
ಭಾರತೀಯ ಚಿತ್ರರಂಗದ ಐಕಾನಿಕ್ ಸ್ಟಾರ್ ನಟಿಯರಲ್ಲಿ ಒಬ್ಬರಾಗಿದ್ದ ಶ್ರೀದೇವಿ ಆಗಿನ ಕಾಲಕ್ಕೆ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದರು. ಅದ್ಭುತ ನಟನೆಯ ಜೊತೆಗೆ ನೃತ್ಯ, ನಟನೆ ಎಲ್ಲವನ್ನೂ ಹೊಂದಿದ್ದು. ಹಲವಾರು ಭಾಷೆಗಳಲ್ಲಿ ನಟಿಸಿ ಎಲ್ಲ ಭಾಷೆಗಳಲ್ಲಿಯೂ ಹಲವಾರು ಹಿಟ್ ಸಿನಿಮಾಗಳನ್ನು ನೀಡಿದ ಶ್ರೀದೇವಿ ಸಾಕಷ್ಟು ಆಸ್ತಿಯನ್ನೂ ಗಳಿಸಿಕೊಂಡಿದ್ದರು. ಅದರಲ್ಲಿ ಒಂದು ಆಸ್ತಿ ಮಾತ್ರ ವಿವಾದಕ್ಕೆ ಸಿಲುಕಿಕೊಂಡಿದ್ದು, ಸುಮಾರು 300 ಕೋಟಿ ಮೌಲ್ಯದ ಆ ಆಸ್ತಿ ಇದೀಗ ಶ್ರೀದೇವಿಯ ಕುಟುಂಬದಿಂದ ದೂರಾಗಲಿದೆಯೇ ಎಂಬ ಅನುಮಾನ ಮೂಡಿದೆ.
ನಟಿ ಶ್ರೀದೇವಿ ಮತ್ತು ಅವರ ಕುಟುಂಬದವರು ಚೆನ್ನೈನ ಶೋಲಿಂಗನಲ್ಲೂರು ಎಂಬಲ್ಲಿ 2.70 ಎಕರೆ ಜಾಗ ಖರೀದಿ ಮಾಡಿದ್ದರು. ಕಳೆದ ಕೆಲ ವರ್ಷಗಳಿಂದಲೂ ಆ ಜಮೀನು ವಿವಾದದಲ್ಲಿದೆ. ಇದೀಗ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಕೆ.ವಿ. ವಿಶ್ವನಾಥನ್ ಮತ್ತು ಅರುಣ್ ಪಿಳ್ಳೈ ಅವರನ್ನೊಳಗೊಂಡ ಪೀಠವು, ವಿವಾದಿತ ಆಸ್ತಿಯ ಒಂದು ಭಾಗದ ಮೇಲೆ ಹಕ್ಕು ಮಂಡಿಸಿರುವ ಎಂ.ಸಿ. ಶಿವಕಾಮಿ ಮತ್ತು ಅವರ ಸಹೋದರ ಎಂ.ಸಿ. ನಟರಾಜನ್ ಅವರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆತ್ತಿಕೊಂಡಿದೆ. ಶ್ರೀದೇವಿಯ ಪತಿ ಬೋನಿ ಕಪೂರ್ ಹಾಗೂ ಅವರ ಮಕ್ಕಳಿಗೆ ಸುಪ್ರೀಂಕೋರ್ಟ್ನಿಂದ ನೊಟೀಸ್ ಜಾರಿ ಮಾಡಲಾಗಿದೆ.
ಮುಂದಿನ ವಿಚಾರಣೆಯವರೆಗೆ ಆಸ್ತಿಯ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಉಭಯ ಪಕ್ಷಕಾರರಿಗೆ ಕೋರ್ಟ್ ನಿರ್ದೇಶಿಸಿದೆ. ಅಲ್ಲದೆ, ಈ ವಿಷಯವನ್ನು ಮಧ್ಯಸ್ಥಿಕೆಯ ಮೂಲಕ ಬಗೆಹರಿಸಿಕೊಳ್ಳುವಂತೆ ಸೂಚಿಸಿದ ನ್ಯಾಯಾಲಯವು, ಈ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರನ್ನು ನೇಮಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ.
ಮಧ್ಯಸ್ಥಿಕೆಯ ಪ್ರಗತಿಯನ್ನು ಪರಿಶೀಲಿಸಲು ಈ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 18 ಕ್ಕೆ ನಿಗದಿಪಡಿಸಲಾಗಿದೆ. ಮದ್ರಾಸ್ ಹೈಕೋರ್ಟ್ ಏಪ್ರಿಲ್ 20 ರಂದು ಕಪೂರ್ ಕುಟುಂಬದ ಪರವಾಗಿ ತೀರ್ಪು ನೀಡಿ, ಅವರ ರಿವಿಷನ್ ಅರ್ಜಿಯನ್ನು ಪುರಸ್ಕರಿಸಿ ಮತ್ತು ಶಿವಕಾಮಿ ಸಹೋದರರು ಸಲ್ಲಿಸಿದ್ದ ಸಿವಿಲ್ ಮೊಕದ್ದಮೆಯನ್ನು ವಜಾಗೊಳಿಸಿತ್ತು. ಇದರ ನಂತರವೇ ಈ ಸಹೋದರರು ಸುಪ್ರೀಂ ಕೋರ್ಟ್ ಅನ್ನು ಮೆಟ್ಟಿಲೇರಿದ್ದರು.
