ವಿಜಯ್ ರಾಘವೇಂದ್ರ ಸಂದರ್ಶನ: ಸೋಲೋ ಆ್ಯಕ್ಟರ್ ಸಿನಿಮಾ ಅನುಭವ ಹಂಚಿಕೊಂಡ ‘ರಾಘು’

|

Updated on: Apr 26, 2023 | 11:56 AM

Vijay Raghavendra Interview: ವಿಜಯ್ ರಾಘವೇಂದ್ರ ಅವರು ‘ರಾಘು’ ಹೆಸರಿನ ಸಿನಿಮಾ ಮಾಡಿದ್ದಾರೆ. ಇಡೀ ಚಿತ್ರದುದ್ದಕ್ಕೂ ಅವರೊಬ್ಬರೇ ಕಾಣಿಸಿಕೊಳ್ಳುತ್ತಾರೆ. ಈ ಸಿನಿಮಾ ಏಪ್ರಿಲ್ 28ರಂದು ರಿಲೀಸ್ ಆಗುತ್ತಿದೆ.

ವಿಜಯ್ ರಾಘವೇಂದ್ರ ಸಂದರ್ಶನ: ಸೋಲೋ ಆ್ಯಕ್ಟರ್ ಸಿನಿಮಾ ಅನುಭವ ಹಂಚಿಕೊಂಡ ‘ರಾಘು’
ವಿಜಯ್ ರಾಘವೇಂದ್ರ
Follow us on

ವಿಜಯ್ ರಾಘವೇಂದ್ರ (Vijay Raghavendra) ಅವರು ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. ‘ಚಿನ್ನಾರಿ ಮುತ್ತ’ ಸಿನಿಮಾದಲ್ಲಿನ ಅವರ ನಟನೆಗೆ ರಾಜ್ಯ ಪ್ರಶಸ್ತಿ ಸಿಕ್ಕಿದೆ. ‘ಕೊಟ್ರೇಶಿ ಕನಸು’ ಚಿತ್ರದ ನಟನೆಗೆ ಅವರಿಗೆ ರಾಷ್ಟ್ರ ಪ್ರಶಸ್ತಿ ಒಲಿದಿದೆ. ಬಾಲ ನಟನಾಗಿ ಗುರುತಿಸಿಕೊಂಡ ನಂತರ ಅವರು ಹೀರೋ ಆಗಿ ಮಿಂಚಿದರು. ವೃತ್ತಿ ಜೀವನದಲ್ಲಿ ಅವರು ಹಲವು ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಿದ್ದಾರೆ. ಈಗ ಅವರು ‘ರಾಘು’ ಹೆಸರಿನ ಸಿನಿಮಾ ಮಾಡಿದ್ದಾರೆ. ಇಡೀ ಚಿತ್ರದುದ್ದಕ್ಕೂ ಅವರೊಬ್ಬರೇ ಕಾಣಿಸಿಕೊಳ್ಳುತ್ತಾರೆ. ಈ ಸಿನಿಮಾ ಏಪ್ರಿಲ್ 28ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ಹಲವು ವಿಶೇಷತೆಗಳನ್ನು ಹೊಂದಿದೆ. ಈ ಚಿತ್ರದ ಬಗ್ಗೆ ವಿಜಯ್ ರಾಘವೇಂದ್ರ ಟಿವಿ9 ಕನ್ನಡ ಡಿಜಿಟಲ್ ಜೊತೆ ಮಾತನಾಡಿದ್ದಾರೆ.

ಈ ಕಾನ್ಸೆಪ್ಟ್​ ಕೇಳಿದಾಗ ನಿಮಗೆ ಅನಿಸಿದ್ದೇನು?

ಮೊದಲು ಕಥೆ ಕೇಳಿದಾಗ ಇದು ನಿಜಕ್ಕೂ ಕಷ್ಟ ಎನಿಸಿತು. ಇದನ್ನು ಹೇಗೆ ಸಾಧಿಸುತ್ತಾರೆ ಎನ್ನುವ ಪ್ರಶ್ನೆಯೂ ಮೂಡಿತು. ಇಡೀ ಟೀಂ ಇದಕ್ಕೆ ಚೆನ್ನಾಗಿ ಪ್ಲಾನ್ ಮಾಡಿಕೊಂಡಿದೆ ಎಂಬುದು ಶೂಟಿಂಗ್ ಮಾಡುತ್ತಾ ಗೊತ್ತಾಯಿತು. ಸಿನಿಮಾಟೋಗ್ರಫಿ ಸಿನಿಮಾಗೆ ದೊಡ್ಡ ಸ್ಟ್ರೆಂತ್.

ಒಂಟಿಯಾಗಿ ನಟಿಸೋದು ಎಷ್ಟು ಚಾಲೆಂಜ್​

ಎದುರು ಮತ್ತೋರ್ವ ಆರ್ಟಿಸ್ಟ್ ಇದ್ದರೆ ನಟನೆ ಸುಲಭ ಆಗುತ್ತದೆ. ಆದರೆ, ಸಿನಿಮಾ ಉದ್ದಕ್ಕೂ ಒಬ್ಬರೇ ಇರೋದ್ರಿಂದ ತುಂಬಾನೇ ಕಷ್ಟ ಎನಿಸಿತು. ಶೂಟಿಂಗ್ ಮಾಡುತ್ತಾ ಮಾಡುತ್ತಾ ಅಭ್ಯಾಸ ಆಯಿತು. ಈ ಸಿನಿಮಾದಲ್ಲಿ ಪಾತ್ರಗಳ ಪ್ರೆಸೆನ್ಸ್ ಇರುತ್ತದೆ. ಅದು ಹೇಗೆ ಅನ್ನೋದು ಸಿನಿಮಾದಲ್ಲಿ ನೋಡಬೇಕು.

