‘ಕೊಲೆ ಆರೋಪಿ ದರ್ಶನ್​ ಜೊತೆ ಸಂಧಾನ ಅಸಾಧ್ಯ’; ರೇಣುಕಾ ಸ್ವಾಮಿ ತಂದೆಯ ನೇರ ಮಾತು

ನಟ ದರ್ಶನ್ ಅವರು ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಜೈಲಿನಲ್ಲಿ ಇದ್ದಾರೆ. ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಅವರನ್ನು ಇಡಲಾಗಿದೆ. ದರ್ಶನ್ ಅವರು ಎ2 ಆರೋಪಿ ಆದರೆ, ಪವಿತ್ರಾ ಗೌಡ ಅವರು ಎ1 ಆರೋಪಿ ಎನಿಸಿಕೊಂಡಿದ್ದಾರೆ. ಈಗ ರೇಣುಕಾಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ ರಾಜಿ ವಿಚಾರದ ಬಗ್ಗೆ ಮಾತನಾಡಿದ್ದಾರೆ.

‘ಕೊಲೆ ಆರೋಪಿ ದರ್ಶನ್​ ಜೊತೆ ಸಂಧಾನ ಅಸಾಧ್ಯ’; ರೇಣುಕಾ ಸ್ವಾಮಿ ತಂದೆಯ ನೇರ ಮಾತು
ರೇಣುಕಾಸ್ವಾಮಿ ತಂದೆ- ದರ್ಶನ್
Edited By:

Updated on: Jul 25, 2024 | 3:09 PM

ರೇಣುಕಾ ಸ್ವಾಮಿ ಹತ್ಯೆಯಿಂದ ಇಡೀ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುವಂತೆ ಆಗಿದೆ. ಅವರ ಪತ್ನಿ ಈಗ ಗರ್ಭಿಣಿ. ಅವರು ನೋವಿನಲ್ಲಿ ದಿನವನ್ನು ದೂಡುತ್ತಿದ್ದಾರೆ. ಅವರ ಪಾಲಕರು ಕೂಡ ಸಾಕಷ್ಟು ನೋವಿನಲ್ಲಿ ಇದ್ದಾರೆ. ಈಗ ರೇಣುಕಾ ಸ್ವಾಮಿ ತಂದೆ ಕಾಶಿನಾಥಯ್ಯ ಶಿವನಗೌಡ ಹೇಳಿಕೆ ನೀಡಿದ್ದಾರೆ. ಈ ಪ್ರಕರಣದಲ್ಲಿ ತಾವು ಸಂಧಾನ ಮಾಡಿಕೊಳ್ಳುವುದಿಲ್ಲ’ ಎಂದು ನೇರ ಮಾತುಗಳಲ್ಲಿ ಹೇಳಿದ್ದಾರೆ. ಜೊತೆಗೆ ಮುಂದೊಂದು ದಿನ ದರ್ಶನ್ ಭೇಟಿಗೆ ಬರಲಿ ಎಂದು ಬಯಸುವುದಿಲ್ಲ ಎಂದಿದ್ದಾರೆ.

ರೇಣುಕಾ ಸ್ವಾಮಿ ಕಾಮುಕ ಎಂಬಿತ್ಯಾದಿ ಮಾತುಗಳು ಈ ಮೊದಲು ಕೇಳಿ ಬಂದಿದ್ದವು. ಈ ವೇಳೆ ಕಾಶಿನಾಥಯ್ಯ ಶಿವನಗೌಡ ಅವರು ಮಗನ ಪರ ವಹಿಸಿಕೊಂಡು ಮಾತನಾಡಿದ್ದರು. ಇದಾದ ಬಳಿಕ ಕಾಶಿನಾಥಯ್ಯ ಅವರು ಸಾಮಾನ್ಯವಾಗಿ ಮಾತನಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿತ್ತು. ‘ರೇಣುಕಾ ಸ್ವಾಮಿ ದರ್ಶನ್ ಭೇಟಿಗೆ ಬರಲಿ ಎಂದು ನಿರೀಕ್ಷಿಸುತ್ತಿದ್ದಾರೆ’ ಎಂದು ಕೆಲವರು ಬಿಂಬಿಸಿದ್ದರು. ಈ ಬಗ್ಗೆ ಕಾಶಿನಾಥಯ್ಯ ಅವರು ಮಾತನಾಡಿದ್ದಾರೆ.

‘ನಮ್ಮ ಭೇಟಿಗೆ ದರ್ಶನ್ ಬರಲಿ ಎಂಬ ಅರ್ಥದಲ್ಲಿ ನಾನು ಏನನ್ನೂ ಹೇಳಿಲ್ಲ. ಹೆತ್ತ ಮಗನನ್ನು ಕಳೆದುಕೊಂಡು ತುಂಬಾ ಸಂಕಟ ಆಗಿದೆ. ವಿಶಾಲ ಭಾವನೆಯಿಂದ ಯಾರು ಬಂದರೂ ಬರಲಿ ಎನ್ನುತ್ತೇವೆ. ವೈಯಕ್ತಿಕವಾಗಿ ನಟ ದರ್ಶನ್ ಬರಲಿ ಎಂದು ಹೇಳುವುದಿಲ್ಲ’ ಎಂದು ಕಾಶಿನಾಥಯ್ಯ ಹೇಳಿದ್ದಾರೆ.

‘ಕೋರ್ಟ್, ಪೊಲೀಸ್, ಸರ್ಕಾರ ಕ್ರಮ ಕೈಗೊಳ್ಳುತ್ತದೆ. ನಾವು ಕಾನೂನು ಹೋರಾಟ ನಿರಂತರವಾಗಿ ಮಾಡುತ್ತೇವೆ. ರಾಜ್ಯ ಸರ್ಕಾರ ಈವರೆಗೆ ನಮಗೆ ನ್ಯಾಯ ದೊರಕಿಸಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕೆಂಬುದು ನಮ್ಮ ಮನವಿ. ಈ ಪ್ರಕರಣದಲ್ಲಿ ದರ್ಶನ್ ಜೊತೆ ಸಂಧಾನ ಅಸಾಧ್ಯ’ ಎಂದಿದ್ದಾರೆ ಕಾಶಿನಾಥಯ್ಯ.

ಇದನ್ನೂ ಓದಿ: ದರ್ಶನ್ ಜೈಲಿನಿಂದ ಹೊರ ಬರೋದು ಯಾವಾಗ?; ಕೌಡೇಪಿರ ಲಾಲಸಾಬ ಭವಿಷ್ಯ

ದರ್ಶನ್ ಸದ್ಯ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ಆಗಿ ದಿನ ಕಳೆಯುತ್ತಿದ್ದಾರೆ. ಈ ಪ್ರಕರಣದಲ್ಲಿ ಶೀಘ್ರವೇ ಚಾರ್ಜ್​ಶೀಟ್ ಸಲ್ಲಿಕೆ ಆಗಲಿದೆ. ಆ ಬಳಿಕ ದರ್ಶನ್ ಜಾಮೀನು ಅರ್ಜಿ ಸಲ್ಲಿಕೆ ಮಾಡಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 2:57 pm, Thu, 25 July 24

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us