Year Ender 2021: ಚಿತ್ರರಂಗದ ಪಾಲಿಗೆ ಕಪ್ಪು ಚುಕ್ಕೆಯಾದ 2021; ಮರೆಯೋಕೆ ಆಗಲ್ಲ ಪುನೀತ್​ ನಿಧನದ ನೋವು

| Updated By: ರಾಜೇಶ್ ದುಗ್ಗುಮನೆ

Updated on: Dec 26, 2021 | 6:39 AM

Year Ender 2021: ಪುನೀತ್​ ನಿಧನದ ನಂತರ ಸಾಕಷ್ಟು ಸೆಲೆಬ್ರಿಟಿಗಳು ಪುನೀತ್​ ಅಂತಿಮ ದರ್ಶನ ಪಡೆದಿದರು. ಅಕ್ಟೋಬರ್​ 31ರ ಮುಂಜಾನೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ, ರಾಜ್​ಕುಮಾರ್​ ಹಾಗೂ ಪಾರ್ವತಮ್ಮ ಸಮಾಧಿ ಪಕ್ಕದಲ್ಲೇ ಪುನೀತ್​ ಅವರ ಅಂತ್ಯ ಸಂಸ್ಕಾರ ನಡೆಸಲಾಯಿತು.

Year Ender 2021: ಚಿತ್ರರಂಗದ ಪಾಲಿಗೆ ಕಪ್ಪು ಚುಕ್ಕೆಯಾದ 2021; ಮರೆಯೋಕೆ ಆಗಲ್ಲ ಪುನೀತ್​ ನಿಧನದ ನೋವು
ಪುನೀತ್​
Follow us on

2020 ಚಿತ್ರರಂಗದ ಪಾಲಿಗೆ ಕಹಿ ತಂದಿದ್ದೇ ಹೆಚ್ಚು. ಸುಶಾಂತ್​ ಸಿಂಗ್​ ರಜಪೂತ್​, ಚಿರಂಜೀವಿ ಸರ್ಜಾ, ಇರ್ಫಾನ್​ ಖಾನ್​, ರಿಷಿ ಕಪೂರ್​ ಸೇರಿ ಸಾಕಷ್ಟು ಸ್ಟಾರ್​ ನಟರು ಮೃತಪಟ್ಟರು. ಕೊವಿಡ್​ನಿಂದ ಸಾಕಷ್ಟು ಕಲಾವಿದರು ನಿರುದ್ಯೋಗ ಸಮಸ್ಯೆ ಎದುರಿಸಿದರು. ಮಾಡಿದ ಸಿನಿಮಾ ರಿಲೀಸ್ ಮಾಡಲೂ ಆಗದೇ ಬಿಡಲೂ ಆಗದೇ ಒದ್ದಾಡಿದ್ದರು ನಿರ್ಮಾಪಕರು. ಕಳೆದ ವರ್ಷದ ಅಂತ್ಯದ ವೇಳೆಗೆ, 2021 ಆದರೂ ಚಿತ್ರರಂಗಕ್ಕೆ ಒಳಿತಾಗಲಿ ಎಂದು ಎಲ್ಲರೂ ಕೋರಿಕೊಂಡಿದ್ದರು. ಆದರೆ, ಅದು ಸುಳ್ಳಾಗಿದೆ. 2021 ಚಿತ್ರರಂಗದ ಪಾಲಿಗೆ ಅದರಲ್ಲೂ ಸ್ಯಾಂಡಲ್​ವುಡ್​ ಪಾಲಿಗೆ ಕಪ್ಪು ಚುಕ್ಕೆಯಾಗಿದೆ. ರಾಜ್​ಕುಮಾರ್​ ಕುಟುಂಬದ ಕುಡಿ, ‘ಪವರ್​ ಸ್ಟಾರ್​’ ಪುನೀತ್​ ರಾಜ್​ಕುಮಾರ್​ ಸಣ್ಣ ವಯಸ್ಸಿಗೆ ಮೃತಪಟ್ಟಿದ್ದನ್ನು ಯಾರಿಂದಲೂ ಊಹಿಸಿಕೊಳ್ಳೋಕೆ ಆಗುತ್ತಿಲ್ಲ. 2021 ಪೂರ್ಣಗೊಳ್ಳಲು ಕೆಲವೇ ತಿಂಗಳು ಬಾಕಿ ಇರುವಾಗ ಇಂತಹ ಒಂದು ಕಹಿ ಘಟನೆ ನಡೆದಿದ್ದು ದುರದೃಷ್ಟಕರ.

ಅಕ್ಟೋಬರ್​ 29 ರಾಜ್​ಕುಮಾರ್​ ಕುಟುಂಬದ ಪಾಲಿಗೆ ವಿಶೇಷವಾಗಿತ್ತು. ಏಕೆಂದರೆ, ಶಿವರಾಜ್​ಕುಮಾರ್​ ನಟನೆಯ ‘ಭಜರಂಗಿ 2’ ಸಿನಿಮಾ ರಿಲೀಸ್​ ಆಗಿತ್ತು. ಮುಂಜಾನೆಯೇ ಶಿವಣ್ಣ ಎದ್ದು ಚಿತ್ರಮಂದಿರಕ್ಕೆ ಭೇಟಿ ನೀಡಿದ್ದರು. ಆ ಬಳಿಕ ಅವರು ಮನೆಗೆ ತೆರಳಿದ್ದರು. ಆಗ ಬಿರುಗಾಳಿಯಂತೆ ಒಂದು ಸುದ್ದಿ ಬಂದಪ್ಪಳಿಸಿತ್ತು. ‘ಪುನೀತ್​ ಇನ್ನಿಲ್ಲ’! ಈ ವಿಚಾರ ಕೇಳಿ ಶಿವಣ್ಣ ನಿಜಕ್ಕೂ ಶಾಕ್​ಗೆ ಒಳಗಾಗಿದ್ದರು. ಅದನ್ನು ಅರಗಿಸಿಕೊಳ್ಳೋಕೆ ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ. ಆದರೆ, ಅದನ್ನು ಒಪ್ಪಿಕೊಳ್ಳಲೇಬೇಕಿತ್ತು.

