Venkat Subha Death: ಕೊರೊನಾ ವೈರಸ್​ನಿಂದ ಮತ್ತೋರ್ವ ಜನಪ್ರಿಯ ನಟ ವೆಂಕಟ್​ ಶುಭಾ ನಿಧನ

ಸಿನಿಮಾ ಮಾತ್ರವಲ್ಲದೆ ತಮಿಳಿನ ಕೆಲವು ಸೀರಿಯಲ್​ಗಳಲ್ಲೂ ವೆಂಕಟ್​ ಶುಭಾ ನಟಿಸಿದ್ದರು. ಯೂಟ್ಯೂಬ್​ ಚಾನೆಲ್​ನಲ್ಲಿ ಅವರು ಸಿನಿಮಾ ವಿಮರ್ಶೆಗಳನ್ನೂ ಮಾಡುತ್ತಿದ್ದರು.

Venkat Subha Death: ಕೊರೊನಾ ವೈರಸ್​ನಿಂದ ಮತ್ತೋರ್ವ ಜನಪ್ರಿಯ ನಟ ವೆಂಕಟ್​ ಶುಭಾ ನಿಧನ
ವೆಂಕಟ್​ ಶುಭಾ

Updated on: May 29, 2021 | 12:46 PM

ಕೊರೊನಾ ವೈರಸ್​ ಎರಡನೇ ಅಲೆ ಆರಂಭ ಆದಾಗಿನಿಂದ ಅನೇಕ ಸೆಲೆಬ್ರಿಟಿಗಳು ಈ ಮಹಾಮಾರಿಗೆ ಬಲಿ ಆಗಿದ್ದಾರೆ. ಈಗ ಕಾಲಿವುಡ್​ನ ಖ್ಯಾತ ನಟ ವೆಂಕಟ್​ ಶುಭಾ ಅವರು ಕೊವಿಡ್​-19ನಿಂದ ನಿಧನರಾಗಿದ್ದಾರೆ. ಶನಿವಾರ (ಮೇ 29) ಅವರು ಕೊನೆಯುಸಿರೆಳೆದವು. ಇತ್ತೀಚೆಗೆ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಡವಾಗಿತ್ತು. ಕಳೆದ 10 ದಿನಗಳಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಕಡೆಗೂ ಚಿಕಿತ್ಸೆ ಫಲಕಾರಿ ಆಗದೇ ಅವರು ಸಾವಿನ ಮನೆಯ ಹಾದಿ ಹಿಡಿಯುವಂತಾಗಿದೆ.

ವೆಂಕಟ್​ ಶುಭಾ ನಿಧನರಾದರು ಎಂಬ ಸುದ್ದಿಯನ್ನು ಅವರ ಸ್ನೇಹಿತ, ನಿರ್ಮಾಪಕ ಅಮ್ಮ ಕ್ರಿಯೇಷನ್ಸ್​ ಟಿ. ಶಿವ ಅವರು ಟ್ವಿಟರ್​ ಮೂಲಕ ಖಚಿತಪಡಿಸಿದ್ದಾರೆ. ವೆಂಕಟ್​ ಶುಭಾ ಅಗಲಿಕೆಗೆ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಖ್ಯಾತ ಕಲಾವಿದರಾದ ಪ್ರಕಾಶ್​ ರಾಜ್​, ರಾಧಿಕಾ ಶರತ್​ಕುಮಾರ್​ ಮುಂತಾದವರು ಸಂತಾಪ ಸೂಚಿಸಿದ್ದಾರೆ.

ವೆಂಕಟ್​ ಶುಭಾ ಅವರಿಗೆ ಕೊರೊನಾ ವೈರಸ್​ ತಗುಲಿರುವುದು ಧೃಡ ಆಗುತ್ತಿದ್ದಂತೆಯೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇತ್ತೀಚೆಗೆ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟಿತು. ನಂತರ ಅವರನ್ನು ತೀವ್ರ ನಿಗಾ ಘಟಕಕ್ಕೆ ಶಿಫ್ಟ್​ ಮಾಡಲಾಯಿತು. ಕಡೆಗೂ ಅವರು ಬದುಕಿ ಬರಲಿಲ್ಲ. ‘ನನ್ನ ಸ್ನೇಹಿತ, ಅದ್ಭುತ ಚಿಂತಕ, ಲೇಖಕ, ನಟ ವೆಂಕಟ್​ ಅವರು ಇಂದು ನಿಧನರಾದರು ಎಂಬ ಸುದ್ದಿಯನ್ನು ತಿಳಿಸಲು ತೀವ್ರ ಸಂಕಟ ಆಗುತ್ತಿದೆ’ ಎಂದು ಟಿ. ಶಿವ ಟ್ವೀಟ್​ ಮಾಡಿದ್ದಾರೆ.

