ಟಾಕ್ಸಿಕ್ ಚಿತ್ರತಂಡದಿಂದ ಮರಗಳ ಮಾರಣಹೋಮ; ಅರಣ್ಯ ಸಚಿವ ಈಶ್ವರ ಖಂಡ್ರೆ ಸುದ್ದಿಗೋಷ್ಠಿ

‘ಟಾಕ್ಸಿಕ್’ ಸಿನಿಮಾದ ಚಿತ್ರೀಕರಣಕ್ಕಾಗಿ ಸೆಟ್ ಹಾಕಲು ಅನೇಕ ಮರಗಳನ್ನು ಕಡಿಯಲಾಗಿದೆ ಎಂಬ ಆರೋಪ ಎದುರಾಗಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ. ಮರಗಳನ್ನು ಕಡಿಯುವ ಮೂಲಕ ಕಾನೂನು ಉಲ್ಲಂಘನೆ ಆಗಿದೆ ಎಂದು ಈಶ್ವರ ಖಂಡ್ರೆ ಹೇಳಿದ್ದಾರೆ. ಮುಂದಿನ ಕ್ರಮದ ಬಗ್ಗೆ ಕೂಡ ಅವರು ಮಾತನಾಡಿದ್ದಾರೆ.

ಟಾಕ್ಸಿಕ್ ಚಿತ್ರತಂಡದಿಂದ ಮರಗಳ ಮಾರಣಹೋಮ; ಅರಣ್ಯ ಸಚಿವ ಈಶ್ವರ ಖಂಡ್ರೆ ಸುದ್ದಿಗೋಷ್ಠಿ
ಯಶ್

Updated on: Oct 29, 2024 | 7:45 PM

‘ರಾಕಿಂಗ್ ಸ್ಟಾರ್’ ಯಶ್ ಅವರು ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್ ಮಾಡುತ್ತಿದ್ದಾರೆ. ಈ ಚಿತ್ರದ ಸೆಟ್​ ನಿರ್ಮಾಣ ಮಾಡಲು ಮರಗಳಿಗೆ ಕೊಡಲಿ ಏಟು ಹಾಕಲಾಗಿದೆ. ಈ ಬಗ್ಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ‘ಹೆಚ್​ಎಂಟಿ ತನ್ನ ವಶದಲ್ಲಿದ್ದ ಜಮೀನನ್ನು ಮಾರಾಟ ಮಾಡಿದೆ. ಮರ, ಗಿಡ ಎಲ್ಲಾ ಕಡಿದು ಸಿನಿಮಾ ಚಿತ್ರೀಕರಣಕ್ಕೆ ಬಾಡಿಗೆ ಕೊಟ್ಟಿದ್ದಾರೆ, ದುಡ್ಡು ಮಾಡ್ತಿದ್ದಾರೆ. ಎಲ್ಲಾ ರೀತಿಯ ಕಾನೂನು ಉಲ್ಲಂಘನೆ ಮಾಡಿದ್ದಾರೆ. ಅವರಿಗೆ ಯಾವುದೇ ಅಧಿಕಾರ ಇಲ್ಲ’ ಎಂದು ಈಶ್ವರ ಖಂಡ್ರೆ ಅವರು ಹೇಳಿದ್ದಾರೆ.

‘ಟಾಕ್ಸಿಕ್ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ನಾನು ಖುದ್ದು ಹೋಗಿ ನೋಡಿದ್ದೇನೆ. ಅಲ್ಲಿನ ಸಂಪೂರ್ಣ ಚಿತ್ರಣ ಬದಲಾಗಿದೆ. ಏರಿಯಲ್ ಸರ್ವೇಯಲ್ಲಿ ಕಾಣಿಸಿದೆ. ಇದು ಬಿಬಿಎಂಪಿ ವ್ಯಾಪ್ತಿಗೆ ಬರಲಿದೆ. ಕಾನೂನು ಕ್ರಮಕ್ಕೆ ಪಾಲಿಕೆಗೂ ಪತ್ರ ಬರೆದಿದ್ದೇನೆ. ಕಾಯ್ದೆ 24ರಡಿ ಕೇಸ್ ದಾಖಲಿಸಲು ಅವಕಾಶ ಇದೆ. ಈಗಿನ ಪರಿಸ್ಥಿತಿ ತರಿಸಿಕೊಂಡಿದ್ದೇವೆ. ಹಿಂದಿನ ಜಾಗದ ಬಗ್ಗೆಯೂ ಮಾಹಿತಿ ಪಡೆದಿದ್ದೇವೆ. ಜಾಗ ಹೆಚ್​ಎಂಟಿ ವಶದಲ್ಲಿ ಇಲ್ಲ’ ಎಂದಿದ್ದಾರೆ ಈಶ್ವರ ಖಂಡ್ರೆ.

