
ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲ ಕಮೆಂಟ್ ಹಾಕುವವರ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಸೆಲೆಬ್ರಿಟಿಗಳು ಇದಕ್ಕೆ ಹೆಚ್ಚು ಸಂತ್ರಸ್ತರಾಗುತ್ತಿದ್ದಾರೆ. ಈಗ ವಿಜಯಲಕ್ಷ್ಮೀ ಕೂಡ ಇದರಿಂದ ತೊಂದರೆ ಅನುಭವಿಸಿದ್ದಾರೆ. ಈ ಸಂಬಂಧ ಅವರು ದೂರು ಕೂಡ ದಾಖಲು ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬಂದ ಹೇಟ್ ಕಮೆಂಟ್ ಹಾಗೂ ಮೆಸೇಜ್ಗಳ ಸ್ಕ್ರೀನ್ಶಾಟ್ಗಳನ್ನು ಸೈಬರ್ ಪೊಲೀಸರಿಗೆ ನೀಡುವುದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.
ಸುದೀಪ್ ಅವರು ಇತ್ತೀಚೆಗೆ ‘ಸಿನಿಮಾ ರಿಲೀಸ್ ವೇಳೆ ಒಂದು ಪಡೆ ಯುದ್ಧಕ್ಕೆ ರೆಡಿ ಇದೆ’ ಎಂದಿದ್ದರು. ಇದು ದರ್ಶನ್ ಅಭಿಮಾನಿಗಳಿಗೆ ಹೇಳಿದ ಮಾತು ಎಂದು ಬಣ್ಣಿಸಲಾಯಿತು. ಆ ಬಳಿಕ ವಿಜಯಲಕ್ಷ್ಮೀ ಅವರು ನೇರವಾಗಿ ಅಖಾಡಕ್ಕೆ ಇಳಿದು, ಸುದೀಪ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು. ಆ ಬಳಿಕ ಪರ-ವಿರೋಧ ಚರ್ಚೆಗಳು ನಡೆಯುತ್ತಲೇ ಇದ್ದವು. ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ವಿಜಯಲಕ್ಷ್ಮೀ ಅವರಿಗೆ ಹೇಟ್ ಕಮೆಂಟ್ ಹೆಚ್ಚಿದೆ.
ಬೆಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಿಜಯಲಕ್ಷ್ಮೀ ದೂರು ದಾಖಲು ಮಾಡಿದ್ದಾರೆ. ತಮಗೆ ಬಂದ ಹೇಟ್ ಕಮೆಂಟ್ ಸ್ಕ್ರೀನ್ಶಾಟ್ ಹಾಗೂ ಆಯಾ ಖಾತೆಗಳ ವಿವರಗಳನ್ನು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಸೈಬರ್ ಅಪರಾಧ ವಿಭಾಗದ ಇನ್ಸ್ಪೆಕ್ಟರ್ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ವಿಜಯಲಕ್ಷ್ಮೀ ಖಾತೆಗೆ ಬಂದ ಕಾಮೆಂಟ್ಗಳು ಸುದೀಪ್ ಅಭಿಮಾನಿಗಳದ್ದೇ ಎಂಬ ಅನುಮಾನ ಮೂಡಿದೆ. ಏಕೆಂದರೆ ಕೆಲವು ಖಾತೆಗಳು ಸುದೀಪ್ ಅಭಿಮಾನಿಗಳ ಹೆಸರಲ್ಲಿ ಇದೆ. ಇನ್ನೂ ಕೆಲವರು ಸುದೀಪ್ ಹೆಸರು ಬಳಸಿದ್ದಾರೆ. ಇನ್ನೂ ಕೆಲವರು ಸುದೀಪ್ ಸ್ಟಿಕ್ಕರ್ ಬಳಸಿದ್ದಾರೆ. ಇವರ ಪೈಕಿ ಎಷ್ಟು ಮಂದಿ ನಿಜವಾದ ಸುದೀಪ್ ಅಭಿಮಾನಿಗಳು ಎಂಬುದು ತನಿಖೆ ಬಳಿಕವೇ ತಿಳಿಯಬೇಕಿದೆ.
ಇದನ್ನೂ ಓದಿ: ‘ಅವರು ಯಾವ ನೋವಲ್ಲಿದ್ದಾರೋ ಗೊತ್ತಿಲ್ಲ’; ವಿಜಯಲಕ್ಷ್ಮೀ ಬಗ್ಗೆ ಕಿಚ್ಚನ ಮಾತು
ಈ ಮೊದಲು ರಮ್ಯಾ ಅವರು ಇದೇ ರೀತಿಯ ಕ್ರಮ ಕೈಗೊಂಡಿದ್ದರು. ತಮಗೆ ಬಂದ ಅಶ್ಲೀಲ ಕಮೆಂಟ್ ಹಾಗೂ ಮೆಸೇಜ್ಗಳನ್ನು ನೀಡಿ ದೂರು ದಾಖಲಿಸಿದ್ದರು. ಕೆಲ ದರ್ಶನ್ ಅಭಿಮಾನಿಗಳನ್ನು ಕೇಸ್ನಲ್ಲಿ ಅರೆಸ್ಟ್ ಮಾಡಲಾಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.