ತಮಿಳಿನಲ್ಲಿ ಶಿವರಾಜ್​ಕುಮಾರ್ 4ನೇ ಸಿನಿಮಾಗೆ ಮುಹೂರ್ತ; ಭರ್ಜರಿ ಡಿಮ್ಯಾಂಡ್

ಕನ್ನಡದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಕಾಲ್‌ಶೀಟ್ ಪಡೆಯಲು ಪರಭಾಷೆಯ ನಿರ್ದೇಶಕರು, ನಿರ್ಮಾಪಕರು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಈಗ ಶಿವಣ್ಣ ಮತ್ತೊಂದು ಹೊಸ ತಮಿಳು ಸಿನಿಮಾವನ್ನು ಒಪ್ಪಿಕೊಂಡಿದ್ದು, ಈ ಚಿತ್ರದ ಮುಹೂರ್ತ ಇಂದು (ಜೂನ್ 1) ನೆರವೇರಿದೆ. ಇದು ತಮಿಳಿನಲ್ಲಿ ಅವರು ಒಪ್ಪಿಕೊಂಡ 4ನೇ ಸಿನಿಮಾ.

ತಮಿಳಿನಲ್ಲಿ ಶಿವರಾಜ್​ಕುಮಾರ್ 4ನೇ ಸಿನಿಮಾಗೆ ಮುಹೂರ್ತ; ಭರ್ಜರಿ ಡಿಮ್ಯಾಂಡ್
Shiva Rajkumar New Film Team

Updated on: Jun 01, 2026 | 2:37 PM

‘ಟೂರಿಸ್ಟ್ ಫ್ಯಾಮಿಲಿ’ ಮತ್ತು ‘ವಿತ್ ಲವ್’ ಚಿತ್ರಗಳ ಮೂಲಕ ಕಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ ನಟ-ನಿರ್ದೇಶಕ ಅಭಿಷನ್ ಜೀವಿಂತ್ ಅವರ ಹೊಸ ಚಿತ್ರದಲ್ಲಿ ಶಿವರಾಜ್‌ಕುಮಾರ್ (Shiva Rajkumar) ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆರಂಭದಲ್ಲಿ ಈ ಚಿತ್ರವನ್ನು ಅಭಿಷನ್ ಅವರೇ ನಿರ್ದೇಶಿಸಲಿದ್ದಾರೆ ಎನ್ನಲಾಗಿತ್ತು. ಆದರೆ, ಈಗ ಹೊರಬಿದ್ದಿರುವ ಮಾಹಿತಿ ಪ್ರಕಾರ ಅಭಿಷನ್ ಈ ಚಿತ್ರವನ್ನು ನಿರ್ದೇಶಿಸುತ್ತಿಲ್ಲ, ಬದಲಿಗೆ ಶಿವಣ್ಣ (Shivanna) ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ಇವರಿಬ್ಬರು ತಂದೆ-ಮಗನಾಗಿ ನಟಿಸಲಿದ್ದಾರೆ ಎಂದು ವರದಿಯಾಗಿದೆ.

ಸಾಂಪ್ರದಾಯಿಕ ಪೂಜೆಯೊಂದಿಗೆ ಇಂದು (ಜೂನ್ 1) ಚಿತ್ರಕ್ಕೆ ಚಾಲನೆ ಸಿಕ್ಕಿದ್ದು, ಚಿತ್ರತಂಡ ಸಂಪೂರ್ಣ ತಾರಾಗಣವನ್ನು ಅಧಿಕೃತವಾಗಿ ಘೋಷಿಸಿದೆ. ಈ ಚಿತ್ರವನ್ನು ಗೌತಮ್ ಶಿವರಾಮನ್ ನಿರ್ದೇಶಿಸುತ್ತಿದ್ದಾರೆ. ಅವರು ಈ ಹಿಂದೆ ಅಭಿಷನ್ ಜೀವಿಂತ್ ಅವರ ‘ಟೂರಿಸ್ಟ್ ಫ್ಯಾಮಿಲಿ’ ಚಿತ್ರದಲ್ಲಿ ಸಹ-ನಿರ್ದೇಶಕರಾಗಿ ಕೆಲಸ ಮಾಡಿದ್ದರು. ‘ಡ್ರಾಮಾ ಕಂಪನಿ’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚೊಚ್ಚಲ ಸಿನಿಮಾ ಇದಾಗಿದ್ದು, ಶಿವಾನಿ ನಾಗರಂ ಮತ್ತು ಯೋಗ ಲಕ್ಷ್ಮಿ ನಾಯಕಿಯರಾಗಿ ಆಯ್ಕೆಯಾಗಿದ್ದಾರೆ. ನಟ ಗಾನಾ ವಿನೋದ್ ಕೂಡ ಈ ಚಿತ್ರದ ಪ್ರಮುಖ ಪಾತ್ರವರ್ಗದಲ್ಲಿದ್ದಾರೆ. ಲಿಯೋನ್ ಜೇಮ್ಸ್ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಜೈಲರ್’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದ ಶಿವರಾಜ್‌ಕುಮಾರ್, ಆ ಬಳಿಕ ಧನುಷ್ ಜೊತೆ ‘ಕ್ಯಾಪ್ಟನ್ ಮಿಲ್ಲರ್’ ಚಿತ್ರದಲ್ಲಿ ಅಬ್ಬರಿಸಿದ್ದರು. ಸದ್ಯದಲ್ಲೇ ಬರಲಿರುವ ‘ಜೈಲರ್ 2’ ನಂತರ, ಪ್ರಸ್ತುತ ಅನೌನ್ಸ್ ಆಗಿರುವ ಚಿತ್ರವು ಶಿವಣ್ಣ ಅವರ ಪೂರ್ಣ ಪ್ರಮಾಣದ 4ನೇ ತಮಿಳು ಸಿನಿಮಾವಾಗಲಿದೆ.

ಇದನ್ನೂ ಓದಿ: ಗುಮ್ಮಡಿ ನರಸಯ್ಯ ನಿವಾಸಕ್ಕೆ ಭೇಟಿ ನೀಡಿದ ಶಿವರಾಜ್​ಕುಮಾರ್: ಫೋಟೋ ಗ್ಯಾಲರಿ

ಸದ್ಯ ಶಿವಣ್ಣ ಭಾರತೀಯ ಚಿತ್ರರಂಗದ ವಿವಿಧ ಭಾಷೆಗಳಲ್ಲಿ ಬ್ಯುಸಿಯಾಗಿದ್ದಾರೆ. ಮೆಗಾ ಪವರ್ ಸ್ಟಾರ್ ರಾಮ್ ಚರಣ್ ನಾಯಕರಾಗಿ ನಟಿಸಿರುವ, ಬುಚ್ಚಿ ಬಾಬು ಸನಾ ನಿರ್ದೇಶನದ ಬಹುನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ‘ಪೆದ್ದಿ’ ಚಿತ್ರದಲ್ಲಿ ಶಿವಣ್ಣ ಗೌರನಾಯ್ಡು ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಜೂನ್ 4ರಂದು ವಿಶ್ವದಾದ್ಯಂತ ತೆರೆಕಾಣಲು ಸಜ್ಜಾಗಿದೆ. ಇದರ ಜೊತೆಗೆ ‘ಸತ್ಯ ಜ್ಯೋತಿ ಫಿಲ್ಮ್ಸ್’ ಬ್ಯಾನರ್‌ನಲ್ಲಿ ನಿರ್ದೇಶಕ ಶರವಣನ್ ಅವರ ಸಿನಿಮಾವೂ ಸದ್ಯದಲ್ಲೇ ಸೆಟ್ಟೇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us