Puneetha Parva: ‘ಪುನೀತ ಪರ್ವ’ಕ್ಕೆ ಜಗ್ಗೇಶ್​ ಯಾಕೆ ಬರಲಿಲ್ಲ? ‘ನವರಸ ನಾಯಕ’ ನೀಡಿದ ಕಾರಣ ಇಲ್ಲಿದೆ..

| Updated By: ಮದನ್​ ಕುಮಾರ್​

Updated on: Oct 22, 2022 | 2:52 PM

Puneeth Rajkumar: ‘ಬದುಕಲ್ಲಿ ನೂರಾರು ಮಂದಿ ಸಿಗುತ್ತಾರೆ. ಆದರೆ ಎಲ್ಲರೂ ಆತ್ಮೀಯರಾಗುವುದಿಲ್ಲ’ ಎಂಬ ಮಾತಿನೊಂದಿಗೆ ಜಗ್ಗೇಶ್​ ಅವರು ಬರಹ ಆರಂಭಿಸಿದ್ದಾರೆ.

Puneetha Parva: ‘ಪುನೀತ ಪರ್ವ’ಕ್ಕೆ ಜಗ್ಗೇಶ್​ ಯಾಕೆ ಬರಲಿಲ್ಲ? ‘ನವರಸ ನಾಯಕ’ ನೀಡಿದ ಕಾರಣ ಇಲ್ಲಿದೆ..
ಜಗ್ಗೇಶ್​, ಪುನೀತ್​ ರಾಜ್​ಕುಮಾರ್​, ಸಂತೋಷ್​ ಆನಂದ್​ ರಾಮ್
Follow us on

ಬಹಳ ಅದ್ದೂರಿಯಾಗಿ ‘ಪುನೀತ ಪರ್ವ’ (Puneetha Parva) ಕಾರ್ಯಕ್ರಮ ಅ.21ರಂದು ನಡೆಯಿತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಲಕ್ಷಾಂತರ ಅಭಿಮಾನಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ಮಾಡಲಾಯಿತು. ಕನ್ನಡ, ತಮಿಳು, ತೆಲುಗು ಚಿತ್ರರಂಗದ ನೂರಾರು ಸೆಲೆಬ್ರಿಟಿಗಳು ‘ಗಂಧದ ಗುಡಿ’ (Gandhada Gudi) ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಭಾಗಿ ಆಗಿದ್ದರು. ಆದರೆ ಕೆಲವರು ಗೈರಾಗಿದ್ದರು. ಈ ಬಗ್ಗೆ ಅಭಿಮಾನಿಗಳಿಗೆ ಅಸಮಾಧಾನ ಇದೆ. ನಟ ಜಗ್ಗೇಶ್​ (Jaggesh) ಅವರು ಕೂಡ ಪುನೀತ ಪರ್ವಕ್ಕೆ ಬರಲು ಸಾಧ್ಯವಾಗಿಲ್ಲ. ಯಾಕೆ ಎಂಬ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಪುನೀತ್​ ರಾಜ್​ಕುಮಾರ್​ ಜೊತೆಗಿನ ತಮ್ಮ ಒಡನಾಟವನ್ನು ಕೂಡ ಅವರು ಮೆಲುಕು ಹಾಕಿದ್ದಾರೆ.

ಡಾ. ರಾಜ್​ಕುಮಾರ್​ ಕುಟುಂಬದ ಬಗ್ಗೆ ಜಗ್ಗೇಶ್​ ಅವರಿಗೆ ಎಲ್ಲಿಲ್ಲದ ಅಭಿಮಾನ. ಆ ಬಗ್ಗೆ ಅವರು ಅನೇಕ ಸಂದರ್ಭಗಳಲ್ಲಿ ಹೇಳಿದ್ದುಂಟು. ಅವರು ‘ಪುನೀತ ಪರ್ವ’ ಕಾರ್ಯಕ್ರಮಕ್ಕೆ ಖಂಡಿತಾ ಬರುತ್ತಾರೆ ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೂ ಕೂಡ ಅವರು ಗೈರಾಗಿದ್ದು ಅಚ್ಚರಿ ಮೂಡಿಸಿತು. ಅದಕ್ಕೆ ಕಾರಣ ಏನು ಎಂಬುದನ್ನು ಜಗ್ಗೇಶ್​ ತಿಳಿಸಿದ್ದಾರೆ. ಈ ಕುರಿತು ಅವರು ಇನ್​ಸ್ಟಾಗ್ರಾಮ್​ನಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ
‘ಗಂಧದ ಗುಡಿ’ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ
Puneetha Parva: ‘ಮಿಸ್​ ಯೂ ಅಪ್ಪು’: ಪುನೀತ ಪರ್ವ ವೇದಿಕೆಯಲ್ಲಿ ‘ಪವರ್​ ಸ್ಟಾರ್​’ಗೆ ನುಡಿ ನಮನ ಸಲ್ಲಿಸಿದ ಗಣ್ಯರು
‘ನಾನಿರುವವರೆಗೂ ಈ ಹಾಡು ನನ್ನ ಜತೆ ಇರುತ್ತದೆ’; ‘ಪುನೀತ ಪರ್ವ’ ವೇದಿಕೆ ಮೇಲೆ ರಾಘಣ್ಣ ಭಾವುಕ ನುಡಿ
Puneetha Parva: ‘ಪುನೀತ ಪರ್ವ’ ಲೈವ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ; ಅರಮನೆ ಮೈದಾನದಲ್ಲಿ ತಾರೆಯರ ಸಂಗಮ

