ಶಶಿಕುಮಾರ್ ಅವರು ಕನ್ನಡದ ಸ್ಟಾರ್ ಹೀರೋಗಳಲ್ಲಿ ಒಬ್ಬರಾಗಿದ್ದರು. ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಡ್ಯಾನ್ಸ್ ಮಾಡಿದರೆ ಎಲ್ಲರೂ ಕುಣಿದು ಕುಪ್ಪಳಿಸುತ್ತಿದ್ದರು. ಆದರೆ, ಒಂದು ಅಪಘಾತ ಅವರ ಜೀವನವನ್ನೇ ಬದಲಿಸಿ ಬಿಟ್ಟಿತ್ತು. ಅಪಘಾತದ ದಿನ ಏನಾಯಿತು ಎಂದು ಶಶಿಕುಮಾರ್ ಅವರು ಈ ಮೊದಲು ಹೇಳಿಕೊಂಡಿದ್ದರು. ಅವರು ನಡೆದ ಘಟನೆ ಕುರಿತು ಸಂಪೂರ್ಣವಾಗಿ ವಿವರಿಸಿದ್ದರು. ಆ ಬಗ್ಗೆ ಇಲ್ಲಿದೆ ವಿವರ.
ಶಶಿಕುಮಾರ್ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು ‘ಚಿರಂಜೀವಿ ಸುಧಾಕರ’ ಸಿನಿಮಾ ಮೂಲಕ. ರಾಘವೇಂದ್ರ ರಾಜ್ಕುಮಾರ್ ಚಿತ್ರಕ್ಕೆ ಹೀರೋ ಆಗಿದ್ದರು. ಈ ಸಿನಿಮಾ 1988ರಲ್ಲಿ ರಿಲೀಸ್ ಆಯಿತು. ಈ ಚಿತ್ರದಲ್ಲಿ ವಿಲನ್ ಆಗಿ ಗಮನ ಸೆಳೆದರು. 1989ರಲ್ಲಿ ಬಂದ ‘ಯುದ್ಧ ಕಾಂಡ’ ಸಿನಿಮಾ ಮೂಲಕ ಅವರು ಸಾಕಷ್ಟು ಜನಪ್ರಿಯತೆ ಪಡೆದರು. ರವಿಚಂದ್ರನ್ ನಟನೆಯ ಈ ಚಿತ್ರದಲ್ಲಿ ಅವರು ವಿಕ್ಕಿ ಹೆಸರಿನ ಪಾತ್ರ ಮಾಡಿದ್ದರು.
‘ಸಿಬಿಐ ಶಂಕರ್’, ‘ರಾಣಿ ಮಹರಾಣಿ’, ‘ಬಾರೆ ನನ್ನ ಮುದ್ದಿನ ರಾಣಿ’ ಮೂಲಕ ಅವರು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡರು. ಅವರು ಹೀರೋ ಆಗಿ ಗಮನ ಸೆಳೆಯಲು ಆರಂಭಿಸಿದರು. ಶಶಿಕುಮಾರ್ ಹಾಗೂ ಮಾಲಾಶ್ರೀ ಅವರು ಹಲವು ಹಿಟ್ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಅವರು ಚಿತ್ರರಂಗದ ಹಿಟ್ ಜೋಡಿಗಳಲ್ಲಿ ಒಂದಾಗಿತ್ತು.
1998ರಲ್ಲಿ ಬೆಂಗಳೂರಿನ ಟರ್ಫ್ಕ್ಲಬ್ ಸಮೀಪ ಅಪಘಾತ ಸಂಭಿವಿಸಿತು. ಈ ಅಪಘಾತದ ಬಗ್ಗೆ ಅವರು ಮಾತನಾಡಿದ್ದರು. ‘ನನ್ನ ಮಕ್ಕಳು ಐಸ್ಕ್ರೀಮ್ ಬೇಕು ಎಂದರು. ನಾನು ಕಾರಿನಲ್ಲಿ ಹೊರಟಿದ್ದೆ. ಅಲ್ಲಿ ಮಳೆ ಇತ್ತು. ಒಂಭತ್ತೂವರೆ ಆಗಿತ್ತು. ನನ್ನ ಮುಖದ ಮೇಲೆ ಲೈಟ್ ಬಿಟ್ಟರು. ನಾಲ್ಕೈದು ಬಾರಿ ಮುಖಕ್ಕೆ ಲೈಟ್ ಬಿಟ್ಟರು. ಆ ಬಳಿಕ ನಾನು ಸ್ಟ್ರೇರಿಂಗ್ ಬಲಕ್ಕೆ ತಿರುಗಿಸಿದೆ. ಅಷ್ಟೇ ನನಗೆ ನೆನಪಿದ್ದಿದ್ದು. ಆ ಬಳಿಕ ಆಸ್ಪತ್ರೆಯಲ್ಲಿ ಇದ್ದೆ’ ಎಂದಿದ್ದರು ಶಶಿಕುಮಾರ್.
ಆ ಸಂದರ್ಭದಲ್ಲಿ ಶಶಿಕುಮಾರ್ ಅವರಿಗೆ ಸಾಕಷ್ಟು ಆಫರ್ಗಳು ಬರುತ್ತಿದ್ದವು. ಆದರೆ, ಅಪಘಾತ ಆಗಿ ಅವರು ಕಾಲಿಗೆ ಸರ್ಜರಿ ಮಾಡಿಸಿಕೊಂಡ ಬಳಿಕ ಅವರಿಗೆ ಬರುತ್ತಿದ್ದ ಆಫರ್ಗಳೆಲ್ಲ ಹೊರಟು ಹೋದವು. ಇದು ಅವರನ್ನು ಕಂಗಾಲಾಗಿಸಿತು. ಆದರೆ, ಅವರು ಎದೆಗುಂದಲಿಲ್ಲ. ಸಪೋರ್ಟಿಂಗ್ ಪಾತ್ರಗಳನ್ನು ಮಾಡುತ್ತಾ ಬಂದರು. ಕಳೆದ ವರ್ಷ ರಿಲೀಸ್ ಆದ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಶಶಿಕುಮಾರ್ ಮಾಡಿದ್ದರು. ಈ ರೀತಿಯ ಪಾತ್ರಗಳ ಮೂಲಕ ಅವರು ಗಮನ ಸೆಳೆಯುವ ಪ್ರಯತ್ನ ಮಾಡುತ್ತಾ ಇದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