‘ಪ್ರಾಥಮಿಕ ಹಂತದಲ್ಲಿ ಮಾಹಿತಿ ಕೊಟ್ಟಿದ್ದೇವೆ. ಒಳಗೊಳಗೆ ಏನಿದೆ ಅಂತಾ ತನಿಖೆ ಆಗಬೇಕು. ಕ್ರಮಕ್ಕೆ ಪತ್ರ ಬರೆದಿದ್ದೇನೆ, ತನಿಖೆ ಆಗಲಿ. ಜಾಗದಲ್ಲಿ ಸಣ್ಣ ವಿಲೇಜ್ ಥರ ಸೆಟ್ ಹಾಕಿದ್ದಾರೆ. ಅರಣ್ಯ ಸಂಕ್ಷರಣೆ ಮಾಡೋದು ನನ್ನ ಕರ್ತವ್ಯ. ಅದರಲ್ಲಿ ಯಾವುದೇ ರೀತಿ ರಾಜಿ ಇಲ್ಲ. ಇನ್ನೂ ಏನು ಧೃಢೀಕರಣ ಬೇಕು? ಅಂಗೈ ಹುಣ್ಣಿಗೆ ಕನ್ನಡಿ ಅವಶ್ಯಕತೆ ಇಲ್ಲ. ಸರ್ವೋಚ್ಚ ನ್ಯಾಯಾಲಯ ಏನು ಹೇಳಿದೆ? ಹೆಚ್​ಎಂಟಿ ಕೂಡ ಸುಪ್ರೀಂ ಕೋರ್ಟ್​ಗೆ ಹೋಗಿದೆ. ಅಲ್ಲಿ ವಿಚಾರಣೆಗೆ ಬರಬೇಕಿದೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ಅಂದುಕೊಂಡಿದ್ದಕ್ಕಿಂತಲೂ ತಡವಾಗುತ್ತೆ’; ‘ಟಾಕ್ಸಿಕ್’ ಬಗ್ಗೆ ಯಶ್ ಕಡೆಯಿಂದ ಬ್ಯಾಡ್ ನ್ಯೂಸ್

‘ಸ್ಯಾಟಲೈಟ್ ಚಿತ್ರ ನೋಡಿದಾಗ ಕಳೆದ ಒಂದು ವರ್ಷದ್ದು ನೋಡಿದ್ದೇವೆ. ಅರಣ್ಯ ಪರವಾನಗಿ ತೆಗೆದುಕೊಂಡಿಲ್ಲ. ಪಾಲಿಕೆಗೆ ದೂರು ಕೊಟ್ಟಿದ್ದೇವೆ. ಕಮಿಟಿ ಮಾಡಿದ್ದಾರೆ. ನೋಟೀಸ್ ಕೊಟ್ಟಿದ್ದಾರೆ. ಚಿತ್ರತಂಡದ ಮೇಲೆ ನಾವು ಹೇಳ್ತಿಲ್ಲ. ಯಾರದ್ದು ತಪ್ಪು ಇದೆಯೋ ನೋಡಬೇಕು. ಸಿನಿಮಾ ತಂಡ ಅನುಮತಿ ಪಡೆದಿದ್ಯಾ ಅಂತಾ ತನಿಖೆ ಮಾಡಿ ನೋಡುತ್ತೇವೆ. ಮರಗಳ ಕಡಿತಲೆ ಮಾಡಲು ಅನುಮತಿ ಪಡೆದಿಲ್ಲ ಅಂತಾ ಅನ್ನಿಸುತ್ತದೆ. ಅನುಮತಿ ಕೊಡಲು ಬರಲ್ಲ. ಅದು ಕಾನೂನು ಬಾಹಿರ’ ಎಂದು ಈಶ್ವರ ಖಂಡ್ರೆ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.