‘ಬದುಕಲ್ಲಿ ನೂರಾರು ಮಂದಿ ಸಿಗುತ್ತಾರೆ. ಆದರೆ ಎಲ್ಲರೂ ಆತ್ಮೀಯರಾಗುವುದಿಲ್ಲ. ನೂರಾರು ಮಂದಿಯಲ್ಲಿ ಕೆಲವರು ಮಾತ್ರ ಹೃದಯಕ್ಕೆ ಹತ್ತಿರವಾಗುತ್ತಾರೆ. ಹತ್ತಿರವಾದ ಕೆಲ ಆತ್ಮೀಯರಷ್ಟೇ ಹೃದಯದಲ್ಲಿ ಉಳಿಯುತ್ತಾರೆ. ನನ್ನ ಹೃದಯದಲ್ಲಿ ನನ್ನ ತಂದೆ-ತಾಯಿ, ಹೆಂಡತಿ-ಮಕ್ಕಳು, ಅಕ್ಕಂದಿರು-ತಮ್ಮಂದಿರು ಹಾಗು ಇತ್ತೀಚಿನ ವರ್ಷದಲ್ಲಿ ಮೊಮ್ಮಗ ಅರ್ಜುನ ಬಿಟ್ಟರೆ ರಾಜಣ್ಣ, ಪುನೀತ ನನ್ನ ಅತ್ಯಂತ ಆತ್ಮೀಯರಾಗಿದ್ದರು. ರಾಜಣ್ಣ ಹೋದಾಗ ನನ್ನ ತಂದೆ ಹೋದಂತೆ ದುಃಖಿಸಿದೆ. ಪುನೀತ ಹೋದಮೇಲೆ ನನ್ನಲ್ಲಿದ್ದ ಆಶಾಭಾವವೇ ಕೊನೆಯಾಯಿತು. ಬದುಕು ನಶ್ವರ ಅನ್ನಿಸಿತು. ಎಲ್ಲಾ ಬಿಟ್ಟು ಹೋಗಬೇಕು ಎಂದು ನಿಶ್ಚಯವಾಯಿತು’ ಎಂದು ಜಗ್ಗೇಶ್​ ಬರಹ ಆರಂಭಿಸಿದ್ದಾರೆ.

‘ನನ್ನ ಬದುಕಿಗೆ ಪುನೀತ ಬದಲಾವಣೆಯ ಮಾರ್ಗದರ್ಶನದ ಬೆಳಕಾದ. ನನ್ನಲ್ಲಿದ್ದ ಕೋಪ, ಆವೇಶ ನಿರ್ನಾಮವಾಯಿತು. ಒಟ್ಟಿನಲ್ಲಿ ಪುನೀತ ನನಗೆ ಗುರುವಾದ. ಅಮೆರಿಕದಿಂದ ಹಿಂದಿರುಗುವ ಟಿಕೆಟ್ಟು ಸಿಗದೆ ಆತನ ಕೊನೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಲಿಲ್ಲವೆಂದು ವಿಪರೀತ ದುಃಖವಾಯಿತು. ಅಪ್ಪನ ಹೆಸರಿನ ಗಂಧದಗುಡಿ ಚಿತ್ರ ಮತ್ತೊಮ್ಮೆ ಪುನೀತನಿಂದ ಕೊನೆಯ ಚಿತ್ರವಾಗಿ ಹೊರಬರುತ್ತಿದೆ. ಆ ಚಿತ್ರಕ್ಕೆ ನನ್ನ ಹೃದಯಪೂರ್ವಕ ಶುಭಕಾಮನೆಗಳು. ಎಲ್ಲರೂ ಒಂದು ದಿನ ಕಡ್ಡಾಯ ನಿರ್ಗಮಿಸಲೇಬೇಕು. ಆದರೆ ಕೆಲವರು ಮಾತ್ರ ನಿರ್ಗಮಿಸಿದ ಮೇಲೆಯೂ ಉಳಿಯುತ್ತಾರೆ. ಆ ಕೆಲವರಲ್ಲಿ ಪುನೀತ ನಮ್ಮಗಳಿಗೆ ದೇವರಾದ. ನಿನ್ನ ಪ್ರೀತಿಯ ನೆನಪು ನನ್ನ ಕೊನೆ ಉಸಿರಿನವರೆಗೂ ನನ್ನ ಮಾನಸದಲ್ಲಿ’ ಎಂದು ಜಗ್ಗೇಶ್​ ಪೋಸ್ಟ್​ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.