SS Rajamouli: ಆಸ್ಕರ್​ ಸದಸ್ಯತ್ವ ಪಡೆದವರಿಗೆ ‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ ಕಡೆಯಿಂದ ಅಭಿನಂದನೆ

Academy Members: ‘ಆರ್​ಆರ್​ಆರ್​’ ಚಿತ್ರದ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಆಸ್ಕರ್​ ಸದಸ್ಯತ್ವ ಸಿಕ್ಕಿದೆ. ತಮ್ಮ ತಂಡದವರಿಗೆ ಇಂಥ ಗೌರವ ಸಿಕ್ಕಿರುವುದು ನಿರ್ದೇಶಕ ರಾಜಮೌಳಿ ಅವರಿಗೆ ಹೆಮ್ಮೆ ತಂದಿದೆ.

SS Rajamouli: ಆಸ್ಕರ್​ ಸದಸ್ಯತ್ವ ಪಡೆದವರಿಗೆ ‘ಆರ್​ಆರ್​ಆರ್​’ ನಿರ್ದೇಶಕ ರಾಜಮೌಳಿ ಕಡೆಯಿಂದ ಅಭಿನಂದನೆ
ಎಸ್​ಎಸ್​ ರಾಜಮೌಳಿ

Updated on: Jun 30, 2023 | 11:51 AM

ಎಸ್​ಎಸ್​ ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ (RRR Movie) ಸಿನಿಮಾ ಮಾಡಿದ ಸಾಧನೆ ದೊಡ್ಡದು. ಮೊದಲ ಬಾರಿಗೆ ಆಸ್ಕರ್​ ಪ್ರಶಸ್ತಿ ಪಡೆದ ಭಾರತೀಯ ಸಿನಿಮಾ (ನಾಟು ನಾಟು ಹಾಡು) ಎಂಬ ಖ್ಯಾತಿ ಈ ಚಿತ್ರಕ್ಕೆ ಸಲ್ಲುತ್ತದೆ. ಆ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಸಿನಿಮಾಗಳು ಮಿಂಚುವಂತೆ ಮಾಡಿದ ನಿರ್ದೇಶಕರಲ್ಲಿ ರಾಜಮೌಳಿ ಪ್ರಮುಖರು. ‘ಆರ್​ಆರ್​ಆರ್​’ ಚಿತ್ರದಲ್ಲಿ ಕೆಲಸ ಮಾಡಿದ ನಟರು ಮತ್ತು ತಂತ್ರಜ್ಞರಿಗೆ ಆಸ್ಕರ್​ನಿಂದ (Oscars) ವಿಶೇಷ ಗೌರವ ಸಂದಿದೆ. ರಾಮ್​ ಚರಣ್​, ಜೂನಿಯರ್​ ಎನ್​ಟಿಆರ್​, ಎಂಎಂ ಕೀರವಾಣಿ ಮುಂತಾದವರಿಗೆ ಆಸ್ಕರ್​ ಸದಸ್ಯತ್ವ ನೀಡಲಾಗಿದೆ. ಇವರೆಲ್ಲರಿಗೂ ರಾಜಮೌಳಿ (SS Rajamouli) ಅವರು ಅಭಿನಂದನೆ ಸಲ್ಲಿಸಿದ್ದಾರೆ. ಅವರು ಮಾಡಿರುವ ಟ್ವೀಟ್​ ವೈರಲ್​ ಆಗಿದೆ.