ಇದನ್ನೂ ಓದಿ:‘ತಂದೆ ನನ್ನ ಸಿನಿಮಾ ಪ್ರಚಾರ ಮಾಡಲ್ಲ’; ಕಾರಣ ಹೇಳಿದ ಜೇಸನ್ ಸಂಜಯ್
1988 ರ ಹಿಂದಿನ ಆಸ್ತಿ ವ್ಯವಹಾರಗಳ ಮೇಲಿನ ಸವಾಲನ್ನು ಪರಿಗಣಿಸಲು ಮಿತಿ ಕಾನೂನಿನ (Barred by limitation) ಅಡಿಯಲ್ಲಿ ಅವಕಾಶವಿಲ್ಲ ಎಂದು ಈ ಹಿಂದೆ ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್ ತೀರ್ಮಾನಿಸಿತ್ತು. ಅಲ್ಲದೆ, ನ್ಯಾಯಾಲಯದ ಮುಂದೆ ಸಲ್ಲಿಸಲಾದ ದಾಖಲೆಗಳ ಆಧಾರದ ಮೇಲೆ ಅರ್ಜಿದಾರರ ಹಕ್ಕುಗಳಿಗೆ ತಕ್ಕಷ್ಟು ಕಾನೂನುಬದ್ಧ ಆಧಾರಗಳಿಲ್ಲ ಎಂದೂ ಅದು ಅಭಿಪ್ರಾಯಪಟ್ಟಿತ್ತು. ಆ ಬಳಿಕ ಶಿವಕಾಮಿ ಸಹೋದರರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ವಿವಾದಿತ ಆಸ್ತಿಯು ಚೆನ್ನೈನ ಶೋಲಿಂಗನಲ್ಲೂರು ಸರ್ವೆ ನಂ. 1/1B ನಲ್ಲಿದೆ. ಮದ್ರಾಸ್ ಹೈಕೋರ್ಟ್ ದಾಖಲಿಸಿರುವ ವಿವರಗಳ ಪ್ರಕಾರ, ಅರ್ಜಿದಾರರು ತಮ್ಮನ್ನು ದಿವಂಗತ ಎಂ.ಸಿ. ಚಂದ್ರಶೇಖರನ್ ಅವರ ಕಾನೂನುಬದ್ಧ ವಾರಸುದಾರರೆಂದು ಗುರುತಿಸಿಕೊಂಡು, ಆಸ್ತಿಯನ್ನು ಐದು ಸಮಾನ ಭಾಗಗಳಾಗಿ ವಿಂಗಡಿಸಿ ತಮಗೂ ಐದನೇ ಒಂದು ಭಾಗದ ಪಾಲು ನೀಡಬೇಕೆಂದು ಕೋರಿದ್ದರು. ಅಲ್ಲದೆ, ಅವರು ರಾಜೇಶ್ವರಿ, ಶ್ರೀಲತಾ ಮತ್ತು ಶ್ರೀದೇವಿ ಅವರ ಹೆಸರಿಗೆ ಏಪ್ರಿಲ್ 19, 1988 ರಂದು ನೋಂದಾಯಿಸಲಾದ ಮಾರಾಟ ದಾಖಲೆಗಳನ್ನು ಹಾಗೂ ಆಸ್ತಿಗೂ ಸಂಬಂಧಿಸಿದ ನಂತರದ ವ್ಯವಹಾರಗಳನ್ನು ಅಸಿಂಧುಗೊಳಿಸುವಂತೆ ಕೋರಿದ್ದರು.
ವಿವಾದ ಸ್ಥಳ ಇರುವ ಚೆನ್ನೈನ ಶೋಲಿಂಗನಲ್ಲೂರು ಬಳಿ ಜಮೀನಿಗೆ ಭಾರಿ ಬೆಲೆ ಇವೆ. ಅಲ್ಲಿನ ಸರ್ಕಾರಿ ಬೆಲೆಯೇ ಒಂದು ಚದರ ಅಡಿಗೆ 9000 ದಿಂದ 10000 ಇದ್ದು, ಮಾರುಕಟ್ಟೆ ಬೆಲೆ ಇದರ ಐದು ಪಟ್ಟು ಹೆಚ್ಚಿಗೆ. ಅಲ್ಲಿಗೆ ವಿವಾದಿತ ಆಸ್ತಿಯ ಮಾರುಕಟ್ಟೆ ಮೌಲ್ಯ ಸುಮಾರು 300 ರಿಂದ 500 ಕೋಟಿ ವರೆಗೂ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