94ರ ವಯಸ್ಸಿನಲ್ಲಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ ಲಿಜೆಂಡರಿ ನಿರ್ದೇಶಕ, ರಾಜಮೌಳಿಗೂ ಕಾತರ

Singeetam Srinivasa Rao: ಒಂದೆರಡು ಸೂಪರ್ ಹಿಟ್ ಸಿನಿಮಾ ನೀಡಿ ಬಳಿಕ ಸರಕು ಖಾಲಿಯಾಗಿ ಖಾಲಿ ಡಬ್ಬ ಆಗಿರುವ, ಚಿತ್ರರಂಗದಿಂದಲೇ ಮರೆಯಾಗಿರುವ ಹಲವು ನಿರ್ದೇಶಕರ ನೋಡಿದ್ದೇವೆ. ಅಥವಾ ಬರೀ ರೀಮೇಕ್ ಮಾಡಿಕೊಂಡು ಪ್ರಸ್ತುತವಾಗಿ ಉಳಿದಿರುವ ನಿರ್ದೇಶಕರು ಸಹ ಇದ್ದಾರೆ. ಆದರೆ ಇಲ್ಲೊಬ್ಬರು ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ 94ರ ವಯಸ್ಸಿನಲ್ಲಿ ಹೊಸ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇವರ ಸಿನಿಮಾಕ್ಕೆ ರಾಜಮೌಳಿಯೂ ಕಾಯುತ್ತಿದ್ದಾರೆ.

94ರ ವಯಸ್ಸಿನಲ್ಲಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ ಲಿಜೆಂಡರಿ ನಿರ್ದೇಶಕ, ರಾಜಮೌಳಿಗೂ ಕಾತರ
Singeetham

Updated on: Jan 31, 2026 | 8:11 PM

ಸಿಂಗೀತಂ ಶ್ರೀನಿವಾಸ್, ಭಾರತದ ಲಿಜೆಂಡರಿ ಸಿನಿಮಾ ನಿರ್ದೇಶಕರುಗಳಲ್ಲಿ (Director) ಒಬ್ಬರು. ಅವರು ನಿರ್ದೇಶಿಸಿರುವ ಅತ್ಯುತ್ತಮ ಸಿನಿಮಾಗಳ ಪಟ್ಟಿ ಬಹಳ ದೊಡ್ಡದಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಎಲ್ಲ ಭಾಷೆಗಳಲ್ಲಿಯೂ ಸಿನಿಮಾಗಳನ್ನು ನಿರ್ದೇಶಿಸಿರುವುದು ಮಾತ್ರವೇ ಅಲ್ಲ ಸುಮಾರು 20ಕ್ಕೂ ಹೆಚ್ಚು ಆಲ್​​ಟೈಂ ಕಲ್ಟ್ ಸಿನಿಮಾಗಳನ್ನು ಭಾರತ ಚಿತ್ರರಂಗಕ್ಕೆ ನೀಡಿದ ಅತ್ಯದ್ಭುತ ನಿರ್ದೇಶಕ ಅವರು. ಅಪ್ಪಟ ಸಿನಿಮಾ ಪ್ರೇಮಿ ಆಗಿರುವ ಸಿಂಗೀತಂ ಶ್ರೀನಿವಾಸ್ ವಯಸ್ಸು ಈಗ 94 ವರ್ಷ. ಈ ವಯಸ್ಸಿನಲ್ಲೂ ಅವರು ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದಾರೆ. ಮುಂದಾಗಿರುವುದು ಮಾತ್ರವಲ್ಲ, ಹಲವು ಭಾಗಗಳ ಚಿತ್ರೀಕರಣವನ್ನೂ ಮುಗಿಸಿಬಿಟ್ಟಿದ್ದಾರೆ.

ಸಿಂಗೀತಂ ಶ್ರೀನಿವಾಸ್ ಅವರು ಈ ವಯಸ್ಸಿನಲ್ಲಿ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾಕ್ಕೆ ದಕ್ಷಿಣದ ಜನಪ್ರಿಯ ಮತ್ತು ಹಿರಿಯ ನಿರ್ಮಾಣ ಸಂಸ್ಥೆಯಾದ ವೈಜಯಂತಿ ಮೂವೀಸ್ ಬಂಡವಾಳ ಹೂಡಿದೆ. ಸಿಂಗೀತಂ ಅವರು ಈಗಾಗಲೇ ತಮ್ಮ ಹೊಸ ಸಿನಿಮಾದ ಹಲವು ಭಾಗಗಳ ಚಿತ್ರೀಕರಣವನ್ನು ಸಹ ಮುಗಿಸಿದ್ದಾರೆ. ಈ ಕುರಿತು ವಿಡಿಯೋ ಬಿಡುಗಡೆ ಮಾಡಿರುವ ವೈಜಯಂತಿ ಮೂವೀಸ್, ಸಿಂಗೀತಂ ಅವರು ಚಿತ್ರೀಕರಣ ಮಾಡುತ್ತಿರುವ ದೃಶ್ಯಗಳನ್ನು ಹಂಚಿಕೊಂಡಿದೆ. ಸಿನಿಮಾಕ್ಕೆ ದೇವಿ ಶ್ರೀ ಪ್ರಸಾದ್ ಅವರು ಸಂಗೀತ ನೀಡಿರುವುದು ಮತ್ತೊಂದು ವಿಶೇಷ.

