Shiva Rajkumar: ಬರ್ತಿದ್ದಾನೆ ಭೈರತಿ ರಣಗಲ್, ಶಿವಣ್ಣನ ಪ್ಯಾನ್ ಇಂಡಿಯಾ ಸಿನಿಮಾ ಪೋಸ್ಟರ್ ರಿಲೀಸ್

ಶಿವಣ್ಣನ ಹೊಸ ಪ್ಯಾನ್ ಇಂಡಿಯಾ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದೆ. ಆರು ವರ್ಷದ ಹಿಂದೆ ಬಿಡುಗಡೆ ಆಗಿ ಹಿಟ್ ಆಗಿದ್ದ ಸಿನಿಮಾದ ಪಾತ್ರದಲ್ಲಿ ಮಿಂಚಲಿದ್ದಾರೆ ಶಿವಣ್ಣ.

Shiva Rajkumar: ಬರ್ತಿದ್ದಾನೆ ಭೈರತಿ ರಣಗಲ್, ಶಿವಣ್ಣನ ಪ್ಯಾನ್ ಇಂಡಿಯಾ ಸಿನಿಮಾ ಪೋಸ್ಟರ್ ರಿಲೀಸ್
ಭೈರತಿ ರಣಗಲ್

Updated on: Mar 05, 2023 | 7:41 PM

ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿರುವ ಜೊತೆಗೆ, ಹಿಟ್ ಮೇಲೆ ಹಿಟ್ ನೀಡುತ್ತಿರುವ ಶಿವರಾಜ್ ಕುಮಾರ್ (Shiva Rajkumar) ನಟನೆಯ ಹೊಸ ಪ್ಯಾನ್ ಇಂಡಿಯಾ (Pan India) ಸಿನಿಮಾದ ಪೋಸ್ಟರ್ ಇಂದು (ಮಾರ್ಚ್ 05) ಬಿಡುಗಡೆ ಆಗಿದೆ. ಸ್ವತಃ ಶಿವಣ್ಣ ತಮ್ಮ ಸಾಮಾಜಿಕ ಜಾಲತಾಣದಲ್ಲಿ (Social Media) ಹೊಸ ಸಿನಿಮಾದ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.

ಆರು ವರ್ಷಗಳ ಹಿಂದೆ ಬಿಡುಗಡೆ ಆಗಿದ್ದ ಮಫ್ತಿ ಸಿನಿಮಾದಲ್ಲಿ ಶಿವಣ್ಣನ ನಿರ್ವಹಿಸಿದ್ದ ಭೈರತಿ ರಣಗಲ್ ಪಾತ್ರ ಸಖತ್ ಹಿಟ್ ಆಗಿತ್ತು. ಶ್ರೀಮುರಳಿ ಸಹ ನಟಿಸಿದ್ದ ಆ ಸಿನಿಮಾಕ್ಕೆ ಗೆಲ್ಲುವ ಶಕ್ತಿ ತಂದುಕೊಟ್ಟಿದ್ದೇ ಶಿವಣ್ಣನ ಪಾತ್ರ. ಈಗ ಅದೇ ಪಾತ್ರವನ್ನು ಪ್ರಧಾನವಾಗಿರಿಸಿಕೊಂಡು ಸಿನಿಮಾ ತೆರೆಗೆ ಬರುತ್ತಿದ್ದು, ಪಾತ್ರದ ಹೆಸರಾದ ಭೈರತಿ ರಣಗಲ್ ಅನ್ನು ಸಿನಿಮಾಕ್ಕೂ ಇಡಲಾಗಿದೆ.