‘ಆರ್​ಆರ್​ಆರ್​’ ಸಿನಿಮಾ ತೆರೆಕಂಡು ಒಂದು ವರ್ಷಕ್ಕೂ ಹೆಚ್ಚು ಸಮಯ ಕಳೆದಿದೆ. ಹಾಗಿದ್ದರೂ ಕೂಡ ಆ ಸಿನಿಮಾದ ಹವಾ ಇನ್ನೂ ಕಡಿಮೆ ಆಗಿಲ್ಲ. ಇಂದಿಗೂ ಆ ಚಿತ್ರದ ಕುರಿತು ಚರ್ಚೆ ನಡೆಯುತ್ತಿದೆ. ಈ ಸಿನಿಮಾದ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಆಸ್ಕರ್​ ಸದಸ್ಯತ್ವ ಸಿಕ್ಕಿರುವುದೇ ಇದಕ್ಕೆ ಸಾಕ್ಷಿ. ತಮ್ಮ ತಂಡದವರಿಗೆ ಇಂಥ ಗೌರವ ಸಿಕ್ಕಿರುವುದು ನಿರ್ದೇಶಕ ರಾಜಮೌಳಿ ಅವರಿಗೆ ಹೆಮ್ಮೆ ತಂದಿದೆ. ನಿರ್ದೇಶಕರಾದ ಕರಣ್​ ಜೋಹರ್​, ಮಣಿರತ್ನಂ ಸೇರಿದಂತೆ ಇನ್ನೂ ಕೆಲವರಿಗೆ ಆಸ್ಕರ್​ ಸದಸ್ಯತ್ವ ನೀಡಲಾಗಿದೆ. ಅವರ ಅಭಿಮಾನಿಗಳು ಇದರಿಂದ ಖುಷಿ ಆಗಿದ್ದಾರೆ.

‘ಈ ವರ್ಷ ಆಸ್ಕರ್​ ಸದಸ್ಯತ್ವ ಪಡೆಯಲು ನಮ್ಮ ಆರ್​ಆರ್​ಆರ್​ ಸಿನಿಮಾ ತಂಡದ 6 ಜನರಿಗೆ ಆಹ್ವಾನ ಬಂದಿರುವುದಕ್ಕೆ ನನಗೆ ತುಂಬ ಹೆಮ್ಮೆ ಎನಿಸುತ್ತಿದೆ. ತಾರಕ್​, ಚರಣ್​, ಪೆದ್ದಣ್ಣ, ಸಾಬು ಸರ್​, ಸೇಂಥಿಲ್​ ಮತ್ತು ಚಂದ್ರಬೋಸ್​ ಅವರಿಗೆ ಅಭಿನಂದನೆಗಳು. ಈ ವರ್ಷ ಆಸ್ಕರ್​ ಸದಸ್ಯಕ್ಕೆ ಆಹ್ವಾನಿತರಾಗಿರುವ ಭಾರತೀಯ ಚಿತ್ರರಂಗದ ಇತರರಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ’ ಎಂದು ರಾಜಮೌಳಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ: SS Rajamouli: ಡಬಲ್ ರೋಲ್​ನಲ್ಲಿ ಮಿಂಚಿದ ನಟ ಎಸ್​.ಎಸ್. ರಾಜಮೌಳಿ; ಅರೆ ಇದೇನಿದು ಹೊಸ ಅಪ್​ಡೇಟ್?

ರಾಜಮೌಳಿ ಅವರು ತೆಲುಗು ಚಿತ್ರರಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ‘ಮಗಧೀರ’ ಸಿನಿಮಾದಿಂದ ಅವರ ಹೆಸರು ಅಕ್ಕಪಕ್ಕದ ರಾಜ್ಯಗಳಲ್ಲಿ ಪಸರಿಸಿತು. ‘ಬಾಹುಬಲಿ’ ಚಿತ್ರದಿಂದ ಅವರು ಪ್ಯಾನ್​ ಇಂಡಿಯಾ ನಿರ್ದೇಶಕನಾಗಿ ಬೆಳೆದರು. ‘ಆರ್​ಆರ್​ಆರ್​’ ತೆರೆಕಂಡ ನಂತರ ಅವರು ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿದರು. ಅವರ ಜೊತೆ ಸಿನಿಮಾ ಮಾಡಬೇಕು ಎಂದು ಅನೇಕ ಸ್ಟಾರ್​ ನಟರು ಕಾಯುತ್ತಿದ್ದಾರೆ. ಮಹೇಶ್​ ಬಾಬು ಜೊತೆ ರಾಜಮೌಳಿ ಸಿನಿಮಾ ಮಾಡಲಿದ್ದು, ಆ ಚಿತ್ರದ ಸ್ಕ್ರಿಪ್ಟ್​ ಸಿದ್ಧವಾಗುತ್ತಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us