
ಕನ್ನಡದ ಖ್ಯಾತ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಅವರು ಇದೇ ವರ್ಷ ಏಪ್ರಿಲ್ 16 ರಂದು ನಿಧನರಾದರು. ವಯೋಸಹಜ ಅನಾರೋಗ್ಯದಿಂದ ಅವರು ಬಳಲಿದ್ದರು. ಕನ್ನಡ ಚಿತ್ರರಂಗಕ್ಕೆ ಅಪಾರ ಕೊಡುಗೆ ನೀಡಿದ್ದರು ದ್ವಾರಕೀಶ್. ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದರು.

ಕನ್ನಡ ಸಿನಿಮಾ, ಟಿವಿ ಲೋಕದ ತಾರೆ ಅಪರ್ಣಾ ಇದೇ ವರ್ಷ ಜೂನ್ ತಿಂಗಳಲ್ಲಿ ನಿಧನ ಹೊಂದಿದರು. ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದರು. ಅದ್ಭುತ ನಟನೆ, ಸ್ಪಷ್ಟ ಕನ್ನಡ ಉಚ್ಛಾರಣೆಯಿಂದ ಅವರು ಕರ್ನಾಟಕದಲ್ಲಿ ಮನೆ ಮಾತಾಗಿದ್ದರು. ಸಾವಿರಾರು ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದ ಅಪರ್ಣಾ, ಹಲವಾರು ಕನ್ನಡ ಸಿನಿಮಾ ಹಾಗೂ ಟಿವಿ ಶೋಗಳಲ್ಲಿಯೂ ನಟಿಸಿದ್ದರು.

‘ಮಠ’, ‘ಎದ್ದೇಳು ಮಂಜುನಾಥ’ ಅಂಥಹಾ ಭಿನ್ನ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡಿದ ನಿರ್ದೇಶಕ ಗುರುಪ್ರಸಾದ್ ನವೆಂಬರ್ ತಿಂಗಳಲ್ಲಿ ನಿಧನ ಹೊಂದಿದರು. ಸಾಲ, ಖಿನ್ನಿತೆಯಿಂದ ಬಳಲುತ್ತಿದ್ದ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾದರು. ಸರಸ್ವತಿಪುತ್ರ ಎಂದೆಲ್ಲ ಕರೆಸಿಕೊಂಡಿದ್ದ ಗುರುಪ್ರಸಾದ್, ಸ್ವಯಂಕೃತ ಅಪರಾಧದಿಂದ ಎಲ್ಲವನ್ನೂ ಕಳೆದುಕೊಂಡರು.

‘ಬಾ ನಲ್ಲೆ ಮಧುಚಂದ್ರಕೆ’ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದ ಕೆ ಶಿವರಾಂ ಅವರು ಫೆಬ್ರವರಿ 29 ರಂದು ನಿಧನರಾದರು. ಕನ್ನಡದಲ್ಲಿ ಪರೀಕ್ಷೆ ಎದುರಿಸಿ ಐಎಎಸ್ ಅಧಿಕಾರಿಯಾಗಿದ್ದ ಶಿವರಾಂ ಅವರು ಹಲವರಿಗೆ ಸ್ಪೂರ್ತಿ ತುಂಬಿದ್ದರು.

ಡಾ ರಾಜ್ಕುಮಾರ್, ವಿಷ್ಣುವರ್ಧನ್, ಅನಂತ್ನಾಗ್ ಸೇರಿದಂತೆ ಹಲವು ಹಿರಿಯ ಕಲಾವಿದರೊಟ್ಟಿಗೆ ನಟಿಸಿದ್ದ ಖ್ಯಾತ ಪೋಷಕ ನಟ ಟಿ ತಿಮ್ಮಯ್ಯ ಅವರು ನವೆಂಬರ್ 16 ರಂದು ನಿಧನ ಹೊಂದಿದರು. ಟಿ. ತಿಮ್ಮಯ್ಯ ಅವರು ಸುಮಾರು 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು.

ಕನ್ನಡದ ಖ್ಯಾತ ಕಿರುತೆರೆ ನಟಿ ಪವಿತ್ರಾ ಜಯರಾಂ ಅವರು ಹೈದರಾಬಾದ್ ಬಳಿ ನಡೆದ ಕಾರು ಅಪಘಾತದಲ್ಲಿ ಮೇ 12ರಂದು ನಿಧನ ಹೊಂದಿದರು. ಕನ್ನಡ ಮಾತ್ರವಲ್ಲದೆ ತೆಲುಗು ಧಾರಾವಾಹಿಗಳಲ್ಲಿಯೂ ಪವಿತ್ರಾ ನಟಿಸುತ್ತಿದ್ದರು. ಹೈದರಾಬಾದ್ನಿಂದ ಕರ್ನಾಟಕಕ್ಕೆ ಬರುವಾಗ ಅವರು ನಿಧನ ಹೊಂದಿದರು. ಅವರ ನಿಧನದ ಬೆನ್ನಲ್ಲೆ ಅವರ ಗೆಳೆಯ ಸಹ ಆತ್ಮಹತ್ಯೆ ಮಾಡಿಕೊಂಡರು. ಅವರೂ ನಟರಾಗಿದ್ದರು.

‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ನಟಿಸಿ ಜನಪ್ರಿಯತೆ ಗಳಿಸಿದ್ದ ನಟಿ ಶೋಭಿತಾ ಶಿವಣ್ಣ ಇದೇ ತಿಂಗಳ ಒಂದನೇ ತಾರೀಖು ನಿಧನ ಹೊಂದಿದರು. ಕಳೆದ ವರ್ಷವಷ್ಟೆ ವಿವಾಹವಾಗಿದ್ದ ಶೋಭಿತಾ ಶಿವಣ್ಣ, ಡಿಸೆಂಬರ್ 1 ರಂದು ಹೈದರಾಬಾದ್ನಲ್ಲಿ ಆತ್ಮಹತ್ಯೆಗೆ ಶರಣಾದರು. ಅವರಿಗೆ ಮದುವೆ ಇಷ್ಟವಿರಲಿಲ್ಲ ಅದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತುಗಳು ಅವರ ನಿಧನದ ಬಳಿಕ ಕೇಳಿ ಬಂತು.