀತಾ 2’ ಸಿನಿಮಾದಿಂದ ಹೊಸ ಹಾಡು ಬಿಡುಗಡೆ ಮಾಡಲಾಯಿತು. ‘ಅವನು ಸಂಜು ಅವಳು ಗೀತಾ ಅವರಿಬ್ಬರು ಸೇರಲು ಸಂಗೀತ..’ ಎಂಬ ಲಿರಿಕ್ಸ್ ಇರುವ ಹಾಡಿನ ಬಗ್ಗೆ ಚಿತ್ರತಂಡದವರು ಮಾಹಿತಿ ಹಂಚಿಕೊಂಡರು. ಈ ಹಾಡನ್ನು ಕವಿರಾಜ್ ಬರೆದಿದ್ದಾರೆ.

ಉಪೇಂದ್ರ, ಎನ್.ಎಂ. ಸುರೇಶ್, ಉಮೇಶ್ ಬಣಕಾರ್ ಮುಂತಾದವರು ಈ ಹಾಡಿನ ರಿಲೀಸ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಶ್ರೀಧರ್​ ವಿ. ಸಂಭ್ರಮ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಗಶೇಖರ್​ ಅವರು, ‘ನಾನು ಈ ಸಿನಿಮಾ ಮಾಡಬೇಕು ಎಂದು ನಿರ್ಧರಿಸಿದಾಗ ಮೊದಲು ಹಾಡುಗಳನ್ನು ರೆಡಿ ಮಾಡಿಕೊಳ್ಳಬೇಕಾಗಿತ್ತು. ಒಟ್ಟು ಆರು ಸುಂದರವಾದ ಹಾಡುಗಳು ಈ ಸಿನಿಮಾದಲ್ಲಿವೆ’ ಎಂದು ಹೇಳಿದರು.

ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್ ಮಾತನಾಡಿ, ‘ನಾನು ಈ ಟ್ಯೂನ್ ಕೊಟ್ಟ ಕೂಡಲೇ ನಿರ್ದೇಶಕರು ಒಪ್ಪಿದರು. ಎಲ್ಲ ಹಾಡುಗಳು ಸಿನಿಮಾದ ಕಥೆಗೆ ಪೂರಕವಾಗಿ ಮೂಡಿಬಂದಿವೆ’ ಎಂದರು. ‘ನಾಗಶೇಖರ್ ನಿರ್ದೇಶನದ ಸಿನಿಮಾಗೆ ಹಾಡುಗಳನ್ನು ಬರೆಯುವಾಗ ತಾನಾಗಿಯೇ ಒಳ್ಳೊಳ್ಳೆಯ ಪದಗಳು ಹುಟ್ಟಿಕೊಳ್ಳುತ್ತವೆ’ ಎಂದು ಕವಿರಾಜ್ ಹೇಳಿದರು. ‘ಸಿನಿಮಾ ಬಹಳ ಚೆನ್ನಾಗಿ ಮೂಡಿಬಂದಿದೆ. ಮುಂದಿನ ತಿಂಗಳು ಬಿಡುಗಡೆ ಆಗುತ್ತಿದೆ. ಖಂಡಿತ ಹಿಟ್ ಆಗುತ್ತದೆ’ ಎಂದಿದ್ದಾರೆ ನಿರ್ಮಾಪಕ ಛಲವಾದಿ ಕುಮಾರ್.

Avanu Sanju Avalu Geetha | Srinagar Kitty | Rachitha Ram | Nagshekar |SridharV | Sanju Weds Geetha 2

ಉಪೇಂದ್ರ ಅವರು ಈ ಸಿನಿಮಾದ ಕ್ಲೈಮ್ಯಾಕ್ಸ್ ಬಗ್ಗೆ ಮಾತನಾಡಿದ್ದಾರೆ. ‘ನನಗೆ ಮೊದಲು ಈ ಸಿನಿಮಾ ಕ್ಲೈಮ್ಯಾಕ್ಸ್ ಏನು ಎಂಬುದು ಗೊತ್ತಾಯ್ತು. ಅವತ್ತೇ ನಾನು ಹೇಳಿದೆ ಈ ಸಿನಿಮಾ ಸೂಪರ್ ಸಕ್ಸಸ್ ಅಂತ. ಈಗ ಈ ಸಾಂಗ್ ನೋಡಿದಾಗ ಡಿಸೈಡ್ ಮಾಡಿದೆ. ಶೇಕಡ 100ರಷ್ಟು ಹಿಟ್ ಆಗುತ್ತದೆ’ ಎಂದು ಉಪೇಂದ್ರ ಹೇಳಿದರು. ಈ ಸುದ್ದಿಗೋಷ್ಠಿಯಲ್ಲಿ ರಚಿತಾ ರಾಮ್ ಅವರು ಪಾಲ್ಗೊಂಡಿರಲಿಲ್ಲ.

ಇದನ್ನೂ ಓದಿ: ‘ಅಮ್ಮಾವ್ರ ಗಂಡ’ ಚಿತ್ರದ ನಟಿ ಭಾಗ್ಯಶ್ರೀ ಪುತ್ರಿಯ ಸಿನಿಮಾಗೆ ನಾಗಶೇಖರ್​ ನಿರ್ದೇಶನ

ಈ ಸಿನಿಮಾದಲ್ಲಿ ರೇಶ್ಮೆ ಬೆಳೆಯುವ ರೈತರ ಹೋರಾಟದ ಹಿನ್ನೆಲೆಯಲ್ಲಿ ಕಥೆ ಹೇಳಲಾಗುತ್ತದೆ. 72 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ. ರೇಶ್ಮೆ ಬೆಳೆಗಾರನಾಗಿ ಶ್ರೀನಗರ ಕಿಟ್ಟಿ ಅವರು ನಟಿಸಿದ್ದಾರೆ. ಅವರಿಗೆ ರಚಿತಾ ರಾಮ್ ಜೋಡಿಯಾಗಿದ್ದಾರೆ. ರಂಗಾಯಣ ರಘು, ತಬಲಾ ನಾಣಿ, ಸಾಧುಕೋಕಿಲ, ಸಂಪತ್, ಚೇತನ್ ಚಂದ್ರ, ರಾಗಿಣಿ ದ್ವಿವೇದಿ ಮುಂತಾದ ಕಲಾವಿದರು ಪಾತ್ರವರ್ಗದಲ್ಲಿ ಇದ್ದಾರೆ. ಸತ್ಯ ಹೆಗಡೆ ಅವರ ಛಾಯಾಗ್ರಹಣ, ಡಿಫರೆಂಟ್ ಡ್ಯಾನಿ ಅವರ ಸಾಹಸ ನಿರ್ದೇಶನ ಈ ಸಿನಿಮಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us