ಪುನೀತ್​ ನಿಧನದ ನಂತರ ಸಾಕಷ್ಟು ಸೆಲೆಬ್ರಿಟಿಗಳು ಪುನೀತ್​ ಅಂತಿಮ ದರ್ಶನ ಪಡೆದಿದರು. ಅಕ್ಟೋಬರ್​ 31ರ ಮುಂಜಾನೆ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ, ರಾಜ್​ಕುಮಾರ್​ ಹಾಗೂ ಪಾರ್ವತಮ್ಮ ಸಮಾಧಿ ಪಕ್ಕದಲ್ಲೇ ಪುನೀತ್​ ಅವರ ಅಂತ್ಯ ಸಂಸ್ಕಾರ ನಡೆಸಲಾಯಿತು. ಈ ವೇಳೆ ಅಭಿಮಾನಿಗಳು ಹಾಗೂ ಕುಟುಂಬದವರ ಆಕ್ರಂದನ ಮುಗಿಲುಮುಟ್ಟಿತ್ತು. ಅವರು ನಿಧನ ಹೊಂದಿ 2 ತಿಂಗಳು ಕಳೆಯುತ್ತಾ ಬಂದರೂ ಅವರ ಸಮಾಧಿ ದರ್ಶನಕ್ಕೆ ಅಭಿಮಾನಿಗಳು ಬರುತ್ತಲೇ ಇದ್ದಾರೆ.

ಪುನೀತ್​ ನಿಧನದ ವಿಚಾರ ಇಡೀ ಭಾರತೀಯ ಚಿತ್ರರಂಗಕ್ಕೆ ದೊಡ್ಡ ನಷ್ಟವನ್ನುಂಟು ಮಾಡಿದೆ. ಪುನೀತ್​ ಸಾಕಷ್ಟು ಕನಸುಗಳನ್ನು ಕಂಡಿದ್ದರು. ಪಿಆರ್​ಕೆ ಸ್ಟುಡಿಯೋ ಮೂಲಕ ಹಲವು ಸಿನಿಮಾಗಳನ್ನು ನಿರ್ಮಿಸುವ ಆಲೋಚನೆ ಇಟ್ಟುಕೊಂಡಿದ್ದರು. ಅವೆಲ್ಲವನ್ನೂ ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ‘ಜೇಮ್ಸ್​’ ಚಿತ್ರದಲ್ಲಿ ಪುನೀತ್​ ನಟಿಸುತ್ತಿದ್ದರು. ಈ ಚಿತ್ರದ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು, ಈ ಸಿನಿಮಾ ಚಿತ್ರಮಂದಿರದಲ್ಲೇ ರಿಲೀಸ್​ ಆಗಲಿದೆ. ಇದಲ್ಲದೆ, ‘ಲಕ್ಕಿ ಮ್ಯಾನ್​’ ಚಿತ್ರದಲ್ಲಿ ಪುನೀತ್​ ಅತಿಥಿ ಪಾತ್ರ ಮಾಡಿದ್ದು, ಈ ಸಿನಿಮಾದ ಕೆಲಸ ಕೂಡ ಪೂರ್ಣಗೊಂಡಿದೆ. ಪುನೀತ್ ಕನಸಿನ ‘ಗಂಧದ ಗುಡಿ’ ಸಾಕ್ಷ್ಯ ಚಿತ್ರದ ಕೆಲಸಗಳು ಭರದಿಂದ ಸಾಗಿವೆ.

ಪುನೀತ್​ ಅವರನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಬಡವಾಗಿದೆ. ಅವರಿಲ್ಲ ಎಂಬುದನ್ನು ಅರಗಿಸಿಕೊಳ್ಳೋಕೆ ಈಗಲೂ ಸಾಧ್ಯವಾಗುತ್ತಿಲ್ಲ. ಪುನೀತ್​ ಅವರನ್ನು ಕಳೆದುಕೊಂಡ ಈ ವರ್ಷ ಸ್ಯಾಂಡಲ್​ವುಡ್​ ಪಾಲಿಗೆ ಕಪ್ಪು ಚುಕ್ಕೆಯಾಗಿದೆ. ಅವರಿಲ್ಲ ಎಂಬ ನೋವು ಎಂದಿಗೂ ನಮ್ಮೊಂದಿಗೆ ಇರಲಿದೆ.

ಇದನ್ನೂ ಓದಿ: Year Ender 2021: ಕೊವಿಡ್​ನಿಂದ ಈ ವರ್ಷ ಚಿತ್ರರಂಗ ಅನುಭವಿಸಿದ ನಷ್ಟ ಅಷ್ಟಿಷ್ಟಲ್ಲ

Year Ender 2021: ಕಷ್ಟದಲ್ಲೂ ಗಮನ ಸೆಳೆದ ಕನ್ನಡ ಸಿನಿಮಾಗಳು; ಈ ವರ್ಷ ಗೆದ್ದವರು ವಿರಳ, ಸೋತವರು ಬಹಳ