ಸಿಂಗೀತಂ ಶ್ರೀನಿವಾಸ್ ಅವರ ಹೊಸ ಸಿನಿಮಾದ ನಟರುಗಳು ಯಾರು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಇತ್ತೀಚೆಗಷ್ಟೆ ಸಿನಿಮಾದ ಮುಹೂರ್ತ ನಡೆದಿದೆ. ಈ ಸಿನಿಮಾ ಸಿಂಗೀತಂ ಶ್ರೀನಿವಾಸ್ ಅವರ ಬಹು ಮೆಚ್ಚಿನ ಕತೆಯನ್ನು ಒಳಗೊಂಡಿರಲಿದ್ದು, ಇದು ಅವರ ಡ್ರೀಮ್ ಪ್ರಾಜೆಕ್ಟ್ ಆಗಿದೆಯಂತೆ. ಸಿನಿಮಾದ ಟೈಟಲ್ ಅನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ವೈಜಯಂತಿ ಮೂವೀಸ್ ಹೇಳಿಕೊಂಡಿದೆ.

ಇದನ್ನೂ ಓದಿ:ಈ ವಾರ ಒಟಿಟಿಗೆ ಬಂದಿವೆ ಭರ್ಜರಿ ಸಿನಿಮಾಗಳು: ನೀವೂ ನೋಡಿ

ಸಿಂಗೀತಂ ಶ್ರೀನಿವಾಸ್ ಅವರ 61ನೇ ಸಿನಿಮಾ ಇದಾಗಿದೆ. 2005 ರಲ್ಲಿ ಬಿಡುಗಡೆ ಆದ ಕಮಲ್ ಹಾಸನ್ ನಟನೆಯ ‘ಮುಂಬೈ ಎಕ್ಸ್​​ಪ್ರೆಸ್’ ಸಿಂಗೀತಂ ನಿರ್ದೇಶಿಸಿದ ಕೊನೆಯ ಸಿನಿಮಾ ಆಗಿತ್ತು. ಅದಾದ ಬಳಿಕ 2013 ರಲ್ಲಿ ‘ವೆಲ್​​ಕಮ್ ಒಬಾಮ’ ಹೆಸರಿನ ಮಕ್ಕಳ ಸಿನಿಮಾ ನಿರ್ದೇಶಿಸಿದರು. ಅದಾದ ಬಳಿಕ ಈಗ ಮತ್ತೆ ಡೈರೆಕ್ಟರ್ ಕುರ್ಚಿ ಏರಿದ್ದಾರೆ.

ಶಿವಣ್ಣನ ಮೊದಲ ಸಿನಿಮಾ ‘ಆನಂದ್’, ‘ಭಾಗ್ಯದ ಲಕ್ಷ್ಮಿ ಬಾರಮ್ಮ’, ‘ಹಾಲು-ಜೇನು’, ‘ಚಲಿಸುವ ಮೋಡಗಳು’, ‘ದೇವತಾ ಮನುಷ್ಯ’, ‘ಶ್ರುತಿ ಸೇರಿದಾಗ’, ‘ಟುವ್ವಿ ಟುವ್ವಿ ಟುವ್ವಿ’ ಇನ್ನೂ ಕೆಲವಾರು ಸೂಪರ್ ಹಿಟ್ ಸಿನಿಮಾಗಳನ್ನು ಸಿಂಗೀತಂ ಕನ್ನಡಕ್ಕೆ ನೀಡಿದ್ದಾರೆ. ಭಾರತದ ಅತ್ಯುತ್ತಮ ಸಿನಿಮಾಗಳಲ್ಲಿ ಒಂದಾದ ‘ಪುಷ್ಪಕ ವಿಮಾನ’ದ ನಿರ್ದೇಶಕರೂ ಇವರೇ. ತೆಲುಗಿನಲ್ಲಿ ‘ಭೈರವ ದ್ವೀಪಂ’, ‘ಆದಿತ್ಯ 369’ ತಮಿಳಿನ ‘ಅಪೂರ್ವ ಸೋದರಂಗಳ್’ ಸೇರಿದಂತೆ ಇನ್ನೂ ಹಲವು ಅತ್ಯುತ್ತಮ ಸಿನಿಮಾಗಳನ್ನು ಅವರು ನೀಡಿದ್ದಾರೆ. ಎಸ್​​ಎಸ್ ರಾಜಮೌಳಿ ಸಹ ಸಿಂಗೀತಂ ಅವರ ಹೊಸ ಸಿನಿಮಾದ ಬಗ್ಗೆ ಇನ್​​ಸ್ಟಾಗ್ರಾಂನಲ್ಲಿ ಸ್ಟೋರಿ ಹಂಚಿಕೊಂಡಿದ್ದು, ಸಿನಿಮಾಕ್ಕಾಗಿ ಕಾತರನಾಗಿ ಕಾಯುತ್ತಿರುವುದಾಗಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