ಸಿನಿಮಾದಲ್ಲಿ ಡೈಲಾಗ್ ಇರುತ್ತಾ?

ಸಿನಿಮಾದಲ್ಲಿ ಡೈಲಾಗ್​ಗಳು ಇರುತ್ತವೆ. ಬೇರೆಬೇರೆ ಲೊಕೇಷನ್ ಇರುತ್ತದೆ. ಪರದಮೇಲೆ ನಾನೊಬ್ಬನೇ ಕಾಣಿಸಿಕೊಳ್ಳುತ್ತೇನೆ. ಎಲ್ಲಾ ಸಿನಿಮಾಗೂ ಕಥೆ ಮುಖ್ಯ. ನಮ್ಮ ಚಿತ್ರದಲ್ಲೂ ಒಂದೊಳ್ಳೆಯ ಕಥೆ ಇದೆ. ಇದೊಂದು ಕ್ರೈಮ್ ಥ್ರಿಲ್ಲರ್ ಸಿನಿಮಾ. ನಾವು ಪ್ರಯೋಗಾತ್ಮಕವಾಗಿ ಹೇಳಿದ್ದೆವು. ಏನೇ ಮಾಡಿದರು ಕರ್ಮ ನಮ್ಮನ್ನು ಬಿಡೋದಿಲ್ಲ ಎಂಬುದು ಸಿನಿಮಾದ ಥೀಮ್.

ನಿರ್ದೇಶಕ ಆನಂದ್ ರಾಜ್ ಬಗ್ಗೆ ಹೇಳಿ..

ಆನಂದ್​ ರಾಜ್​ಗೆ ಹುಮ್ಮಸಿದೆ. ಕಥೆಯಲ್ಲಿ, ದೃಶ್ಯದಲ್ಲಿ ಅವರಿಗೆ ಎಲ್ಲಿಯೂ ಅನುಮಾನ ಇರಲಿಲ್ಲ. ಅವರು ಬಹಳ ತಿಳುವಳಿಕೆ ಇರುವ ವ್ಯಕ್ತಿ.

ಪ್ರೇಕ್ಷಕರಿಗೆ ಏನು ಹೇಳ್ತೀರಾ?

ಪ್ರೇಕ್ಷಕರಲ್ಲಿ ನಾನು ಕೇಳಿಕೊಳ್ಳೋದು ಒಂದೇ. ಸಿನಿಮಾನ ಥಿಯೇಟರ್​ನಲ್ಲೇ ಬಂದು ನೋಡಿ. ಎಲ್ಲರೂ ಪ್ರಯತ್ನಪಡ್ತಾರೆ. ಅದೇ ರೀತಿ ಇದು ಕೂಡ ಒಂದೊಳ್ಳೆಯ ಪ್ರಯತ್ನ. ಸಿನಿಮಾನ ಥಿಯೇಟರ್​ನಲ್ಲಿ ನೋಡೋಕೆ ಸಿಗಲಿಲ್ಲ ಎಂದು ಬೇಸರ ಮಾಡಿಕೊಳ್ಳುವ ಬದಲು ಥಿಯೇಟರ್​ನಲ್ಲೇ ಇದ್ದಾಗ ಬಂದು ನೋಡಿದರೆ ಸಿನಿಮಾ ಮಾಡಿದವರಿಗೂ ಪ್ರೋತ್ಸಾಹ ನೀಡಿದಂತೆ ಆಗುತ್ತದೆ. ವೃತ್ತಿಜೀವನದಲ್ಲಿ ಹಲವು ಪ್ರಯತ್ನ ಮಾಡಿದ್ದೀನಿ. ಇದು ಕೂಡ ಒಂದು ಹೊಸ ಪ್ರಯತ್ನ.

ಇದನ್ನೂ ಓದಿ: Vijay Raghavendra: ಕಷ್ಟದ ಸಮಯದಲ್ಲಿ ಶಿವಣ್ಣ, ಅಪ್ಪು ಬೆಂಬಲಿಸಿದ್ದು ಹೇಗೆ? ವಿಜಯ್ ರಾಘವೇಂದ್ರ ಮನದಾಳದ ಮಾತು

ಮುಂದಿನ ಸಿನಿಮಾಗಳ ಬಗ್ಗೆ

‘ಕದ್ದ ಚಿತ್ರ’, ‘ಜೋಗ್ 101’, ‘ಕೇಸ್ ಆಫ್ ಕೊಂಡಾಣ’ ಮೊದಲಾದ ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. ‘ಕದ್ದ ಚಿತ್ರ’ ಸೈಕಲಾಜಿಕಲ್ ಥ್ರಿಲ್ಲರ್. ‘ಜೋಗ್ 101’ ರೊಮ್ಯಾಂಟಿಕ್ ಆ್ಯಕ್ಷನ್ ಸಿನಿಮಾ. ‘ಗ್ರೇ ಗೇಮ್ಸ್’ ಸೈಕಲಾಜಿಕಲ್​ ಥ್ರಿಲ್ಲರ್. ಕೆಲವು ಚಿತ್ರಗಳು ಈಗಾಗಲೇ ರಿಲೀಸ್​ಗೆ ರೆಡಿ ಇವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