ಸಿನಿಮಾದ ಪೋಸ್ಟರ್ ಅನ್ನು ಇಂದು ಶಿವರಾಜ್ ಕುಮಾರ್ ಬಿಡುಗಡೆ ಮಾಡಿದ್ದಾರೆ. ಮಫ್ತಿ ಸಿನಿಮಾದಲ್ಲಿ ಭೈರತಿ ರಣಗಲ್ ಕಾಸ್ಟ್ಯೂಮ್ ಆದ ಕಪ್ಪು ಶರ್ಟ್, ಪಂಚೆಯನ್ನು ತೊಟ್ಟು ಕಟ್ಟಿಗೆಯ ಕುರ್ಚಿಯ ಮೇಲೆ ಶಿವಣ್ಣ ಕೂತಿರುವ ಪೋಸ್ಟರ್ ಗಮನ ಸೆಳೆಯುತ್ತಿದೆ. ಪೋಸ್ಟರ್ ಹಂಚಿಕೊಂಡಿರುವ ಶಿವಣ್ಣ ಭೈರತಿ ರಣಗಲ್ ಯುಗ ಆರಂಭವಾಗಿದ್ದು ಹೇಗೆಂದು ನೋಡಲು ಸಿದ್ಧರಾಗಿ ಎಂದು ಬರೆದುಕೊಂಡಿದ್ದಾರೆ.

ಮಫ್ತಿ ಸಿನಿಮಾ ನಿರ್ದೇಶನ ಮಾಡಿದ್ದ ನರ್ತನ್ ಅವರೇ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಗೀತಾ ಶಿವರಾಜ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದ್ದು, ಪೋಸ್ಟರ್ ಅನ್ನು ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ.

ಮಫ್ತಿ ಸಿನಿಮಾ ಬಿಡುಗಡೆ ಆಗಿ ಹಿಟ್ ಆದಾಗಲೇ ನಿರ್ದೇಶಕ ನರ್ತನ್, ತಾವು ರಣಗಲ್ ಸಿನಿಮಾ ಮಾಡುವುದಾಗಿ ಘೋಷಿಸಿದ್ದರು. ಆದರೆ ಬೇರೆ ಸಿನಿಮಾಗಳಿಗಾಗಿ ಕತೆ ಹೆಣೆಯುವಲ್ಲಿ ಬ್ಯುಸಿಯಾದ ನರ್ತನ್ ಈಗ ಸಿನಿಮಾ ಘೋಷಿಸಿದ್ದಾರೆ. ನರ್ತನ್ ಯಶ್​ಗಾಗಿ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು ಆದರೆ ಅದು ಸುಳ್ಳಾಯಿತು, ಆ ನಂತರ ರಾಮ್ ಚರಣ್ ಗೆ ಸಿನಿಮಾ ಮಾಡುವ ಸುದ್ದಿ ಬಂತಾದರು ಆ ಬಗ್ಗೆ ಸ್ಪಷ್ಟತೆ ಸಿಗಲಿಲ್ಲ. ಇದೀಗ ಕೊನೆಗೆ ಶಿವಣ್ಣನ ಸಿನಿಮಾ ಘೋಷಿಸಿದ್ದಾರೆ ನರ್ತನ್.

ಶಿವರಾಜ್ ಕುಮಾರ್ ಅವರ ಹೋಂ ಬ್ಯಾನರ್ ಗೀತಾ ಪಿಕ್ಚರ್ಸ್​ಗೆ ಇದು ಎರಡನೇ ಸಿನಿಮಾ ಆಗಿದ್ದು, ಮೊದಲ ಸಿನಿಮಾ ವೇದ ಮೂಲಕ ಹಿಟ್ ನೀಡಿರುವ ನಿರ್ಮಾಕಿ ಗೀತಾ ರಣಗಲ್ ಮೂಲಕ ಮತ್ತೊಂದು ಹಿಟ್ ನೀಡುವ ಉತ್ಸಾಹದಲ್ಲಿದ್ದಾರೆ. ಇನ್ನು ಶಿವಣ್ಣ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರಾದರೂ ಶೀಘ್ರವೇ ಈ ಸಿನಿಮಾದ ಚಿತ್ರೀಕರಣ ಆರಂಭ ಮಾಡಲಿದ್ದಾರೆ.

ಇನ್ನಷ್ಟು ಸಿಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Follow Us