ಸಿನಿಮಾ ಮಾತ್ರವಲ್ಲದೆ ತಮಿಳಿನ ಕೆಲವು ಸೀರಿಯಲ್​ಗಳಲ್ಲೂ ವೆಂಕಟ್​ ಶುಭಾ ನಟಿಸಿದ್ದರು. ಯೂಟ್ಯೂಬ್​ ಚಾನೆಲ್​ನಲ್ಲಿ ಅವರು ಸಿನಿಮಾ ವಿಮರ್ಶೆಗಳನ್ನೂ ಮಾಡುತ್ತಿದ್ದರು. ‘ವೆಂಕಟ್​ ಅವರಿಗೆ ವಿದಾಯ ಹೇಳಲು ತುಂಬ ನೋವಾಗುತ್ತಿದೆ. ಹಲವು ವರ್ಷಗಳಿಂದ ನನಗೆ ಪರಿಚಿತರಾಗಿದ್ದ ಅವರು ಒಳ್ಳೆಯ ವ್ಯಕ್ತಿ ಮತ್ತು ಚಿಂತಕ ಆಗಿದ್ದರು. ಅನಾರೋಗ್ಯದ ವಿರುದ್ಧ ಅವರು ಹೋರಾಟ ಮಾಡಿದ್ದರು. ಅದರಲ್ಲಿ ಅವರಿಗೆ ಸೋಲು ಉಂಟಾಗಿರುವುದನ್ನು ನೋಡಲು ಹೃದಯ ಛಿದ್ರವಾಗುತ್ತದೆ’ ಎಂದು ರಾಧಿಕಾ ಶರತ್​ ಕುಮಾರ್​ ಅವರು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

‘ಕುಟುಂಬದವರನ್ನು ಮತ್ತು ಸ್ನೇಹಿತರನ್ನು ಒಬ್ಬೊಬ್ಬರನ್ನಾಗಿ ಕಳೆದುಕೊಳ್ಳುತ್ತಿರುವುದಕ್ಕೆ ತುಂಬ ನೋವಾಗುತ್ತದೆ. ಅವರ ನೆನಪುಗಳಿಂದ ಬದುಕು ಭಾರ ಆಗುತ್ತಿದೆ. ನನ್ನ ಪಯಣದ ಭಾಗವಾಗಿದ್ದಕ್ಕೆ ಧನ್ಯವಾದಗಳು ವೆಂಕಟ್​. ನಿಮ್ಮನ್ನು ಮಿಸ್​ ಮಾಡಿಕೊಳ್ಳುತ್ತೇನೆ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಬಹುಭಾಷಾ ನಟ ಪ್ರಕಾಶ್​ ರಾಜ್​ ಟ್ವೀಟ್​ ಮಾಡಿದ್ದಾರೆ.

ತಮಿಳು ಚಿತ್ರರಂಗಕ್ಕೆ ಮೇಲಿಂದ ಮೇಲೆ ಕಹಿ ಸುದ್ದಿ ಕೇಳಿಬರುತ್ತಲೇ ಇದೆ. ಖ್ಯಾತ ನಟ ವಿವೇಕ್​, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಕೆ.ವಿ. ಆನಂದ್​, ಹಾಸ್ಯ ನಟ ಪಾಂಡು, ಅಸುರನ್​ ಖ್ಯಾತಿಯ ನಟ ನಿತೀಶ್​ ವೀರಾ ಸೇರಿದಂತೆ ಅನೇಕರನ್ನು ಇತ್ತೀಚಿನ ದಿನಗಳಲ್ಲಿ ಕಾಲಿವುಡ್​ ಕಳೆದುಕೊಂಡಿದೆ. ಕನ್ನಡ ಚಿತ್ರರಂಗದಲ್ಲೂ ನಿರ್ಮಾಪಕ ಕೋಟಿ ರಾಮು, ಯುವ ನಟ-ನಿರ್ಮಾಪಕ ಡಿ.ಎಸ್​. ಮಂಜುನಾಥ್​, ಯುವ ನಿರ್ದೇಶಕ ಅಭಿರಾಮ್​ ಸೇರಿದಂತೆ ಅನೇಕರು ಕೊವಿಡ್​ನಿಂದ ನಿಧನರಾಗಿರುವುದು ನೋವಿನ ಸಂಗತಿ.

ಇದನ್ನೂ ಓದಿ:

ಸಿನಿಮಾ ತೆರೆಗೆ ಬರುವ ಮೊದಲೇ ಕನ್ನಡದ ಹೀರೋ, ಡೈರೆಕ್ಟರ್​ ಇಬ್ಬರೂ ಕೊವಿಡ್​ಗೆ ಬಲಿ

Nitish Veera Death: ‘ಅಸುರನ್’​ ಚಿತ್ರದ ನಟ ನಿತೀಶ್​ ವೀರಾ ಕೊರೊನಾ ವೈರಸ್​ಗೆ ಬಲಿ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us