
ಕನ್ನಡ ಚಿತ್ರರಂಗದ (Sandalwood) ಹಿರಿಯ ನಿರ್ದೇಶಕ ಜೋ ಸೈಮನ್ ಅವರು ಹಠಾತ್ತನೆ ನಿಧನ ಹೊಂದಿದ್ದಾರೆ. ಫಿಲಂ ಚೇಂಬರ್ನಲ್ಲಿ ಆಯೋಜಿಸಲಾಗಿದ್ದ ಸಭೆಯೊಂದರಲ್ಲಿ ಭಾಗಿ ಆಗಿದ್ದಾಗಲೇ ಜೋ ಸೈಮನ್ ಅವರಿಗೆ ಹೃದಯಾಘಾತವಾಗಿದ್ದು, ಕೂಡಲೇ ಅವರನ್ನು ಸಮೀಪದ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಜೋ ಸೈಮನ್ ಅವರು ಕೊನೆ ಉಸಿರೆಳೆದಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು. ಜೋ ಸೈಮನ್ ಅವರು ಕನ್ನಡದ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ನಿರ್ದೇಶಕ, ನಟ, ಗೀತರಚನೆಕಾರನಾಗಿ ಅವರು ಕನ್ನಡ ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದಾರೆ.
1977 ರಲ್ಲಿ ಸಿನಿಮಾ ನಿರ್ದೇಶನ ಆರಂಭಿಸಿದ ಜೋ ಸೈಮನ್ ಮೊದಲು ನಿರ್ದೇಶಿಸಿದ್ದು ‘ಒಂದು ಪ್ರೇಮದ ಕತೆ’, ಕನ್ನಡಕ್ಕೆ ಹಲವಾರು ಆಕ್ಷನ್ ಮತ್ತು ಪ್ರೇಮಕತಾ ಸಿನಿಮಾಗಳನ್ನು ಜೋ ಸೈಮನ್ ನೀಡಿದ್ದಾರೆ. ವಿಷ್ಣುವರ್ಧನ್ ಹಾಗೂ ಅಂಬರೀಶ್ ಅವರೊಟ್ಟಿಗೆ ಆಪ್ತ ಗೆಳೆತನ ಹೊಂದಿದ್ದ ಜೋ ಸೈಮನ್, ‘ಸಿಂಹ ಜೋಡಿ’, ‘ಸಾಹಸ ಸಿಂಹ’, ‘ಹಾಂಕಾಂಗ್ನಲ್ಲಿ ಏಜೆಂಟ್ ಅಮರ್’, ‘ಸ್ನೇಹದ ಕಡಲಲ್ಲಿ’, ‘ರವಿವರ್ಮ’, ‘ಟೈಂ ಬಾಂಬ್’ ಇನ್ನೂ ಹಲವಾರು ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ.
ಮೂಲತಃ ಮಂಡ್ಯದವರಾಗಿದ್ದ ಜೋ ಸೈಮನ್, ಹಲವಾರು ಸಿನಿಮಾ ನಿರ್ದೇಶನ, ನಟನೆ ಮಾಡುವ ಜೊತೆಗೆ ಸಿನಿಮಾ ಸಂಬಂಧಿ ಸಂಘ-ಸಂಸ್ಥೆಗಳಲ್ಲಿಯೂ ಸಕ್ರಿಯರಾಗಿದ್ದರು. ಕನ್ನಡ ಚಲನಚಿತ್ರ ಸಂಘದಲ್ಲಿ ಕೆಲ ಪ್ರಮುಖ ಹುದ್ದೆಗಳನ್ನು ಸಹ ಅವರು ನಿಭಾಯಿಸಿದ್ದರು. ಇಂದು (ಫೆಬ್ರವರಿ 13) ಸಹ ಫಿಲಂ ಚೇಂಬರ್ನಲ್ಲಿ ಆಯೋಜಿಸಲಾಗಿದ್ದ ಕಾರ್ಯಕಾರಿ ಸಭೆಯಲ್ಲಿ ಭಾಗವಹಿಸಿದ್ದಾಗ ಅವರಿಗೆ ಎದೆ ನೋವು ಕಂಡು ಬಂತು. ಕೂಡಲೇ ಅವರನ್ನು ಮಲ್ಲಿಗೆ ಆಸ್ಪತ್ರೆಗೆ ಕೊಂಡೊಯ್ಯಲಾಯ್ತಾದರೂ ಅವರು ಬದುಕುಳಿಯಲಿಲ್ಲ.
1946 ರಲ್ಲಿ ಜನಿಸಿದ್ದ ಜೋ ಸೈಮನ್ ಅವರು 1967 ಅವರು ಚಿತ್ರರಂಗಕ್ಕೆ ಬಂದಿದ್ದರು. 1976 ರಲ್ಲಿ ವಿವಾಹವಾದ ಅವರಿಗೆ ನಾಲ್ವರು ಗಂಡು ಮಕ್ಕಳು. ನೆಮ್ಮದಿಯಿಂದ ಜೀವನ ಕಳೆಯುತ್ತಿದ್ದ ಜೋ ಸೈಮನ್ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ನಾಳೆ (ಫೆಬ್ರವರಿ 14) ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನ ನಡೆಯಲಿದೆ. ಬೆಳಿಗ್ಗೆ 10 ಗಂಟೆ ಇಂದ ಒಂದು ಗಂಟೆ ವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬಳಿಕ ನಾಳೆಯೇ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:29 pm, Fri, 13 February 26